Homeಚಳವಳಿದಲಿತ ಚಳವಳಿಯಲ್ಲಿ ಯುವ ನಾಯಕತ್ವ ಅರಳುವ ಸಮಯ

ದಲಿತ ಚಳವಳಿಯಲ್ಲಿ ಯುವ ನಾಯಕತ್ವ ಅರಳುವ ಸಮಯ

ಕಳೆದ ಒಂದು ದಶಕದಲ್ಲಿ ದಲಿತರ ಮೇಲೆ ಅದೆಷ್ಟು ದೌರ್ಜನ್ಯಗಳು ನಡೆದಿಲ್ಲ? ಸ್ಥಾಪಿತ ದಲಿತ ಸಂಘಟನೆಗಳ ನಾಯಕರಿಂದ ಒಂದಾದರೂ ಬೃಹತ್ ಹೋರಾಟ ರೂಪುಗೊಂಡಿತೆ? ಇಲ್ಲ. ಹಾಗಾದರೆ ಆ ನಾಯಕತ್ವ ಬದಲಾಗಬೇಕಲ್ಲದೆ ಮತ್ತೇನು?

- Advertisement -
- Advertisement -

ಪ್ರಜಾತಂತ್ರದ ವಿಸ್ತರಣೆ ಮತ್ತು ಧ್ರುವೀಕರಣ ಚಳವಳಿಗಳ ಗೆಲುವು ಮತ್ತು ಸೋಲು ಸ್ವತಂತ್ರಪೂರ್ವದಲ್ಲಿಯೇ ಅಂಬೇಡ್ಕರರು ’ರಾಜಕೀಯ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು’ ಪ್ರತ್ಯೇಕಿಸಿ ಅವುಗಳು ಹೇಗೆ ಒಂದಕ್ಕೊಂದು ಪೂರಕವಾಗಿವೆ ಎಂದು ವಿವರಿಸಿದ್ದರು. ವೋಟ್ ಬ್ಯಾಂಕ್ ರಾಜಕಾರಣವೊಂದೇ ಶೋಷಿತರ ವಿಮೋಚನೆಯ ಹಾದಿಯಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ ಸ್ವತಂತ್ರ ಭಾರತದ ಮನುವಾದಿ ರಾಜಕಾರಣವು ವೋಟ್‌ಬ್ಯಾಂಕ್ ರಾಜಕಾರಣವನ್ನೇ ಪ್ರಜಾಪ್ರಭುತ್ವವೆಂದು ಬಿಂಬಿಸುವಲ್ಲಿ ಯಶಸ್ವಿಯಾಯಿತು.

’ಪ್ರಜಾಪ್ರಭುತ್ವಕ್ಕೆ ಕುತ್ತು ಬಂದಾಗ ಮೊದಲು ಹೊಡೆತ ಬೀಳುವುದೇ ಆ ಪ್ರಜೆಗಳ ಏಣಿಶ್ರೇಣಿಯಲ್ಲಿ ಅತಿ ಕೆಳಗಿರುವ ದಲಿತರಿಗೆ. ಯುಪಿಎ ಆಡಳಿತವಿದ್ದಾಗಲೂ ದಲಿತರು ಸ್ವತಂತ್ರರಾಗಿರಲಿಲ್ಲ. ಬಿಜೆಪಿ ಆಡಳಿತದಲ್ಲಿಯೂ ದಲಿತರು ಸ್ವತಂತ್ರರಾಗಿಲ್ಲ. ಎರಡೂ ಅವಧಿಗಳಲ್ಲಿಯೂ ದಲಿತರ ಸ್ಥಿತಿ ಸಾಮಾಜಿಕ ಮತ್ತು ಆರ್ಥಿಕವಾಗಿ ಚಿಂತಾಜನಕವಾಗಿಯೇ ಮುಂದುವರೆದಿದೆ. ಆದರೆ ಇವೆರಡರಲ್ಲಿ ಯಾವುದು ಬೆಂಕಿ ಯಾವುದು ಕುದಿಯುವ ಎಣ್ಣೆ ಎಂಬುದನ್ನು ಪರಿಶೀಲಿಸಲೇಬೇಕಾಗಿದೆ.

