ಕ್ಷೇತ್ರ ಪುನರ್ ವಿಂಗಡಣೆ ಮಸೂದೆಯನ್ನು ಕೇಂದ್ರ ಸರ್ಕಾರ ಮರುಪರಿಚಯಿಸಲು ಮುಂದಾಗಿರುವುದು ತಮಿಳುನಾಡಿನಲ್ಲಿ ತೀವ್ರ ರಾಜಕೀಯ ಕಸರತ್ತಿಗೆ ಕಾರಣವಾಗಿದೆ. ಕ್ಷೇತ್ರ ಪುನರ್ ವಿಂಗಡಣೆ ವಿಷಯದಲ್ಲಿ ಡಿಎಂಕೆ (DMK) ತನ್ನ ಕಠಿಣ ನಿಲುವನ್ನು ಮೃದುಗೊಳಿಸಿದೆ ಎಂಬ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್, ಡಿಎಂಕೆ ಆರಂಭದಿಂದಲೂ ಕ್ಷೇತ್ರ ಪುನರ್ ವಿಂಗಡಣೆಯನ್ನು ವಿರೋಧಿಸುತ್ತಾ ಬಂದಿದೆ ಮತ್ತು ಮುಂದೆಯೂ ಇದನ್ನು ವಿರೋಧಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 543ರಿಂದ 850ಕ್ಕೆ ಏರಿಸುವ ಉದ್ದೇಶಿತ ಸಂವಿಧಾನ (131ನೇ ತಿದ್ದುಪಡಿ) ಮಸೂದೆಯು ದಕ್ಷಿಣ ಭಾರತದ, ವಿಶೇಷವಾಗಿ ತಮಿಳುನಾಡಿನ ರಾಜಕೀಯ ಪ್ರಾತಿನಿಧ್ಯ ಮತ್ತು ಸಂಸದೀಯ ಧ್ವನಿಯನ್ನು ಕ್ಷೀಣಿಸಲಿದೆ ಎಂಬ ಆತಂಕ ತಮಿಳುನಾಡು ರಾಜಕೀಯ ಅಂಗಳದಲ್ಲಿ ಭುಗಿಲೆದ್ದಿದೆ.
ಉದಯನಿಧಿ ಸ್ಟಾಲಿನ್ ಸ್ಪಷ್ಟನೆ: ವದಂತಿಗಳಿಗೆ ತೆರೆ
ಮಸೂದೆಯ ಕುರಿತು ಡಿಎಂಕೆ ತನ್ನ ನಿಲುವನ್ನು ಬದಲಾಯಿಸಿಕೊಳ್ಳುತ್ತಿದೆ ಎಂಬ ಊಹಾಪೋಹಗಳ ಕುರಿತು ಪ್ರತಿಕ್ರಿಯಿಸಿದ ಉದಯನಿಧಿ ಸ್ಟಾಲಿನ್, ಜನಸಂಖ್ಯಾ ನಿಯಂತ್ರಣ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಿದ ದಕ್ಷಿಣದ ರಾಜ್ಯಗಳಿಗೆ ಕ್ಷೇತ್ರ ಪುನರ್ ವಿಂಗಡಣೆಯ ಮೂಲಕ ಅನ್ಯಾಯ ಎಸಗಲಾಗುತ್ತಿದೆ. ಮಸೂದೆಯನ್ನು ಬೆಂಬಲಿಸುವ ಅಥವಾ ನಿಲುವನ್ನು ಸಡಿಲಗೊಳಿಸುವ ಪ್ರಶ್ನೆಯೇ ಇಲ್ಲ. ಡಿಎಂಕೆಯ ಪ್ರತಿರೋಧ ಎಂದಿನಂತೆ ಮುಂದುವರಿಯಲಿದೆ” ಎಂದಿದ್ದಾರೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ಮಸೂದೆಯನ್ನು ಬೆಂಬಲಿಸುವವರನ್ನು 21 ನೇ ಶತಮಾನದ ಎಟ್ಟಪ್ಪನ್ಗಳು (ದ್ರೋಹಿಗಳು) ಎಂದು ಕಟುವಾಗಿ ಟೀಕಿಸಿದ್ದರು. ರಾಷ್ಟ್ರೀಯ ಮಟ್ಟದ ಇಂಡಿಯಾ ಒಕ್ಕೂಟದಲ್ಲಾದ ಸಣ್ಣಪುಟ್ಟ ರಾಜಕೀಯ ಗೊಂದಲಗಳು ಹಾಗೂ ಡಿಎಂಕೆ ಸ್ಪಷ್ಟ ನಿಲುವು ಪ್ರಕಟಿಸಿಲ್ಲ ಎಂಬ ಕಾಂಗ್ರೆಸ್ನ ಕೆಲ ಮುಖಂಡರ ಅಸಮಾಧಾನದ ಬೆನ್ನಲ್ಲೇ, ಉದಯನಿಧಿ ನೀಡಿರುವ ಈ ಸ್ಪಷ್ಟನೆ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ.
ಮುಖ್ಯಮಂತ್ರಿ ವಿಜಯ್ರಿಂದ ರಾಜ್ಯದ ಸಂಸದರ ತುರ್ತು ಸಭೆ
ಮತ್ತೊಂದೆಡೆ, ಪ್ರಸ್ತಾವಿತ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯಿಂದ ತಮಿಳುನಾಡಿಗೆ ಆಗುವ ರಾಜಕೀಯ ಹಾಗೂ ಆರ್ಥಿಕ ನಷ್ಟದ ಕುರಿತು ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (ತಮಿಳಗ ವೆಟ್ರಿ ಕಳಗಂ – TVK) ಅವರು ರಾಜ್ಯದ ಎಲ್ಲಾ ಲೋಕಸಭಾ ಮತ್ತು ರಾಜ್ಯಸಭಾ ಸಂಸದರ ಜಂಟಿ ಸಭೆಯನ್ನು ಕರೆದಿದ್ದಾರೆ.
ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ಕೇಂದ್ರದ ಅನುದಾನ ಹಂಚಿಕೆ ಹಾಗೂ ಸಂಸತ್ತಿನಲ್ಲಿ ದಕ್ಷಿಣದ ಧ್ವನಿ ಕುಸಿಯಲಿದೆ ಎಂದು ಮುಖ್ಯಮಂತ್ರಿ ವಿಜಯ್ ಈಗಾಗಲೇ ಆತಂಕ ವ್ಯಕ್ತಪಡಿಸಿದ್ದು, ಕೇಂದ್ರದ ಈ ನಡೆಗೆ ಜಂಟಿಯಾಗಿ ಪ್ರತಿರೋಧ ಒಡ್ಡಲು ಸಂಸದರ ಸಭೆ ಆಯೋಜಿಸಿದ್ದಾರೆ. ಆದರೆ, ಕಾವೇರಿ-ಮೇಕೆದಾಟು ವಿವಾದ ಹಾಗೂ ಇತರ ವಿಷಯಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಡಿಎಂಕೆ ಸಂಸದರು ಈ ಸಭೆಯಲ್ಲಿ ಭಾಗವಹಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.


