ಭಾರತದ ಖ್ಯಾತ ಭಾರತೀಯ ಪ್ರಾಧ್ಯಾಪಕ ಮತ್ತು ವಿಜ್ಞಾನಿ ಕರ್ನಾಟಕದ ಉಡುಪಿ ರಾಮಚಂದ್ರ ರಾವ್ ಅವರ 89 ನೇ ಹುಟ್ಟುಹಬ್ಬವನ್ನು ಗೂಗಲ್ ಬುಧವಾರ ಆಚರಿಸಿದ್ದು, ವಿಶೇಷ ಗೌರವ ಸಲ್ಲಿಸಿದೆ. ಉಡುಪಿ ರಾಮಚಂದ್ರ ರಾವ್ “ಭಾರತದ ಸ್ಯಾಟಲೈಟ್ ಮ್ಯಾನ್” ಎಂದು ಹೆಸರು ಪಡೆದುಕೊಂಡಿದ್ದಾರೆ.
ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷರಾಗಿದ್ದ ರಾವ್ ಅವರು 1975 ರಲ್ಲಿ ಭಾರತದ ಮೊದಲ ಉಪಗ್ರಹ – “ಆರ್ಯಭಟ” ಉಡಾವಣೆಯ ಚಾಲಕ ಶಕ್ತಿಯಾಗಿದ್ದವರು. ರಾಮಚಂದ್ರ ರಾವ್ 2017 ರಲ್ಲಿ ನಿಧನರಾದರು.
ಡೂಡಲ್ನಲ್ಲಿ ಪ್ರೊಫೆಸರ್ ರಾವ್ ಅವರ ರೇಖಾಚಿತ್ರವು ಭೂಮಿಯ ಹಿನ್ನೆಲೆ ಮತ್ತು ಮಿನುಗುವ ನಕ್ಷತ್ರಗಳನ್ನು ಒಳಗೊಂಡಿದೆ. “ನಿಮ್ಮ ನಕ್ಷತ್ರೀಯ ತಾಂತ್ರಿಕ ಪ್ರಗತಿಗಳು ಗ್ಯಾಲಕ್ಸಿ ತುಂಬಾ ಪಸರಿಸುತ್ತಲೇ ಇವೆ” ಎಂದು ಗೂಗಲ್ ತನ್ನ ವಿವರಣೆಯಲ್ಲಿ ಬರೆದಿದೆ.
ಇದನ್ನೂ ಓದಿ: ಪ್ರಬಲ ಜಾತಿಗಳನ್ನು 2(ಎ) ವರ್ಗಕ್ಕೆ ಸೇರಿಸಬೇಡಿ: ಅತಿ ಹಿಂದುಳಿದ ವರ್ಗಗಳ ವೇದಿಕೆ ಆಗ್ರಹ
“1932 ರಲ್ಲಿ ಈ ದಿನ ಕರ್ನಾಟಕದ ದೂರದ ಹಳ್ಳಿಯಲ್ಲಿ ಜನಿಸಿದ ಪ್ರೊ. ರಾವ್ ಅವರು ಕಾಸ್ಮಿಕ್-ರೇ ಭೌತಶಾಸ್ತ್ರಜ್ಞರಾಗಿ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದು ಪರಿಗಣಿಸಲ್ಪಟ್ಟ ವಿಜ್ಞಾನಿ ಡಾ. ವಿಕ್ರಮ್ ಸಾರಾಭಾಯ್ ಅವರ ಜೊತೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಡಾಕ್ಟರೇಟ್ ಪೂರ್ಣಗೊಳಿಸಿದ ನಂತರ ಪ್ರೊ. ರಾಮಚಂದ್ರ ರಾವ್ ಯುಎಸ್ನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ನಾಸಾದ ಪಯೋನೀರ್ ಮತ್ತು ಎಕ್ಸ್ಪ್ಲೋರರ್ ಬಾಹ್ಯಾಕಾಶ ಶೋಧಕಗಳಲ್ಲಿ ಪ್ರಯೋಗಗಳನ್ನು ನಡೆಸಿದ್ದರು ಎಂದು ಗೂಗಲ್ ಡೂಡಲ್ ತನ್ನ ವೆಬ್ಸೈಟ್ನಲ್ಲಿ ವಿವರಣೆ ನೀಡಿದೆ.
ಇದನ್ನೂ ಓದಿ: ಬ್ರಿಟನ್ ಸಂಸತ್ನಲ್ಲಿ ಭಾರತೀಯ ರೈತರ ಸುರಕ್ಷತೆಯ ಚರ್ಚೆ: ಅವಮಾನ ಎಂದ ಭಾರತ ಸರ್ಕಾರ
ಪ್ರೊಫೆಸರ್ ರಾವ್ 1966 ರಲ್ಲಿ ಭಾರತಕ್ಕೆ ಮರಳಿ, 1972 ರಲ್ಲಿ ದೇಶದ ಉಪಗ್ರಹ ಕಾರ್ಯಕ್ರಮವನ್ನು ನಡೆಸುವ ಮೊದಲು ಬಾಹ್ಯಾಕಾಶ ವಿಜ್ಞಾನಕ್ಕಾಗಿ, ಭೌತಿಕ ಸಂಶೋಧನಾ ಪ್ರಯೋಗಾಲಯದಲ್ಲಿ ಉನ್ನತ ಶಕ್ತಿ ಖಗೋಳವಿಜ್ಞಾನ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
1975 ರಲ್ಲಿ ಭಾರತದ ಮೊದಲ ಉಪಗ್ರಹ ಉಡಾವಣೆಯನ್ನು ಮೇಲ್ವಿಚಾರಣೆ ನಡೆಸಿದ್ದರು. ರಾಮಚಂದ್ರ ರಾವ್ ಅಭಿವೃದ್ಧಿಪಡಿಸಿದ 20 ಕ್ಕೂ ಹೆಚ್ಚು ಉಪಗ್ರಹಗಳಲ್ಲಿ ಒಂದಾದ “ಆರ್ಯಭಟ” ಸಂವಹನ ಮತ್ತು ಹವಾಮಾನ ಸೇವೆಗಳನ್ನು ಮುಂದುವರೆಸುವ ಮೂಲಕ ಗ್ರಾಮೀಣ ಭಾರತದ ಬಹುಭಾಗವನ್ನು ಪರಿವರ್ತಿಸಿತು.
250 ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಿದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ) ಯಂತಹ ರಾಕೆಟ್ ತಂತ್ರಜ್ಞಾನವನ್ನು ಅವರು ಅಭಿವೃದ್ಧಿಪಡಿಸಿದ್ದರು.
ಉಡುಪಿ ರಾಮಚಂದ್ರ ರಾವ್, 2013 ರಲ್ಲಿ ಸ್ಯಾಟಲೈಟ್ ಹಾಲ್ ಆಫ್ ಫೇಮ್ಗೆ ಸೇರ್ಪಡೆಯಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅದೇ ವರ್ಷ ಪಿಎಸ್ಎಲ್ವಿ ಭಾರತದ ಮೊದಲ ಅಂತರಗ್ರಹ ಮಿಷನ್ ’ಮಂಗಳಯಾನ’ ಪ್ರಾರಂಭಿಸಿತ್ತು.
ಇದನ್ನೂ ಓದಿ: ಎಡಪಕ್ಷಗಳ ಬೃಹತ್ ರ್ಯಾಲಿಯ ಫೋಟೊಗಳನ್ನು ಮೋದಿ ರ್ಯಾಲಿಯೆಂದು ತಪ್ಪಾಗಿ ಹಂಚಿದ ಬಿಜೆಪಿಗರು!