ನಟ ಸುಶಾಂತ್ ಸಿಂಗ್ ರಜಪೂತ್ರವರನ್ನು ಕೊಲೆ ಮಾಡಿಲ್ಲ ಮತ್ತು ಅದು ಆತ್ಮಹತ್ಯೆ ಪ್ರಕರಣ ಎಂದು ಏಮ್ಸ್ ವೈದ್ಯರು ಸಿಬಿಐಗೆ ವರದಿ ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ. ಅಲ್ಲದೇ ಸುಶಾಂತ್ಗೆ ವಿಷವುಣಿಸಿ, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಎಲ್ಲಾ ಉಹಾಪೋಹಗಳನ್ನು ಅದು ತಳ್ಳಿಹಾಕಿದೆ.
ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತನ್ನ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಶವಪರೀಕ್ಷೆಯ ಆಧಾರದ ಮೇಲೆ ಮುಂಬೈ ಪೊಲೀಸರು ಅದನ್ನು ಆತ್ಮಹತ್ಯೆ ಎಂದು ಕರೆದಿದ್ದರು. ಆದರೆ ಸುಶಾಂತ್ ಕುಟುಂಬ ಸೇರಿದಂತೆ ಹಲವರು ಇದನ್ನು ಕೊಲೆ ಎಂದು ಕರೆದು ನ್ಯಾಯಕ್ಕಾಗಿ ಪ್ರಚಾರಾಂದೋಲನ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.
ಈ ಕುರಿತು ಏಮ್ಸ್ ವೈದ್ಯರ ತಂಡ ತನ್ನ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದು, ವೈದ್ಯಕೀಯ ಕಾನೂನು ಅಭಿಪ್ರಾಯಗಳನ್ನು ವರದಿಯಲ್ಲಿ ದಾಖಲಿಸಿದೆ. ಸಿಬಿಐಗೆ ವರದಿ ನೀಡಿದ ವರದಿಯಲ್ಲಿ ಮುಂಬೈ ಆಸ್ಪತ್ರೆ ನೀಡಿದ್ದ ಸುಶಾಂತ್ ಮರಣೋತ್ತರ ವರದಿಯನ್ನು ಅದು ಎತ್ತಿಹಿಡಿದಿದ್ದು, ನೇಣು ಬಿಗಿದ ಕಾರಣ ಉಸಿರುಕಟ್ಟುವಿಕೆಯಿಂದ ಮರಣವುಂಟಾಗಿದೆ ಎಂದು ತಿಳಿಸಿದೆ.
ಅಲ್ಲದೇ ಅಂದಿನ ಸಾಂಧರ್ಬಿಕ ಸಾಕ್ಷಿಗಳು ಸಹ ಇದು ಕೊಲೆಯಲ್ಲ ಆತ್ಮಹತ್ಯೆ ಎಂದು ನಿರೂಪಿಸಿದ್ದವು. ಆದರೆ ಸಿಬಿಐ ಆತ್ಮಹತ್ಯೆಗೆ ಪ್ರಚೋದನೆ ಆಧಾರದಲ್ಲಿ ತನಿಖೆ ಮುಂದುವರಿಸಲು ನಿರ್ಧರಿಸಿದೆ ಎಂದು ಬಿಹಾರ ಪೊಲೀಸ್ ಮೂಲಗಳು ತಿಳಿಸಿವೆ.
ಸಿಬಿಐ 57 ದಿನಗಳಲ್ಲಿ 20 ಜನರನ್ನು ಪ್ರಶ್ನಿಸಿದ್ದಾರೆ. ತಾನು ವಶಪಡಿಸಿಕೊಂಡ ಲ್ಯಾಪ್ಟಾಪ್ಗಳು, ಹಾರ್ಡ್ಡ್ರೈವ್ಗಳು, ಕ್ಯಾಮರಗಳು ಮತ್ತು ಮೊಬೈಲ್ಗಳನ್ನು ವಿಧಿವಿಜ್ಞಾನವಾಗಿ ಪರಿಶೀಲಿಸಲಾಗಿದೆ. ಈ ತನಿಖೆಯಲ್ಲಿ ಕೊಲೆ ಎನ್ನಲು ಆಧಾರವಾದ ಯಾವ ಸಾಕ್ಷ್ಯಗಳು ಸಿಕ್ಕಿಲ್ಲ. ಈಗಲೂ ಮುಕ್ತವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸುಶಾಂತ್ ಸಿಂಗ್ ಕುಟುಂಬವು “ಆತನ ಗೆಳತಿ ರಿಯಾ ಚಕ್ರವರ್ತಿ ಮಾನಸಿಕವಾಗಿ ಕಿರುಕುಳ ನೀಡಿದ್ದಾಳೆ, ಹಲವು ಔಷಧಿ ನೀಡಿದ್ದಾಳೆ, ಹಣಕ್ಕಾಗಿ ಪೀಡಿಸಿದ್ದಾಳೆ ಎಂದು ಆರೋಪಿಸಿ ಸಮರ್ಪಕ ತನಿಖೆಗೆ ಒತ್ತಾಯಿಸಿದ್ದರು. ತದನಂತರವಷ್ಟೇ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.
ಮೂಲ: ಎನ್ಡಿಟಿವಿ
ಇದನ್ನೂ ಓದಿ; ಸುಶಾಂತ್ ಸಿಂಗ್ ಪ್ರಕರಣ: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ನೋಟಿಸ್