Homeಮುಖಪುಟಅಸ್ಪೃಶ್ಯ, ಅಸಹಾಯಕ ಲೋಕಕ್ಕೆ ಅಕ್ಷರ ಕಲಿಸಿದ ಸಾವಿತ್ರಮ್ಮನನ್ನೇ ಪಠ್ಯಪುಸ್ತಕದಿಂದ ಹೊರಗಿಟ್ಟ ಕಾಲದಲ್ಲಿ ಒಂದು ಸ್ಮರಣೆ

ಅಸ್ಪೃಶ್ಯ, ಅಸಹಾಯಕ ಲೋಕಕ್ಕೆ ಅಕ್ಷರ ಕಲಿಸಿದ ಸಾವಿತ್ರಮ್ಮನನ್ನೇ ಪಠ್ಯಪುಸ್ತಕದಿಂದ ಹೊರಗಿಟ್ಟ ಕಾಲದಲ್ಲಿ ಒಂದು ಸ್ಮರಣೆ

- Advertisement -
- Advertisement -

ಫುಲೆ ದಂಪತಿಯ ಕುರಿತು ಯೋಚಿಸಿದಾಗಲೆಲ್ಲ ಒಂದು ರೀತಿಯ ಭಾವುಕತೆ ಆವರಿಸುತ್ತದೆ. ನೊಂದ ಹೆಣ್ಣುಮಕ್ಕಳು, ಅಸಹಾಯಕ ಅಸ್ಪೃಶ್ಯರ ನೋವಿಗೆ ಶಿಕ್ಷಣವೇ ಮದ್ದು ಎಂಬುದನ್ನು ಅರಿತು, ಅದಕ್ಕಾಗಿ ತಮ್ಮ ಇಡೀ ಜೀವನವನ್ನು ಸವೆಸಿದವರು ಫುಲೆ ದಂಪತಿ. ಜೋತಿಬಾ- ಸಾವಿತ್ರಿಬಾಯಿ ಫುಲೆಯವರು ಒಬ್ಬೊರಿಗೊಬ್ಬರು ಹೃದಯ ಮತ್ತು ಮೆದುಳಾಗಿ ಸಮಾಜಕ್ಕಾಗಿ ದುಡಿದವರು. ಬುದ್ಧಿ ಮತ್ತು ಭಾವ ಸಂಗಮವಾಗಿ ಜೋತಿಬಾ ದಂಪತಿ ಚರಿತ್ರೆ ಚಿತ್ರಿತವಾಗಿದೆ.

ಇಂದು ಅಕ್ಷರದ್ವ ಸಾವಿತ್ರಮ್ಮನ ಜನುಮ ದಿನ. ಜನವರಿ 3, 1831ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ಖಂಡಾಲಾ ತಾಲ್ಲೂಕಿನ ನಾಲಗಾಂವದಲ್ಲಿ ಖಂಡೋಜಿ ನೆವಶೆ ಪಾಟೀಲರ ಪುತ್ರಿಯಾಗಿ ಜನಿಸಿದ ಸಾವಿತ್ರಿಬಾಯಿಯವರಿಗೆ 9ನೇ ವಯಸ್ಸಿನಲ್ಲಿಯೇ ಮದುವೆ ಮಾಡಲಾಯಿತು. ಆ ತಾಯಿಯ ಕೈ ಹಿಡಿದ ಜೋತಿಬಾರಿಗೆ ಆಗ 13 ವರ್ಷ ವಯಸ್ಸು. ತನ್ನಂತೆಯೇ ತನ್ನ ಪತ್ನಿಯೂ ಅಕ್ಷರ ಕಲಿಯಬೇಕೆಂಬ ಉತ್ಕಟ ಪ್ರೀತಿಯನ್ನು ಮೆರೆದ ಜೋತಿಬಾ ಅವರೇ ಸಾವಿತ್ರಮ್ಮನ ಮೊದಲ ಗುರು. ಇಂಗ್ಲಿಷ್ ಶಿಕ್ಷಣದ ಮೂಲಕ ವಿಚಾರವಂತಿಕೆಯನ್ನು ಮೈಗೂಡಿಸಿಕೊಳ್ಳುತ್ತಿದ್ದ ಜೋತಿಬಾ, ತಾವು ವಿವಾಹವಾಗಿ ಮಾರನೇ ವರ್ಷವೇ ಅಂದರೆ 1841ನೇ ಇಸವಿಯಲ್ಲಿ ಸಾವಿತ್ರಮ್ಮನಿಗೆ ಅಕ್ಷರ ಕಲಿಕೆ ಆರಂಭಿಸಿದರು. ತಾನೂ ಒದುತ್ತಾ, ತನ್ನ ಮಡದಿಯನ್ನೂ ಶಿಕ್ಷಿತರನ್ನಾಗಿಸಿದ ಧೀಮಂತ ವ್ಯಕ್ತಿ ಜೋತಿಬಾ ಫುಲೆ.

