Homeಮುಖಪುಟವಿಶೇಷ ವರದಿ: ಪ್ರತಿರೋಧಕ್ಕೆ ಹೊಸ ಅರ್ಥ ಮತ್ತು ಹುರುಪು ಕೊಟ್ಟ ದೆಹಲಿ ರೈತ ಹೋರಾಟ..!

ವಿಶೇಷ ವರದಿ: ಪ್ರತಿರೋಧಕ್ಕೆ ಹೊಸ ಅರ್ಥ ಮತ್ತು ಹುರುಪು ಕೊಟ್ಟ ದೆಹಲಿ ರೈತ ಹೋರಾಟ..!

- Advertisement -
- Advertisement -

[ದೆಹಲಿ ರೈತ ಹೋರಾಟವನ್ನು ವರದಿ ಮಾಡಲು ತೆರಳಿದ್ದ ನಾನುಗೌರಿ-ನ್ಯಾಯಪಥ ತಂಡದ ಮಮತ, ಈ ಹೋರಾಟ ತಮಗೆ ಮೂಡಿಸಿದ ಬೆರಗಿನ ಬಗ್ಗೆ ಇಲ್ಲಿ ಬಣ್ಣಿಸಿದ್ದಾರೆ]

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಒತ್ತಾಯಿಸಿ ನಡೆಯುತ್ತಿರುವ ರೈತ ಹೋರಾಟಕ್ಕೆ 60 ದಿನಗಳು ತುಂಬುತ್ತಿವೆ. ಇಷ್ಟು ದಿನಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಮೊದಲ ದಿನವಿದ್ದ ಉತ್ಸಾಹ ಇನ್ನೂ ಹಾಗೆ ಉಳಿಸಿಕೊಂಡಿರುವುದಷ್ಟೇ ಅಲ್ಲ ಅದು ದಿನೇದಿನೇ ವೃದ್ಧಿಸುತ್ತಿರುವುದು, ಪ್ರತಿಭಟನಾನಿರತ ರೈತರ ಕುರಿತ ಆಸಕ್ತಿ ಇಮ್ಮಡಿಸುವಂತೆ ಮಾಡುತ್ತದೆ.

ಯಾವುದೇ ಸರ್ಕಾರದ ಅಥವಾ ಖಾಸಗಿ ಕಂಪನಿಗಳ ವಿರುದ್ಧ ಪ್ರತಿಭಟನೆ ನಡೆಸುವಾಗ, ಆ ಹೋರಾಟಕ್ಕೆ ಇಳಿಯಲು ಕಾರಣವೇನು ಎಂಬುದು ಪ್ರತಿಭಟನಾನಿರತ ಎಲ್ಲರಿಗೂ ತಿಳಿದಿದ್ದರೆ, ಆ ಹೋರಾಟಕ್ಕೆ ಗಟ್ಟಿ ಅಡಿಪಾಯವೊಂದು ದೊರೆತಂತೆ. ಹೋರಾಟಕ್ಕೆ ಅಣಿಯಾಗಲು ಅಂತಹ ಉದ್ದೇಶ, ತಿಳಿವಳಿಕೆ ಮತ್ತು ಆಲೋಚನೆ ಅಗತ್ಯವಾಗಿ ಬೇಕು. ಆಗ ಆ ಹೋರಾಟ ಎಷ್ಟು ಧೀರ್ಘವಾದರೂ ಜನರು ಅಂಜುವುದಿಲ್ಲ. ಅಂತಹ ಒಂದು ಭದ್ರ ಬುನಾದಿ ಈ ಐತಿಹಾಸಿಕ ರೈತ ಹೋರಾಟಕ್ಕಿದೆ ಎಂಬುದು ದೆಹಲಿ ಗಡಿಗೆ ಭೇಟಿ ನೀಡಿದ ಯಾರಿಗಾದರೂ ಸುಲಭವಾಗಿ ತಿಳಿಯುತ್ತದೆ.

