ಮುಂಬೈ ಕರಾವಳಿಯ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ಎನ್ಸಿಬಿ ದಾಳಿ ನಡೆಸಿ, ನಂತರ ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿತ್ತು. ಈಗ ಈ ಪ್ರಕರಣವೇ ನಕಲಿ ಎಂದು ವಾದಿಸಲಾಗುತ್ತಿದೆ.
ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಲಂಚದ ಆರೋಪಗಳು ಕೇಳಿ ಬಂದಿದ್ದು, 8 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಪ್ರಕರಣದ ‘ಸ್ವತಂತ್ರ ಸಾಕ್ಷಿ’ ಕೆಪಿ ಗೋಸಾವಿ ತಲೆ ಮರೆಸಿಕೊಂಡಿದ್ದಾರೆ. ಸದ್ಯ ದಾಳಿ ನಡೆದ ಅಕ್ಟೋಬರ್ 2 ರಂದು ಕೇಸ್ನ ಸ್ವತಂತ್ರ ಸಾಕ್ಷಿ, ಬಿಜೆಪಿ ಕಾರ್ಯಕರ್ತ, ಎನ್ಸಿಬಿ ಅಧಿಕಾರಿ ಬಂದರಿನಲ್ಲಿರುವ ಕಚೇರಿಯ ಒಳಗೆ ಒಟ್ಟಿಗೆ ಕಾಣಿಸಿಕೊಂಡಿರುವ ಪೋಟೋಗಳು ವೈರಲ್ ಆಗಿವೆ.
ಎನ್ಸಿಬಿ ದಾಳಿಗೆ ಮಾಹಿತಿ ಒದಗಿಸಿದ್ದಾರೆ ಎನ್ನಲಾಗಿರುವ ಬಿಜೆಪಿ ಕಾರ್ಯಕರ್ತ ಮನೀಷ್ ಭಾನುಸಾಲಿ ಮತ್ತು ಅಂದು ದಾಳಿಯಲ್ಲಿ ಬಂಧಿಸಲ್ಪಟ್ಟ ಇಬ್ಬರೊಂದಿಗೆ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮಾತುಕತೆ ನಡೆಸುತ್ತಿರುವುದು ವೈರಲ್ ಆಗಿದೆ.
ಇದನ್ನೂ ಓದಿ: NCB ಅಧಿಕಾರಿ ಸಮೀರ್ ವಾಂಖೆಡೆ ಚಿತ್ರೋದ್ಯಮವನ್ನು ಸುಲಿಗೆ ಮಾಡುತ್ತಿದ್ದಾರೆ: ನವಾಬ್ ಮಲಿಕ್
ಖಾಸಗಿ ತನಿಖಾಧಿಕಾರಿ ಎಂದು ಹೇಳಿಕೊಳ್ಳುವ ಕೆ.ಪಿ. ಗೋಸಾವಿ, ಬಂಧಿತ ಆರೋಪಿ ಆರ್ಯನ್ ಖಾನ್ ಅವರೊಂದಿಗೆ ಸೆಲ್ಫಿ ಮತ್ತು ಹಲವಾರು ವಿಡಿಯೊಗಳನ್ನು ತೆಗೆದುಕೊಳ್ಳುವುದು ಮಾಡಿದ್ದರು. ಇವರನ್ನು ಪ್ರಕರಣದ ಸಾಕ್ಷಿ ಎಂದು ಹೇಳಲಾಗಿದೆ.
ಗೋಸಾವಿ ಎನ್ಸಿಬಿಯ ಸಾಕ್ಷಿಯಾಗಿದ್ದರೂ ನಾಪತ್ತೆಯಾಗಿದ್ದಾರೆ. ಅವರ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಯಾಗಿದ್ದು, ಉತ್ತರ ಪ್ರದೇಶದ ಲಕ್ನೋದಲ್ಲಿ ಪೊಲೀಸರ ಮುಂದೆ ಶರಣಾಗುವುದಾಗಿ ಹೇಳಿದ್ದಾರೆ.
ಇತ್ತ ಬಿಜೆಪಿ ಕಾರ್ಯಕರ್ತ ಮನೀಷ್ ಭಾನುಸಾಲಿ ಮತ್ತು ಗೋಸಾವಿ ಕೇವಲ ಮಾಹಿತಿದಾರ ಮತ್ತು ಸಾಕ್ಷಿಯಾಗಿದ್ದಲ್ಲಿ, ಎನ್ಸಿಬಿ ದಾಳಿಯಲ್ಲಿ ಭಾಗವಹಿಸಲು ಮತ್ತು ಬಂಧಿತರೊಂದಿಗೆ ಸಂವಹನ ನಡೆಸಲು ಹೇಗೆ ಅನುಮತಿ ನೀಡಲಾಗಿದೆ ಎಂಬುದು ಹಲವರ ಪ್ರಶ್ನೆಯಾಗಿದೆ.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್, ಪ್ರಕರಣವನ್ನು “ನಕಲಿ” ಎಂದು ಕರೆದಿದ್ದಾರೆ. ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ನಿರಂತರವಾಗಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಒಬ್ಬ ಹಿಂದೂವಾಗಿ ನನಗೆ ನಾಚಿಕೆಯಾಗುತ್ತಿದೆ!: ಮುಸ್ಲಿಮರ ಮೇಲಿನ ದಾಳಿಗೆ ನಟಿ ಸ್ವರಾ ಭಾಸ್ಕರ್ ಪ್ರತಿಕ್ರಿಯೆ
ಇಂದು (ಅ.26) ರಂದು ಸಮೀರ್ ವಾಂಖೆಡೆ ವಿರುದ್ಧ ಮತ್ತೊಂದು ಆರೋಪ ಮಾಡಿದ್ದು, ವಾಂಖೆಡೆ 26 ಪ್ರಕರಣಗಳಲ್ಲಿ ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿಲ್ಲ ಎಂದು ಏಜೆನ್ಸಿ ಉದ್ಯೋಗಿಯ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
Here are the contents of the letter received by me from an unnamed NCB official.