17ನೇ ವಯಸ್ಸಿಗೆ ಶಿಕ್ಷಣ ತರಬೇತಿ ಮುಗಿಸಿ, ಹೆಣ್ಣುಮಕ್ಕಳಿಗೆ, ಅಸ್ಪೃಶ್ಯರಿಗೆ ಅಕ್ಷರ ಕಲಿಸಲು ಹೊರಟ ಈ ಮಹಾ ತಾಯಿ ನಿಂದನೆಗಳನ್ನು ಎದುರಿಸಬೇಕಾಯಿತು. ಸಂಪ್ರದಾಯವಾದಿಗಳು ಕೊಂಕು ನುಡಿದರು. ಕಿಡಿಗೇಡಿಗಳು ಮರೆಯಲ್ಲಿ ನಿಂತು ಸಗಣಿ, ಕಲ್ಲುಗಳನ್ನು ತೂರಿದರು. ಶಾಲೆಗೆ ಹೋಗುವಾಗಲೆಲ್ಲ ಮತ್ತೊಂದು ಸೀರೆಯನ್ನು ಕೊಂಡೊಯ್ಯುತ್ತಿದ್ದ ಸಾವಿತ್ರಿಬಾಯಿ, ಸಗಣಿ ಮೆತ್ತಿದ ಬಟ್ಟೆಯನ್ನು ಬದಲಿಸಿಕೊಂಡು ಮಕ್ಕಳಿಗೆ ಪಾಠ ಮಾಡುತ್ತಿದ್ದರು.

ತಮ್ಮ ಗುರಿ, ದೂರದೃಷ್ಟಿಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದಿದ್ದ ಜೋತಿಬಾ ದಂಪತಿ ಒಂದರ ಹಿಂದೆ ಒಂದು ಶಾಲೆಗಳನ್ನು ತೆರೆದರು. ಹೆಣ್ಣುಮಕ್ಕಳಿಗಾಗಿ ‘ನೇಟಿವ್ ಫೀಮೇಲ್‌ ಸ್ಕೂಲ್‌- ಪುಣೆ’, ಅಸ್ಪೃಶ್ಯ ಸಮುದಾಯದ ಮಕ್ಕಳಿಗಾಗಿ ‘ಸೊಸೈಟಿ ಫಾರ್‌ ಪ್ರಮೋಟಿಂಗ್ ಎಜುಕೇಷನ್ ಆಫ್ ಮಹಾರ್ಸ್ ಅಂಡ್ ಮಾಂಗ್ಸ್‌’ ಆರಂಭಿಸಿದರು. ಕುಟುಂಬ ನಿರ್ವಹಣೆಗಾಗಿ ಜೋತಿಬಾ ಅವರು ಮಿಷನರಿ ಶಾಲೆಗಳಲ್ಲಿ ಅರೆಕಾಲಿಕ ಶಿಕ್ಷಕರಾಗಿ ದುಡಿದರೆ, ಸಾವಿತ್ರಮ್ಮನವರು ಜೋತಿಬಾ ಸ್ಥಾಪಿತ ಶಾಲೆಗಳಲ್ಲಿ ಉಚಿತವಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಇವರ ಶಾಲೆಗಳಲ್ಲಿ ಕಲಿತ 237 ಹೆಣ್ಣುಮಕ್ಕಳು 1853ರಲ್ಲಿ ಪುಣೆಯಲ್ಲಿ ಪರೀಕ್ಷೆ ಬರೆಯಲು ಹೋದಾಗ ಸಾವಿರಾರು ಜನರು ಕುತೂಹಲಕ್ಕಾಗಿ ನೆರೆದಿದ್ದರಂತೆ. 1856ರ ಹೊತ್ತಿಗೆ ಅಸ್ಪೃಶ್ಯ ಸಮುದಾಯದ 258 ಮಕ್ಕಳು ಇವರ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದರು.

