ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು ಮುಂದಿಡುವ ಮೂಲಕ ಆರ್ಎಸ್ಎಸ್ ಮತ್ತು ಬಿಜೆಪಿಯ ಸಂಬಂಧವನ್ನು ಕಟುವಾಗಿ ಟೀಕಿಸಿರುವ ಅವರು, “ಪ್ರತಿ ಬಾರಿ ಯಾರಾದರೂ ಆರೆಸ್ಸೆಸ್ ಅನ್ನು ಪ್ರಶ್ನಿಸಿದಾಗ, ಬಿಜೆಪಿ ತನ್ನ ಸ್ಥಿಮಿತತೆಯನ್ನು ಕಳೆದುಕೊಳ್ಳುತ್ತದೆ” ಎಂದು ಲೇವಡಿ ಮಾಡಿದ್ದಾರೆ. ಈ ಪೋಸ್ಟ್ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರ ಈಗ ಮತ್ತೊಂದು ಹಂತಕ್ಕೆ ತಲುಪಿದೆ.
ಇಂದು ಪ್ರಿಯಾಂಕ್ ಖರ್ಗೆ ಅವರು ಮಾಡಿರುವ ಪೋಸ್ಟ್ನಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ನಡುವಿನ ಆಂತರಿಕ ಸಂಬಂಧ ಹಾಗೂ ಸಂಘಟನೆಯ ಇತಿಹಾಸವನ್ನು ನೇರವಾಗಿ ಪ್ರಶ್ನಿಸಿದ್ದಾರೆ. ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ ಎಂದು ಲೇವಡಿ ಮಾಡಿರುವ ಅವರು, ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡುಗೆ ನೀಡದ ಸಂಘಟನೆ ಇಂದು ರಾಷ್ಟ್ರಕ್ಕೆ ದೇಶಪ್ರೇಮದ ಪಾಠ ಹೇಳುತ್ತಿರುವುದೇಕೆ ಎಂದು ಪ್ರಶ್ನಿಸಿದರೆ ಬಿಜೆಪಿಗೆ ತಡೆಯಲಾಗದ ಸಿಟ್ಟು ಬರುತ್ತದೆ ಎಂದು ಇತಿಹಾಸದ ಪುಟಗಳನ್ನು ಕೆದಕಿದ್ದಾರೆ. ನಾಗಪುರದಲ್ಲಿರುವ ಆರ್ಎಸ್ಎಸ್ ಪ್ರಧಾನ ಕಚೇರಿಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲು ಬರೋಬ್ಬರಿ 52 ವರ್ಷಗಳೇಕೆ ಬೇಕಾಯಿತು ಎಂದು ಕೇಳಿದರೆ ಬಿಜೆಪಿ ಕೋಪದಿಂದ ಬುಸುಗುಡುತ್ತದೆ ಎಂದಿದ್ದಾರೆ.
