ಇಂದು ನಡೆಯುತ್ತಿರುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಿದ ಹಾಲಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು, “ಈ ಕ್ಷಣಕ್ಕಾಗಿ ಬಹುದಿನದಿಂದ ಕಾಯುತ್ತಿದ್ದೆ” ಎಂದಿದ್ದಾರೆ.
ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರರೊಂದಿಗೆ ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಮತ ಚಲಾಯಿಸಿದ ನಂತರ ಮಾತನಾಡಿದ ಅವರು “ಬೇರೊಬ್ಬರು ಕಾಂಗ್ರೆಸ್ ಪಕ್ಷವನ್ನು ಮುನ್ನೆಡೆಸಬೇಕೆಂಬ ಬಹುದಿನದ ಆಸೆ ಈಡೇರುತ್ತಿದೆ” ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ರವರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದು ದೇಶಾದ್ಯಂತ ಇಂದು ಮತದಾನ ನಡೆಯುತ್ತಿದೆ. ಅಕ್ಟೋಬರ್ 19ರ ಬುಧವಾರ ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮತದಾನ ಬಿರುಸಿನಿಂದ ಸಾಗಿದೆ. “ಇದುವರೆಗೂ 490 ಸದಸ್ಯರು ಮತದಾನ ಮಾಡಿದ್ದು, ಪಾರದರ್ಶಕತೆಯಿಂದ ಮತದಾನ ನಡೆಯುತ್ತಿದೆ. ಇದೊಂದು ಐತಿಹಾಸಿಕ ಚುನಾವಣೆಯಾಗಿದ್ದು, ಇದರಿಂದ ದೇಶಕ್ಕೆ ಲಾಭವಾಗಲಿದೆ” ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೀಯ ಅಭ್ಯರ್ಥಿ ಶಶಿ ತರೂರ್ ಕೇರಳದ ತಿರುವನಂತಪುರದಲ್ಲಿ ಮತ ಚಲಾಯಿಸಿದ್ದಾರೆ. “ಈ ಚುನಾವಣೆಯಲ್ಲಿ ನನಗೆ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷದ ಭವಿಷ್ಯ ಪಕ್ಷದ ಕಾರ್ಯಕರ್ತರ ಕೈಯಲ್ಲಿದೆ. ಪಕ್ಷದ ನಾಯಕರು ಮತ್ತು ಸ್ಥಾಪಿತ ಹಿತಾಶಕ್ತಿಗಳು ಇನ್ನೊರ್ವ ಅಭ್ಯರ್ಥಿಯ ಪರವಾಗಿರುವುದರಿಂದ ನಮಗೆ ತುಸು ಕಷ್ಟವಾಗುತ್ತಿದೆ. ನಾನು ಮಲ್ಲಿಕಾರ್ಜುನ ಖರ್ಗೆಯವರಿಗೆ ಫೋನ್ ಮಾಡಿ ಶುಭಾಶಯ ಹೇಳಿದ್ದೇನೆ. ಫಲಿತಾಂಶ ಏನೇ ಇರಲಿ ನಾವು ಸ್ನೇಹಿತರಾಗಿ ಉಳಿಯುತ್ತೇವೆ” ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮತ ಚಲಾಯಿಸಿದ ನಂತರ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆಯವರು, “ಇಬ್ಬರೂ ಸೇರಿ ಪಕ್ಷ ಕಟ್ಟುತ್ತೇವೆ. ಚುನಾವಣೆ ಎಂಬುದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಇದುವರೆಗೂ ನಾವಿಬ್ಬರೂ ಮಾತನಾಡಿರುವುದು ಸ್ನೇಹತನದ ಮಾತುಗಳಾಗಿವೆ. ತರೂರ್ ಫೋನ್ ಮಾಡಿ ಅಭಿನಂದಿಸಿದ್ದಾರೆ. ನಾನು ಕೂಡ ಶುಭಾಶಯ ತಿಳಿಸಿದ್ದೇನೆ” ಎಂದು ಹೇಳಿದ್ದಾರೆ.
ಮತದಾನ ಕೇಂದ್ರಗಳಾಗಿ ಬದಲಾದ ಭಾರತ್ ಜೋಡೊ ಕಂಟೈನರ್
ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಗೆ ಇಂದು ಚುನಾವಣೆಯ ಕಾರಣಕ್ಕಾಗಿ ವಿರಾಮ ಘೋಷಿಸಲಾಗಿದೆ. ಬಳ್ಳಾರಿಯ ಸಂಗನಕಲ್ಲು ಬಳಿ ಸಭೆಗಳನ್ನು ನಡೆಸಲು ಬಳಸುತ್ತಿದ್ದ ಕಂಟೈನರ್ ಅನ್ನು ಮತದಾನ ಕೇಂದ್ರವಾಗಿ ಮಾರ್ಪಾಡು ಮಾಡಲಾಗಿದೆ. ರಾಹುಲ್ ಗಾಂಧಿ ಸೇರಿದಂತೆ ಭಾರತ ಐಕ್ಯತಾ ಯಾತ್ರೆಯಲ್ಲಿದ್ದ ಇತರ ಕಾಂಗ್ರೆಸ್ ಸದಸ್ಯರು ಅಲ್ಲಿ ಮತದಾನ ಮಾಡಿದ್ದಾರೆ.
This is the polling booth at the #BharatJodoYatra campsite in Sanganakallu that will open at 10am. It is the meeting room container converted into a polling booth for the Congress Presidential elections. pic.twitter.com/3LvvALEHp9
— Jairam Ramesh (@Jairam_Ramesh) October 17, 2022
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ – ಅಪರೂಪದ ಶ್ರೀಸಾಮಾನ್ಯ