ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾ ಅವರು ಚುನಾವಣಾ ರಾಜ್ಯ ಮಧ್ಯಪ್ರದೇಶದ ಜಬಲ್ಪುರಕ್ಕೆ ಭೇಟಿ ನೀಡಿದ್ದರು. ಇದಾದ 24 ಗಂಟೆಗಳಲ್ಲಿ ಕ್ಷೇತ್ರದಲ್ಲಿ ಬಿಜೆಪಿಗೆ ಇಬ್ಬರು ಹಿರಿಯ ನಾಯಕರು ರಾಜೀನಾಮೆ ನೀಡಿದ್ದಾರೆ.
ಅಮಿತ್ ಶಾ ಅವರು ಮಧ್ಯಪ್ರದೇಶ ಪ್ರವಾಸದಲ್ಲಿದ್ದಾರೆ. ಜಬಲ್ಪುರ ನಗರಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಲಹೆ ಮತ್ತು ಸೂಚನೆಗಳ ಹೊರತಾಗಿಯೂ ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ಸಂಘರ್ಷಗಳು ಮುಂದುವರಿದಿದೆ.
ಬಿಜೆಪಿ ನಾಯಕ ಪ್ರಭಾತ್ ಸಾಹು ಮತ್ತು ಕಮಲೇಶ್ ಅಗರವಾಲ್ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಮಧ್ಯಪ್ರದೇಶದ ಚುನಾವಣೆ ಹೊಸ್ತಿಲಲ್ಲಿ ಕ್ಷೇತ್ರದಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಕೊಡಲಿದೆ ಎಂದು ಹೇಳಲಾಗಿದೆ.
ಕಮಲೇಶ್ ಅಗರವಾಲ್ ಅವರು ಉತ್ತರದ ಸೆಂಟ್ರಲ್ ಜಬಲ್ಪುರ ಕ್ಷೇತ್ರದಿಂದ ಚುನಾವಣೆ ಸ್ಪರ್ಧೆಗೆ ಸಿದ್ಧತೆಯನ್ನು ನಡೆಸಿದ್ದರು. ಆದರೆ ಬಿಜೆಪಿ ಯುವ ಮೋರ್ಚಾದ ಮಾಜಿ ರಾಜ್ಯಾಧ್ಯಕ್ಷ ಅಭಿಲಾಷ್ ಪಾಂಡೆ ಅವರಿಗೆ ಟಿಕೆಟ್ ನೀಡಲಾಗಿತ್ತು.
ರಾಜೀನಾಮೆ ಬಗ್ಗೆ ಪಾಲಿಕೆ ವಿರೋಧ ಪಕ್ಷದ ನಾಯಕ ಕಮಲೇಶ್ ಅಗರವಾಲ್ ಮಾತನಾಡಿ, ಕಳೆದ 25 ವರ್ಷಗಳಿಂದ ಭಾರತೀಯ ಜನತಾ ಪಕ್ಷಕ್ಕೆ ದುಡಿದಿದ್ದೇನೆ. ಆದರೆ ಕಳೆದ ಮೂರು ಚುನಾವಣೆಗಳಲ್ಲಿ ಕೇವಲ ಟಿಕೆಟ್ ಭರವಸೆ ಮಾತ್ರ ನೀಡಲಾಗಿದೆ. 2018ರಲ್ಲೂ ಟಿಕೆಟ್ ನೀಡುವಂತೆ ಕೇಳಿದ್ದರೂ ನೀಡಿರಲಿಲ್ಲ ಎಂದು ಹೇಳಿದ್ದಾರೆ.
ಕ್ಷೇತ್ರದ ಜನರು ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿಕೊಂಡಿದ್ದಾರೆ. ಆದ್ದರಿಂದ ನಾಮಪತ್ರವನ್ನು ಸಲ್ಲಿಸುತ್ತಿದ್ದೇನೆ. 1992ರಿಂದ ಭಾರತೀಯ ಜನತಾ ಪಕ್ಷಕ್ಕೆ ನಾನು ಸೇವೆ ಸಲ್ಲಿಸುತ್ತಿದ್ದೇನೆ. ನಾನು 4 ಬಾರಿ ಕೌನ್ಸಿಲರ್ ಆಗಿದ್ದೇನೆ. ಆದರೂ ಪಕ್ಷ ಟಿಕೆಟ್ ನೀಡಿಲ್ಲ. ಆದ್ದರಿಂದ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ 230 ಕ್ಷೇತ್ರಗಳಿಗೆ ನ.17ರಂದು ಚುನಾವಣೆ ನಡೆಯಲಿದ್ದು, ಈಗ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ.
ಇದನ್ನು ಓದಿ: ಕೊಚ್ಚಿ: ಸರಣಿ ಸ್ಪೋಟ ಪ್ರಕರಣ: ವಿಡಿಯೋ ಹೇಳಿಕೆ ಕೊಟ್ಟು ಪೊಲೀಸರಿಗೆ ಶರಣಾದ ಆರೋಪಿ