ಇತ್ತೀಚೆಗೆ ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿ ಮೃತಪಟ್ಟವರಲ್ಲಿ ಭಾರತ ಮೂಲದ ಗುಜರಾತ್ ರಾಜ್ಯದವರು ಸೇರಿದ್ದಾರೆ. ಈ ಬಗ್ಗೆ ಭಾನುವಾರ ಗುಜರಾತ್ನ ಮೆಹ್ಸಾನಾ ಜಿಲ್ಲೆಯ ಕುಟುಂಬವೊಂದು ಖಚಿತಪಡಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಅಮೆರಿಕಾ-ಕೆನಡಾ ಗಡಿಯ ನಡುವಿನ ಮೊಹಾಕ್ ಪ್ರದೇಶದ ಅಕ್ವೆಸಾಸ್ನೆಯಲ್ಲಿನ ಜವುಗು ಪ್ರದೇಶದಲ್ಲಿ ಎಂಟು ವ್ಯಕ್ತಿಗಳ ಶವಗಳು ಪತ್ತೆಯಾಗಿವೆ. ಅವರೆಲ್ಲರೂ ಪ್ರಯಾಣ ದಾಖಲೆಗಳಿಲ್ಲದೆ ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು ಎಂದು ಹೇಳಲಾಗಿದೆ.
ಈ ಬಗ್ಗೆ ಭಾನುವಾರ ಮೆಹ್ಸಾನಾದ ಮಾನೆಕ್ಪುರ್ ಗ್ರಾಮದ ನಿವಾಸಿ ಜಸುಭಾಯ್ ಚೌಧರಿ ಅವರು ಮಾಹಿತಿ ನೀಡಿದ್ದು, ”ತಮ್ಮ ಸಹೋದರ, ಸೊಸೆ ಮತ್ತು ಅವರ ಇಬ್ಬರು ಮಕ್ಕಳು ಎರಡು ತಿಂಗಳ ಹಿಂದೆ ಸಂದರ್ಶಕ ವೀಸಾ (visitor visas)ದಲ್ಲಿ ಕೆನಡಾಕ್ಕೆ ಹೋಗಿದ್ದರು. ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು, ಸಂಪರ್ಕಕ್ಕೆ ಸಿಗುತ್ತಿಲ್ಲ. ಹಾಗಾಗಿ, ”ಅಲ್ಲಿ ಸಾವನ್ನಪ್ಪಿರುವವರು ನಮ್ಮ ಕುಟುಂಬದ ಸದಸ್ಯರು ಎಂಬ ಅನುಮಾನಕ್ಕೆ ಕಾರಣವಾಯಿತು” ಎಂದು ಚೌಧರಿ ಹೇಳಿದರು.
ಇದನ್ನೂ ಓದಿ: ವಂಚನೆ ಪ್ರಕರಣ: ಗುಜರಾತಿ ವಂಚಕ ಕಿರಣ್ ಭಾಯ್ ಪಟೇಲ್ ಪತ್ನಿ ಬಂಧನ
”ಕೆನಡಾದಲ್ಲಿ ನೆಲೆಸಿರುವ ಇತರ ಸಂಬಂಧಿಕರ ವಾಟ್ಸಾಪ್ ಗ್ರೂಪ್ಗಳಲ್ಲಿ ಸಾವನ್ನಪ್ಪಿರುವವರ ಹೆಸರು ಇರುವ ಬಗ್ಗೆ ಮಾಹಿತಿ ಹರಿದಾಡುತ್ತಿತ್ತು. ಇದರಿಂದ ನಮ್ಮ ಅನುಮಾನ ದೃಢಪಟ್ಟಿದೆ” ಎಂದು ಅವರು ಹೇಳಿದರು.
ಕೆನಡಾಕ್ಕೆ ತೆರಳಿದ್ದ ತಮ್ಮ ಕುಟುಂಬದ ಬಗ್ಗೆ ಚೌಧರಿ ಮಾಹಿತಿ ನೀಡಿದ್ದು, ಪ್ರವೀಣ್ ಚೌಧರಿ (50), ಅವರ ಪತ್ನಿ ದೀಕ್ಷಾ (45), ಪುತ್ರ ಮೀತ್ (20) ಮತ್ತು ಪುತ್ರಿ ವಿಧಿ (24) ಎಂದು ತಿಳಿಸಿದ್ದಾರೆ.
ಪಿಟಿಐ ಪ್ರಕಾರ, ಮಾನೆಕ್ಪುರ ಗ್ರಾಮದ ಒಂದು ಕುಟುಂಬದ ನಾಲ್ವರು ಸಂದರ್ಶಕ ವೀಸಾ (visitor visas)ದಲ್ಲಿ ಕೆನಡಾಕ್ಕೆ ಪ್ರಯಾಣ ಬೆಳೆಸಿದ್ದರು. ಅವರು ನದಿ ದಾಟಲು ಪ್ರಯತ್ನಿಸಿದಾಗ ಮೃತಪಟ್ಟಿದ್ದಾರೆ ಎಂದು ಮೆಹ್ಸಾನಾ ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ”ಗ್ರಾಮಸ್ಥರು ತಮ್ಮ ದೇಹವನ್ನು ಮರಳಿ ತರಲು ಸಹಾಯ ಕೋರಿ ನಮ್ಮನ್ನು ಸಂಪರ್ಕಿಸಿದರು, ನಾವು ರಾಜ್ಯ ಸರ್ಕಾರಕ್ಕೆ ವರದಿ ಮಾಡಿದ್ದೇವೆ” ಎಂದು ಅಧಿಕಾರಿ ಹೇಳಿದರು.
ಇನ್ನು ಕೆನಡಾದ ಅಧಿಕಾರಿಗಳು ಪತ್ತೆಯಾದ ಶವಗಳ ಬಗ್ಗೆ ಮಾಹಿತಿ ನೀಡಿದ್ದು, ”ಆರು ವಯಸ್ಕರು ಮತ್ತು ಎರಡು ಕುಟುಂಬಗಳ ಇಬ್ಬರು ಮಕ್ಕಳು – ಒಂದು ಭಾರತೀಯ ಮತ್ತು ಇನ್ನೊಂದು ರೊಮೇನಿಯನ್ ಮೂಲದ ಕುಟುಂಬ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಜನವರಿ 19ರಂದು ಕೆನಡಾದ ಗಡಿ ಪಟ್ಟಣವಾದ ಎಮರ್ಸನ್ ಬಳಿ ಅಲ್ಲಿಯ ಪೊಲೀಸರು ನಾಲ್ಕು ಭಾರತೀಯರ ಶವಗಳನ್ನು ಪತ್ತೆ ಮಾಡಿದ್ದರು. ಅವರನ್ನು ಜಗದೀಶ್ ಪಟೇಲ್ (39), ವೈಶಾಲಿ ಪಟೇಲ್ (37), ವಿಹಂಗಿ ಪಟೇಲ್ (11) ಮತ್ತು ಧಾರ್ಮಿಕ್ ಪಟೇಲ್ (3) ಎಂದು ಗುರುತಿಸಲಾಗಿದೆ.
ಕೆನಡಾ-ಅಮೆರಿಕ ಗಡಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಗುಜರಾತ್ನ ಹನ್ನೊಂದು ವ್ಯಕ್ತಿಗಳಲ್ಲಿ ಕುಟುಂಬವೂ ಸೇರಿದೆ. ಇತರ ಏಳು ಜನರನ್ನು ಅಮೆರಿಕ ಅಧಿಕಾರಿಗಳು ಗಡಿ ದಾಟಿದ ನಂತರ ಬಂಧಿಸಿದರು.