ಚುನಾವಣಾ ಬಾಂಡ್ಗಳ ಎರಡನೇ ಅತಿ ದೊಡ್ಡ ಖರೀದಿದಾರರಾಗಿದ್ದ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ಸಿಬಿಐ ಲಂಚ ಪ್ರಕರಣದಡಿಯಲ್ಲಿ ಎಫ್ಐಆರ್ ದಾಖಲಿಸಿದೆ.
966 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳ ಎರಡನೇ ಅತಿ ದೊಡ್ಡ ಖರೀದಿದಾರನಾಗಿದ್ದ ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ವಿರುದ್ಧ ಜಗದಾಲ್ಪುರ ಅಂತರ್ಗತ ಉಕ್ಕು ತಯಾರಿಕಾ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ 174 ಕೋಟಿ ಬಿಲ್ ಮಂಜೂರು ಮಾಡಲು 78 ಲಕ್ಷ ಲಂಚ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಭಾಗಿಯಾದ ಎನ್ಐಎಸ್ಪಿ ಹಾಗೂ ಎನ್ಎಂಡಿಸಿ ಹಾಗೂ ಎಂಇಕಾನ್ ಅಧಿಕಾರಿಗಳ ಹೆಸರನ್ನೂ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 21 ರಂದು ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಮೇಘಾ ಇಂಜಿನಿಯರಿಂಗ್ ಚುನಾವಣಾ ಬಾಂಡ್ಗಳ ಎರಡನೇ ಅತಿ ದೊಡ್ಡ ಖರೀದಿದಾರರಾಗಿದ್ದಾರೆ ಮತ್ತು ಬಿಜೆಪಿಗೆ 586 ಕೋಟಿ ರೂ. ದೇಣಿಗೆಯನ್ನು ಈ ಕಂಪೆನಿ ನೀಡಿತ್ತು. ಇದಲ್ಲದೆ ಕಂಪೆನಿಯು ಬಿಆರ್ಎಸ್ಗೆ ರೂ 195 ಕೋಟಿ, ಡಿಎಂಕೆಗೆ 85 ಕೋಟಿ ರೂ. ಮತ್ತು ವೈಎಸ್ಆರ್ಸಿಪಿಗೆ 37 ಕೋಟಿ ರೂ. ದೇಣಿಗೆ ನೀಡಿದೆ. ಟಿಡಿಪಿ ಕಂಪನಿಯಿಂದ ಸುಮಾರು 25 ಕೋಟಿ ರೂ., ಕಾಂಗ್ರೆಸ್ 17 ಕೋಟಿ ರೂ. ದೇಣಿಗೆಯನ್ನು ಪಡೆದಿದೆ.
ಶನಿವಾರ ದಾಖಲಾದ ಎಫ್ಐಆರ್ನ ಪ್ರಕಾರ, ಇಂಟೆಕ್ವೆಲ್ ಮತ್ತು ಪಂಪ್ಹೌಸ್ ಮತ್ತು ಕ್ರಾಸ್ ಕಂಟ್ರಿ ಪೈಪ್ಲೈನ್ ಕಾಮಗಾರಿಗೆ ಸಂಬಂಧಿಸಿದ 315 ಕೋಟಿ ರೂ.ಗಳ ಯೋಜನೆಯಲ್ಲಿ ಲಂಚದ ಆರೋಪದ ಬಗ್ಗೆ ಸಿಬಿಐ 2023 ಆಗಸ್ಟ್ 10ರಂದು ಪ್ರಾಥಮಿಕ ತನಿಖೆ ನಡೆಸಿತ್ತು. ಈ ಕುರಿತ ವರದಿ ಆಧರಿಸಿ ಮಾರ್ಚ್ 18ರಂದು ಪ್ರಕರಣ ದಾಖಲಿಸಲು ನಿರ್ಧರಿಸಲಾಯಿತು. ಅದರಂತೆ ಮಾರ್ಚ್ 31ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
ಸಿಬಿಐ ಎಫ್ಐಆರ್ ಎನ್ಐಎಸ್ಪಿ ಮತ್ತು ಎನ್ಎಂಡಿಸಿ ಲಿಮಿಟೆಡ್ನ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಪ್ರಶಾಂತ್ ದಾಶ್, ನಿರ್ದೇಶಕ (ಉತ್ಪಾದನೆ) ಡಿಕೆ ಮೊಹಾಂತಿ, ಡಿಜಿಎಂ ಪಿಕೆ ಭುಯಾನ್, ಡಿಎಂ ನರೇಶ್ ಬಾಬು, ಹಿರಿಯ ವ್ಯವಸ್ಥಾಪಕ ಸುಬ್ರೊ ಬ್ಯಾನರ್ಜಿ, ನಿವೃತ್ತ ಸಿಜಿಎಂ (ಹಣಕಾಸು) ಎಲ್ ಕೃಷ್ಣ ಮೋಹನ್, ಕೆ ರಾಜಶೇಖರ್, ಸೋಮನಾಥ್ ಘೋಷ್ ಸೇರಿದಂತೆ ಎಂಟು ಅಧಿಕಾರಿಗಳನ್ನು ಹೆಸರಿಸಿದೆ.
ಏಜೆನ್ಸಿಯು MECON ಲಿಮಿಟೆಡ್ನ ಇಬ್ಬರು ಅಧಿಕಾರಿಗಳನ್ನು ಹೆಸರಿಸಿದೆ. ಎಂಇಕಾನ್ ಕಂಪನಿಯ ಸಹಾಯಕ ಮುಖ್ಯ ವ್ಯವಸ್ಥಾಪಕ ಸಂಜೀವ್ ಸಹಾಯ್ ಹಾಗೂ ಡಿಜಿಎಂ ಇಲ್ಲವರಸು ಇವರು 73 ಇನ್ವಾಯ್ಸ್ಗಳಿರುವ 174.41 ಕೋಟಿ ಮೊತ್ತವನ್ನು ಬಿಡುಗಡೆ ಮಾಡಲು ಮೇಘಾ ಎಂಜಿನಿಯರಿಂಗ್ ಕಂಪನಿಯ ಮುಖ್ಯ ವ್ಯವಸ್ಥಾಪಕ ಸುಭಾಶ್ ಚಂದ್ರ ಸಂಗ್ರಾಸ್ ಅವರಿಂದ 5.01 ಲಕ್ಷ ಲಂಚ ಸ್ವೀಕರಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಇದನ್ನು ಓದಿ: ಇರಾನ್ನಿಂದ ವೈಮಾನಿಕ ದಾಳಿ: ಶಿಕ್ಷಣ ಸಂಸ್ಥೆಗಳಿಗೆ ಅನಿರ್ದಿಷ್ಠಾವಧಿ ಬಂದ್ ಆದೇಶ ಹೊರಡಿಸಿದ ಇಸ್ರೇಲ್