ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ವಿಜಯ್ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಲಿದ್ದಾರೆ.
ಚೆನ್ನೈ ಜಿಲ್ಲೆಯ ಪೆರಂಬೂರು ಮತ್ತು ತಿರುಚಿರಾಪಳ್ಳಿ ಜಿಲ್ಲೆಯ ತಿರುಚ್ಚಿ ಪೂರ್ವ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಾಗಿ ವಿಜಯ್ ತಿಳಿಸಿದ್ದಾರೆ.
ಭಾನುವಾರ (ಮಾ.29) ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಪ್ರಕಟಿಸಿದ ವಿಜಯ್, “ಚೊಚ್ಚಲ ಚುನಾವಣೆಯಲ್ಲಿ ನಮಗೊಂದು ಅವಕಾಶ ನೀಡಿ” ಎಂದು ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.
“ವಿಸಿಲ್ಗೆ ಮತ ಚಲಾಯಿಸಿ, ಇದು ವಿಸಿಲ್ ಕ್ರಾಂತಿಯ ಚುನಾವಣೆ” ಎಂದು ವಿಜಯ್ ತಮ್ಮ ಪಕ್ಷದ ಚುನಾವಣಾ ಚಿಹ್ನೆಯನ್ನು ಪ್ರದರ್ಶಿಸುತ್ತಾ ಹೇಳಿದ್ದಾರೆ. “ಮತದಾರರು ನನ್ನ ಮತ್ತು ಇತರ ಟಿವಿಕೆ ಅಭ್ಯರ್ಥಿಗಳ ನಡುವೆ ವ್ಯತ್ಯಾಸವನ್ನು ತೋರಿಸಬಾರದು, ನಾವೆಲ್ಲರೂ ಒಂದೇ” ಎಂದಿದ್ದಾರೆ.
“ಇದು ಕೇವಲ ಅಭ್ಯರ್ಥಿಗಳ ಹೆಸರನ್ನು ಘೋಷಿಸುವ ಕಾರ್ಯಕ್ರಮವಲ್ಲ, ಬದಲಿಗೆ ಜನರ ರಕ್ಷಕರ ಹೆಸರುಗಳನ್ನು ಘೋಷಿಸುವ ಸಭೆಯಾಗಿದೆ. ನಮ್ಮ ಅಭ್ಯರ್ಥಿಗಳು ಸಾಮಾನ್ಯ ಹಿನ್ನೆಲೆಯಿಂದ ಬಂದವರಾಗಿದ್ದಾರೆಯೇ ಹೊರತು, ಯಾವುದೇ ಪ್ರಭಾವಿ ವ್ಯಕ್ತಿಗಳಲ್ಲ. ನಮ್ಮ ಶಾಸಕರು ಲೂಟಿ ಹೊಡೆಯುವ, ಅಕ್ರಮ ಗಣಿಗಾರಿಕೆ ನಡೆಸುವ ಅಥವಾ ಪ್ರಶ್ನಿಸುವ ಪತ್ರಕರ್ತರ ಮೇಲೆ ಹಲ್ಲೆ ಮಾಡುವಂತಹ ಅನುಭವ ಹೊಂದಿರಬಾರದು. ಡಿಎಂಕೆ ಅಭ್ಯರ್ಥಿಯೊಬ್ಬರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ, ಅವರು ಜೈಲಿಗೆ ಹೋಗಿ ಬಂದಿದ್ದಾರೆ. ಅವರು ಯಾರೆಂದು ನೀವೇ ಯೋಚಿಸಿ” ಎಂದು ಹೇಳಿದ್ದಾರೆ.
ಟಿವಿಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ತಾವು ಶ್ರಮವಹಿಸಿರುವುದಾಗಿ ತಿಳಿಸಿದ ವಿಜಯ್, “ಈ ಚುನಾವಣೆಯು ನಮ್ಮ ಜನರ ಮೈತ್ರಿಕೂಟ ಮತ್ತು ಎಂ.ಕೆ ಸ್ಟಾಲಿನ್ ಸರ್ ಅವರ ಮೈತ್ರಿಕೂಟದ ನಡುವಿನ ನೇರ ಹಣಾಹಣಿಯಾಗಿದೆ” ಎಂದಿದ್ದಾರೆ.
ಚುನಾವಣೆಯಲ್ಲಿ ಗೆದ್ದರೆ ತಮಿಳುನಾಡನ್ನು ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿ ಮಾಡುವುದಾಗಿ ವಿಜಯ್ ಭರವಸೆ ನೀಡಿದ್ದಾರೆ. ಅಲ್ಲದೆ, 29 ವರ್ಷದ ನಂತರವೂ ಉದ್ಯೋಗ ಸಿಗದವರಿಗೆ ಮಾಸಿಕ ಆರ್ಥಿಕ ನೆರವು ನೀಡುವುದಾಗಿ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಖಚಿತಪಡಿಸಲು ಹೊಸ ಕಾನೂನು ತರುವುದಾಗಿ ಅವರು ಘೋಷಿಸಿದ್ದಾರೆ.
