ಭಾರತದಲ್ಲಿ ಕಳೆದ ಆರು ತಿಂಗಳಲ್ಲಿ ಮುಸ್ಲಿಂ ವಿರೋಧಿ ದ್ವೇಷ ಭಾಷಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಬಗ್ಗೆ ವಾಷಿಂಗ್ಟನ್ ಮೂಲದ ಸಂಶೋಧನಾ ಸಮಿತಿ ಸ್ಪೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದೆ. ವರ್ಷದ ಮೊದಲ ಆರು ತಿಂಗಳಿಗೆ ಹೋಲಿಸಿದರೆ 2023ರ ದ್ವಿತೀಯಾರ್ಧದಲ್ಲಿ ಭಾರತದಲ್ಲಿ ಮುಸ್ಲಿಂ ವಿರೋಧಿ ದ್ವೇಷದ ಭಾಷಣವು ಶೇಕಡಾ 62ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.
‘ಇಂಡಿಯಾ ಹೇಟ್ ಲ್ಯಾಬ್’ 2023ರಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡ 668 ದ್ವೇಷ ಭಾಷಣ ಘಟನೆಗಳನ್ನು ಉಲ್ಲೇಖಿಸಿದೆ. ಅದರಲ್ಲಿ 255 ವರ್ಷದ ಮೊದಲಾರ್ಧದಲ್ಲಿ ಸಂಭವಿಸಿದೆ ಮತ್ತು 2023ರ ಕೊನೆಯ ಆರು ತಿಂಗಳಲ್ಲಿ 413 ಘಟನೆಗಳು ನಡೆದಿವೆ ಎಂದು ಸಂಶೋಧನಾ ಸಮಿತಿ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
ವರದಿಯ ಪ್ರಕಾರ, ಸುಮಾರು 75 ಪ್ರತಿಶತ ಅಥವಾ 498 ಘಟನೆಗಳು ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತವಿರುವ ರಾಜ್ಯಗಳಲ್ಲಿ ನಡೆದಿವೆ. ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಹೆಚ್ಚು ದ್ವೇಷಪೂರಿತ ಭಾಷಣಗಳನ್ನು ಮಾಡಲಾಗಿದೆ ಎಂದು ವರದಿಯು ತಿಳಿಸಿದೆ.
ಅಕ್ಟೋಬರ್ 7ರಂದು ಹಮಾಸ್ ಸಶಸ್ತ್ರ ಗುಂಪು ಮತ್ತು ಇಸ್ರೇಲ್ ನಡುವೆ ಯುದ್ಧ ಘೋಷಣೆ ಬಳಿಕ ಭಾರತೀಯ ಮುಸ್ಲಿಮರ ವಿರುದ್ಧ ದ್ವೇಷದ ಭಾಷಣದ 41 ಘಟನೆಗಳು ವರದಿಯಾಗಿದೆ. ಅಂದರೆ 2023ರ ಕೊನೆಯ ಮೂರು ತಿಂಗಳಲ್ಲಿ ಸುಮಾರು 20 ಪ್ರತಿ ಶತದಷ್ಟು ದ್ವೇಷ ಭಾಷಣ ಪ್ರಕರಣಗಳು ವರದಿಯಾಗಿದೆ ಎಂದು ಸಂಶೋಧನೆಯು ಉಲ್ಲೇಖಿಸಿದೆ.
ಸಂಶೋಧನೆಯ ವೇಳೆ ಧರ್ಮ, ಜನಾಂಗೀಯತೆ, ರಾಷ್ಟ್ರೀಯತೆ, ಜನಾಂಗ ಅಥವಾ ಲಿಂಗದ ಆಧಾರದ ಮೇಲೆ ವ್ಯಕ್ತಿ ಅಥವಾ ಗುಂಪಿನ ಬಗ್ಗೆ ಪೂರ್ವಾಗ್ರಹ ಪೀಡಿತ ಅಥವಾ ತಾರತಮ್ಯದ ಭಾಷೆಯ ಬಳಕೆ ಎಂಬ ವಿಶ್ವಸಂಸ್ಥೆಯ ವ್ಯಾಖ್ಯಾನದಂತೆ ದ್ವೇಷ ಭಾಷಣವನ್ನು ಪತ್ತೆಹಚ್ಚಲಾಗಿದೆ ಎಂದು ಸಂಶೋಧನೆಯು ಬಹಿರಂಗಪಡಿಸಿದೆ. 2014ರಲ್ಲಿ ಪ್ರಧಾನಿಯಾಗಿ ಮೋದಿ ಅಧಿಕಾರವನ್ನು ಸ್ವೀಕರಿಸಿದ ಬಳಿಕ ಮೋದಿ ಆಡಳಿತದಲ್ಲಿ ಮುಸ್ಲಿಮರ ಮೇಲೆ ಅನ್ಯಾಯ ನಡೆಸಲಾಗಿದೆ ಎಂದು ಹೇಳಿದೆ.
ಅವರು UN ಮಾನವ ಹಕ್ಕುಗಳ ಕಚೇರಿ ಮೂಲಭೂತವಾಗಿ ತಾರತಮ್ಯ ಎಂದು ಕರೆಯುವ 2019ರ ಪೌರತ್ವ ಕಾನೂನು, ಮತಾಂತರ-ವಿರೋಧಿ ಶಾಸನ ಮತ್ತು ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿರುವುದು ಸೇರಿದಂತೆ ವಿವಿಧ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಅಕ್ರಮ ಕಟ್ಟಡಗಳನ್ನು ತೆಗೆದುಹಾಕುವ ಹೆಸರಿನಲ್ಲಿ ಮುಸ್ಲಿಂ ಆಸ್ತಿಗಳನ್ನು ಧ್ವಂಸಗೊಳಿಸಲಾಗಿದೆ ಮತ್ತು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ಸಮಿತಿಯ ವರದಿಯು ಉಲ್ಲೇಖಿಸಿದೆ.
ಮೋದಿ ಸರ್ಕಾರವು ಅಲ್ಪಸಂಖ್ಯಾತರ ಮೇಲಿನ ಈ ದಾಳಿಯನ್ನು ನಿರಾಕರಿಸಿದೆ. ವಾಷಿಂಗ್ಟನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಭಾರತದ ವಿದೇಶಾಂಗ ಸಚಿವಾಲಯವು ಈ ಬಗ್ಗೆ ಪ್ರತಿಕ್ರಿಯೆಗೆ ಮುಂದೆ ಬಂದಿಲ್ಲ ಎಂದು ವರದಿ ತಿಳಿಸಿದೆ. ಇಂಡಿಯಾ ಹೇಟ್ ಲ್ಯಾಬ್ ಹಿಂದೂ ರಾಷ್ಟ್ರೀಯತಾವಾದಿ ಗುಂಪುಗಳ ಆನ್ಲೈನ್ ಚಟುವಟಿಕೆಯನ್ನು ಟ್ರ್ಯಾಕ್ ಮಾಡಿದೆ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ದ್ವೇಷ ಭಾಷಣದ ವೀಡಿಯೊಗಳನ್ನು ಪರಿಶೀಲಿಸಿದೆ ಮತ್ತು ಭಾರತೀಯ ಮಾಧ್ಯಮಗಳು ವರದಿ ಮಾಡಿದ ಪ್ರತ್ಯೇಕ ಘಟನೆಗಳ ದಾಖಲೆಯನ್ನು ಸಂಗ್ರಹಿಸಿ ವರದಿಯನ್ನು ಸಿದ್ದ ಪಡಿಸಿದೆ.