2012ರ ಎನ್.ಸಿ.ಆರ್.ಬಿ ವರದಿ ಪ್ರಕಾರ ಪ್ರತಿ 18 ನಿಮಿಷಗಳಿಗೆ ಒಂದರಂತೆ ದಲಿತರ ಮೇಲೆ ದೌರ್ಜನ್ಯವಾಗುತ್ತಿತ್ತು. ಪ್ರತಿ ದಿನ 3 ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿತ್ತು. ದಿನಕ್ಕೊಂದು ದಲಿತರ ಹತ್ಯೆಯಾಗುತ್ತಿತ್ತು. 2019ರಲ್ಲಿ 15 ನಿಮಿಷಗಳಿಗೊಂದು ದೌರ್ಜನ್ಯವಾಗುತ್ತಿದೆ. ಪ್ರತಿ ದಿನ 6 ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ. ಇಬ್ಬರು ಹತರಾಗುತ್ತಿದ್ದಾರೆ. ಕಳೆದ ೬ ವರ್ಷಗಳಲ್ಲಿ ದಲಿತರ ಮೇಲೆ ಗುಂಪು ಹಲ್ಲೆಗಳು ಹೆಚ್ಚಾಗಿವೆ. ಹಿಂದೆ ಜಜ್ಜಾರ್‌ನಂತಹ (2002) ಘಟನೆಗಳು ನಮ್ಮಲ್ಲಿ ನಡೆದಿದ್ದರೂ ಇತ್ತೀಚೆಗೆ ಗೋರಕ್ಷಣೆ, ದೇಗುಲ ಪ್ರವೇಶ ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ 28 ಗುಂಪು ಹಲ್ಲೆಗಳು ದಾಖಲಾಗಿದ್ದು ಅದರಲ್ಲಿ 8 ದಲಿತರನ್ನು ಕೊಲ್ಲಲಾಗಿದೆ. ಹಿಂದುತ್ವ ರಾಜಕಾರಣದಿಂದಾಗಿಯೇ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ಆಡಳಿತದಲ್ಲಿ ದೇಶದಲ್ಲಿಯೇ ಅತಿಹೆಚ್ಚು ದಲಿತರ ಮೇಲೆ ದೌರ್ಜನ್ಯಗಳು ನಡೆದಿದ್ದು ನಂತರದ ಸ್ಥಾನ ಮತ್ತೊಂದು ಹಿಂದುತ್ವ ರಾಜಕಾರಣದ ಕೂಸಾದ ಗುಜರಾತ್ ಸರ್ಕಾರದ್ದು. ಇವೆರಡೂ ರಾಜ್ಯಗಳ ಬಿಜೆಪಿ ಆಡಳಿತವು ದಲಿತರನ್ನು ’ಹಿಂದೂ ರಾಷ್ಟ್ರದಲ್ಲಿ ಹೇಗೆ ನಡೆಸಿಕೊಳ್ಳಬಹುದು ಎಂಬುದನ್ನು ಸಾಕ್ಷೀಕರಿಸುತ್ತಿವೆ.