PC : Free Press journal

ಈ ಹೋರಾಟದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ತಾವು ಯಾವುದಕ್ಕಾಗಿ, ಯಾರಿಗಾಗಿ, ಏಕೆ ಈ ದೆಹಲಿಯ ಗಡಿಗಳಲ್ಲಿ ಇದ್ದೇವೆ ಎಂಬ ತಿಳಿವಿದೆ. ಇಂತಹ ತಿಳಿವಿಲ್ಲದೆ ಪ್ರತಿಭಟನೆಗಿಳಿದು, ಪ್ರತಿಭಟಿಸುತ್ತಿರುವ ಸ್ಥಳಕ್ಕೆ ಬಂದ 2-3 ದಿನಗಳಲ್ಲೇ, ಕಾರಣಗಳನ್ನು ತಿಳಿಸುವ ಕೆಲಸವನ್ನು ಹೋರಾಟನಿರತ ರೈತರು, ರೈತ ಮುಖಂಡರು ಮಾಡುತ್ತಾರೆ. ಈ ಕೆಲಸಕ್ಕಾಗಿಯೇ ದೆಹಲಿಯ ಸಿಂಘು, ಟಿಕ್ರಿ, ಗಾಝಿಪುರ್, ಚಿಲ್ಲಾ, ಶಹಜಾನ್‌ಪುರ್, ದಾರೂಹೇರಾ ಗಡಿಗಳಲ್ಲಿ ಅನೇಕ ವೇದಿಕೆಗಳಿವೆ. ಕೃಷಿ ಕಾನೂನಿನ ಸಾಧಕ-ಬಾಧಕಗಳ ಕುರಿತು ಅನೇಕ ತಜ್ಞರು, ರೈತರು, ರೈತ ಮುಖಂಡರು ಇಲ್ಲಿ ಇಡೀ ದಿನ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇನ್ನೂ ಅನೇಕ ಸಂಘ ಸಂಸ್ಥೆಗಳು ಕೃಷಿ ಕಾನೂನಿನ ಪ್ರತಿಗಳನ್ನು ವಿವಿಧ ಭಾಷೆಗಳಲ್ಲಿ ಅಚ್ಚು ಹಾಕಿಸಿ ಎಲ್ಲರಿಗೂ ಹಂಚುವ ಕೆಲಸ ಮಾಡುತ್ತಿವೆ.

ಒಂದು ಹೋರಾಟ ಇಷ್ಟು ದಿನಗಳ ಕಾಲ ಉಳಿಯಲು ಮತ್ತು ಯಾವುದೇ ಅಡ್ಡಿಆತಂಕಗಳು ಕಾಣಿಸಿಕೊಳ್ಳದಿರಲು, ಜನ ತಾವಾಗಿಯೇ ಇಲ್ಲಿ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಲು, ಅಲ್ಲಿ ಆಹಾರ ಪೂರೈಕೆಯ ಅಚ್ಚುಕಟ್ಟುತನವೂ ಕಾರಣ. ಹೆಚ್ಚಾಗಿ ಪ್ರತಿಭಟನೆಯೆಂದರೆ ಹಸಿದುಕೊಂಡು, ಬಿಸಿಲಿನಲ್ಲಿ ಕುಳಿತು ಕಷ್ಟಪಟ್ಟು ಪ್ರತಿಭಟನೆ ನಡೆಸುವುದನ್ನು ನೋಡಿರುವ ನಮಗೆ ಈ ಹೋರಾಟ ತುಂಬಾ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ಇಡೀ ದಿನ ಸಿಖ್ಖರು ತಮ್ಮ ಲಂಗರ್‌ಗಳಲ್ಲಿ ಪ್ರತಿಭಟನಾ ನಿರತರಿಗೆ ಅನ್ನ-ಆಹಾರಗಳ ವ್ಯವಸ್ಥೆಯ ಸೇವೆ ಮಾಡುತ್ತಾರೆ. ಹಸಿವಿಗೆ ಇಲ್ಲಿ ಜಾಗವಿಲ್ಲ. ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬ ರೈತರ ಈ ಪ್ರೀತಿಯ ಮತ್ತು ಕಾಳಜಿಯ ನಡೆ, ದೇಶದ ಹಲವು ಧರಣಿಗಳಲ್ಲಿ ಹಸಿವಿನಿಂದ, ಸುಸ್ತಿನಿಂದ ಬೀಳುವ ಪ್ರತಿಭಟನಾನಿರತರನ್ನು ಒಮ್ಮೆ ಕಣ್ಣ ಮುಂದೆ ಹಾಯುವಂತೆ ಮಾಡುತ್ತದೆ. ಸಿಖ್ ಸಮುದಾಯದ ಮತ್ತು ಪ್ರತಿಭಟನಾ ರೈತರ ಭ್ರಾತೃತ್ವ ನಿಜಕ್ಕೂ ಅನುಕರಣೀಯ ಅನ್ನಿಸದೆ ಇರದು.