ಅಷ್ಟೇ ಅಲ್ಲದೆ, ಆರ್ಎಸ್ಎಸ್ ಮತ್ತು ಬಿಜೆಪಿ ನಿಜಕ್ಕೂ ಯಾವ ಸಂವಿಧಾನಕ್ಕೆ ಬದ್ಧರಾಗಿದ್ದಾರೆ? ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಭಾರತದ ಸಂವಿಧಾನಕ್ಕೋ ಅಥವಾ ತಾವೇ ಬರೆಯಬೇಕಿತ್ತು ಎಂದು ಬಯಸುವ ಸಂವಿಧಾನಕ್ಕೋ ಎಂದು ಪ್ರಶ್ನಿಸುವ ಮೂಲಕ ಕೇಸರಿ ಪಡೆಯ ಸಂವಿಧಾನಿಕ ನಿಲುವನ್ನು ಖರ್ಗೆ ಪ್ರಶ್ನಿಸಿದ್ದಾರೆ. ಆರ್ಎಸ್ಎಸ್ ಒಂದು ಸಂಘಟನೆಯಾಗಿ ಕಾನೂನಾತ್ಮಕ ನೋಂದಣಿ ಮಾಡಿಕೊಳ್ಳುವುದನ್ನು ಮತ್ತು ಸರ್ಕಾರಕ್ಕೆ ತೆರಿಗೆ ಪಾವತಿಸುವುದನ್ನು ಏಕೆ ನಿರಾಕರಿಸುತ್ತದೆ ಎಂದು ಕೇಳಿದರೆ, ಬಿಜೆಪಿ ಆಕ್ರೋಶದಿಂದ ಪೂತ್ಕರಿಸುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ಎಂದಿಗೂ ಆರ್ಎಸ್ಎಸ್ಗೆ ಕೇವಲ ಮಿತ್ರನಾಗಿರಲಿಲ್ಲ, ಅದು ಎಂದಿಗೂ ಆರ್ಎಸ್ಎಸ್ ಸಾಧನವಾಗಿಯೇ ಇದೆ. ಪ್ರತಿ ಬಾರಿ ಬುಸುಡುವಾಗಲೂ, ಹಾವಿನ ಬಾಲ ಯಾರ ಕೈಯಲ್ಲಿದೆ ಎಂಬುದನ್ನು ಬಿಜೆಪಿ ಖಚಿತಪಡಿಸುತ್ತದೆ ಎಂದು ಹೇಳುವ ಮೂಲಕ ಬಿಜೆಪಿಯನ್ನು ಆರ್ಎಸ್ಎಸ್ ಕೈಗೊಂಬೆ ಎಂದು ಕರೆದಿದ್ದಾರೆ.
ಈ ಪೋಸ್ಟ್ಗಿಂತ ಮುಂಚಿತವಾಗಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಅಧಿಕೃತ ಪತ್ರ ಬರೆದು ಸಂಘಟನೆಯ ಕಾನೂನಾತ್ಮಕ ಸ್ಥಿತಿಗತಿಯನ್ನು ಪ್ರಶ್ನಿಸಿ ಭಾರಿ ಚರ್ಚೆಗೆ ನಾಂದಿ ಹಾಡಿದ್ದರು. ಕರ್ನಾಟಕದಲ್ಲಿ ಲಕ್ಷಾಂತರ ಜನರನ್ನು ಒಟ್ಟುಗೂಡಿಸಿ ಪಥಸಂಚಲನ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವ ಆರ್ಎಸ್ಎಸ್ ಗೃಹ ಇಲಾಖೆಯೇ ಭದ್ರತೆ ಒದಗಿಸುತ್ತದೆ. ಹೀಗಿರುವಾಗ, ಈ ಸಂಘಟನೆ ಯಾವ ಭಾರತೀಯ ಕಾನೂನಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ, ಅದರ ನೋಂದಣಿ ಸಂಖ್ಯೆ ಏನು, ಪದಾಧಿಕಾರಿಗಳು ಯಾರು, ಅದಕ್ಕೆ ಬರುವ ನಿಧಿ ಹಾಗೂ ತೆರಿಗೆ ಪಾವತಿಯ ದಾಖಲೆಗಳೇನು ಎಂದು ಖರ್ಗೆ ಪಟ್ಟು ಹಿಡಿದಿದ್ದರು.
ಸಾರ್ವಜನಿಕವಾಗಿ ಇಷ್ಟೊಂದು ಪ್ರಭಾವ ಹೊಂದಿರುವ ಸಂಘಟನೆ ಸಂವಿಧಾನ ಮತ್ತು ದೇಶದ ಕಾನೂನಿಗೆ ಬದ್ಧವಾಗಿರಬೇಕು, ಪಾರದರ್ಶಕತೆ ಕೇಳುವುದು ತಪ್ಪೇ ಎಂದು ಖರ್ಗೆ ಪ್ರಶ್ನಿಸಿದ್ದರು.
