ಯುನೈಟೆಡ್ ಕಿಂಗ್ಡಂನ 200ಕ್ಕೂ ಹೆಚ್ಚು ಪ್ರಮುಖ ನಾಗರಿಕರು, ಕಲಾವಿದರು, ಪತ್ರಕರ್ತರು, ವಕೀಲರು, ರಾಜಕಾರಣಿಗಳು ಮತ್ತು 50ಕ್ಕೂ ಹೆಚ್ಚು ಹಿರಿಯ ಶಿಕ್ಷಣ ತಜ್ಞರು ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರವು ಅನುಸರಿಸುತ್ತಿರುವ “ಸರ್ವಾಧಿಕಾರಿ ಮತ್ತು ಬಹುಸಂಖ್ಯಾತ ಧೋರಣೆ” ಖಂಡಿಸಿ ಮುಕ್ತ ಪತ್ರಕ್ಕೆ ಸಹಿ ಹಾಕಿದ್ದಾರೆ.
ಲೇಬರ್ ಪಕ್ಷದ ಜೆರೆಮಿ ಕಾರ್ಬಿನ್ ಮತ್ತು ಜಾನ್ ಮೆಕ್ಡೊನೆಲ್, ಗ್ರೀನ್ ಪಾರ್ಟಿಯ ಕ್ಯಾರೋಲಿನ್ ಲ್ಯೂಕಾಸ್, ಸ್ಕಾಟಿಷ್ ನ್ಯಾಷನಲ್ ಪಾರ್ಟಿಯ ಬ್ರೆಂಡನ್ ಒಹರಾ (ಅಂತರರಾಷ್ಟ್ರೀಯ ಮಾನವ ಹಕ್ಕುಗಳ ವಕ್ತಾರ), ಶಮಿ ಚಕ್ರವರ್ತಿ (ನಾಗರಿಕ ಸ್ವಾತಂತ್ರ್ಯ ಗುಂಪು ಲಿಬರ್ಟಿಯ ಮಾಜಿ ನಿರ್ದೇಶಕ) ಮತ್ತು ಹೌಸ್ ಆಫ್ ಲಾರ್ಡ್ಸ್ ಸದಸ್ಯರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬ್ರಿಟಿಷ್ ಸಂಸದರು ಪತ್ರಕ್ಕೆ ಸಹಿ ಹಾಕಿದ್ದಾರೆ.
ಈ ಪತ್ರವನ್ನು ಬೆಂಬಲಿಸುವ ಪ್ರಮುಖ ಸಾಂಸ್ಕೃತಿಕ ವ್ಯಕ್ತಿಗಳಲ್ಲಿ ಡ್ಯಾನಿ ಬೊಯೆಲ್ (ಸ್ಲಮ್ಡಾಗ್ ಮಿಲೆನಿಯರ್ ನಿರ್ದೇಶಕ), ಚಲನಚಿತ್ರ ನಿರ್ಮಾಪಕ ಕೆನ್ ಲೋಚ್, ನಟಿ ಮ್ಯಾಕ್ಸಿನ್ ಪೀಕ್, ಸಂಗೀತಗಾರ ಲೋಕಿ, ಕಾದಂಬರಿಕಾರ ಹರಿ ಕುಂಜ್ರು, ನಿರ್ಮಾಪಕ ಟೋಬಿ ಕೈರೆಮಾಟೆಂಗ್, ಪರಿಸರವಾದಿ ಜಾರ್ಜ್ ಮೊನ್ಬಿಯೊಟ್ ಮತ್ತು ಬರಹಗಾರ ಪಾಲ್ ಗಿಲ್ರಾಯ್ ಪ್ರಮುಖರಾಗಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಸಂತ್ರಸ್ತ ಕುಟುಂಬ ಕೇಳುತ್ತಿರುವುದೇನು?: 5 ಪ್ರಶ್ನೆಗಳನ್ನು ಮುಂದಿಟ್ಟ ಪ್ರಿಯಾಂಕ ಗಾಂಧಿ
ಪತ್ರದಲ್ಲಿ ’ಮೋದಿ ಆಡಳಿತವು ಮಾನವ ಹಕ್ಕುಗಳ ಕಾರ್ಯಕರ್ತರ ಮೇಲೆ ನಡೆಸುತ್ತಿರುವ ಆಕ್ರಮಣ ಮತ್ತು ಪ್ರಜಾಪ್ರಭುತ್ವ ಭಿನ್ನಾಭಿಪ್ರಾಯದ ವಿರುದ್ಧದ ಜಾಗತಿಕ ಆಕ್ರೋಶಕ್ಕೆ ನಾವು ನಮ್ಮ ಧ್ವನಿಯನ್ನು ಸೇರಿಸುತ್ತೇವೆ’ ಎನ್ನಲಾಗಿದೆ.
’ಮೋದಿ ಆಡಳಿತವು ವಿದ್ಯಾರ್ಥಿ ಪ್ರತಿಭಟನಾಕಾರರು, ಸ್ತ್ರೀಸಮಾನತಾವಾದಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಸಮಾಜದ ಪ್ರಮುಖ ವ್ಯಕ್ತಿಗಳನ್ನು ಬಂಧಿಸಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ನಂತಹ ಆರೋಪಗಳಲ್ಲಿ ತುರ್ತು ಕಾನೂನುಗಳ ಆಧಾರದ ಮೇಲೆ ಅನೇಕರನ್ನು ಬಂಧಿಸಿದೆ.