ಇನ್ನು ದಲಿತ ಚಳವಳಿಯು ಬಹಳ ಅಸಡ್ಡೆ ಮಾಡಿರುವ ಆರ್ಥಿಕ ವಿಚಾರಕ್ಕೆ ಬರೋಣ. ಪ್ರತಿ ವರ್ಷದ ಕೇಂದ್ರ ಬಜೆಟ್ಟಿನಲ್ಲಿ ಯೋಜನಾ ಗಾತ್ರದಲ್ಲಿ ಪರಿಶಿಷ್ಟ ಜಾತಿಗಳ ಉಪಯೋಜನೆಗಾಗಿ ಶೇ.16.6ರಷ್ಟು ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಗಾಗಿ ಶೇ.೮.೬ರಷ್ಟನ್ನು ಮೀಸಲಿಡಬೇಕು. (ಕೇಂದ್ರ ಸರ್ಕಾರ ಕರ್ನಾಟಕದಂತೆ ಕಡ್ಡಾಯ ಕಾನೂನು ಮಾಡಿಲ್ಲ) ಆದರೆ 2020-21 ನೇ ಸಾಲಿನ ಕೇಂದ್ರ ಬಜೆಟ್ಟಿನಲ್ಲಿ ಬಿಜೆಪಿ ಸರ್ಕಾರವು 83.256 ಕೋಟಿಗಳನ್ನು ಅಂದರೆ ಕೇವಲ ಶೇ. 8.6ರಷ್ಟನ್ನು ಪ.ಜಾಗಳಿಗೂ ಹಾಗೂ 53.256 ಕೋಟಿಯನ್ನು ಅಂದರೆ ಶೇ. 5.6ರಷ್ಟನ್ನು ಪ.ಪಂಗಳಿಗೂ ಮೀಸಲಿಟ್ಟಿದೆ. ಈ ಮೂಲಕ ಪ.ಜಾಗಳಿಗೆ 70.000 ಕೋಟಿ ಮತ್ತು ಪ.ಪಂಗಳಿಗೆ 50.000 ಕೋಟಿಯನ್ನು ಕಡಿಮೆ ನೀಡಲಾಗಿದೆ. ಅಟ್ರಾಸಿಟಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೇವಲ 165 ಕೋಟಿ ನೀಡಲಾಗಿದೆ. ಕಳೆದ ವರ್ಷ 189 ಕೋಟಿ ನೀಡಲಾಗಿತ್ತು. 2019-20 ರಲ್ಲಿ 22.000 ಕೋಟಿಯಷ್ಟನ್ನು ಕೃಷಿ ಆರ್ಥಿಕತೆಗಾಗಿ ಖರ್ಚು ಮಾಡಲಾಗಿದೆ ಎಂಬ ಮಾಹಿತಿಯಿದೆ. ಆಶ್ಚರ್ಯವೆಂದರೆ, ದಲಿತರಿಗೆ ಕೃಷಿ ಭೂಮಿ ಎಲ್ಲಿದೆ? ಹೆಚ್ಚಾಗಿ ದಲಿತರು ಹಣ ಗಳಿಸುವ ಕ್ಷೇತ್ರವಾದ ನರೇಗಾ ಯೋಜನೆಗೆ ಈ ವರ್ಷ ಕೇವಲ 61.500 ಕೋಟಿ ಮೀಸಲಿಡಲಾಗಿದೆ. ಅಂದರೆ ಕಳೆದ ವರ್ಷಕ್ಕಿಂತ 10,000 ಕೋಟಿ ಕಡಿಮೆ. 2019-20ನೇ ಸಾಲಿನಲ್ಲಿ ವಿದ್ಯಾರ್ಥಿವೇತನ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳುವ ಸರ್ಕಾರವು, ಅದೇ ವರ್ಷ ವಿದ್ಯಾರ್ಥಿವೇತನಕ್ಕೆ ಅರ್ಧದಷ್ಟು ಅನುದಾನವನ್ನು ಕಡಿತಗೊಳಿಸಿದೆ. ಹಾಗಾದರೆ ವಿದ್ಯಾರ್ಥಿವೇತನ ಪಡೆಯುವವರ ಸಂಖ್ಯೆ ಕಡಿಮೆಯಾಗಬೇಕಲ್ಲವೆ?

ಮೋದಿಯವರ ಅತ್ಯಂತ ಪ್ರಚಾರ ಪಡೆದ ಹಾಗೂ ಆತ್ಯಂತಿಕವಾಗಿ ನೆಲಕಚ್ಚಿದ ಯೋಜನೆಯಾದ ನೋಟು ರದ್ಧತಿಯಿಂದಾಗಿ ಮೊದಲು ಪೆಟ್ಟು ತಿಂದದ್ದು ದಲಿತರು. ಏಕೆಂದರೆ ದೇಶದ ಅತಿಹೆಚ್ಚು ಅಸಂಘಟಿತ ವಲಯದ ದಿನಗೂಲಿ ಕಾರ್ಮಿಕರು ದಲಿತರೇ ಆಗಿದ್ದಾರೆ. ಇದಕ್ಕೆ ಉದಾಹರಣೆ ಬಾಗಿಲು ಮುಚ್ಚಿದ ಆಗ್ರಾದ ಚರ್ಮೋದಮ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಅತಿಹೆಚ್ಚು ಬೀದಿಗೆ ಬಿದ್ದ ಹಾಗೂ ಸವರ್ಣೀಯರಿಂದ ದೌರ್ಜನ್ಯಕ್ಕೊಳಗಾದ ಜನರೆಂದರೆ ದಲಿತರು. ಕಾರ್ಮಿಕರ ಕಾಯ್ದೆ ದುರ್ಬಲಗೊಂಡರೆ, ಭೂಸ್ವಾಧಿನ ಕಾಯ್ದೆ ಜಾರಿಗೊಂಡರೂ ಕೂಡ ಅತಿಹೆಚ್ಚು ಅನ್ಯಾಯಕ್ಕೊಳಗಾಗುವವರು ದಲಿತರೇ ಆಗಿದ್ದಾರೆ.

