”ರಾಜರಾಜೇಶ್ವರಿ ನಗರದ ಶಾಸಕರಾಗಿರುವ ಮುನಿರತ್ನ ನಾಯ್ಡು ಅವರು ಸಚಿವರಾಗಿದ್ದಾಗ ಹನಿಟ್ರ್ಯಾಪ್ ಮಾಡಿಸುತ್ತಿದ್ದರು. ಹನಿಟ್ರ್ಯಾಪ್ ಮಾಡಲೆಂದೇ ಸ್ಟುಡಿಯೋ ಇಟ್ಟುಕೊಂಡಿದ್ದಾರೆ” ಎಂದು ಅವರ ಬೆಂಬಲಿಗ, ಬಿಬಿಎಂಪಿ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಗಂಭೀರ ಆರೋಪ ಮಾಡಿದ್ದಾರೆ.
ಈ ಹಿಂದೆ ಶಾಸಕ ಮುನಿರತ್ನ ಅವರ ಬೆಂಬಲಿಗರಾಗಿದ್ದ ವೇಲು ನಾಯ್ಕರ್ ಅವರು ರವಿವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ವೇಲು ನಾಯ್ಕರ್, ”ಹನಿಟ್ರ್ಯಾಪ್ ಮಾಡುವುದು ಹೆದರಿಸುವುದು ಮುನಿರತ್ನ ಅವರ ಕಾಯಕವಾಗಿದೆ. ಜೆ.ಪಿ.ಪಾರ್ಕ್, ಡಾಲರ್ಸ್ ಕಾಲೋನಿಯಲ್ಲಿ ಇದಕ್ಕಾಗಿಯೇ ಅವರದೊಂದು ಸ್ಟುಡಿಯೋ ಇದೆ. ಅವರು ಸಿನಿಮಾ ನಿರ್ಮಾಪಕರಲ್ಲವೇ… ಹೀಗಾಗಿ ಹನಿಟ್ರ್ಯಾಪ್ ಮಾಡಿಸಿ ಹೆದರಿಸುತ್ತಾರೆ” ಎಂದು ಆರೋಪಿಸಿದರು.
”ಚುನಾವಣೆ ವೇಳೆ ನಿಮ್ಮದು ಈಸ್ಟ್ಮನ್ ಕಲರ್ ಪಿಕ್ಚರ್ ಇದೆ ತೋರಿಸಲಾ? ಇಲ್ಲ ಕೆಲಸ ಮಾಡುತ್ತೀರಾ ಎಂದು ಹೆದರಿಸುತ್ತಿದ್ದರು. ಮುನಿರತ್ನ ನಿರ್ಮಾಪಕನಾಗಿ ಮಾಡಿದ ಮೊದಲ ಚಿತ್ರ ಆಂಟಿ ಪ್ರೀತ್ಸೆ. ಹೀಗಾಗಿ ಮುನಿರತ್ನ ಸಚಿವರಾದ ಮೇಲೂ ಬರೀ ಆಂಟಿಗಳೇ ಇರುತ್ತಿದ್ದರು. ವಿಕಾಸಸೌಧ, ವಿಧಾನಸೌಧ ಚೇಂಬರ್ನಲ್ಲೆಲ್ಲಾ ಬರೀ ಆಂಟಿಗಳೇ ಇರುತ್ತಿದ್ದರು” ಎಂದು ಮುನಿರತ್ನ ವಿರುದ್ಧ ಆರೋಪಗಳ ಪಟ್ಟಿಯನ್ನೇ ಹೇಳಿದರು.
ಈಗಾಗಲೇ ಕಾಂಗ್ರೆಸ್ ಪಕ್ಷ ರಾಜ್ಯ ವಿಧಾನಸಭೆ ಚುನಾವಣೆಯನ್ನು ಭರ್ಜರಿಯಾಗಿಯೇ ಗೆದ್ದಿದೆ. ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗುತ್ತಿದ್ದು, ಇದಕ್ಕಾಗಿ ಆಡಳಿತರೂಢ ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದೆ. ಬಿಬಿಎಂಪಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಸದ್ದಿಲ್ಲದೇ ಆಪರೇಷನ್ ಹಸ್ತ ಮಾಡಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರ ಬೆಂಬಲಿಗರನ್ನು ಕಾಂಗ್ರೆಸ್ಗೆ ಸೆಳೆಯುವಲ್ಲಿ ಯಶಸ್ಸು ಗಳಿಸಿದ್ದಾರೆ.
ಮುನಿರತ್ನ ಅವರಿಗೆ ಪರಮಾಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಮಾಜಿ ಬಿಬಿಎಂಪಿ ಸದಸ್ಯರುಗಳಾದ ವೇಲು ನಾಯ್ಕರ್, ಮೋಹನ್ ಕುಮಾರ್ ಹಾಗೂ ಶ್ರೀನಿವಾಸ ಮೂರ್ತಿ ಇದೀಗ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಇದನ್ನೂ ಓದಿ: ಅಕ್ರಮ ಗಣಿಗಾರಿಕೆ: ಮಾಜಿ ಸಚಿವ ಮುನಿರತ್ನ ಸೇರಿ ನಾಲ್ವರ ವಿರುದ್ಧ FIR ದಾಖಲು