ಫುಲೆಯವರ ಶಾಲೆಗಳಲ್ಲಿ ಕಲಿತ ಹೆಣ್ಣು ಮಕ್ಕಳು ಜೊಳ್ಳು ಶಿಕ್ಷಣವನ್ನೇನೂ ಪಡೆಯಲಿಲ್ಲ. ಈ ಸಮಾಜದಲ್ಲಿನ ಅಸಮಾನತೆಯನ್ನು ಪ್ರಶ್ನಿಸುವ ವಿದ್ವತ್ತನ್ನು ಗಳಿಸಿಕೊಂಡರು. ಇಲ್ಲಿ ಓದುತ್ತಿದ್ದ 14 ವರ್ಷದ ಮುಕ್ತಾಬಾಯಿ ಎಂಬ ಹೆಣ್ಣುಮಗಳು ಅಸ್ಪೃಶ್ಯರ ನೋವಿನ ಕುರಿತು ಬರೆಯುತ್ತಾ, “ವೇದಗಳು ಬರೀ ಬ್ರಾಹ್ಮಣರಿಗಾದರೆ ಅವು ನಮಗಲ್ಲ, ವೇದಗಳು ಬರೀ ಬ್ರಾಹ್ಮಣರಿಗಾದರೆ ನಮಗೆ ಪುಸ್ತಕಗಳಿಲ್ಲ. ಅವರು ಹೇಳುವಂತೆ ವೇದಗಳನ್ನು ನೋಡುವುದರಿಂದಲೇ ನಮಗೆ ಪಾಪ ಸುತ್ತಿಕೊಳ್ಳುತ್ತದೆಯಾದ್ದರಿಂದ ಬೈಬಲು, ಕುರಾನಿನಂತೆ ನಮಗೆ ಯಾವುದೇ ಧರ್ಮಗ್ರಂಥವಿಲ್ಲ. ಓ ದೇವರೇ ಹಾಗಾದರೆ ಹೇಳು, ಯಾವುದೇ ಪುಸ್ತಕಿಲ್ಲದ ನಮ್ಮದು ಯಾವ ಧರ್ಮ?” ಎಂದು ಪ್ರಶ್ನಿಸುತ್ತಾಳೆ. ಫುಲೆ ದಂಪತಿ ಕಲಿಸಿದ ವೈಚಾರಿಕತೆ ಎಂಥಹದ್ದು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.

ಜೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ

ಕವಯತ್ರಿಯೂ ಆಗಿದ್ದ ಸಾವಿತ್ರಮ್ಮ, ಶೈಕ್ಷಣಿಕ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಕವಿತೆಗಳನ್ನು ಬರೆದರು. ತಮ್ಮ ಜೀವಿತಾವಧಿಯಲ್ಲಿ ಎರಡು ಕವನ ಸಂಕಲನಗಳನ್ನೂ ಪ್ರಕಟಿಸಿದರು. “ಶಿಕ್ಷಿತರಾಗಬೇಕು, ಇಂಗ್ಲಿಷ್‌ ಕಲಿಕೆಗೆ ಒತ್ತು ನೀಡಬೇಕು” ಎಂಬ ಆಶಯವನ್ನು ಇವರ ‘ಕಬ್ಯಾ ಫುಲೆ’ ಕವನ ಸಂಕಲದ ಕವಿತೆಗಳು ಢಾಳಾಗಿ ವ್ಯಕ್ತಪಡಿಸುತ್ತವೆ. ಜನಸಾಮಾನ್ಯರಿಗಾಗಿ ಬರೆದ ಈ ಜಾಗೃತಿ ಬರಹಗಳಲ್ಲಿ ಬಂಡಾಯದ ಗುಣವೇ ಪ್ರಧಾನ. ಮತ್ತೊಂದು ಕವನ ಸಂಕಲನವಾದ ‘ಬವನ್ ಕಾಶಿ ಸುಬೋಧ ರತ್ನಾಕರ್‌’ನಲ್ಲಿ ಜೋತಿಬಾರ ಜೀವನ ಚರಿತ್ರೆಯನ್ನು ಕವ್ಯಾತ್ಮಕವಾಗಿ ಪ್ರಕಟಿಸಿದ್ದಾರೆ ಸಾವಿತ್ರಮ್ಮ.