ರೈತ ಹೋರಾಟ ಮೊದಮೊದಲು ಸುದ್ದಿಯಾಗಿದ್ದು ಅಲ್ಲಿನ ಊಟ ಉಪಚಾರದ ಕಾರಣಕ್ಕಾಗಿಯೇ ನಿಜ. ಏಕೆಂದರೆ ಪಂಜಾಬ್ ಮತ್ತು ಹರಿಯಾಣದ ರೈತರು ತಮ್ಮ ಲಂಗರ್‌ಗಳಲ್ಲಿ ಪ್ರತಿಭಟನಾನಿರತರಿಗೆ ನೀಡುವ ಆಹಾರ ಕೂಡ ಅಷ್ಟು ಉತ್ತಮವಾಗಿರುತ್ತದೆ. ಶುದ್ಧ ದೇಸಿ ತುಪ್ಪ, ಶಕ್ತಿವರ್ಧಕವಾಗಿರುವ ದ್ವಿದಳ ಧಾನ್ಯಗಳನ್ನು ಬಳಸಿ ಮಾಡುವ ಅವರ ಅಡುಗೆ ಅಂತಹ ಚಳಿಯಲ್ಲೂ ಶಕ್ತಿ ನೀಡಬಲ್ಲದು. ಜಿಲೇಬಿ, ರಸಗುಲ್ಲ, ಹಲ್ವಾ, ಖೀರು, ಪಿಜ್ಜಾ, ಬರ್ಗರ್‌ಗಳನ್ನು ನೀಡುವ ಲಂಗರ್‌ಗಳು, ಜ್ಯೂಸ್, ಹಾಲು, ಟೀ ನೀಡುವ ಲಂಗರ್‌ಗಳು, ಕಡಲೇಕಾಯಿ, ಮೊಸಂಬಿ, ಪೇರಲೆ ಹಣ್ಣುಗಳನ್ನು ಹಂಚಲು ಬರುವ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗಿವೆ. ಮೊದಲು ಹೊಟ್ಟೆ ತುಂಬಾ ಊಟ ಮಾಡಿ ಆಮೇಲೆ ಪ್ರತಿಭಟನೆಗೆ ಕುಳಿತುಕೊಳ್ಳಿ ಎನ್ನುವ ಈ ಹೋರಾಟ ನಾವು ಓದಿರುವ, ನೋಡಿರುವ ಆಂದೋಲನಗಳಿಗಿಂತ ತುಂಬಾ ವಿಭಿನ್ನವಾದದ್ದು. ಇವರ ಆಹಾರದ ಬಗ್ಗೆ ಅಪಹಾಸ್ಯ ಮಾಡಿ ವಿಕೃತ ಮೆರೆದ ಜನರು ಇಲ್ಲಿಗೆ ತೆರಳಿ ಒಮ್ಮೆ ರೈತರ ಪ್ರೀತಿಯ ಆತಿಥ್ಯವನ್ನು ಸವಿದರೆ ಅವರ ಮನಸ್ಸು ಬದಲಾಗಬಹುದೇನೋ!

ರೈತ ಹೋರಾಟ
PC: Business Standard

ರೈತ ಹೋರಾಟದಲ್ಲಿ ಎಲ್ಲಾ ಗಡಿಗಳನ್ನು ಸುತ್ತಿದ ಮೇಲೂ ನಿಮಗೆ ಮತ್ತೆ ಮತ್ತೆ ಕಾಣಿಸುವುದು, ಮತ್ತೆ ಮತ್ತೆ ಕಾಡುವುದು ರೈತರ ಒಗ್ಗಟ್ಟು. ಇಲ್ಲಿ ಪಂಜಾಬ್, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಕರ್ನಾಟಕ, ಜಮ್ಮು-ಕಾಶ್ಮೀರ, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ, ವಿಭಿನ್ನ ಮನಸ್ಥಿತಿಯ ಜನರು ಇದ್ದಾರೆ. ಈ ವೈವಿಧ್ಯತೆಯ ಜನರ ಧ್ಯೇಯ ಮಾತ್ರ ಒಂದೇ ಅಗಿದೆ. ಆಂದೋಲನದಲ್ಲಿರುವ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಒಂದೇ ಮಾತು. ಕೇಂದ್ರ ಸರ್ಕಾರ ಕರಾಳ ಕೃಷಿ ಕಾನೂನುಗಳನ್ನು ವಾಪಾಸ್ ಪಡೆಯಬೇಕು ಎಂಬುದು. ಈ ವಿಚಾರದಲ್ಲಿ ಪ್ರತಿಭಟನೆ ನಡೆಯುತ್ತಿರುವ ಯಾವ ಗಡಿಯಲ್ಲಿ ಹೋಗಿ ಯಾರನ್ನು ಪ್ರಶ್ನಿಸಿದರೂ ಇದೇ ಉತ್ತರವಾಗಿರುತ್ತದೆ.

