ತೆಲಂಗಾಣದ ಹೈದರಾಬಾದ್ನಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ( ಸಿಬ್ಲ್ಯೂಸಿ) ಸಭೆಯಲ್ಲಿ ಪ್ರಮುಖ ನಿರ್ಣಯವನ್ನು ತೆಗೆದುಕೊಂಡಿದ್ದು, ಸಭೆಯಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ಜಾತಿಗಳ (ಒಬಿಸಿ) ಮೀಸಲಾತಿ ಮಿತಿಯನ್ನು ಹೆಚ್ಚಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ಎರಡು ದಿನಗಳ ಸಭೆಯಲ್ಲಿ 39 ಸದಸ್ಯರು ಭಾಗಿಯಾಗುತ್ತಿದ್ದು, ಕಳೆದ ಆಗಸ್ಟ್ನಲ್ಲಿ ಈ ಸಮಿತಿಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಘೋಷಿಸಿದ್ದರು. ಆ ಬಳಿಕ ನಡೆದ ಮೊದಲ ಸಭೆ ಇದಾಗಿದ್ದು, ವಿಶೇಷ ಆಹ್ವಾನಿತರು, ಪದನಿಮಿತ್ತ ಸದಸ್ಯರು ಮತ್ತು ಉಸ್ತುವಾರಿಗಳು ಕೂಡ ಸಭೆಯ ಭಾಗವಾಗಿದ್ದಾರೆ.
ಸಭೆಯ ಮೊದಲ ದಿನ ಪಕ್ಷವು ಮೂರು ಪ್ರತ್ಯೇಕ ನಿರ್ಣಯಗಳನ್ನು ಅಂಗೀಕರಿಸಿದೆ. ಇದರಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಉಮೆನ್ ಚಾಂಡಿ ಅವರ ನಿಧನದ ಬಗ್ಗೆ ಸಂತಾಪ ಸೂಚಕ ನಿರ್ಣಯ, ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಕುರಿತ ನಿರ್ಣಯ, ಮಳೆ ಮತ್ತು ಪ್ರವಾಹದ ನಂತರ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಹಿಮಾಚಲ ಪ್ರದೇಶದ ಪ್ರವಾಹ ಪೀಡಿತ ಪ್ರದೇಶದ ಮರು ನಿರ್ಮಾಣ ಕುರಿತು ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.
ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಮತ್ತು ಈ ವರ್ಷ ರಾಜಸ್ಥಾನ, ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ಐದು ರಾಜ್ಯಗಳ ಚುನಾವಣೆ ನಡೆಯಲಿದ್ದು, ಇದಕ್ಕೆ ಮುಂಚಿತವಾಗಿ ಈ ಮಹತ್ವದ ಸಭೆ ನಡೆದಿದೆ.
ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಬಗೆಹರಿಸಬೇಕಾದ ಸಂಘಟನಾತ್ಮಕ ಸಮಸ್ಯೆಗಳ ಕುರಿತು ನಾಳೆ ವಿಸ್ತೃತ CWC ಸಭೆಯಲ್ಲಿ ನಾನು ವಿವರವಾಗಿ ಮಾತನಾಡುತ್ತೇನೆ ಎಂದು ಖರ್ಗೆ ತಮ್ಮ ಹೇಳಿಕೆಯಲ್ಲಿ ಹೇಳಿದ್ದಾರೆ.
ಸಭೆಯ ಮೊದಲು, ಶನಿವಾರ ಬೆಳಿಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಮತ್ತು ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಸಭೆಯಲ್ಲಿ ಮುಕ್ತ ಮತ್ತು ನ್ಯಾಯಯುತ ರೀತಿಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ತನ್ನ ಮುಖ್ಯ ನಿರ್ಣಯದಲ್ಲಿ, CWC ದೇಶದಲ್ಲಿ SC/ST ಮತ್ತು OBC ಗಳಿಗೆ ಮೀಸಲಾತಿಯ ಮೇಲಿನ ಮಿತಿಯನ್ನು ಹೆಚ್ಚಿಸಲು ಕರೆ ನೀಡಿದೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಅಗತ್ಯ ವಸ್ತುಗಳ ಬೆಲೆಗಳ ನಿರಂತರ ಏರಿಕೆಗೆ ಕಳವಳ ವ್ಯಕ್ತಪಡಿಸಿದೆ.
2011ರಲ್ಲಿ ಕೊನೆಯ ಬಾರಿಗೆ ನಡೆಸಲಾದ ಜನಸಂಖ್ಯಾ ಗಣತಿಯನ್ನು ಮತ್ತೆ ನಡೆಸಲು ವಿಫಲವಾಗಿರುವುದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಅವಮಾನ ಎಂದು ಸಭೆಯಲ್ಲಿ ಹೇಳಲಾಗಿದೆ. ಜಾತಿ ಗಣತಿ ಕುರಿತ ಮೋದಿ ಸರ್ಕಾರದ ನಿರಾಕರಣೆಯನ್ನು CWC ವಿರೋಧಿಸಿದೆ. ಪಕ್ಷವು ಅಧಿಕಾರಕ್ಕೆ ಬಂದರೆ ಮಧ್ಯಪ್ರದೇಶದಲ್ಲಿ ಜಾತಿ ಗಣತಿ ನಡೆಸುವುದಾಗಿ ಭರವಸೆ ನೀಡಿದೆ. ದೇಶದಲ್ಲಿ ಜಾತಿ ಗಣತಿಯನ್ನು ಜಾರಿಗೊಳಿಸುವಂತೆ ಮೋದಿ ಸರ್ಕಾರವನ್ನು ಒತ್ತಾಯಿಸಿದೆ.
ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಬೇಕು ಎಂದು ಪಕ್ಷ ಒತ್ತಾಯಿಸಿದೆ. ಚೀನಾ ಜೊತೆಗಿನ ಗಡಿ ವಿವಾದದ ವಿಚಾರದಲ್ಲಿ ಭಾರತದ ಪ್ರಾದೇಶಿಕ ಸಮಗ್ರತೆಗೆ ಎದುರಾಗುವ ಯಾವುದೇ ಸವಾಲಿನ ವಿರುದ್ಧ ದೃಢವಾದ ನಿಲುವನ್ನು ತೆಗೆದುಕೊಳ್ಳುವಂತೆ ಸಭೆಯು ಕೇಳಿದೆ.
ಕಳೆದ ವರ್ಷ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆಯನ್ನು ಸಭೆಯಲ್ಲಿ ಶ್ಲಾಘಿಸಲಾಗಿದೆ ಮತ್ತು ಭಾರತವನ್ನು ವಿಭಜಿಸುವ ಶಕ್ತಿಗಳ ವಿರುದ್ಧ ಜನರನ್ನು ಒಗ್ಗೂಡಿಸಲು ರಾಷ್ಟ್ರದ ರಾಜಕೀಯದಲ್ಲಿ ಒಂದು ಪರಿವರ್ತನಾ ಕ್ಷಣ ಎಂದು ಕರೆದಿದೆ.
ಇದನ್ನು ಓದಿ: ಒಂದು ದೇಶ-ಒಂದು ಚುನಾವಣೆ ಕಲ್ಪನೆಯಲ್ಲಿ ಬಿಜೆಪಿ ರಾಜಕೀಯ, ಸೈದ್ಧಾಂತಿಕ ಉದ್ದೇಶ ಹೊಂದಿದೆ; ಶಿವಸುಂದರ್