ಆ ಕಾಲಘಟ್ಟದಲ್ಲಿ ವಿಧವೆಯರ ಬದುಕು ದುರಂತಮಯವಾಗಿತ್ತು. ಚಿಕ್ಕವಯಸ್ಸಿಗೆ ಗಂಡನನ್ನು ಕಳೆದುಕೊಂಡ ಹೆಣ್ಣುಮಕ್ಕಳು ಗಂಡಸರ ದೌರ್ಜನ್ಯ ಮತ್ತು ಆಮಿಷಗಳಿಗೆ ಒಳಗಾಗಿ ಗರ್ಭ ಧರಿಸುತ್ತಿದ್ದರು. ಅಂತಹ ಹೆಣ್ಣುಮಕ್ಕಳು ವಿಷಪೂರಿತ ಔಷಧಗಳನ್ನೆಲ್ಲ ಸೇವಿಸಿ, ಗರ್ಭಪಾತಕ್ಕೆ ಯತ್ನಿಸಿ ತೊಂದರೆಗೆ ಒಳಗಾಗುತ್ತಿದ್ದರು. ಗರ್ಭ ಧರಿಸಿದ ಬಾಲಕಿಯರಿಗೆ ತಲೆ ಬೋಳಿಸಿ, ಶಿಕ್ಷೆ ನೀಡುವ ಅಮಾನವೀಯ ವ್ಯವಸ್ಥೆ ಜಾರಿಯಲ್ಲಿತ್ತು. ಇದನ್ನು ಕಂಡು ನೊಂದ ಫುಲೆ ದಂಪತಿ, ‘ಬಾಲಹತ್ಯಾ ಪ್ರತಿಬಂಧಕ್ ಗೃಹಾ’ ತೆರೆದು ಗರ್ಭಿಣಿ ವಿಧವೆಯರಿಗೆ ಆಶ್ರಯ ನೀಡಿದರು.

ಸಾಮಾಜಿಕ ಬಿರುಗಾಳಿ ಮಹಾರಾಷ್ಟ್ರದ ನೆಲದಲ್ಲಿ ಬೀಸತೊಡಗಿತ್ತು. ದಲಿತಾದಿ ಶೂದ್ರರಿಗೆ ಜಾಗೃತಿ ಮೂಡಿಸುವ ಕೆಲಸ ಆರಂಭವಾಗಿದ್ದವು. ವೈದಿಕಶಾಹಿ ವ್ಯವಸ್ಥೆಯಿಂದ ನರಳುತ್ತಿರುವ ಸಮಾಜದಲ್ಲಿ ವಿವೇಚನೆಯನ್ನು ಮೂಡಿಸಲು 1873ರಲ್ಲಿ ಸತ್ಯಶೋಧಕ ಸಮಾಜ ಆರಂಭವಾಯಿತು. ಫುಲೆಯವರ ಕ್ರಾಂತಿಕಾರಕ ಆಶಯಗಳು ಈ ಸಂಸ್ಥೆಯಿಂದ ಹೊರಹೊಮ್ಮಿದವು. ಸರಳ ವಿವಾಹ ಸಂಹಿತೆಯನ್ನು ಜ್ಯೋತಿ ಬಾ ರೂಪಿಸಿದರು. ಸಮಾನತೆಯನ್ನು ಅಳವಡಿಸಿಕೊಂಡು, ಪುರೋಹಿತಶಾಹಿಗಳ ಮೌಢ್ಯದಿಂದ ಹೊರಬಂದು ಬದುಕಬೇಕೆಂದು ನವ ವಿವಾಹಿತರಿಗೆ ಬೋಧಿಸಿದರು.

