ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಸ್ಥಾಯಿ ಸಮಿತಿಯ ಆರು ಸದಸ್ಯರ ಚುನಾವಣೆ ಬುಧವಾರ ರಾತ್ರಿ ಗದ್ದಲ ಮತ್ತು ಮುಂದೂಡಿಕೆಗೆ ಸಾಕ್ಷಿಯಾಯಿತು ಎಂದು ಪಿಟಿಐ ವರದಿ ಮಾಡಿದೆ. ಬುಧವಾರ (ಫೆ.22) ಮೇಯರ್ ಆಗಿ ಆಯ್ಕೆಯಾಗಿರುವ ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ ಮೇಲೆ ಕೆಲವು ಬಿಜೆಪಿ ಕೌನ್ಸಿಲರ್ಗಳು ಕಲಾಪದ ವೇಳೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಬುಧವಾರ ಆರಂಭವಾಗಿದ್ದ ಅಧಿವೇಶನ ಗುರುವಾರ ಬೆಳಗ್ಗೆ 4 ಗಂಟೆಯವರೆಗೆ ನಡೆಯಿತು. ಈ ವೇಳೆ ಆಮ್ ಆದ್ಮಿ ಪಕ್ಷ ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯರು ದೈಹಿಕ ಮತ್ತು ಮೌಖಿಕ ವಾಗ್ದಾಳಿ ನಡೆಸಿದರು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಎರಡೂ ಪಕ್ಷಗಳ ಕೌನ್ಸಿಲರ್ಗಳು ನೀರಿನ ಬಾಟಲಿಗಳು ಮತ್ತು ಹಣ್ಣುಗಳನ್ನು ಪರಸ್ಪರರ ಎಸೆದಾಡಿ, ಒಬ್ಬರನ್ನೊಬ್ಬರು ತಳ್ಳಾಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ಬುಧವಾರವಷ್ಟೇ ಚುನಾಯಿತರಾದ ಮೇಯರ್ ಶೆಲ್ಲಿ ಒಬೆರಾಯ್, ಕೆಲವು ಬಿಜೆಪಿ ಕೌನ್ಸಿಲರ್ಗಳು ಕಲಾಪದ ವೇಳೆ ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದರು ಎಂದು ಆರೋಪಿಸಿದ್ದು, ಈ ಬಗ್ಗೆ ಅವರು ಟ್ವೀಟ್ ಕೂಡ ಮಾಡಿದ್ದಾರೆ. “ಸುಪ್ರೀಂಕೋರ್ಟ್ ಆದೇಶದಂತೆ ನಾನು ಸ್ಥಾಯಿ ಸಮಿತಿ ಚುನಾವಣೆ ನಡೆಸುತ್ತಿದ್ದಾಗ ಬಿಜೆಪಿ ಕೌನ್ಸಿಲರ್ಗಳು ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು! ಇದು ಬಿಜೆಪಿಯ ಗೂಂಡಾಗಿರಿ. ಅವರು ಮಹಿಳಾ ಮೇಯರ್ ಮೇಲೆಯೇ ದಾಳಿ ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.
BJP Councillors just tried to attack me while I was conducting the Standing Committee elections, as per Supreme Court orders! This is the extent of BJP’s Gundagardi that they are trying to attack a woman Mayor.
— Dr. Shelly Oberoi (@OberoiShelly) February 22, 2023
ಮತ್ತೊಂದೆಡೆ ಮೇಯರ್ ಚುನಾವಣೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಕೌನ್ಸಿಲರ್ ಸತ್ಯ ಶರ್ಮಾ ಕೂಡ, ತಮ್ಮ ಪಕ್ಷದ ಅನೇಕ ಕೌನ್ಸಿಲರ್ಗಳಿಗೆ ಗಾಯಗಳಾಗಿವೆ ಎಂದು ಆರೋಪಿಸಿದ್ದಾರೆ. “ಅವರು (ಎಎಪಿ ಕೌನ್ಸಿಲರ್ಗಳು) ನಮ್ಮ ನಾಯಕರ ಮೇಲೆ ಬಾಟಲಿ, ಸೇಬು ಮತ್ತು ಬೂಟುಗಳನ್ನು ಎಸೆದಿದ್ದಾರೆ. ನಮ್ಮ ಕೌನ್ಸಿಲರ್ ಪ್ರಮೋದ್ ಗುಪ್ತಾ ಅವರಿಗೆ ಕಪಾಳಮೋಕ್ಷ ಮಾಡಲಾಗಿದೆ.” ಎಂದು ಶರ್ಮಾ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಬುಧವಾರ ಮಧ್ಯಾಹ್ನದ ವೇಳೆಗೆ ಮೇಯರ್ ಮತ್ತು ಉಪಮೇಯರ್ ಆಯ್ಕೆ ನಡೆಯಿತು. ಅದಾದನಂತರ ಸದನವನ್ನು ಒಂದು ಗಂಟೆ ಮುಂದೂಡಲಾಯಿತು. ಆ ಬಳಿಕ ಗದ್ದಲ ಪ್ರಾರಂಭವಾಯಿತು.
