ಬೀದರ್ ಜಿಲ್ಲೆಯ ಧನ್ನೂರಾ ಗ್ರಾಮದಲ್ಲಿ ಮಸೀದಿಯೊಂದರ ಮೇಲೆ ಕೇಸರಿ ಧ್ವಜ ಅಳವಡಿಸಿದ್ದ ಕಿಡಿಗೇಡಿಗಳನ್ನು ಬಸವಕಲ್ಯಾಣ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಧನ್ನೂರಾ ಗ್ರಾಮದ ಅಭಿಷೇಕ್, ಕಲ್ಯಾಣಿ ರಾಜಕುಮಾರ ಸೂರ್ಯ, ಸುಶೀಲ್ ಹಾಗೂ ವೀರೇಶ್ ಬಿರಾದಾರ ಬಂಧಿತ ಆರೋಪಿಗಳು.
ದುಷ್ಕರ್ಮಿಗಳು ಸೆ.21ರಂದು ಬಸವಕಲ್ಯಾಣ ತಾಲೂಕಿನ ಧನ್ನೂರ ಗ್ರಾಮದ ಹೊರವಲಯದ ಜಾಮಿಯಾ ಮಸೀದಿ ಮೇಲೆ ತಡರಾತ್ರಿ ಭಾಗವಾಧ್ವಜ ಹಾರಿಸಿ ಪರಾರಿಯಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಬಸವಕಲ್ಯಾಣ ಗ್ರಾಮೀಣ ಪೊಲೀಸರು ಗ್ರಾಮಸ್ಥರ ಮನವೊಲಿಸಿ ಕೇಸರಿ ಧ್ವಜವನ್ನು ತೆಗೆಸಿದ್ದರು.
ಈ ಸಂಬಂಧ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ ಅಶಾಂತಿಗೆ ಪ್ರಯತ್ನಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಗಿದ್ದು, ಶಾಂತಿ ಕಾಪಾಡಲು ಗ್ರಾಮಸ್ಥರು ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಮುಜಾಪ್ಪರ್ನಗರ ಶಾಲಾ ಪ್ರಕರಣ: ಉತ್ತರಪ್ರದೇಶದ ಆತ್ಮಸಾಕ್ಷಿಗೆ ಆಘಾತ; ಸುಪ್ರೀಂಕೋರ್ಟ್