ಜೋತಿಬಾ ಫುಲೆ ಅವರು 1887ರಲ್ಲಿ ಪಾರ್ಶ್ವವಾಯುಗೆ ತುತ್ತಾಗಿ ಹಾಸಿಗೆ ಹಿಡಿದಾಗ ಸಾವಿತ್ರಮ್ಮನವರು ಹಲವಾರು ಸವಾಲುಗಳನ್ನು ಎದುರಿಸಿದರು. ತಮ್ಮ ದಾರಿಯ ಕುರಿತು ಸ್ಪಷ್ಟನೆಯನ್ನು ಹೊಂದಿದ್ದ ಸಾವಿತ್ರಮ್ಮ, ಈ ಕಷ್ಟಕಾಲದಲ್ಲೂ ಎದೆಗುಂದದೆ ಶಾಲೆ, ಸತ್ಯಶೋಧಕ ಸಮಾಜ, ಮಕ್ಕಳ ಶಿಕ್ಷಣ ಎಲ್ಲವನ್ನೂ ನಿಭಾಯಿಸಿದ್ದರು. ಇದೆಲ್ಲದರ ನಡುವೆ 1890ರಲ್ಲಿ ಜೋತಿಬಾ ಇಹಲೋಕ ತ್ಯಜಿಸಿದರು.

ಜೋತಿಬಾ ದಂಪತಿಗೆ ಮಕ್ಕಳಿರಲಿಲ್ಲ. ತಮ್ಮ ಆಶ್ರಯದಲ್ಲಿದ್ದ ವಿಧವೆಯೊಬ್ಬರ ಮಗನನ್ನು ದತ್ತು ತೆಗೆದುಕೊಂಡು ಸಾಕಿದರು. ಅವರ ಒಡಲಲ್ಲಿ ಮಕ್ಕಳಾಗದಿದ್ದರೂ ಅವರ ಹೃದಯವಂತಿಕೆ, ವಿಶಾಲ ತಾಯ್ತತನದ ಫಲವಾಗಿ ಅಸಂಖ್ಯಾತ ದಲಿತ, ಅಸಹಾಯಕ ಹೆಣ್ಣುಮಕ್ಕಳು ಬದುಕಿನಲ್ಲಿ ಬೆಳಕು ಕಂಡರು. ನೊಂದ ಜನರಿಗೆ ಆಶ್ರಯದಾತರಾದರು. ಲಕ್ಷ್ಮಣ ಕರಡಿ ಜಾಯ ಎಂಬ ವಿದ್ಯಾರ್ಥಿ ಸಾವಿತ್ರಮ್ಮನವರ ಬಗ್ಗೆ ಬರೆದ ನೆನಪುಗಳಲ್ಲಿ, “ಅವರಷ್ಟು ಪ್ರೇಮಮಯಿಯೂ, ಕರುಣಾಮಯಿಯೂ ಆದ ಇನ್ನೊಬ್ಬ ಮಹಿಳೆಯನ್ನು ನಾನು ನೋಡಿಲ್ಲ. ನಮ್ಮ ತಾಯಿಗಿಂತ ಹೆಚ್ಚು ಅವರು ನಮ್ಮನ್ನು ಪ್ರೀತಿಸಿದರು” ಎಂದು ಉಲ್ಲೇಖಿಸುತ್ತಾರೆ. ಇಂತಹ ಮಹಾ ತಾಯಿ, ಪ್ಲೇಗ್ ರೋಗಿಗಳ ಆರೈಕೆ ಮಾಡುತ್ತಾ, ತಾನೂ ಪ್ಲೇಗ್ ರೋಗಕ್ಕೆ ತುತ್ತಾಗಿ ಮಾರ್ಚ್ 10, 1897ರಲ್ಲಿ ಕೊನೆಯುಸಿರೆಳೆದರು.

