ಬೆಂಗಳೂರು ನಗರದ 48 ಶಾಲೆಗಳಿಗೆ ಕಳೆದ ವಾರ ನಕಲಿ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು. ಈ ಕುರಿತ ತನಿಖೆಗೆ ಸಹಾಯಕ್ಕಾಗಿ ಸಿಬಿಐ ಮೂಲಕ ಇಂಟರ್ಪೋಲ್ನ್ನು ಸಂಪರ್ಕಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.
ಬೆಂಗಳೂರು ನಗರದಲ್ಲಿನ 48 ಶಾಲೆಗಳಿಗೆ ಮತ್ತು ಹೊರವಲಯದಲ್ಲಿರುವ 22 ಶಾಲೆಗಳಿಗೆ ಶುಕ್ರವಾರ ಬೆದರಿಕೆ ಇಮೇಲ್ಗಳು ಬಂದಿವೆ. ಬೆಂಗಳೂರು ನಗರ ಪೊಲೀಸರು 48 ಇಮೇಲ್ಗಳ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದರೆ. ಬೆಂಗಳೂರು ಜಿಲ್ಲಾ ಪೊಲೀಸರು ಉಳಿದ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ, ಬೆದರಿಕೆ ಇಮೇಲ್ ಬಂದಿರುವ ಬಗ್ಗೆ ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ 27 ಎಫ್ಐಆರ್ಗಳು ದಾಖಲಾಗಿದ್ದು, ಸೋಮವಾರ ಪ್ರಕರಣದ ಕುರಿತು ಸಭೆ ನಡೆಸಲಾಗಿದೆ. ಕಳೆದ ವರ್ಷ ಇದೇ ರೀತಿಯ 6 ಇಮೇಲ್ಗಳು ಬಂದಿದ್ದವು. ಪ್ರಕರಣಕ್ಕೆ ಸಂಬಂಧಿಸಿ ಕೆಲವು ಬಾಲಾಪರಾಧಿಗಳನ್ನು ಬಂಧಿಸಲಾಗಿತ್ತು. ಇಮೇಲ್ಗಳಲ್ಲಿನ ಸಾಮ್ಯತೆಯ ಕುರಿತು ತನಿಖೆಗೆ ನಾವು ಆ ಪ್ರಕರಣಗಳ ತನಿಖಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಎಲ್ಲಾ ಶಾಲೆಗಳು ಒಂದೇ ಐಡಿಯಿಂದ ಬೆದರಿಕೆ ಇ-ಮೇಲ್ನ್ನು ಸ್ವೀಕರಿಸಿವೆ ಮತ್ತು ಅದರಲ್ಲಿದ್ದ ವಿಷಯವು ಒಂದೇ ಆಗಿದೆ. ಇಂತಹ ಇಮೇಲ್ಗಳನ್ನು ಬರೆಯುವ ಹಿಂದಿನ ಸಂಭವನೀಯ ಕಾರಣಗಳು ಮತ್ತು ಇ-ಇಮೇಲ್ ಏನು ಸೂಚಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪೊಲೀಸರು ತಜ್ಞರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಕಮಿಷನರ್ ಹೇಳಿದ್ದಾರೆ.
ಪೊಲೀಸರು ಕಳುಹಿಸಿದ ವಿನಂತಿಗೆ ಇ-ಮೇಲ್ ಸೇವಾ ಪೂರೈಕೆದಾರರು ಪ್ರತಿಕ್ರಿಯಿಸಿದ್ದಾರೆ. ಆ ಮಾರ್ಗಗಳಲ್ಲಿಯೂ ತನಿಖೆಗಳು ನಡೆಯುತ್ತಿವೆ. ಪೊಲೀಸರು ಪ್ರಕರಣವನ್ನು ವಿವರವಾಗಿ ಅರ್ಥಮಾಡಿಕೊಳ್ಳಲು ವಿವಿಧ ದೇಶಗಳಲ್ಲಿ ಇದೇ ರೀತಿಯ ಘಟನೆಗಳ ಬಗ್ಗೆ ಮುಕ್ತ ಮೂಲಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಯುಎಸ್ಎ, ಜರ್ಮನಿ, ಮಲೇಷ್ಯಾ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊಗೆ ಇದೇ ರೀತಿಯ ಇಮೇಲ್ಗಳು ಬಂದಿವೆ. ಈ ಪ್ರಕರಣವು ಸವಾಲಾಗಿದೆ. ಇದು ಒಂದು ರೀತಿಯ ಸೈಬರ್ ಅಪರಾಧ ಮತ್ತು ಇಮೇಲ್ಗಳನ್ನು ಕಳುಹಿಸಲು ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (VPN) ಬಳಸಲಾಗಿರುವುದರಿಂದ ಪ್ರಕರಣವು ತಾಂತ್ರಿಕ ಜಟಿಲತೆಗಳನ್ನು ಒಳಗೊಂಡಿರುತ್ತದೆ ಎಂದು ಕಮಿಷನರ್ ಹೇಳಿದ್ದಾರೆ.
ಆರೋಪಿಯು beeble.comನ ವಿವಿಧ ಇಮೇಲ್ ಐಡಿಗಳಿಂದ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾನೆ. ಬೆಂಗಳೂರು ಪೊಲೀಸರು ಆ ಕಂಪನಿಗೆ ಪತ್ರ ಬರೆದು ಅವರಿಂದ ವಿವರ ಪಡೆದಿದ್ದಾರೆ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಡಿ.1ರಂದು ಬೆಂಗಳೂರಿನ 48 ಶಾಲೆಗಳು ಮತ್ತು ನೆರೆಯ ತಾಲೂಕುಗಳ 20 ಶಾಲೆಗಳಿಗೆ ಬೆದರಿಕೆ ಇಮೇಲ್ಗಳನ್ನು ಕಳುಹಿಸಲಾಗಿತ್ತು. ತಕ್ಷಣ ಎಚ್ಚೆತ್ತು ಪೊಲೀಸರು ತಪಾಸಣೆ ನಡೆಸಿದಾಗ ಯಾವುದೇ ಸ್ಫೋಟಕಗಳು ಪತ್ತೆಯಾಗಿರಲಿಲ್ಲ. ಬೆಂಗಳೂರಿನ ಬಸವೇಶ್ವರ ನಗರ, ಸದಾಶಿವನಗರ, ಯಲಹಂಕ ಮತ್ತು ಬನ್ನೇರುಘಟ್ಟ ಭಾಗದ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಪೊಲೀಸರು ಶಾಲೆಗಳಿಗೆ ತೆರಳಿ ಮಕ್ಕಳನ್ನು ಮನೆಗೆ ಕಳುಹಿಸಿ ಪರಿಶೀಲನೆ ನಡೆಸಿದ್ದರು.
ಇದನ್ನು ಓದಿ: ‘ಗೋರಕ್ಪುರ ಆಸ್ಪತ್ರೆ ದುರಂತ’ ಪುಸ್ತಕ ಬರೆದ ಡಾ.ಕಫೀಲ್ ಖಾನ್ ವಿರುದ್ದ ಪ್ರಕರಣ ದಾಖಲು