ಪಿಟಿಐ ವರದಿ ಪ್ರಕಾರ, ಸದನದ ಪುನರಾರಂಭಕ್ಕಾಗಿ ಕಾಯುತ್ತಿರುವಾಗ ಬಿಜೆಪಿಯ ಸದಸ್ಯರು ಹನುಮಾನ್ ಚಾಲೀಸಾವನ್ನು ಪಠಿಸಿದರು. ಇದು ದೈಹಿಕ ಪರಾಕ್ರಮವನ್ನು ಸಂಕೇತಿಸುವ ಹನುಮಾನ್ ದೇವರಿಗೆ ಪ್ರಾರ್ಥನೆಯಾಗಿದೆ.
ಇದನ್ನೂ ಓದಿ: ದೆಹಲಿ ಮೇಯರ್ ಚುನಾವಣೆ: ಎಎಪಿಗೆ ಗೆಲುವು, ಬಿಜೆಪಿಗೆ ಮುಖಭಂಗ
ಸಂಜೆ 6.15ಕ್ಕೆ ಕಲಾಪ ಪುನರಾರಂಭಗೊಂಡಾಗ, ಕೌನ್ಸಿಲರ್ಗಳಿಗೆ ಮತಗಟ್ಟೆ ಬಳಿ ಮೊಬೈಲ್ ಫೋನ್ ತೆಗೆದುಕೊಂಡು ಹೋಗಲು ಅವಕಾಶ ನೀಡಿದ ಒಬೆರಾಯ್ ಅವರ ನಿರ್ಧಾರವನ್ನು ಬಿಜೆಪಿ ಸದಸ್ಯರು ವಿರೋಧಿಸಿದರು. ಚುನಾವಣೆಯ ಪ್ರಕ್ರಿಯೆಯಲ್ಲಿ ಮೊಬೈಲ್ ಫೋನ್ ಮತ್ತು ಪೆನ್ನುಗಳನ್ನು ಸಾಗಿಸಲು ಅನುಮತಿ ಇಲ್ಲ ಎಂದು ಬಿಜೆಪಿ ಸದಸ್ಯರು ಗಲಾಟೆ ಆರಂಭಿಸಿದರು.
ಈ ವೇಳೆ ಬಿಜೆಪಿ ಸದಸ್ಯರು, ”ಸರ್ವಾಧಿಕಾರ ನಡೆಸಲು ಬಿಡುವುದಿಲ್ಲ ಮತ್ತು ಮನೆಯಲ್ಲಿ ಎರಡು ಪ್ರತ್ಯೇಕ ನಿಯಮಗಳು ಕಾರ್ಯನಿರ್ವಹಿಸುವುದಿಲ್ಲ” ಎಂಬ ಘೋಷಣೆಗಳನ್ನು ಕೂಗಿದರು. ಇದರಿಂದ ಗದ್ದಲ ನಡೆದು ಸದನವನ್ನು ರಾತ್ರಿ 11.35 ರವರೆಗೆ ಒಂಬತ್ತು ಬಾರಿ ಮುಂದೂಡಲಾಯಿತು. ನಂತರ ಮತ್ತೆ ಎರಡು ಬಾರಿ ಮುಂಜಾನೆ 4 ಗಂಟೆಯವರೆಗೆ ಮುಂದೂಡಲಾಯಿತು.