ಭಾರತದ ಮೊದಲ ಶಿಕ್ಷಕಿ ಎಂದೇ ಗುರುತಿಸಲಾಗಿರುವ ಈ ಮಹಾ ಚೇತನದ ಜನ್ಮದಿನವನ್ನು ಶಾಲೆಗಳಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ. ಆದರೆ ತೋರಿಕೆಗೆ ಮಾತ್ರ ಆಚರಣೆ ಮಾಡುತ್ತಾ, ನಿಜದ ಆಶಯಗಳನ್ನು ಸರ್ಕಾರಗಳು ಮರೆತಿರುವುದು ದುರ್ದೈವ. ಶೋಷಿತರ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದುಡಿದ ಫುಲೆ ದಂಪತಿಯ ಆಶಯಗಳನ್ನು ಸರ್ಕಾರಗಳು ಈಡೇರಿಸುತ್ತಿಲ್ಲ. ಎಸ್‌ಸಿ, ಎಸ್‌ಟಿ ಮಕ್ಕಳ ಸ್ಕಾಲರ್‌ಶಿಪ್‌ ವಂಚಿಸುವ, ಎನ್‌ಇಪಿ ಜಾರಿಗೆ ತಂದು ಅಕ್ಷರವಂಚಿತ ಬಹುದೊಡ್ಡ ಸಮುದಾಯವನ್ನು ಶಾಶ್ವತವಾಗಿ ಶಿಕ್ಷಣದಿಂದ ಹೊರಗಿಡುವ ಕೆಲಸಗಳು ಈಗ ಹಿಡನ್‌ ಆಗಿ ಉಳಿದಿಲ್ಲ. ಹೆಣ್ಣುಮಕ್ಕಳನ್ನು ಮತ್ತೆ ಸಂಪ್ರದಾಯದ ಇಕ್ಕಟ್ಟಿಗೆ ಸಿಲುಕಿಸುವ, ಅಸಮಾನತೆಯನ್ನು ಬೋಧಿಸುವ ಕೃತಿಗಳೇ ಸನಾತನದ ಮುಖವೊತ್ತು ಪಠ್ಯಪುಸ್ತಕ ಸೇರುವ ವಿಚಿತ್ರ ಕಾಲಘಟ್ಟದಲ್ಲಿ ಇದ್ದೇವೆ. ಭಾಷಾ ಪಠ್ಯ ಇರುವುದು ಲಿಂಗಸಮಾನತೆ, ಸಾಮಾಜಿಕ ನ್ಯಾಯ ತುರುಕಲಿಕ್ಕಲ್ಲ ಎಂಬ ಅಹಂಕಾರವನ್ನು ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ ವ್ಯಕ್ತಿಗಳು ತೋರಿದ್ದಾರೆ. ಈ ಹಿಮ್ಮುಖ ಚಲನೆ ನೋಡುತ್ತಿದ್ದರೆ ಭವಿಷ್ಯದ ಕುರಿತು ಆತಂಕವಾಗುತ್ತದೆ. ಏಳನೇ ತರಗತಿ ಸಮಾಜ ವಿಜ್ಞಾನ ಭಾಗ-2ರಲ್ಲಿದ್ದ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆಯವರಿಗೆ ಸಂಬಂಧಿಸಿದ ವಿವರಣೆಗಳನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಕಿತ್ತು ಬಿಸಾಕಿದೆ. ಈ ದುರಿತ ಕಾಲದಲ್ಲಿ ಫುಲೆ ದಂಪತಿ ಕಣ್ಣಮುಂದೆ ಬಂದಾಗಲೆಲ್ಲ ಒಂದು ರೀತಿಯ ಮೌನ ಆವರಿಸುತ್ತದೆ.

(ಟಿಪ್ಪಣಿ: ಡಾ.ಎಚ್.ಎಸ್.ಅನುಪಮಾ ಅವರು ಬರೆದಿರುವ ‘ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆ’ ಕೃತಿಯಲ್ಲಿನ ಅಂಶಗಳನ್ನು ಈ ಲೇಖನದಲ್ಲಿ ಒಳಗೊಳ್ಳಲಾಗಿದೆ. ಸದರಿ ಲೇಖನವು ಈ ಮೊದಲು ‘ಈದಿನ.ಕಾಂ’ನಲ್ಲಿ ಪ್ರಕಟಗೊಂಡಿದೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...