As a responsible citizen I will be forwarding this letter to DG Narcotics requesting him to include this letter in the investigation being conducted on Sameer Wankhede pic.twitter.com/SOClI3ntAn— Nawab Malik نواب ملک नवाब मलिक (@nawabmalikncp) October 26, 2021
“ಹೆಸರು ಹೇಳಲಿಚ್ಛಿಸದ NCB ಅಧಿಕಾರಿಯಿಂದ ನನಗೆ ಬಂದ ಪತ್ರದ ವಿಷಯಗಳು ಇಲ್ಲಿವೆ.
ಜವಾಬ್ದಾರಿಯುತ ನಾಗರಿಕನಾಗಿ ನಾನು ಈ ಪತ್ರವನ್ನು ಡಿಜಿ ನಾರ್ಕೋಟಿಕ್ಸ್ ಅವರಿಗೆ ರವಾನಿಸುತ್ತೇನೆ, ಈ ಪತ್ರವನ್ನು ಸಮೀರ್ ವಾಂಖೆಡೆ ವಿರುದ್ಧ ನಡೆಸುತ್ತಿರುವ ಆಂತರಿಕೆ ತನಿಖೆಯಲ್ಲಿ ಸೇರಿಸಲು ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.
ನವಾಬ್ ಮಲಿಕ್ ಪತ್ರಕ್ಕೆ ಪ್ರತಿಕ್ರಿಯಿಸಿರುವ ಎನ್ಸಿಬಿ ಉಪ ಮಹಾನಿರ್ದೇಶಕ ಮುತಾ ಅಶೋಕ್ ಜೈನ್, ಪತ್ರದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಆರ್ಯನ್ ಖಾನ್ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಖಾಸಗಿ ತನಿಖಾಧಿಕಾರಿ ಕೆ.ಪಿ ಗೋಸಾವಿಯ ವೈಯಕ್ತಿಕ ಅಂಗರಕ್ಷಕ ಎಂದು ಹೇಳಿಕೊಳ್ಳುವ ಪ್ರಭಾಕರ್ ಸೈಲ್, ಅಕ್ಟೋಬರ್ 3 ರಂದು ಸ್ಯಾಮ್ ಡಿಸೋಜಾ ಮತ್ತು ಕೆ.ಪಿ ಗೋಸಾವಿ ನಡುವೆ 18 ಕೋಟಿ ರೂಪಾಯಿ ಒಪ್ಪಂದದ ಬಗ್ಗೆ ನಡೆದ ಸಂಭಾಷಣೆಯನ್ನು ಕೇಳಿದ್ದೇನೆ ಎಂದು ಹೇಳಿದ್ದಾರೆ. ಇದರಲ್ಲಿ 8 ಕೋಟಿ ರೂಪಾಯಿಗಳನ್ನು ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆಗೆ ನೀಡಬೇಕಾಗುತ್ತದೆ ಎಂದು ಹೇಳಿದ್ದರು ಎಂದ ಆರೋಪಿಸಿದ್ದಾರೆ.
ಅಕ್ಟೋಬರ್ 3 ರ ಸಂಜೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ, ಕೆ.ಪಿ ಗೋಸಾವಿ ಮತ್ತು ಇನ್ನೊಬ್ಬ ವ್ಯಕ್ತಿ ಸ್ಯಾಮ್ ಡಿಸೋಜಾ ಅವರು ಕಾರಿನೊಳಗೆ 15 ನಿಮಿಷಗಳ ಸಭೆ ನಡೆಸಿದರು ಎಂದಿದ್ದಾರೆ. ಈ ಪ್ರಕರಣದಲ್ಲಿ ಎನ್ಸಿಬಿ ಹೆಸರಿಸಿರುವ ಒಂಬತ್ತು ಸಾಕ್ಷಿಗಳಲ್ಲಿ ಪ್ರಭಾಕರ್ ಸೈಲ್ ಕೂಡ ಒಬ್ಬರು.
ಇದನ್ನೂ ಓದಿ: ಆರ್ಯನ್ ಖಾನ್ ಪ್ರಕರಣದಲ್ಲಿ ಲಂಚಕ್ಕೆ ಬೇಡಿಕೆ: ಆರೋಪ ನಿರಾಕರಿಸಿದ ಎನ್ಸಿಬಿ