ಎಎಪಿ ಮತ್ತು ಬಿಜೆಪಿ ನಡುವಿನ ಸುದೀರ್ಘ ಜಗಳದಿಂದಾಗಿ ಡಿಸೆಂಬರ್ನಲ್ಲಿ ನಡೆದ ನಾಗರಿಕ ಚುನಾವಣೆಯ ನಂತರ ಮೇಯರ್ ಹುದ್ದೆಯ ಚುನಾವಣೆಯನ್ನು ಮೂರು ಬಾರಿ ಮುಂದೂಡಲಾಗಿತ್ತು. ಎಎಪಿಯ ಕೌನ್ಸಿಲರ್ಗಳು ಆಲ್ಡರ್ಮನ್ಗಳಿಗೆ ಮತ ಚಲಾಯಿಸಲು ಅವಕಾಶ ನೀಡುವ ಅಧ್ಯಕ್ಷರ ನಿರ್ಧಾರವನ್ನು ವಿರೋಧಿಸಿದ್ದರು.
ರಾಜ್ಯಪಾಲರಿಂದ ನಾಮನಿರ್ದೇಶನಗೊಂಡ 10 ಸದಸ್ಯರು-ಆಲ್ಡರ್ಮೆನ್ಗಳಿಗೆ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶವಿದೆ ಎಂದು ಬಿಜೆಪಿ ವಾದಿಸಿತ್ತು. ಇದಕ್ಕೆ ಎಎಪಿ ವಿರೋಧ ವ್ಯಕ್ತಪಡಿಸಿದ್ದರಿಂದಲೇ ಮೂರು ಬಾರಿಯೂ ಮೇಯರ್ ಚುನಾವಣೆ ಮುಂದೂಡಲಾಯಿತು. ಇತ್ತಿಚೇಗೆ ಒಬೆರಾಯ್ ಅವರು ಬಿಜೆಪಿಯ ಈ ವಾದವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಾಧೀಶರು, ನಾಮನಿರ್ದೇಶಿತ ಸದಸ್ಯರು ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ ಎಂದು ಹೇಳಿದರು. “ನಾಮನಿರ್ದೇಶಿತ ಸದಸ್ಯರು ಚುನಾವಣೆಗೆ ಹೋಗುವಂತಿಲ್ಲ. ಸಾಂವಿಧಾನಿಕ ನಿಬಂಧನೆಯು ತುಂಬಾ ಸ್ಪಷ್ಟವಾಗಿದೆ” ಎಂದು ನ್ಯಾಯಾಲಯವು ಹೇಳಿತು.
ದೆಹಲಿ ಮಹಾನಗರ ಪಾಲಿಕೆ (ಡಿಎಂಸಿ) ಕಾಯಿದೆ, 1957 ರ ಪ್ರಕಾರ, ನಾಗರಿಕ ಚುನಾವಣೆಯ ನಂತರ ಸದನದ ಮೊದಲ ಅಧಿವೇಶನದಲ್ಲಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯಾಗಬೇಕು. ಆದರೆ, ಡಿಸೆಂಬರ್ 4ರಂದು ಪಾಲಿಕೆ ಚುನಾವಣೆ ನಡೆದು ಎರಡು ತಿಂಗಳಾಗಿದೆ.
ಪಾಲಿಕೆ ಚುನಾವಣೆ ಮುಗಿದ ಒಂದು ತಿಂಗಳ ನಂತರ, ಜನವರಿ 6ರಂದು ಮೊದಲ ಬಾರಿಗೆ ಸದನ ನಡೆಯಿತು. ಆದರೆ ಅಂದು ಬಿಜೆಪಿ ಮತ್ತು ಆಪ್ ಸದಸ್ಯರ ನಡುವಿನ ವಾಗ್ವಾದದ ನಂತರ ಅದನ್ನು ಮುಂದೂಡಲಾಯಿತು. ಜನವರಿ 24 ಮತ್ತು ಫೆಬ್ರವರಿ 6 ರಂದು ನಡೆದ ಎರಡನೇ ಮತ್ತು ಮೂರನೇ ಸಭೆಗಳು ಸಹ ಮೇಯರ್ ಆಯ್ಕೆಯ ಚುನಾವಣೆ ಪ್ರಕ್ರಿಯೆ ವಿಫಲವಾದವು. ಇದೀಗ ಸುಪ್ರೀಂ ಕೋರ್ಟ್ನ ಆದೇಶದ ನಂತರ ಬುಧವಾರ (ಫೆಬ್ರವರಿ 22) ಹೊಸ ಮೇಯರ್ ಆಯ್ಕೆ ನಡೆಯಿತು.