ದೇಶದಲ್ಲಿ ಹೆಚ್ಚುತ್ತಿರುವ ಸಾಮೂಹಿಕ ಹಲ್ಲೆ ಹಾಗೂ ಅಮಾನವೀಯ ಘಟನೆಗಳನ್ನು ಖಂಡಿಸಿ, ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದಿದ್ದ ೫೦ ಗಣ್ಯರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಸಾಮೂಹಿಕ ಹಲ್ಲೆ ಹಾಗೂ ಗೋ ರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಜುಲೈನಲ್ಲಿ ಪ್ರಧಾನಿಗೆ ಪತ್ರ ಬರೆದು ಪ್ರತಿಭಟನೆ ವ್ಯಕ್ತಪಡಿಸಿದ್ದ ಇತಿಹಾಸ ತಜ್ಞ ಲೇಖಕ ರಾಮಚಂದ್ರ ಗುಹಾ, ಖ್ಯಾತ ನಿರ್ದೇಶಕ ಮಣಿರತ್ನಂ, ಅನುರಾಗ್ ಕಶ್ಯಪ್, ಅಪರ್ಣಾ ಸೇನ್ ಸೇರಿದಂತೆ 50ಕ್ಕೂ ಹೆಚ್ಚು ಸಾಹಿತಿಗಳು, ಚಿತ್ರ ನಟ, ನಟಿಯರು, ಪತ್ರಕರ್ತರ ವಿರುದ್ಧ ದೇಶದ್ರೋಹ, ಸಾರ್ವಜನಿಕರಿಗೆ ತೊಂದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ದೂರು ದಾಖಲಿಸಲಾಗಿದೆ.
ಪ್ರಕರಣ ದಾಖಲಾಗಿರುವುದು ಪ್ರಜ್ಞಾವಂತ ಸಮಾಜದ ನಾಗರಿಕರನ್ನು ದಿಗಿಲುಗೊಳಿಸಿದೆ. ಕೇವಲ ಪತ್ರ ಬರೆದುದ್ದಕ್ಕೆ ದೂರು ದಾಖಲಾದರೆ ಏನು ಗತಿ ಎಂದು ಚಿಂತಿತರಾಗಿದ್ದಾರೆ.
“ದೇಶದಾದ್ಯಂತ ಎಲ್ಲೆಡೆ ಮುಸ್ಲಿಂರು, ದಲಿತರು ಹಾಗೂ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಹಲ್ಲೆ ಪ್ರಕರಣವನ್ನು ಸರ್ಕಾರ ತಕ್ಷಣ ತಡೆಯಬೇಕು. ಭಿನ್ನಾಭಿಪ್ರಾಯವಿಲ್ಲದೆ ಪ್ರಜಾಪ್ರಭುತ್ವ ಇಲ್ಲ. ಜೈ ಶ್ರೀರಾಮ್ ಘೋಷಣೆ ಪ್ರಚೋದನಾಕಾರಿ ಯುದ್ಧದ ಕೂಗಿನಂತೆ ಕೇಳಿಸುತ್ತಿದೆ” ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಮೋದಿಗೆ ಪತ್ರ ಬರೆದಾಗ ಬಿಹಾರ ಮೂಲದ ವಕೀಲ ಸುಧೀರ್ ಕುಮಾರ್ ಓಝಾ, ಸ್ಥಳೀಯ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕಳೆದ ಆಗಸ್ಟ್ 20 ರಂದು ವಿಚಾರಣೆ ನಡೆಸಿದ್ದ ಸ್ಥಳೀಯ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಸೂರ್ಯಕಾಂತ್ ತಿವಾರಿ, ಪತ್ರ ಬರೆದಿದ್ದ ಎಲ್ಲಾ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದ್ದರು. ಇದರನ್ವಯ ಬಿಹಾರ ಪೊಲೀಸರು ಪ್ರಕರಣದಲ್ಲಿ 50 ಕ್ಕೂ ಹೆಚ್ಚು ವಿಚಾರವಾದಿಗಳು, ಸೆಲೆಬ್ರಟಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇನ್ನು ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೋಮು ಗಲಭೆ, ಸಾಮೂಹಿಕ ಹಲ್ಲೆ, ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ, ಸರ್ವಾಧಿಕಾರಿ ಧೋರಣೆ, ಪ್ರಗತಿಪರರು, ಚಿಂತಕರನ್ನು ಹತ್ತಿಕ್ಕುವ ಕೆಲಸಗಳಾಗುತ್ತಿವೆ ಎಂಬ ಆರೋಪವಿದೆ. ಉತ್ತರಪ್ರದೇಶದಲ್ಲಿ ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರ ದುಪ್ಪಟ್ಟಾಗಿದೆ. ನೈತಿಕ ಪೊಲೀಸ್ ಗಿರಿಯಿಂದ ಜನತೆ ಬೇಸತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ..
ವಾಹ್, ಪತ್ರವನ್ನೂ ಮರೆಯುವಂತಿಲ್ಲ! ಬಹುಷಃ ಹಿಟ್ಲರನ ಜರ್ಮನಿಯಲ್ಲಿ ಇದಕ್ಕಿಂತಲೂ ಹೆಚ್ಚು ಸ್ವಾತಂತ್ರ್ಯ ಇದ್ದಿರಬಹುದು.