ಹೀಗೆ ಕಳೆದ ಐದಾರು ವರ್ಷಗಳಿಂದ ದಿನದಿಂದ ದಿನಕ್ಕೆ ದಲಿತರಿಗೆ ಅಭದ್ರತೆ ಹೆಚ್ಚಾಗುತ್ತಿದೆ. ಇಂತಹ ಆತಂಕಕಾರಿ ಸ್ಥಿತಿಯಲ್ಲಿ ದಲಿತ ಚಳವಳಿ ಹಾಗೂ ದಲಿತಪರ ಚಳವಳಿಗಳು ಅನ್ಯಾಯದ ವಿರುದ್ಧ ದನಿ ಎತ್ತಿದ್ದಿದೆ. ಊನಾ ಚಳವಳಿ, ರೋಹಿತ್ ವೇಮುಲಾ ಚಳವಳಿ, ಅಟ್ರಾಸಿಟಿ ಕಾಯ್ದೆ ದುರ್ಬಲದ ವಿರುದ್ಧದ ಚಳವಳಿ ಮುಖ್ಯವಾದವು. ಈ ಮೂರೂ ಚಳವಳಿಗಳಲ್ಲಿ ದಲಿತರು ಬೀದಿಗಿಳಿದು ಹೋರಾಡಿದರು. ತಮ್ಮ ಮೇಲಿನ ದೌರ್ಜನ್ಯವನ್ನು ಸಹಿಸಿಕೊಂಡು ಸುಮ್ಮನಿರಲಾರೆವು ಎಂದು ಸರ್ಕಾರಕ್ಕೆ ಹಾಗೂ ಜಾತೀಯ ಸಮಾಜಕ್ಕೆ ಚುರುಕು ಮುಟ್ಟಿಸಿದರು. ಆದರೆ ಇದಕ್ಕೆ ಅಷ್ಟೇ ಪ್ರಬಲವಾಗಿ ಹಾಗೂ ವಿರುದ್ಧವಾಗಿ ಪ್ರಭುತ್ವವೇ ರೋಹಿತ್ ವೇಮುಲ ದಲಿತನಲ್ಲ ಎಂಬ ತನಿಖೆ ಮಾಡಲು ನಿಂತಿತು. ಅಟ್ರಾಸಿಟಿ ಕಾಯ್ದೆ ಪರವಾಗಿ ಹೋರಾಟಕ್ಕಿಳಿದ 11 ದಲಿತರನ್ನು ಗೋಲಿಬಾರ್ ಮೂಲಕ ಕೊಂದಿತು. ಕೊರೆಗಾಂವ್ ವಿಜಯೋತ್ಸವದಲ್ಲಿ ಗಲಭೆ ಸೃಷ್ಟಿಸಿದ ಸಾಂಬಾಜಿ ಭಿಡೆಯನ್ನು ಬಂಧಿಸದೇ ರಕ್ಷಣೆ ನೀಡಿತು. ಅಂಬೇಡ್ಕರರ ಕುಟುಂಬದ ಸದಸ್ಯ ಆನಂದ್ ತೇಲ್ತುಂಬ್ಡೆಯವರನ್ನೇ ಬಂಧಿಸಿ ಜೈಲಿಗಟ್ಟಿತು. ಈ ಮೂಲಕ ಹಿಂದುತ್ವಕ್ಕೆ ಬೇಕಾಗಿರುವುದು ’ಅಠಾವಳೆ’ಯಂತಹವರೇ ಹೊರತು ಆನಂದ್ ತೇಲ್ತುಂಬ್ಡೆಯಂತಹವರಲ್ಲ ಎಂದು ಬಹಿರಂಗವಾಗಿ ಘೋಷಿಸಿತು ಹಾಗೂ ತನಗೆ ಬೇಕಾದವರನ್ನೇ ಪೋಷಿಸಿತು.

ಹೀಗೆ ಪ್ರಭುತ್ವವೇ ದಲಿತರ ಮೇಲೆ ದಮನಕಾರಿ ದಾಳಿ ಮಾಡುತ್ತಿರುವಾಗ ದಲಿತ ಚಳವಳಿಯು ತೋರಿದ ಪ್ರತಿರೋಧ ಇತಿಹಾಸವನ್ನು ನೆನಪಿಸಲೇ ಇಲ್ಲ. ಜಿಗ್ನೇಶ್ ಮೇವಾನಿ, ಚಂದ್ರಶೇಖರ್ ಆಜಾದ್‌ನಂತಹ ಯುವ ಹೋರಾಟಗಾರರು ದಲಿತ ನಾಯಕತ್ವವು ಬದಲಾಗಬೇಕಾದ ದಾರಿಯನ್ನು ಗ್ರಹಿಸಿದರಾದರೂ ಅವರ ಆಲೋಚನೆಗಳನ್ನು ಜನಮಾನಸದಲ್ಲಿ ಇಳಿಸಲಾಗುತ್ತಿಲ್ಲ. ಕಳೆದ ಎರಡು ವರ್ಷಗಳಲ್ಲಿ ಹೆಚ್ಚೂಕಡಿಮೆ ಅವರು ನಿರಾಶೆಗೆ ಒಳಗಾದಂತಿದೆ. ಇದಕ್ಕೆ ಕಾರಣ ಚುನಾವಣಾ ರಾಜಕಾರಣದಲ್ಲಿ ಮಾತ್ರ ದಲಿತ ವಿಮೋಚನೆಗೆ ಪರಿಹಾರ ಹುಡುಕುತ್ತಿರುವುದಾಗಿದೆ.

