ಮುಂಬೈನ ಆರೇ ಪ್ರದೇಶದಲ್ಲಿನ ಮರಗಳ ಮಾರಣಹೋಮ ತಡೆದು, ಅರಣ್ಯ ಪ್ರದೇಶ ಎಂದು ಗುರುತಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. ಆರೇ ಪ್ರದೇಶ ಅರಣ್ಯ ಪ್ರದೇಶವಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಮೆಟ್ರೋ ಕಾರ್ ಶೆಡ್ ದಾರಿ ನಿರ್ಮಾಣ ಹಿನ್ನೆಲೆ ಆರೇ ಪ್ರದೇಶದ ಮರಗಳ ಮಾರಣಹೋಮ ತಡೆಯಲು ಎರಡು ವರ್ಷಗಳಿಂದ ಪರಿಸರ ಪ್ರೇಮಿಗಳು ಹೋರಾಟ ನಡೆಸುತ್ತಿದ್ದಾರೆ.
ಮುಂಬೈ ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟಡ್, ಆರೇ ಪ್ರದೇಶದಲ್ಲಿರುವ 2,646 ಮರಗಳನ್ನು ಕಡಿಯಲು ಅನುಮತಿ ನೀಡುವ ನಿರ್ಧಾರ ಪ್ರಶ್ನಿಸಿ ಪರಿಸರವಾದಿ ಜೋರು ಬಥೆನಾ, ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇಂದು ಬಾಂಬೆ ಹೈಕೋರ್ಟ್ ಜೋರು ಅವರ ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ತಾವು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದಾಗಿ ಜೋರು ಹೇಳಿದ್ದಾರೆ.
ಮುಂಬೈ ಮೆಟ್ರೋಗೆ ಕಾರ್ ಶೆಡ್ ನಿರ್ಮಿಸುವ ನಾಗರಿಕ ಸಂಸ್ಥೆಯ ಟ್ರೀ ಅಥಾರಿಟಿಯ ನಿರ್ಧಾರವನ್ನು ಎರಡು ವರ್ಷಗಳಿಂದ ಖಂಡಿಸುತ್ತಲೇ ಬಂದಿರುವ ಪರಿಸರವಾದಿಗಳು ಅದಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂಬೈನ ಆರೇ ಪ್ರದೇಶ ಸುಮಾರು ಲಕ್ಷಕ್ಕೂ ಹೆಚ್ಚು ಮರಗಳನ್ನು ಹೊಂದಿದೆ. ಮಹಾನಗರದ ಹಸಿರು ಶ್ವಾಸಕೋಶವೆಂದೇ ಆರೇ ಪ್ರದೇಶವನ್ನು ಕರೆಯುತ್ತಾರೆ.