ಹತ್ರಾಸ್ ದಲಿತ ಬಾಲಕಿ ಅತ್ಯಾಚಾರ – ಕೊಲೆ, ಕುಟುಂಬಕ್ಕೆ ಶವ ಕೊಡದೇ ಪೊಲೀಸರೆ ಸುಟ್ಟು ಹಾಕಿದ ಪ್ರಕರಣದ ಖಂಡಿಸಿ ಶಿವಮೊಗ್ಗದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೃಹತ್ ಪ್ರತಿಭಟನೆ ನಡೆಯಿತು.
ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕುಸಿದುಬಿದ್ದಿದೆ. ಹೆಣ್ಣು ಮಕ್ಕಳಿಗೆ, ದಲಿತರಿಗೆ ರಕ್ಷಣೆಯಿಲ್ಲ. ಹಾಗಾಗಿ ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ವಜಾಗೊಳಿಸಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.
ದಸಂಸ ಜಿಲ್ಲಾ ಪ್ರಧಾನ ಸಂಚಾಲಕರಾದ ಟಿ.ಎಚ್ ಹಾಲೇಶಪ್ಪನವರು ಮಾತನಾಡಿ “ದಲಿತ ಬಾಲಕಿಯನ್ನು ಬರ್ಬರವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಶವವನ್ನು ನೀಡದೇ ಸುಟ್ಟುಹಾಕಲಾಗಿದೆ. ಈಗ ನೋಡಿದರೆ ಅತ್ಯಾಚಾರವೇ ನಡೆದಿಲ್ಲ ಎಂದು ಪ್ರಕರಣವನ್ನು ಮುಚ್ಚಿಹಾಕಲು ಮುಂದಾಗಿದ್ದಾರೆ. ಇನ್ನೊಂದೆಡೆ ಇಡೀ ಸರ್ಕಾರವೇ ಮೇಲ್ಜಾತಿ ಆರೋಪಿಗಳ ಪರನಿಂತಿದ್ದು ಪೊಲೀಸರನ್ನು ಬಳಸಿಕೊಂಡು ಸಂತ್ರಸ್ತ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದಾರೆ” ಎಂದರು.
ಇದನ್ನೂ ಓದಿ: ಮೋದಿಯವರ ಮೌನ – ನಮ್ಮ ಹೆಣ್ಣುಮಕ್ಕಳಿಗೆ ಅಪಾಯ: ಚಂದ್ರಶೇಖರ್ ಆಜಾದ್
2018 ರಲ್ಲಿ 144 ಅಪ್ರಾಪ್ತ ವಯಸ್ಸಿನ (18 ವರ್ಷದೊಳಗಿನ) ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ಎನ್ಸಿಆರ್ಬಿ ದತ್ತಾಂಶಗಳು ಹೇಳುತ್ತಿವೆ. ಈಗಲೂ ಉತ್ತರ ಪ್ರದೇಶದಲ್ಲಿ ಪ್ರತಿ ಎರಡು ಗಂಟೆಗೊಮ್ಮೆ ಅತ್ಯಾಚಾರದ ಘಟನೆಗಳು ದಾಖಲಾಗುತ್ತಿವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಲಿತರು ಹಿಂದುಳಿದವರು ಒಂದಲ್ಲ ಒಂದು ಸಂಕಷ್ಟ ಅನುಭವಿಸುತ್ತಿದ್ದಾರೆ. ಬಿಜೆಪಿ ಆಳ್ವಿಕೆಯಿರುವ ರಾಜ್ಯಗಳಲ್ಲಿ ಅದರಲ್ಲಿಯೂ ಯುಪಿಯಲ್ಲಿ ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ಹಲ್ಲೆಗಳು ಅಧಿಕವಾಗಿವೆ ಇದನ್ನುಇದನ್ನು ದಸಂಸ ಖಂಡಿಸುತ್ತದೆ ಎಂದು ತಿಳಿಸಿದರು.
ಪ್ರತಿಭಟನೆಯ ವಿಡಿಯೋ ನೋಡಿ
ಯುಪಿ ಆದಿತ್ಯನಾಥ್ ಸರ್ಕಾರವನ್ನು ವಜಾಗೊಳಿಸಿ; ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ
ಯುಪಿ ಆದಿತ್ಯನಾಥ್ ಸರ್ಕಾರವನ್ನು ವಜಾಗೊಳಿಸಿ; ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ
Posted by Naanu Gauri on Saturday, October 3, 2020
ಕರ್ನಾಟಕ ಜನಶಕ್ತಿಯ ಮುಖಂಡರಾದ ಕೆ.ಎಲ್ ಅಶೋಕ್ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಯುಪಿ ಸಂತ್ರಸ್ತ ಕುಟುಂಬಕ್ಕೆ ರಕ್ಷಣೆ ನೀಡಬೇಕು ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಅಪರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.
ಇದನ್ನೂ ಓದಿ: ಪೊಲೀಸರು ನಮಗೆ ಬೆದರಿಕೆ ಒಡ್ಡುತ್ತಿದ್ದಾರೆ: ಹತ್ರಾಸ್ ಪ್ರಕರಣ ಸಂತ್ರಸ್ತೆಯ ಸಹೋದರ ಆರೋಪ