ರಸ್ತೆ ವಿಚಾರಕ್ಕೆ ಇಂಜಿನಿಯರ್ ಮೇಲೆ ‘ಮಣ್ಣಿನ ದಾಳಿ’ ನಡೆಸಿದ್ದ ನಿತೇಶ್ ರಾಣೆ ಈಗ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. 37 ವರ್ಷದ ನಿತೇಶ್ ರಾಣೆ ಅವರು 2014 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದ ತಮ್ಮ ಕಂಕವ್ಲಿ ಸ್ಥಾನದಿಂದಲೇ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ ಅವರ ಪುತ್ರನಾಗಿರುವ ನಿತೇಶ್ ರಾಣೆ, ಇದುವರೆಗೂ ಕಾಂಗ್ರೆಸ್ನಲ್ಲಿದ್ದ ಅವರು ವಾರಗಳ ಹಿಂದೆಯಷ್ಟೇ ಬಿಜೆಪಿಗೆ ಸೇರಿದ್ದರು. ಕಳೆದ ಚುನಾವಣೆಯಲ್ಲಿ ಅವರು ಬಿಜೆಪಿಯ ಪ್ರಮೋದ್ ಜಥರ್ ಅವರನ್ನು ಸೋಲಿಸಿದ್ದರು.
ಅವರ ತಂದೆ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ ಕಾಂಗ್ರೆಸ್ ತೊರೆದ ನಂತರ 2017 ರಲ್ಲಿ ಮಹಾರಾಷ್ಟ್ರ ಸ್ವಾಭಿಮಾನ್ ಪಕ್ಷವನ್ನು ಸ್ಥಾಪಿಸಿದ್ದರು. ಆನಂತರ ಅದನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಬಗ್ಗೆ ಮಾತನಾಡಿ, ಬಿಜೆಪಿ ಬೆಂಬಲದೊಂದಿಗೆ ಅವರು ಈಗ ರಾಜ್ಯಸಭಾ ಸದಸ್ಯರಾಗಿದ್ದಾರೆ.
ಅವರ ತಂದೆ ಆರಂಭದಲ್ಲಿ ಶಿವಸೇನೆಯಲ್ಲಿದ್ದರು. ನಂತರ ಕಾಂಗ್ರೆಸ್, ಆನಂತರ ಸ್ವತಂತ್ರ ಪಕ್ಷ ಕಟ್ಟಿ ಈಗ ಬಿಜೆಪಿ ಸೇರಿದ್ದಾರೆ. ತಂದೆಯ ಹಾದಿಯಲ್ಲಿದೇ ಮಗ ಕೂಡ ಹಲವು ಪಕ್ಷಗಳನ್ನು ಬದಲಿಸುತ್ತಿರುವುದರಲ್ಲಿ ಆಶ್ಚರ್ಯವಿಲ್ಲ ಎನ್ನುವಂತಾಗಿದೆ. ಕೊಂಕಣ ಪ್ರದೇಶದಲ್ಲಿ ಪಕ್ಷವನ್ನು ಬಲಪಡಿಸುವ ಪ್ರಯತ್ನದಲ್ಲಿ ತನ್ನ ಮಿತ್ರ ಪಕ್ಷ ಶಿವಸೇನೆಯ ಆಶಯಕ್ಕೆ ವಿರುದ್ಧವಾಗಿ ನಿತೇಶ್ ರಾಣೆ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.
ಈ ವರ್ಷದ ಜುಲೈನಲ್ಲಿ, ಮುಂಬೈ – ಗೋವಾ ಬಳಿಯ ಕನಕವಲ್ಲಿ ಎಂಬಲ್ಲಿ ರಸ್ತೆ ಮತ್ತು ಸೇತುವೆ ಕಾಮಗರಿ ನಡೆಯುತ್ತಿತ್ತು. ಪರಿಶೀಲನೆಗೆಂದು ಬಂದ ಶಾಸಕ ನಿತೀಶ್ ರಾಣೆ ಕೆಲಸ ಪೂರ್ಣಗೊಂಡಿಲ್ಲದಿರುವುದರಿಂದ ಜನರಿಗೆ ತೊಂದರೆಯಾಗುತ್ತದೆ ಎಂದು ಸಿಡಿಮಿಡಿಗೊಂಡಿದ್ದರು. ಆ ಸಂದರ್ಭದಲ್ಲಿ ಕೋಪದಿಂದ ಉಪ ಇಂಜಿನಿಯರ್ ಪ್ರಕಾಶ್ ಶೆಡ್ಕರ್ ಮೇಲೆ ಕಾಮಗಾರಿ ವಿಳಂಬ ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡ ಶಾಸಕ ಅಲ್ಲಿ ತಮ್ಮ ಬೆಂಬಲಿಗರು ತುಂಬಿಟ್ಟಿದ್ದ ಕೊಳಚೆ ನೀರನ್ನು ಸುರಿದಿದ್ದಾರೆ. ನಂತರ ಅವರ ಬೆಂಬಲಿಗರು ಇಂಜಿನಿಯರ್ ಅನ್ನು ಕಂಬಕ್ಕೆ ಕಟ್ಟಿದ್ದರು ಎಂಬ ಆರೋಪವಿದೆ.
ಇದನ್ನೂ ಒದಿ: ಇಂಜಿನಿಯರ್ ಮೇಲೆ ಕೊಳಚೆ ನೀರು ಸುರಿದಿದ್ದ ಕಾಂಗ್ರೆಸ್ ಶಾಸಕನ ಬಂಧನ
ಇದಕ್ಕಾಗಿ ಅವರನ್ನು ಬಂಧಿಸಲಾಗಿತ್ತು ಮತ್ತು ಘಟನೆ ಕುರಿತು 50ಕ್ಕೂ ಹೆಚ್ಚು ಜನರ ಮೇಲೆ ಎಫ್ಐಆರ್ ದಾಖಲಾಗಿತ್ತು. ಈ ಹಿಂದೆಯೂ ಸಹ 2017ರಲ್ಲಿ ಸಭೆಯೊಂದರಲ್ಲಿ ಸ್ಥಿಮಿತತೆ ಕಳೆದುಕೊಂಡು ಹಿರಿಯ ಅಧಿಕಾರಿಯ ಮೆಲೆ ಮೀನು ಎಸೆದಿದ್ದರು.