ಕೊರೊನಾ ವೈರಸ್ಗೆ ಔಷಧಿ ಸಿದ್ದಪಡಿಸಿರುವುದಾಗಿ ಘೋಷಿಸಿ ಕೊರೊನಿಲ್ ಎಂಬ ಔಷಧವನ್ನು ಮಾರುಕಟ್ಟೆಗೆ ಬಿಡುವ ಮೂಲಕ ಸಾರ್ವಜನಿಕ ಭಯವನ್ನು ದುರುಪಯೋಗಪಡಿಸಿಕೊಂಡು ಶೋಷಿಸಿದ್ದಾರೆ ಎಂದು ಬಾಬಾ ರಾಮ್ದೇವ್ ನೇತೃತ್ವದ ಆರ್ಯುವೇದ ಕಂಪನಿ ಪತಂಜಲಿಗೆ ಮದ್ರಾಸ್ ಹೈಕೋರ್ಟ್ 10 ಲಕ್ಷ ರೂ ದಂಡ ವಿಧಿಸಿದೆ. ಅಲ್ಲದೇ ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು ಎಂದು ನಿಷೇಧ ಹೇರಿದೆ.
ಗುರುವಾರ ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಇಮ್ಯುನಿಟಿ ಬೂಸ್ಟರ್ ಎಂದು ಹೇಳಲಾಗುತ್ತಿರುವ ಕೊರೊನಿಲ್ ಮೇಲಿನ ಮಧ್ಯಂತರ ನಿಷೇಧವನ್ನು ತೆರವುಗೊಳಿಸಲು ನಿರಾಕರಿಸಿತು.
ಸುಮಾರು ಮೂರು ದಶಕಗಳಿಂದ ಕೈಗಾರಿಕಾ ಶುಚಿಗೊಳಿಸುವ ರಾಸಾಯನಿಕಗಳಿಗಾಗಿ ನೋಂದಾಯಿತ ಟ್ರೇಡ್ಮಾರ್ಕ್ಗಳಾದ ಕೊರೊನಿಲ್ -213 ಎಸ್ಪಿಎಲ್ ಮತ್ತು ಕೊರೊನಿಲ್ -92 ಬಿ ಅನ್ನು ಬಳಸುತ್ತಿದ್ದ ಚೆನ್ನೈ ಮೂಲದ ಅರುದ್ರ ಎಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ಟ್ರೇಡ್ಮಾರ್ಕ್ ಉಲ್ಲಂಘನೆ ಮೊಕದ್ದಮೆಗೆ ಮದ್ರಾಸ್ ಹೈಕೋರ್ಟ್ ಈ ತಡೆಯಾಜ್ಞೆಯನ್ನು ನೀಡಿದೆ.
“ಪತಂಜಲಿ ಮತ್ತು ದಿವ್ಯಾ ಯೋಗ ಮಂದಿರ ಟ್ರಸ್ಟ್ 10,000 ಕೋಟಿ ರೂ ವ್ಯವಹಾರ ನಡೆಸುತ್ತಿದ್ದಾರೆ. ಆದರೂ ಸಹ ಸಾಂಕ್ರಾಮಿಕದ ಸಮಯದಲ್ಲಿ ಜನರ ಭಯ, ಭೀತಿಯನ್ನು ಬಳಸಿಕೊಂಡು ಔಷಧಿ ಕೊಡುತ್ತೇವೆ ಎಂದು ನಂಬಿಸಿ ಮತ್ತಷ್ಟು ಲಾಭ ಮಾಡಲು ಮುಂದಾಗಿದ್ದಾರೆ. ಕೊರೊನಿಲ್ ಮಾತ್ರೆಯು ಕೊರೊನಾವನ್ನು ಹೋಗಲಾಡಿಸುವುದಿಲ್ಲ ಅದು ಕೇವಲ ಕೆಮ್ಮು, ಶೀತ ಮತ್ತು ಜ್ವರಕ್ಕೆ ರೋಗನಿರೋಧಕ ವರ್ಧಕವಾಗಿದೆ” ಎಂದು ನ್ಯಾಯಮೂರ್ತಿ ಸಿ.ವಿ.ಕಾರ್ತಿಕೇಯನ್ ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೇ ಕೊರೊನಿಲ್ ಎಂಬ ಟ್ರೇಡ್ಮಾರ್ಕ್ ಅನ್ನು ಈಗಾಗಲೇ ಬೇರೆಯವರು ಹೊಂದಿದ್ದಾರೆ. ಸರಳವಾಗಿ ರಿಜಿಸ್ಟ್ರಿಯಲ್ಲಿ ಹುಡುಕಿದರೆ ಮಾಹಿತಿ ಸಿಗುತ್ತದೆ. ಆದರೂ ಇದೆಲ್ಲಾ ತಿಳಿದಿದ್ದರು ರಾಮ್ದೇವ್ ಕಂಪನಿ ಮುಂದುವರೆದಿದ್ದರೆ ಅವರು ಯಾವುದೇ ಪರಿಗಣೆಗೆ ಅರ್ಹರಲ್ಲ ಎಂದು ಕೋರ್ಟ್ ಹೇಳಿದೆ.
ಅಡ್ಯಾರ್ ಕ್ಯಾನ್ಸರ್ ಸಂಸ್ಥೆ ಮತ್ತು ಸರ್ಕಾರಿ ಯೋಗ ಮತ್ತು ಪ್ರಕೃತಿಚಿಕಿತ್ಸೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ತಲಾ 5 ಲಕ್ಷ ರೂ ದಂಡ ಪಾವತಿಸುವಂತೆ ಸೂಚಿಸಿದ ಕೋರ್ಟ್, 2020 ರ ಆಗಸ್ಟ್ 25 ಕ್ಕೆ ಮುಂಚೆ ಮದ್ರಾಸ್ನ ಹೈಕೋರ್ಟ್ನ ರಿಜಿಸ್ಟ್ರಿಯ ಮುಂದೆ ದಂಡ ಪಾವತಿಸಿದ ರಶೀದಿಯನ್ನು ಸಲ್ಲಿಸಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಸರಣಿ-1: ಒಮ್ಮೆ ಕೊರೊನಾ ಬಂದವರಿಗೆ ಮತ್ತೆ ಬರುವುದಿಲ್ಲವಾ? – ಡಾ.ವಾಸು ಎಚ್.ವಿ