ಅಂಬೇಡ್ಕರರು ’ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿ’ ಎರಡನ್ನೂ ಶೋಷಿತರ ಶತ್ರುಗಳೆಂದು ತೀರ್ಪಿತ್ತು ಸುಮಾರು 80 ವರ್ಷಗಳೇ ಕಳೆದವು. ಇವೆರಡರ ವಿರುದ್ಧದ ಕಾರ್ಯಯೋಜನೆಯೇ ’ಜಾತಿವಿನಾಶ ಮತ್ತು ಪ್ರಭುತ್ವ ಮತ್ತು ಅಲ್ಪಸಂಖ್ಯಾತರು’ ಕೃತಿಗಳು ಎಂಬುದನ್ನು ಗ್ರಹಿಸದಾದೆವು. ದಲಿತರು ಬ್ರಾಹ್ಮಣ್ಯಕ್ಕೆ ಎದುರಾದರೇ ಹೊರತು ಬಂಡವಾಳಶಾಹಿಯ ಕಡೆ ತಿರುಗಿಯೂ ನೋಡಲಿಲ್ಲ. ದೇಶದ ಶೇ. 3 ರಷ್ಟಿರುವ ಶ್ರೀಮಂತರ ಬಳಿ ಶೇ. 75 ರಷ್ಟು ಸಂಪತ್ತಿದೆ ಎಂಬ ಸುದ್ದಿಯು ದಲಿತರಿಗೆ ಆತಂಕಕಾರಿಯಾಗಿ ಕಾಣುವುದೇ ಇಲ್ಲ. ಮುಂದೆ ಮನುವಾದಿಗಳು ದಲಿತ ಜಾತಿಗಳೊಳಗೇ ಸೃಷ್ಟಿಸಿದ ಸಿಕ್ಕುಗಳನ್ನು ಬಿಡಿಸಿಕೊಳ್ಳಲೂ ಪ್ರಯತ್ನಿಸಲಿಲ್ಲ. ಭಾರತದ ದಲಿತರು ಒಕ್ಕೊರಲಿನಿಂದ ಒಳಮೀಸಲಾತಿಯನ್ನು ಕೇಂದ್ರ ಸರ್ಕಾರದ ಅಂಗಳಕ್ಕೆ ಕಳಿಸಿ ಅವರ ನಾಟಕವನ್ನು ಬಹಿರಂಗಗೊಳಿಸಬಹುದಿತ್ತಾದರೂ ದಲಿತರೊಳಗೇ ಇರುವ ಮಧ್ಯಮವರ್ಗದ ಅವಕಾಶವಾದಿಗಳು ಅದಕ್ಕೆ ಅವಕಾಶ ನೀಡುತ್ತಿಲ್ಲ. ಅಂಬೇಡ್ಕರರನ್ನೇ ಒಂದು ಜಾತಿಗೆ ಸೀಮಿತಗೊಳಿಸಿ ತಮ್ಮ ಕತ್ತನ್ನು ತಾವೇ ಕೊಯ್ದುಕೊಳ್ಳಲು ಹೊರಟಿರುವ ದಲಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅಂಬೇಡ್ಕರ್‌ವಾದಿ ದಲಿತರು ’ಅಂಬೇಡ್ಕರ್ ಪ್ರತಿಮೆ’ಗೆ ಬೆಲೆ ಕೊಟ್ಟಷ್ಟು ’ಅಂಬೇಡ್ಕರ್ ಪ್ರಜ್ಞೆ’ಗೆ ಬೆಲೆ ಕೊಡಲಿಲ್ಲ, ಕೊಡುತ್ತಿಲ್ಲ. ತಮ್ಮನ್ನು ಅಂಬೇಡ್ಕರ್‌ವಾದಿಗಳೆಂದು ಹೇಳಿಕೊಳ್ಳುವ ಮಧ್ಯಮವರ್ಗದ ದಲಿತ ಬುದ್ಧಿಜೀವಿಗಳೂ ಸಹ ’ಜಾತಿ ಪದ್ಧತಿ ನಾಶವಾಗುವುದಿಲ್ಲ. ಜಾತಿಗಳನ್ನು ಪರಸ್ಪರ ಸಮಾನಗೊಳಿಸಬೇಕಷ್ಟೆ’ ಎಂದು ಬಡಬಡಾಯಿಸುತ್ತಿದ್ದಾರೆ.