ಪ್ರಿಯಾಂಕ್ ಖರ್ಗೆ ಅವರ ಈ ಸರಣಿ ದಾಳಿಯಿಂದ ಕೆರಳಿದ ಬಿಜೆಪಿ ನಾಯಕರು ಮತ್ತು ಸಂಸದರು ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಮುಖವಾಗಿ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಅವರು ಪ್ರಿಯಾಂಕ್ ಖರ್ಗೆ ಅವರಿಗೆ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದು, ಆರ್ಎಸ್ಎಸ್ ತಂಟೆಗೆ ಹೋದವರು ಯಾರೂ ರಾಜಕೀಯವಾಗಿ ಉಳಿದಿಲ್ಲ, ಬದುಕಿಲ್ಲ ಎಂದು ಧಮ್ಕಿ ಹಾಕಿದ್ದಾರೆ. ಪ್ರಿಯಾಂಕ್ ಖರ್ಗೆ ಅನಾವಶ್ಯಕವಾಗಿ ಆರ್ಎಸ್ಎಸ್ ಜೊತೆ ಜಗಳಕ್ಕೆ ನಿಲ್ಲುತ್ತಿದ್ದಾರೆ, ಬುದ್ಧಿಶೂನ್ಯರಂತೆ ಮಾತನಾಡುವುದನ್ನು ಬಿಟ್ಟು ಗೃಹ ಸಚಿವರಾಗಿ ತಮ್ಮ ಕೆಲಸದ ಕಡೆ ಗಮನ ಕೊಡಲಿ ಎಂದು ಜಿಗಜಿಣಗಿ ವಾಗ್ದಾಳಿ ನಡೆಸಿದ್ದಾರೆ. ಇತರ ಬಿಜೆಪಿ ನಾಯಕರು ಸಹ ಆರ್ಎಸ್ಎಸ್ ಒಂದು ರಾಷ್ಟ್ರಭಕ್ತ ಸಂಘಟನೆಯಾಗಿದ್ದು, ಅದರ ವಿರುದ್ಧ ಮಾತನಾಡುವುದು ಕಾಂಗ್ರೆಸ್ನ ಹಿಂದೂ ವಿರೋಧಿ ನೀತಿಯನ್ನು ಪ್ರದರ್ಶಿಸುತ್ತದೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯ ಧಮ್ಕಿ ಮತ್ತು ವೈಯಕ್ತಿಕ ದಾಳಿಗೆ ಜಗ್ಗದ ಪ್ರಿಯಾಂಕ್ ಖರ್ಗೆ, ತಮಗೆ ಧಮ್ಕಿ ಹಾಕುವ ಮೂಲಕ ಬಿಜೆಪಿ ತನ್ನ ಸಾಮಂತಶಾಹಿ ಮತ್ತು ಮನುವಾದಿ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದೆ ಎಂದು ದೂರಿದ್ದಾರೆ. ಆರ್ಎಸ್ಎಸ್ ತಂಟೆಗೆ ಹೋದವರು ಉಳಿಯಲ್ಲ ಎನ್ನುವ ಮಾತಿನ ಅರ್ಥವೇನು, ಆರ್ಎಸ್ಎಸ್ ಏನಾದರೂ ಭಯೋತ್ಪಾದಕ ಸಂಘಟನೆಯೇ, ಪ್ರಶ್ನಿಸಿದವರನ್ನು ಅದು ಮುಗಿಸಿಬಿಡುತ್ತದೆಯೇ ಎಂದು ಖರ್ಗೆ ಪ್ರಶ್ನಿಸಿದ್ದಾರೆ. ಜಿಗಜಿಣಗಿ ಅವರ ದಲಿತ ಎಂಬ ಉಲ್ಲೇಖವನ್ನು ಖಂಡಿಸಿದ ಖರ್ಗೆ, ನಾನು ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಿದ್ಧಾಂತದ ಅನುಯಾಯಿ. ಪ್ರಶ್ನಿಸುವ ಧೈರ್ಯ ಮತ್ತು ಬೌದ್ಧಿಕ ಪ್ರಬುದ್ಧತೆ ನನಗೆ ಅಂಬೇಡ್ಕರ್ ಅವರಿಂದ ಬಂದಿದೆ. ಅಂಬೇಡ್ಕರ್ ಸಿದ್ಧಾಂತ ನಂಬಿದವರಿಗೆ ಭಯ ಎನ್ನುವುದೇ ಗೊತ್ತಿಲ್ಲ, ನಿಮ್ಮ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಎಂದು ಸವಾಲು ಹಾಕಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ಇವತ್ತಿನ ಪೋಸ್ಟ್ ಕೇವಲ ಒಂದು ಸಾಮಾಜಿಕ ಜಾಲತಾಣದ ಹೇಳಿಕೆಯಾಗಿ ಉಳಿದಿಲ್ಲ. ಇದು ದೇಶದ ಅತಿ ದೊಡ್ಡ ಸಂಘಟನೆಯಾದ ಆರೆಸ್ಸೆಸ್ನ ಕಾನೂನಾತ್ಮಕ ಅಸ್ತಿತ್ವ, ಇತಿಹಾಸ ಮತ್ತು ದೇಶಪ್ರೇಮದ ನಿಲುವನ್ನು ರಾಜ್ಯದ ಗೃಹ ಸಚಿವರೊಬ್ಬರು ನೇರವಾಗಿ ಪ್ರಶ್ನಿಸುತ್ತಿರುವ ತಾರ್ಕಿಕ ಹೋರಾಟವಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ದೇಶದ ಸಂವಿಧಾನವನ್ನು, ಪ್ರಜಾಪ್ರಭುತ್ವದ ಆಶಯಗಳನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಧರ್ಮಾಂಧ ರಾಜಕಾರಣವನ್ನು ಮಾಡುತ್ತಾ, ಸಮಾಜವನ್ನು ಒಡೆಯುತ್ತಾ ಬಂದಿರುವ ಆರೆಸ್ಸೆಸ್ ಮತ್ತು ಅದರ ರಾಜಕೀಯ ಅಂಗಸಂಸ್ಥೆಯಂತೆ ಕಾರ್ಯನಿರ್ವಹಿಸುವ ಬಿಜೆಪಿ ಇನ್ನಾದರೂ ದೇಶದ ಕಾನೂನನ್ನು ಗೌರವಿಸುತ್ತಾರಾ ಎಂಬ ಪ್ರಶ್ನೆ ಈಗ ಮೂಡಿದೆ.
ಸಂವಿಧಾನಕ್ಕಿಂತ ದೊಡ್ಡವರು ಯಾರೂ ಇಲ್ಲ ಎನ್ನುವ ದೇಶದಲ್ಲಿ, ಇಷ್ಟೊಂದು ಪ್ರಭಾವಿ ಎನಿಸಿಕೊಂಡಿರುವ ಸಂಘಟನೆ ಇಂದಿಗೂ ದೇಶದ ಕಾನೂನಿನ ಅಡಿಯಲ್ಲಿ ಅಧಿಕೃತವಾಗಿ ನೋಂದಣಿ ಆಗದೆ ಇರಲು ಕಾರಣವೇನು, ಸಾರ್ವಜನಿಕ ಜವಾಬ್ದಾರಿಗೆ ಮತ್ತು ಪಾರದರ್ಶಕತೆಗೆ ಆರ್ ಎಸ್ ಎಸ್ ಒಳಪಡುತ್ತಾ? ಈ ಮೂಲಕವಾದರೂ ತನ್ನ ಸಂವಿಧಾನ ವಿರೋಧಿ ಹಣೆಪಟ್ಟಿಯನ್ನು ಕಳೆದುಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.


