ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಗಂಗೂಬಾಯಿ ಕಾಥಿಯಾವಾಡಿ ಚಿತ್ರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ದೂರಿನ ವಿಚಾರಣೆಗೆ ಬಾಂಬೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಸ್ಥಳೀಯ ನ್ಯಾಯಾಲಯವು ಆರಂಭಿಸಿದ ವಿಚಾರಣೆಗೆ ಬಾಂಬೆ ಹೈಕೋರ್ಟ್ ಮುಂದಿನ ವಿಚಾರಣೆಯ ದಿನಾಂಕ ಸೆಪ್ಟೆಂಬರ್ 7 ರವರೆಗೆ ಮಧ್ಯಂತರ ತಡೆ ನೀಡಿದೆ.
ಈ ವರ್ಷದ ಮಾರ್ಚ್ನಲ್ಲಿ ಗಂಗೂಬಾಯಿ ಕಾಥಿಯಾವಾಡಿಯವರ ದತ್ತು ಪುತ್ರ ಬಾಬೂಜೀ ಶಾ, ಬಾಲಿವುಡ್ ನಟಿ ಆಲಿಯಾ ಭಟ್, ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಮತ್ತು ಬನ್ಸಾಲಿ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ದೂರಿನ ಅನ್ವಯ ಸಮನ್ಸ್ ಜಾರಿ ಮಾಡಲಾಗಿತ್ತು.
ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರ್ತಿ, ಕವಯತ್ರಿ ಸುಭದ್ರಾ ಕುಮಾರಿ ಚೌಹಾಣ್ಗೆ ಗೂಗಲ್ ಡೂಡಲ್ ಗೌರವ
ಗಂಗೂಬಾಯಿ ಕಾಥಿಯಾವಾಡಿ ಚಿತ್ರದಲ್ಲಿ ಆಲಿಯಾ ಭಟ್ ಗಂಗೂಬಾಯಿಯಾಗಿ ಕಾಣಿಸಿಕೊಂಡಿದ್ದಾರೆ. 1960 ರ ಸಮಯದಲ್ಲಿ ಮುಂಬೈನ ಕಾಮಾಟಿಪುರದ ಅತ್ಯಂತ ಶಕ್ತಿಶಾಲಿ, ಪ್ರೀತಿಪಾತ್ರ ಮತ್ತು ಗೌರವಾನ್ವಿತರಲ್ಲಿ ಒಬ್ಬರು ಗಂಗೂಬಾಯಿ ಎನ್ನಲಾಗಿದೆ.
ಈ ಚಲನಚಿತ್ರವು “ದಿ ಮಾಫಿಯಾ ಕ್ವೀನ್ಸ್ ಆಫ್ ಮುಂಬಯಿ” ಕಾದಂಬರಿಯಿಂದ ಸ್ಫೂರ್ತಿ ಪಡೆದಿದೆ ಎಂದು ಬಾಬೂಜೀ ಶಾ ಹೇಳಿದ್ದಾರೆ. ಈ ಕಾದಂಬರಿಯ ಕೆಲವು ಭಾಗಗಳು ಮಾನಹಾನಿಕರವಾಗಿದ್ದು, ಗಂಗೂಬಾಯಿ ಕಾಥಿಯಾವಾಡಿಯವರ ಪ್ರತಿಷ್ಠೆಗೆ ಕಳಂಕ ತರುತ್ತವೆ. ಆಕೆಯ ಖಾಸಗಿತನದ ಹಕ್ಕಿಗೆ ಧಕ್ಕೆ ತಂದಿವೆ ಎಂದಿದ್ದಾರೆ.
ಬನ್ಸಾಲಿ ಮತ್ತು ಆಲಿಯಾ ಭಟ್ ಪರ ಹಾಜರಾದ ಹಿರಿಯ ವಕೀಲ ಆಬಾದ್ ಪೊಂಡಾ, ಬಾಬೂಜೀ ಶಾ ಅಸ್ತಿತ್ವದ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಎಂದು ವಾದಿಸಿದ್ದಾರೆ.
ಇದನ್ನೂ ಓದಿ: ಅಶ್ಲೀಲ ಚಿತ್ರ ಪ್ರಕರಣ: ಉದ್ಯಮಿ ರಾಜ್ ಕುಂದ್ರಾಗೆ ಮಧ್ಯಂತರ ಜಾಮೀನು
ಇತ್ತ ಮತ್ತೊಂದು ಹೈಕೋರ್ಟ್ ಪೀಠ ಚಲನಚಿತ್ರ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿದೆ.
ಚಲನಚಿತ್ರ ಬಿಡುಗಡೆಗೆ ತಡೆ ಕೋರಿ, ಕಾದಂಬರಿಯ ಬರಹಗಾರರು/ಪ್ರಕಾಶಕರು ಯಾವುದೇ ತೃತೀಯ ಹಕ್ಕುಗಳನ್ನು ಸೃಷ್ಟಿಸದಂತೆ, ಗಂಗೂಬಾಯಿ ಕಾಥಿಯಾವಾಡಿಯವರ ಜೀವನದ ಬಗ್ಗೆ ಯಾವುದೇ ಕಥೆಯನ್ನು ಬರೆಯದಂತೆ ಬಾಬೂಜೀ ಶಾ ಹೈಕೋರ್ಟ್ಗೆ ಮನವಿ ಮಾಡಿದ್ದರು.
ಆದರೆ, ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಅವರು ಅರ್ಜಿಯನ್ನು ತಿರಸ್ಕರಿಸಿ, ಮಾನಹಾನಿಕರದಂತಹ ಯಾವುದೇ ವಿಷಯವು ಆ ವ್ಯಕ್ತಿಯ ಸಾವಿನೊಂದಿಗೆ ಕೊನೆಗೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಜೊತೆಗೆ “ತಾನು ಗಂಗೂಬಾಯಿ ಕಾಥಿಯಾವಾಡಿಯ ದತ್ತು ಪುತ್ರನೆಂದು ಸಾಭೀತುಪಡಿಸುವಲ್ಲಿ ಅರ್ಜಿದಾರ ವಿಫಲನಾಗಿದ್ದಾನೆ” ಎಂದು ಹೇಳಿದ್ದರು.
ಈ ಚಲನಚಿತ್ರವನ್ನು ಮೊದಲು ಸೆಪ್ಟೆಂಬರ್ 2020 ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಯಿತು. ಈ ವರ್ಷದ ಆರಂಭದಲ್ಲಿ, ಚಲನಚಿತ್ರವು 2021 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಯಾರಕರು ಘೋಷಿಸಿದ್ದರು. ಮುಂದಿನ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿಲ್ಲ.
ಇದನ್ನೂ ಓದಿ: ಪರಿಶಿಷ್ಟ ಜಾತಿಯವರನ್ನು ಸಿನಿಮಾ ಉದ್ಯಮದಿಂದ ಹೊರಹಾಕಬೇಕು ಎಂದ ತಮಿಳು ನಟಿ: ಪ್ರಕರಣ ದಾಖಲು