90ರ ದಶಕದ ನಂತರ ದಲಿತ ಚಳವಳಿಯ ನಾಯಕತ್ವವು ವೈಯಕ್ತಿಕ ಸ್ವಾರ್ಥ-ಪ್ರತಿಷ್ಠೆಗಳಿಗೆ ಬಲಿಯಾಗಿ ದುರ್ಬಲಗೊಂಡಿತ್ತು. ಆದರೆ ಕಳೆದ 5 ವರ್ಷಗಳಲ್ಲಿ ಸೈದ್ಧಾಂತಿಕವಾಗಿಯೂ ಭ್ರಷ್ಟಗೊಂಡಿದೆ. ’ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದಂತಹ ಪ್ರತಿಗಾಮಿ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು’ ಎಂಬ ಅಂಬೇಡ್ಕರರ ಎಚ್ಚರಿಕೆಯನ್ನೇ ಮೀರಿ ವೈಯಕ್ತಿಕ ಸ್ವಾರ್ಥಕ್ಕೆ ಸಾಮುದಾಯಿಕ ಹಿತಾಸಕ್ತಿಯನ್ನು ಬಲಿಕೊಟ್ಟಿದೆ. ರಾಜಕೀಯವಾಗಿ ಬಿಜೆಪಿಯನ್ನು ಏಣಿಯಾಗಿಸಿಕೊಳ್ಳುತ್ತೇವೆ ಎಂದವರೆಲ್ಲ ಬಿಜೆಪಿ ಏಣಿಯ ಮೆಟ್ಟಿಲುಗಳಾಗಿಬಿಟ್ಟಿದ್ದಾರೆ.

ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿರುವಾಗ ಮೀಸಲಾತಿ ಪಡೆದ ದಲಿತ ಮಧ್ಯಮವರ್ಗವು ತನಗೂ ದಲಿತ ಸಮೂಹಕ್ಕೂ ಸಂಬಂಧವೇ ಇಲ್ಲದಂತೆ ಸತ್ಯನಾರಾಯಣ ವ್ರತ ಮತ್ತು ವರಮಹಾಲಕ್ಷ್ಮಿ ಪೂಜೆಯಲ್ಲಿ ನಿರತವಾಗಿದೆ. ಇದಕ್ಕೆಲ್ಲ ಮೂಲಕಾರಣ ’ದಲಿತ ಪ್ರಜ್ಞೆ’ಯು ’ಅಂಬೇಡ್ಕರ್ ಪ್ರಜ್ಞೆ’ ಕಡೆಗೆ ಹೆಜ್ಜೆ ಹಾಕುವ ಬದಲು ಅವಕಾಶವಾದಿ ದಲಿತ ನಾಯಕರ ಹಾದಿಯನ್ನು ನಂಬಿಕೊಂಡು ’ಹರಿಜನ ಪ್ರಜ್ಞೆ’ಯೆಡೆಗೆ ಹೆಜ್ಜೆ ಹಾಕಿದ್ದಾಗಿದೆ. ಹರಿಜನ ಪ್ರಜ್ಞೆಯ ಹಾದಿಗೆ ದಶಕದ ಹಿಂದೆಯೇ ’ಹಿಂದುತ್ವ ಪ್ರಜ್ಞೆ’ಯು ಸೇತುವೆ ನಿರ್ಮಿಸಿ ತನ್ನ ಹಾದಿಯನ್ನು ಸುಗಮವಾಗಿಸಿಕೊಂಡಿದೆ. ಮೀಸಲು ಕ್ಷೇತ್ರಗಳಿಂದ ಆರಿಸಿ ಬಂದಿರುವ ದಲಿತ ನಾಯಕರು ನಾಲಾಯಕ್ಕಾಗಿದ್ದು ಅವರ್‍ಯಾರೂ ದಲಿತರನ್ನು ಪ್ರತಿನಿಧಿಸುವವರಾಗಿ ಉಳಿದಿಲ್ಲ. ಸಂಸತ್ತಿನಲ್ಲಿ ಪಕ್ಷಾತೀತವಾಗಿ ದಲಿತರ ಪರವಾಗಿ ಮಾತನಾಡುವ ನಾಲಿಗೆಗೆ ಕಾಂಗ್ರೆಸ್ ಲಕ್ವ ಹೊಡೆಸಿತ್ತು ಆದರೆ ಹಿಂದುತ್ವ ರಾಜಕಾರಣ ನಾಲಿಗೆಯನ್ನೇ ಕತ್ತರಿಸಿಬಿಟ್ಟಿದೆ. ಸಂಸತ್ತಿನಲ್ಲೀಗ ಏಕಲವ್ಯರ ದಂಡು. ಹಾಗಾಗಿಯೇ ದಲಿತರು ಜಿಗ್ನೇಶ್, ಆಜಾದ್ ಕಡೆಗೆ ಆಸೆ ಕಣ್‌ಗಳಿಂದ ನೋಡುತ್ತಿದ್ದಾರೆ. ಆದರೆ ಆ ಅಸೆಯು ಕನಿಷ್ಠ 10 ವರ್ಷಗಳ ಕಾಲ ದಲಿತ ಸೇನಾನಿಗಳ ತ್ಯಾಗ ಬಲಿದಾನವನ್ನು ಕೇಳುತ್ತಿದೆ. ಇದು ಚುನಾವಣಾ ರಾಜಕೀಯದಿಂದ ಖಂಡಿತವಾಗಿಯೂ ಅಸಾಧ್ಯವಾದ ಮಾತು. ಕಳೆದ 70 ವರ್ಷಗಳಲ್ಲಿ ದಲಿತರನ್ನು ಚಳವಳಿ ರಾಜಕಾರಣ ಮಾತ್ರ ಕೈಹಿಡಿದಿದೆ. ಈ ಚಳವಳಿ ರಾಜಕಾರಣದ ಕೈಗೆ ಚುನಾವಣಾ ರಾಜಕಾರಣ ಜುಟ್ಟು ಸಿಕ್ಕಾಗ ಮಾತ್ರ ದಲಿತರ ವಿಮೋಚನೆಯಾಗುತ್ತದೆ.

