ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಚೈತ್ರಾ ಸೇರಿ ಇಬ್ಬರಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ವಂಚನೆ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಹಾಗೂ ಎ2 ಆರೋಪಿಯಾಗಿರುವ ಶ್ರೀಕಾಂತ್ಗೆ 3ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಇಂದು ಪರಪ್ಪನ ಅಗ್ರಹಾರ ಕಾರಾಗೃಹದಿಂದ ಈ ಇಬ್ಬರು ಬಿಡುಗಡೆಯಾಗಲಿದ್ದಾರೆ. ಈ ಮೊದಲು ಹಾಲಶ್ರೀ ಸ್ವಾಮೀಜಿಗೆ ಜಾಮೀನು ನೀಡಲಾಗಿತ್ತು. ಇದೀಗ ಪ್ರಕರಣದಲ್ಲಿ ಮೂವರಿಗೆ ಜಾಮೀನು ಸಿಕ್ಕಿದಂತಾಗಿದೆ.
ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಮತ್ತು ಗ್ಯಾಂಗ್ 5 ಕೋಟಿ ರೂ.ಹಣ ಪಡೆದಿದ್ದರು. ಕೇಂದ್ರದ ನಾಯಕರು ಹಾಗೂ ಆರೆಸ್ಸೆಸ್ ಮುಖಂಡರ ಹೆಸರಲ್ಲಿ ಚೈತ್ರಾ ಹಾಗೂ ಅವರ ಸಂಗಡಿಗರು ಈ ಮೋಸ ಮಾಡಿದ್ದು, ಆಕೆ ಹಾಗೂ ಆಕೆಯ ನಾಲ್ಕೈದು ಜನರ ತಂಡವು ಆರೆಸ್ಸೆಸ್ ಮತ್ತು ಕೇಂದ್ರದ ನಾಯಕರ ಪಾತ್ರವನ್ನು ನಿಭಾಯಿಸಿತ್ತು.
ಚುನಾವಣೆಯಲ್ಲಿ ಗೋವಿಂದಬಾಬು ಪೂಜಾರಿ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಬಳಿಕ ಗೋವಿಂದ ಬಾಬು ಕೊಟ್ಟ ಹಣವನ್ನು ಮರಳಿ ನೀಡುವಂತೆ ಕೇಳಿದ್ದಾರೆ. ಆದರೆ ಚೈತ್ರಾ ಹಣ ನೀಡದೆ ಹೈಡ್ರಾಮವನ್ನು ಮಾಡಿದ್ದರು.
ಬಂಧಿತರಾಗಿರುವ ಚೈತ್ರಾ ಕುಂದಾಪುರ, ಗಗನ್ ಕಡೂರು ಹಾಗೂ ಶ್ರೀಕಾಂತ್ ಎಂಬವರನ್ನು ಹಣದ ವಿಚಾರವಾಗಿ ಮಾತನಾಡಲು ಕಳೆದ ಏ. 24ರಂದು ವಂಚನೆಗೊಳಗಾದ ಉದ್ಯಮಿ ಪೂಜಾರಿ ಅವರು ತಮ್ಮ ಕಚೇರಿಗೆ ಕರೆಯಿಸಿಕೊಂಡಿದ್ದರು. ಈ ವೇಳೆ, ಆರೋಪಿ ಗಗನ್ ಕಡೂರು ವಿಷ ಕುಡಿದು ಸಾಯುವೆ ಅಂತ ಹೇಳಿ ಹೈಡ್ರಾಮ ಸೃಷ್ಟಿ ಮಾಡಿದ್ದಾನೆ. ಪಕ್ಕದಲ್ಲೇ ಕುಳಿತಿದ್ದ ಚೈತ್ರಾ ಕುಂದಾಪುರ ಹಾಗೂ ಇನ್ನಿತರರು ಆತನನ್ನು ತಡೆದಿದ್ದಾರೆ. ಆರೋಪಿ ಗಗನ್ ವಿಷ ಸೇವನೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಮೋಸಕ್ಕೆ ಒಳಗಾದ ಉದ್ಯಮಿ ಸೆ.8 ರಂದು ಚೈತ್ರಾ ಕುಂದಾಪುರ ವಿರುದ್ಧ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಪ್ರಕರಣ ಸಿಸಿಬಿಗೆ ವರ್ಗಾವಣೆ ಆಗಿತ್ತು. ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್ನಲ್ಲಿ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಹೆಚ್ಚಿನ ತನಿಖೆಯ ಹಂತದಲ್ಲಿ ಗಗನ್ ಕಡೂರು, ಹಾಲಶ್ರೀ ಸ್ವಾಮೀಜಿ, ಧನರಾಜ್, ಚನ್ನನಾಯ್ಕ್, ಪ್ರಜ್ವಲ್, ಶ್ರೀಕಾಂತ್ ಸೇರಿದಂತೆ 9 ಮಂದಿಯನ್ನು ಬಂಧಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿ ಇತ್ತೀಚೆಗೆ ಈ 9 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಸಿಸಿಬಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.