ಎಲ್ಪಿಜಿ ಸಿಲಿಂಡರ್ ಪಡೆಯಲು 41.2 ಡಿಗ್ರಿ ಸೆಲ್ಸಿಯಸ್ ಸುಡು ಬಿಸಿಲಿನಲ್ಲಿ 4 ಗಂಟೆ ಕಾದ 55 ವರ್ಷದ ವ್ಯಕ್ತಿ, ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಅಕೋಲಾ ಬಳಿ ನಡೆದಿದೆ.
ಅಕೋಲಾದಿಂದ 20 ಕಿ.ಮೀ ದೂರದಲ್ಲಿರುವ ಅನ್ವಿ ಮಿರ್ಜಾಪುರ ಗ್ರಾಮದ 55 ವರ್ಷದ ಮಾಜಿ ಸರಪಂಚ್ ಶಂಕರರಾವ್ ಶಿರಸಾಟ್ ಮೃತ ವ್ಯಕ್ತಿ. ಇವರು ಶನಿವಾರ (ಮಾ.28) ಮಧ್ಯಾಹ್ನ ಸುಡುಬಿಸಿಲಿನಲ್ಲಿ ಅಕೋಲಾ ನಗರದ ಮಲ್ಕಾಪುರ ಪ್ರದೇಶದ ಗ್ಯಾಸ್ ಏಜೆನ್ಸಿಯೊಂದ ಮುಂಭಾಗ ಎಲ್ಪಿಜಿ ಸಿಲಿಂಡರ್ಗಾಗಿ ಸರತಿಯಲ್ಲಿ ನಿಂತಿದ್ದರು. ಈ ವೇಳೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ವಿದರ್ಭ ಪ್ರದೇಶದ ವಿವಿಧ ಸ್ಥಳಗಳ ಪೈಕಿ ಶನಿವಾರ ಅಕೋಲಾ ನಗರದಲ್ಲಿ ಅತಿ ಹೆಚ್ಚು (41.2) ತಾಪಮಾನ ದಾಖಲಾಗಿದೆ ಎಂದು ವರದಿ ಹೇಳಿದೆ.
ವರದಿಯ ಪ್ರಕಾರ, ಶಂಕರರಾವ್ ಅಕೋಲಾದಲ್ಲಿ ವಾಸಿಸುತ್ತಿರುವ ತಮ್ಮ ವಿಧವೆ ಸೊಸೆಯನ್ನು ಭೇಟಿ ಮಾಡಲು ಹೋಗಿದ್ದರು. ಈ ವೇಳೆ ಎಲ್ಪಿಜಿ ಸಿಲಿಂಡರ್ ಸಿಗದೆ ಆಕೆ ಸಂಕಷ್ಟ ಎದುರಿಸುತ್ತಿರುವುದು ಅವರಿಗೆ ಗೊತ್ತಾಗಿದೆ. ಹಾಗಾಗಿ, ಸೊಸೆಗೆ ಗ್ಯಾಸ್ ತೆಗೆದು ಕೊಡಲು ಬೆಳಿಗ್ಗೆ ಸುಮಾರು 9 ಗಂಟೆಗೆ ಗ್ಯಾಸ್ ಏಜೆನ್ಸಿಗೆ ಹೋಗಿ ಸರತಿಯಲ್ಲಿ ನಿಂತಿದ್ದರು. ಮಧ್ಯಾಹ್ನ ಸುಮಾರು 1.30ರ ವೇಳೆಗೆ ಅವರಿಗೆ ತಲೆಸುತ್ತು ಬಂದು ಕುಸಿದು ಬಿದ್ದಿದ್ದಾರೆ. ಜನರು ಪರಿಶೀಲಿಸಿ ನೋಡಿದಾಗ ಶಂಕರರಾವ್ ಸ್ಥಳದಲ್ಲೇ ಕೊನೆಯುಸಿರೆಳೆದಿರುವುದು ಗೊತ್ತಾಗಿದೆ. ಈ ಘಟನೆ ಸ್ಥಳೀಯ ನಿವಾಸಿಗಳಲ್ಲಿ ಆಘಾತ ಮತ್ತು ಆಕ್ರೋಶವನ್ನು ಉಂಟುಮಾಡಿದೆ.
ಘಟನೆಯ ಬಳಿಕ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಎದುರಾಗುತ್ತಿರುವ ತೊಂದರೆಗಳ ಬಗ್ಗೆ ಆಡಳಿತ ಸಿದ್ಧತೆ ಮತ್ತು ಸ್ಪಂದನೆಯನ್ನು ನಾಗರಿಕರು ಪ್ರಶ್ನಿಸಿದ್ದಾರೆ. ಎಲ್ಪಿಜಿ ಪೂರೈಕೆಯು ನಿಯಮಿತವಾಗಿ ಇರುವಂತೆ ಖಚಿತಪಡಿಸಿಕೊಳ್ಳಲು ಆಡಳಿತವು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ವಂಚಿತ್ ಬಹುಜನ್ ಆಘಾಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರು, “ಸರ್ಕಾರ ಸೂಕ್ತ ವ್ಯವಸ್ಥೆಗಳನ್ನು ಮಾಡುವಲ್ಲಿ ವಿಫಲವಾಗಿದೆ. ಸಮಯಕ್ಕೆ ಸರಿಯಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೆ, ಶಂಕರರಾವ್ ಶಿರಸಾಟ್ ಅವರ ಪ್ರಾಣ ಉಳಿಸಬಹುದಿತ್ತು” ಎಂದು ಹೇಳಿದ್ದಾರೆ.