ಹಾಗಾದರೆ ದಲಿತ ಚಳವಳಿ ರಾಜಕಾರಣವನ್ನು ಪುನರುಜ್ಜೀವನಗೊಳಿಸುವುದು ಹೇಗೆ? ಅಂಬೇಡ್ಕರರು ’ನನ್ನ ಹೋರಾಟದ ರಥವನ್ನು ಸಾಧ್ಯವಾದರೆ ಮುನ್ನಡೆಸಿ ಇಲ್ಲವಾದರೆ ಅಲ್ಲಿಯೇ ಬಿಟ್ಟುಬಿಡಿ ಹಿಂದಕ್ಕೆ ಮಾತ್ರ ಎಳೆಯಬೇಡಿ’ ಎಂದಿದ್ದರು. ದುರಂತವೆಂದರೆ, ೯೦ರ ದಶಕದ ನಂತರ ರಾಜಕೀಯ ಮತ್ತು ಚಳವಳಿಯ ದಲಿತ ನಾಯಕರು ಅಂಬೇಡ್ಕರರ ರಥವನ್ನು ಹಿಂದಕ್ಕೆ ಎಳೆದೊಯ್ದರು. ಕಳೆದ ಆರೇಳು ವರ್ಷದಲ್ಲಿ ಆ ರಥದ ಭಾಗಗಳನ್ನು ಕಿತ್ತುಕೊಂಡು ತಮ್ಮ ಮನೆಗಳಿಗೆ ಹೊತ್ತೊಯ್ದಿದ್ದಾರೆ. ಈಗ ಆ ರಥದ ಭಾಗಗಳನ್ನು ಒಂದೊಂದಾಗಿ ಮನುವಾದಿಗಳಿಗೆ ಅಡವಿಡುವುದಕ್ಕೆ ಆರಂಭಿಸಿದ್ದಾರೆ. ದಲಿತ ಯುವಕ-ಯುವತಿಯರು ಎಚ್ಚೆತ್ತುಕೊಳ್ಳದಿದ್ದರೆ ಮನುವಾದಿಗಳ ಮನೆ ಹೊರಗೆ ಸಂಪೂರ್ಣ ರಥ ತಲುಪುತ್ತದೆ. ಅವರು ಅದನ್ನು ಸುಟ್ಟು ಆ ದಿನವನ್ನು ಹಬ್ಬವನ್ನಾಗಿ ದಲಿತರೇ ಆಚರಿಸುವಂತೆ ಮಾಡುತ್ತಾರೆ. ಈಗಾಗಲೇ ದಲಿತರಿಗೆ ವಾಮನನ ಬಗ್ಗೆ ಕೊಂಚವೂ ಸಿಟ್ಟಿಲ್ಲದೆ ಬಲಿ ಚಕ್ರವರ್ತಿಯನ್ನು ಪೂಜಿಸುವುದನ್ನು ಕಲಿಸಲಾಗಿದೆ.

