ಇಂದಿನ ಕಂಕಣ ಸೂರ್ಯಗ್ರಹಣ ಸಮಯದಲ್ಲಿ ಮನೆಯಿಂದ ಹೊರಬರಬಾರದು, ಊಟ ತಿಂಡಿ ಮಾಡಬಾರದು ಎಂಬ ಮೌಢ್ಯತೆ ವಿರೋಧಿಸಿ ಇಂದು ಬೆಂಗಳೂರಿನ ಹಲವೆಡೆ ವಿನೂತನ ಪ್ರತಿಭಟನೆ, ಜಾಗೃತಿ ಕಾರ್ಯಕ್ರಮಗಳು ನಡೆದಿವೆ.
ಬೆಂಗಳೂರಿನ ಟೌನ್ ಹಾಲ್ ಎದುರಿಗೆ ಜಮಾಯಿಸಿದ ಹಲವು ವಿಜ್ಞಾನ ಕಾರ್ಯಕರ್ತರು ವಿಜ್ಞಾನದೆಡೆಗೆ ನಮ್ಮ ನಡಿಗೆ ಎಂಬ ಬ್ಯಾನರ್ ಹಿಡಿದು ಮೌಢ್ಯಕ್ಕೆ ಅವಕಾಶವಿಲ್ಲ ಎಂದು ಸಾರಿ ಹೇಳಿದರು.
ಹಲವು ತರಹದ ಹಣ್ಣು, ತಿಂಡಿಗಳನ್ನು ಪ್ರದರ್ಶನ ಮಾಡಿದ್ದಲ್ಲದೇ ಗ್ರಹಣ ಸಮಯದಲ್ಲಿಯೇ ಅವುಗಳನ್ನು ತಿಂದು ಇದರಿಂದ ಏನೂ ತೊಂದರೆಯಿಲ್ಲ ಎಂದು ಪ್ರತ್ಯಕ್ಷವಾಗಿ ತೋರಿಸಿದರು.
ಹೋರಾಟಗಾರ ನರಸಿಂಹಮೂರ್ತಿ ಮಾತನಾಡಿ “ಗ್ರಹಣ ಸಮಯದಲ್ಲಿ ತಿನ್ನಬಾರದು, ಕುಡಿಯಬಾರದು, ಹೊರಹೋಗಬಾರದು ಎಂಬ ಮೌಢ್ಯ ಎಲ್ಲ ಸುಳ್ಳು. ಬರಿಗಣ್ಣಿನಿಂದ ಸೂರ್ಯನನ್ನು ನೋಡಬಾರದು ಎಂಬುದು ಮಾತ್ರ ಸತ್ಯ” ಎಂದು ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ವಿಜ್ಞಾನವು ಚಿಂತನೆಯ ಮಾರ್ಗವಾಗಿದೆ. ಆದರೆ ಮೌಢ್ಯ ಅಪಾಯಕ್ಕೆ ಆಹ್ವಾನ, ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಯಾಗಲಿ ಎಂಬ ಘೊಷಣೆಯ ಫಲಕಗಳನ್ನು ಹೋರಾಟಗಾರರು ಪ್ರದರ್ಶಿಸಿದರು.
ಇಂದಿನ ಜಾಗೃತಿ ಕಾರ್ಯಕ್ರಮದಲ್ಲಿ ಪ್ರೊ.ನಗರಗೆರೆ ರಮೇಶ್, ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್, ಜೆ.ಎಂ ವೀರಸಂಘಯ್ಯ, ಪ್ರೊ.ರವಿವರ್ಮಕುಮಾರ್, ಬಾಬು ಸೇರಿಂದತೆ ಹಲವರಿದ್ದರು.