ರಾಮನಗರ: ಬಿಡದಿ ಉಪನಗರ (ಟೌನ್ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ ಗ್ರಾಮದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಭಾರಿ ವಿರೋಧದ ನಡುವೆಯೂ ಜಂಟಿ ಅಳತೆ ಕಾರ್ಯಕ್ಕೆ (ಜೆಎಂಸಿ) ಆಗಮಿಸಿದ್ದ ಅಧಿಕಾರಿಗಳ ವಿರುದ್ಧ ಸ್ಥಳೀಯ ರೈತ ಮಹಿಳೆಯರು ಹಾಗೂ ಗ್ರಾಮಸ್ಥರು ಆಕ್ರೋಶದಿಂದ ಸಿಡಿದೆದ್ದಿದ್ದು, ಸರ್ವೆ ಮಾಡಲು ಬಂದಿದ್ದ ಅಧಿಕಾರಿಗಳಿಗೆ ಪೊರಕೆಯಿಂದ ಹೊಡೆದು ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ವಿಕೋಪಕ್ಕೆ ಹೋದ ಪರಿಸ್ಥಿತಿಯಲ್ಲಿ ಪ್ರತಿಭಟನಾಕಾರರು ಇಟ್ಟಿಗೆ ಮತ್ತು ಕಲ್ಲುಗಳಿಂದ ಎಸೆದು ಅಧಿಕಾರಿಗಳು ಬಂದಿದ್ದ ಎರಡು ಕಾರುಗಳನ್ನು ಜಖಂಗೊಳಿಸಿದ್ದಾರೆ. “ಯಾವುದೇ ಕಾರಣಕ್ಕೂ ನಮ್ಮ ಫಲವತ್ತಾದ ಭೂಮಿಯನ್ನು ಟೌನ್ಶಿಪ್ಗೆ ಬಿಟ್ಟುಕೊಡುವುದಿಲ್ಲ ಮತ್ತು ಇಲ್ಲಿ ಸರ್ವೆ ಕಾರ್ಯ ನಡೆಸಲು ಬಿಡುವುದಿಲ್ಲ” ಎಂದು ರೈತರು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ರೈತ ಮುಖಂಡರು ಮತ್ತು ಸ್ಥಳದಲ್ಲಿದ್ದ ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಘಟನೆಯಲ್ಲಿ ಹೈಡ್ರಾಮಾವೇ ಸೃಷ್ಟಿಯಾಗಿದ್ದು, ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಭದ್ರತೆ ಒದಗಿಸಿ ಅಧಿಕಾರಿಗಳನ್ನು ಸ್ಥಳದಿಂದ ಸುರಕ್ಷಿತವಾಗಿ ಕಳುಹಿಸಿಕೊಟ್ಟರು. ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಸ್ತುತ ಮಂಡಲಹಳ್ಳಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಹೋರಾಟದ ಹಿನ್ನೆಲೆ ಮತ್ತು ಸಂಘರ್ಷ:
ಬಿಡದಿ ಪ್ರದೇಶದಲ್ಲಿ ಬೃಹತ್ ಉಪನಗರ ನಿರ್ಮಿಸುವ ಸರ್ಕಾರದ ಯೋಜನೆಗೆ ಸ್ಥಳೀಯ ರೈತರಿಂದ ಮೊದಲಿನಿಂದಲೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ರೈತರು ಸಾಲು ಸಾಲು ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದ್ದಾರೆ. ಈ ಯೋಜನೆಯು ಪ್ರದೇಶದಲ್ಲಿ ತೀವ್ರ ಪರ-ವಿರೋಧದ ಚರ್ಚೆಗೂ ಕಾರಣವಾಗಿದೆ.
ಇತ್ತೀಚೆಗಷ್ಟೇ ರಾಮನಗರ ತಾಲೂಕಿನ ಬೈರಮಂಗಲದಲ್ಲಿ ಟೌನ್ಶಿಪ್ ಯೋಜನೆ ಪರ ಮತ್ತು ವಿರೋಧ ಇರುವ ಎರಡೂ ಗುಂಪುಗಳ ನಡುವೆ ಭಾರಿ ಸಂಘರ್ಷ ನಡೆದಿತ್ತು. ಯೋಜನೆ ವಿರೋಧಿ ಪ್ರತಿಭಟನೆಗೆ ಆಗಮಿಸುತ್ತಿದ್ದ ರೈತರ ಬಸ್ ಮತ್ತು ಕಾರುಗಳನ್ನು ಯೋಜನೆ ಬೆಂಬಲಿಸುವ ರೈತರು ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಹೊರ ಜಿಲ್ಲೆಗಳಿಂದ ಜನರನ್ನು ಕರೆತರಲಾಗುತ್ತಿದೆ ಎಂದು ಆರೋಪಿಸಿ ಎರಡೂ ಬಿಸಿಲಿನಲ್ಲಿ ಮುಖಾಮುಖಿಯಾಗಿದ್ದವು. ಇದರಿಂದಾಗಿ ಬೈರಮಂಗಲದಲ್ಲಿ ಇಡೀ ದಿನ ಉದ್ವಿಗ್ನ ವಾತಾವರಣ ಉಂಟಾಗಿತ್ತು, ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಉಭಯ ಗುಂಪುಗಳನ್ನು ಸಮಾಧಾನಪಡಿಸಿದ್ದರು.
ಇದೀಗ ಮಂಡಲಹಳ್ಳಿಯಲ್ಲಿ ಅಧಿಕಾರಿಗಳ ಮೇಲೆ ನಡೆದ ದಾಳಿ ಮತ್ತು ಕಾರುಗಳ ಜಖಂ ಘಟನೆಯು ಈ ಹೋರಾಟಕ್ಕೆ ಮತ್ತಷ್ಟು ಆಕ್ರೋಶದ ರಂಗು ನೀಡಿದ್ದು, ರೈತರ ತೀವ್ರ ಪ್ರತಿರೋಧದ ನಡುವೆ ಸರ್ಕಾರಿ ಅಧಿಕಾರಿಗಳು ಸರ್ವೆ ಕಾರ್ಯ ಮುಂದುವರಿಸುವುದು ಸವಾಲಾಗಿ ಪರಿಣಮಿಸಿದೆ.