ಕಳೆದ ಒಂದು ದಶಕದಲ್ಲಿ ದಲಿತರ ಮೇಲೆ ಅದೆಷ್ಟು ದೌರ್ಜನ್ಯಗಳು ನಡೆದಿಲ್ಲ? ಸ್ಥಾಪಿತ ದಲಿತ ಸಂಘಟನೆಗಳ ನಾಯಕರಿಂದ ಒಂದಾದರೂ ಬೃಹತ್ ಹೋರಾಟ ರೂಪುಗೊಂಡಿತೆ? ಇಲ್ಲ. ಹಾಗಾದರೆ ಆ ನಾಯಕತ್ವ ಬದಲಾಗಬೇಕಲ್ಲದೆ ಮತ್ತೇನು? ಯುವ ನಾಯಕತ್ವ ಅರಳಬೇಕಿದೆ. ಅದು ಚಳವಳಿ ರಾಜಕಾರಣದಲ್ಲಿ ನಂಬಿಕೆ ಹೊಂದಬೇಕಿದೆ. ಅಂಬೇಡ್ಕರ್ ಪ್ರಜ್ಞೆಯನ್ನೇ ತನ್ನ ಆಯುಧವನ್ನಾಗಿ ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಮೊದಲು ’ಕಳೆ ನಾಶಕ’ ಸಿಂಪಡಿಸಿ ಹೊಸ ಬೆಳೆಯನ್ನು ಬೆಳೆಯಬೇಕಿದೆ. ಈಗಿರುವುದು ಅದೊಂದೇ ದಾರಿ. ಇಲ್ಲದಿದ್ದರೆ ಕೆಲವೇ ವರ್ಷಗಳಲ್ಲಿ ದಲಿತ ಯುವಕರಿಗೆ ಕುತ್ತಿಗೆಗೆ ’ಹಗ್ಗದಂತಹ ಚಿನ್ನದ ಸರ’ ಕೈಗೆ ’ಚಿನ್ನದ ಕಡಗ’ ಸಂಜೆಯಾದರೂ ಸ್ವಲ್ಪವೂ ಕರೆಯಾಗದ ಬಿಳಿಯ ಬಟ್ಟೆ ಧರಿಸಿ ಅರ್ಧಕೋಟಿ ಬೆಲೆಬಾಳುವ ಕಾರಿನಲ್ಲಿ ಕೈ ಬೀಸುವ ’ದಲಿತ ವಿರೋಧಿಗಳು ಆದರ್ಶವಾಗುತ್ತಾರೆ.

ಮಾತುಗಳು ಇರಿಯುತ್ತಿರಬಹುದು, ನಿಜ. ಆದರೆ ಈಗಲೂ ಮಾತು ಮೊನಚಾಗದಿದ್ದರೆ ಮುಂದೆ ಮನುವಾದಿಗಳ ಕಮಿಷನ್ ಆಸೆಗೆ ದಲಿತರ ’ವೋಟು’ಗಳನ್ನು ಕೊಂಡುಕೊಳ್ಳುವ ಬೂತುಗಳಲ್ಲಿ ಮುಂದಿನ ತಲೆಮಾರಿನ ದಲಿತ ಯುವಜನತೆ ಇರುತ್ತದೆ. ಹಾಗಾಗಿ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಹಿರಿಯ ದಲಿತ ನಾಯಕತ್ವವು ಯುವಜನತೆಯನ್ನು ಗುರುತಿಸಿ ಅಂಬೇಡ್ಕರರ ಹಿಂದೆ ನಡೆಯುವಂತೆ ಪ್ರೇರೇಪಿಸಬೇಕಿದೆ. ಇಲ್ಲದಿದ್ದರೆ ಈಗಾಗಲೇ ಧ್ವಂಸಗೊಂಡಿರುವ ದಲಿತ ಚಳವಳಿಯನ್ನು ನಿರ್ನಾಮ ಮಾಡಲು ಮನುವಾದಿಗಳು ದಲಿತರನ್ನೇ ಬಳಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.

ಸಾಕ್ಯ ಸಮಗಾರ
ಹೊಸ ತಲೆಮಾರಿನ ಚಿಂತಕ ಮತ್ತು ಆಕ್ಟಿವಿಸ್ಟ್ ಆದ ’ಸಾಕ್ಯ, ಅಂಬೇಡ್ಕರ್ ಚಿಂತನೆಯ ಆಳವಾದ ಓದಿನ ಜೊತೆಗೆ ಬದಲಾವಣೆಯ ಕೆಲಸದಲ್ಲಿ ಸ್ವತಃ ತೊಡಗಿಕೊಂಡಿರುವವರು.


ಇದನ್ನೂ ಓದಿ: ಚಂದ್ರಶೇಖರ್ ಆಜಾದ್: ಮತ್ತೊಬ್ಬ ದಲಿತ ಸೂರ್ಯನ ಉದಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...