ವಿಜಯ್ ಹೊರತು ಟಿವಿಕೆಯಿಂದ ಸ್ಪರ್ಧಿಸುತ್ತಿರುವ ಇತರ ಅಭ್ಯರ್ಥಿಗಳನ್ನು ನೋಡುವುದಾದರೆ..ತಮಿಳುನಾಡು ಚುನಾವಣೆಯ ಹೈ-ವೋಲ್ಟೇಜ್ ಕ್ಷೇತ್ರ ಕೊಳತ್ತೂರಿನಲ್ಲಿ ಡಿಎಂಕೆ ನಾಯಕ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ವಿರುದ್ಧ ಟಿವಿಕೆಯ ವಿ.ಎಸ್. ಬಾಬು ಸ್ಪರ್ಧೆಗಿಳಿದಿದ್ದಾರೆ.
ಚೇಪಾಕ್-ತಿರುವಲ್ಲಿಕೇಣಿ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ವಿರುದ್ಧ ಕಾಂಗ್ರೆಸ್ ತೊರೆದು ಟಿವಿಕೆ ಸೇರಿರುವ ಸೆಲ್ವಂ ಅವರನ್ನು ವಿಜಯ್ ಕಣಕ್ಕಿಳಿಸಿದ್ದಾರೆ.
ವಿಲ್ಲಿವಾಕ್ಕಂನಲ್ಲಿ ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಆದವ್ ಅರ್ಜುನಾ ಸ್ಪರ್ಧಿಸುತ್ತಿದ್ದಾರೆ. ಗೋಪಿಚೆಟ್ಟಿಪಾಳ್ಯಂನಲ್ಲಿ ಟಿವಿಕೆ ಪರವಾಗಿ ಸೆಂಗೊಟ್ಟಯ್ಯನ್ ಅವರು ಸ್ಪರ್ಧೆಯಲ್ಲಿದ್ದಾರೆ.
ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳಿಗೆ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಪ್ರಸ್ತುತ ಅಧಿಕಾರದಲ್ಲಿರುವ ಡಿಎಂಕೆ ಐದು ಕೋನಗಳ ಸ್ಪರ್ಧೆಯನ್ನು ಎದುರಿಸುತ್ತಿದೆ. ಎಐಎಡಿಎಂಕೆ ಮತ್ತು ಬಿಜೆಪಿಯ ಎನ್ಡಿಎ ಬಣವು ಮತ್ತೆ ಅಧಿಕಾರಕ್ಕೆ ಬರಲು ಎದುರು ನೋಡುತ್ತಿದೆ. ವಿಜಯ್ ಅವರ ಟಿವಿಕೆ ದೊಡ್ಡ ಚೊಚ್ಚಲ ಪ್ರವೇಶಕ್ಕೆ ಸಜ್ಜಾಗಿದೆ. ಎಸ್. ರಾಮದಾಸ್ ನೇತೃತ್ವದ ಪಿಎಂಕೆ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಸಹಾಯಕಿ ಶಶಿಕಲಾ ಸ್ಥಾಪಿಸಿದ ಪಕ್ಷದ ಮೈತ್ರಿ ನಾಲ್ಕನೇ ರಂಗವನ್ನು ತೆರೆದಿದೆ. ಸೀಮನ್ ನೇತೃತ್ವದ ನಾಮ್ ತಮಿಳರ್ ಕಚ್ಚಿ (ಎನ್ಟಿಕೆ) ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.
ವಿಜಯ್ ಸ್ಪರ್ಧಿಸುತ್ತಿರುವ ಪೆರಂಬೂರು ಮತ್ತು ತಿರುಚ್ಚಿ ಪೂರ್ವ ಎರಡೂ ಸ್ಥಾನಗಳು ಪ್ರಸ್ತುತ ಡಿಎಂಕೆ ಪ್ರತಿನಿಧಿಸುತ್ತಿವೆ. ಆರ್ಡಿ ಶೇಖರ್ ಪೆರಂಬೂರು ಶಾಸಕರಾಗಿದ್ದು, ಇನಿಗೋ ಎಸ್ ಇರುದಯರಾಜ್ ತಿರುಚ್ಚಿ ಪೂರ್ವದ ಶಾಸಕರಾಗಿದ್ದಾರೆ.