ಕೆಲವು ಸಂದರ್ಭಗಳಲ್ಲಿ, ಶಾಂತಿಯುತ ಮತ್ತು ಸಾಂವಿಧಾನಿಕವಾಗಿ ನಡೆಯುತ್ತಿದ್ದ ಪ್ರತಿಭಟನೆಗಳಿಗೂ, ಗಲಭೆಯ ಅಸಂಬದ್ಧ ಆರೋಪಗಳನ್ನು ಹೊರಿಸಲಾಗಿದೆ ಎಂದು ಬರೆಯಲಾಗಿದೆ.
ಭಿನ್ನಾಭಿಪ್ರಾಯದ ಈ ಅಪರಾಧೀಕರಣವು ಇತ್ತೀಚಿನ ತಿಂಗಳುಗಳಲ್ಲಿಆತಂಕಗೊಳಿಸುವ ರೀತಿಯಲ್ಲಿ ತೀವ್ರಗೊಂಡಿದೆ. ಕೊರೊನಾ ಲಾಕ್ಡೌನ್ ಸಮಯದಲ್ಲಿ ಹಲವು ಮಂದಿಯನ್ನು ಬಂಧಿಸಲಾಯಿತು. ಬಿಜೆಪಿ ನೇತೃತ್ವದ ಸರ್ಕಾರವು ವಲಸೆ ಕಾರ್ಮಿಕರರನ್ನು ಕಷ್ಟಕ್ಕೆ ದೂಡಿದ್ದು ಮಾತ್ರವಲ್ಲದೇ, ಭಾರತದ ಅನಾರೋಗ್ಯಕರ ಜೈಲುಗಳಿಗೆ ಕಾರ್ಯಕರ್ತರನ್ನು ದೂಡ್ಡಿದೆ. ಜೈಲಿನಲ್ಲಿದ್ದ ಹಲವಾರು ಕಾರ್ಯಕರ್ತರಿಗೆ ಈ ವೈರಸ್ ಸೋಂಕು ತಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ದೆಹಲಿ ಗಲಭೆ: ನ್ಯಾಯಯುತ ತನಿಖೆಗೆ ಒತ್ತಾಯ; ಮಾಜಿ IPS ಅಧಿಕಾರಿಗಳ ಪತ್ರ!
ಬಿಜೆಪಿ ನಾಯಕರು ಸರ್ಕಾರವನ್ನು ಪ್ರಶ್ನಿಸುವವರ ಮೇಲೆ ದ್ವೇಷ ಭಾಷಣಗಳನ್ನು ಮಾಡಿದ್ದಾರೆ. ದೆಹಲಿಯಲ್ಲಿ ನಡೆದ ಪ್ರಚೋದಿತ ಭೀಕರ ಗಲಭೆಗಳಲ್ಲಿ ಮುಸ್ಲಿಮರ ವಿರುದ್ಧ ಪೊಲೀಸ್ ಪಡೆಗಳು ಸಹಕರಿಸಿದವು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದಿದ್ದಾರೆ.
ಮೋದಿ ಆಡಳಿತವು ತನ್ನ ಸರ್ವಾಧಿಕಾರಿ ಮತ್ತು ಬಹುಸಂಖ್ಯಾತ ಅಜೆಂಡಾ ಅನುಸರಿಸುವಲ್ಲಿ ಭಾರತದ ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತಿದೆ. ಈ ಕೆಟ್ಟ ಆಡಳಿತವನ್ನು ವಿರೋಧಿಸುತ್ತಿರುವ ಭಾರತದ ಧೈರ್ಯಶಾಲಿ ಕಾರ್ಯಕರ್ತರೊಂದಿಗೆ ನಾವು ನಿಲ್ಲುತ್ತೇವೆ ಮತ್ತು ಎಲ್ಲಾ ರಾಜಕೀಯ ಕೈದಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಕರೆ ನೀಡುತ್ತೇವೆ ಎಂಬ ಪತ್ರಕ್ಕೆ 200ಕ್ಕೂ ಅಧಿಕ ಮಂದಿ ಸಹಿ ಮಾಡಿದ್ದಾರೆ.
ವಿಶೇಷವೆಂದರೆ, ಹಲವಾರು ಬ್ರಿಟಿಷ್-ಭಾರತೀಯ ಸಾಂಸ್ಕೃತಿಕ ವ್ಯಕ್ತಿಗಳು ಕೂಡ ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಪತ್ರಕರ್ತರಾದ ಆಶ್ ಸರ್ಕಾರ್, ಏಂಜೆಲಾ ಸೈನಿ, ಬರಹಗಾರರಾದ ನಿಕೇಶ್ ಶುಕ್ಲಾ, ಪ್ರೀತಿ ತನೇಜಾ, ಸಂದೀಪ್ ಪಾರ್ಮಾರ್, ಜೆಮ್ಮಾ ದೇಸಾಯಿ, ಸಂಗೀತಗಾರರಾದ ಆಡಮ್ ಬೈನ್ಬ್ರಿಡ್ಜ್, ಕಪಿಲ್ ಶೇಷಾಸಾಯೀ, ಶಾರತಿ ಕೊರ್ವಾರ್ ಮತ್ತು ರಂಗಭೂಮಿ ಕಲಾವಿದರಾದ ತನಿಕಾ ಗುಪ್ತಾ, ವಿನಯ್ ಪಟೇಲ್, ಅಂಜ್ಲಿ ಮೊಹಿಂದ್ರಾ, ರಾಖೀ ಠಕ್ರಾರ್, ಮಿಲ್ಲಿ ಭಾಟಿಯಾ ಮುಕ್ತ ಪತ್ರಕ್ಕೆ ಸಹಿ ಹಾಕಿದ್ದಾರೆ.