ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಯಾಗಿದ್ದು, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಗುರುತಿಸಲು(ಘೋಷಿಸಲು) ಸರ್ಕಾರ ಉದ್ದೇಶಿಸಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಸೋಮವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸತ್ ಸದಸ್ಯ ಭಗೀರಥ ಚೌಧರಿ ಅವರು, ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ‘ಗೋಮಾತೆ’ (ಹಸುವನ್ನು) ರಾಷ್ಟ್ರೀಯ ಪ್ರಾಣಿಯಾಗಿ ಗುರುತಿಸಲು ಸರ್ಕಾರ ಉದ್ದೇಶಿಸಿದೆಯೇ? ಭಾರತೀಯ ಮತ್ತು ‘ಸನಾತನ ಸಂಸ್ಕೃತಿ’ಯ ರಕ್ಷಣೆ ಮತ್ತು ಪುನರುಜ್ಜೀವನವನ್ನು ಮಾಡಲು ಸಂಸತ್ತಿನಲ್ಲಿ ಶಾಸನವನ್ನು ತರುವ ಕುರಿತ ಪ್ರಶ್ನೆಗೆ ಸಚಿವರು ಈ ರೀತಿ ಉತ್ತರಿಸಿದ್ದಾರೆ.
ಭಾರತ ಸರ್ಕಾರವು ಹುಲಿ ಮತ್ತು ನವಿಲುಗಳನ್ನು ಕ್ರಮವಾಗಿ ‘ರಾಷ್ಟ್ರೀಯ ಪ್ರಾಣಿ’ ಮತ್ತು ‘ರಾಷ್ಟ್ರೀಯ ಪಕ್ಷಿ’ ಎಂದು ಸೂಚಿಸಿದೆ ಮತ್ತು ಇವೆರಡನ್ನೂ 1972ರ ವನ್ಯಜೀವಿ (ರಕ್ಷಣೆ) ಕಾಯಿದೆಯ ಶೆಡ್ಯೂಲ್-1 ಪ್ರಾಣಿಗಳಲ್ಲಿ ಸೇರಿಸಲಾಗಿದೆ ಎಂದು ರೆಡ್ಡಿ ಸ್ಪಷ್ಟಪಡಿಸಿದರು.
ಅಲಹಾಬಾದ್ ಮತ್ತು ಜೈಪುರದ ಉಚ್ಚ ನ್ಯಾಯಾಲಯವು ‘ಗೋಮಾತಾ’ವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಆದೇಶಿಸಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ರೆಡ್ಡಿ, ಇದು ಶಾಸಕಾಂಗದ ಕೈಯಲ್ಲಿದೆ. ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಸ್ಥಳೀಯ ತಳಿಯ ಜಾನುವಾರುಗಳನ್ನು ಒಳಗೊಂಡಂತೆ ಸ್ಥಳೀಯ ತಳಿಗಳ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ರಾಷ್ಟ್ರೀಯ ಗೋಕುಲ್ ಮಿಷನ್ ನ್ನು ಅನುಷ್ಠಾನಗೊಳಿಸುತ್ತಿದೆ. ಈ ಮಿಷನ್ ದೇಶದಲ್ಲಿ ಜಾನುವಾರು ಸೇರಿದಂತೆ ಸ್ಥಳೀಯ ತಳಿಗಳ ಲಭ್ಯತೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇಲಾಖೆಯು ಹಸು ಮತ್ತು ಅದರ ಸಂತತಿ ಸೇರಿದಂತೆ ಪ್ರಾಣಿಗಳನ್ನು ರಕ್ಷಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿದೆ ಎಂದು ಹೇಳಿದ್ದಾರೆ.
Send you later