ಈ ಮೊದಲು ನಾವು ನೋಡಿರುವ ಹೋರಾಟಗಳ ಹಿಂದೆ ಒಂದು ಪಕ್ಷ ಅಥವಾ ಒಂದು ಸಂಘಟನೆ ಇರುವುದು ಸಾಮಾನ್ಯವಾಗಿತ್ತು. ಅವುಗಳು ಎಷ್ಟೇ ನೈಜವಾಗಿದ್ದರೂ, ನೈಜ ಕಾಳಜಿಗಳನ್ನು ಹೊಂದಿದ್ದರೂ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸುವುದು ಆಳುವ ಸರ್ಕಾರಗಳಿಗೆ ಸುಲಭವಾಗಿರುತ್ತಿತ್ತು. ಆದರೆ ಈ ಬಾರಿ ಅದಕ್ಕೆ ಅವಕಾಶವೇ ಇಲ್ಲದಂತಾಗಿದೆ. ಇದು ಪೂರ್ತಿಯಾಗಿ ರೈತರೇ ಮುನ್ನಡೆಸುತ್ತಿರುವ ಆಂದೋಲನ ಎಂಬುದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವವರ ಗಮನಕ್ಕೆ ಬಂದೆ ಬರುತ್ತದೆ.

ಸಿಖ್ ಸಮುದಾಯದ ಯುವಕರ ಸೇವಾ ಮನೋಭಾವ ಕೂಡ ರೈತ ಹೋರಾಟ ಇಲ್ಲಿಯವರೆಗೆ ಯಶಸ್ವಿಯಾಗಿರುವುದಕ್ಕೆ ಮತ್ತೊಂದು ಕಾರಣವಾಗಿದೆ. ಯಾವುದೇ ಇರಿಸು-ಮುರುಸು ಇಲ್ಲದೆ, ಎಂತಹ ಸಿರಿವಂತನಾದರೂ ಇನ್ನೊಬ್ಬರ ಬೂಟ್ ಪಾಲಿಶ್ ಮಾಡಲು ಮುಂದಾಗುವ ಇವರ ಹೃದಯ ಶ್ರೀಮಂತಿಕೆ ನಿಜಕ್ಕೂ ಅನುಕರಣೀಯ. ಅವಿಸ್ಮರಣೀಯ ಕೂಡ. ವಿದೇಶಿ ಕೆಲಸಗಳನ್ನು ಬಿಟ್ಟು ಬಂದು ಇಲ್ಲಿ ಹೊಲಿಗೆ ಸೇವೆ ನೀಡುವವರು, ಪಂಜಾಬ್‌ನಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಯುವಕ ಇಲ್ಲಿ ರೈತರ ಬಟ್ಟೆ ತೊಳೆಯಲು, ಚಪ್ಪಲಿ ಜೋಡಿಸಲು, ಶೂ ಪಾಲಿಶ್ ಮಾಡಲು, ತಲೆಗೆ ಎಣ್ಣೆ ಹಚ್ಚಲು ಕೂರುವುದು ನಿಜಕ್ಕೂ ಎಂಥವರನ್ನೂ ಮೂಕ ವಿಸ್ಮಿತರನ್ನಾಗಿಸುತ್ತದೆ. ಇಂತಹ ವಿಚಾರಗಳನ್ನು ನೋಡಲು ಮತ್ತು ಚಿಂತಿಸಲು ನಮ್ಮಲ್ಲಿನ ಪೂರ್ವಾಗ್ರಹಪೀಡಿತ ಭಾವನೆಗಳನ್ನು ಬಿಟ್ಟು ಪ್ರತಿಭಟನಾ ಸ್ಥಳಕ್ಕೆ ಹೋಗಬೇಕಾಗುತ್ತದೆ ಎಂಬುದು ಅಷ್ಟೇ ಸತ್ಯ.

PC : Malyala Manorama

ದೆಹಲಿ ಒಂದು ನಗರ ಎಂದು ಎಲ್ಲರಿಗೂ ತಿಳಿದಿರುವುದೇ, ಆದರೆ ಈ ಗಡಿಗಳಲ್ಲಿ ಸೃಷ್ಟಿಯಾಗಿರುವ ನಗರಗಳದ್ದು ಬೇರೆಯೇ ಮಾದರಿ. ದೆಹಲಿ ಮತ್ತು ಸುತ್ತಮುತ್ತಲಿನ ಜನ ಇಲ್ಲಿಗೆ ಪ್ರವಾಸಿಗರಾಗಿ ಬರುತ್ತಿದ್ದಾರೆ. ಮಕ್ಕಳನ್ನು ಕರೆದುಕೊಂಡು ಕುಟುಂಬ ಸಮೇತ ಭೇಟಿ ನೀಡುವ ಜನ, ರೈತರ ಜೊತೆಗೆ ಹೋರಾಟದ ಬಗ್ಗೆ ಮಾತುಕತೆ ನಡೆಸುತ್ತಾರೆ. ಇಲ್ಲಿ ತಲೆಯೆತ್ತಿರುವ ಪುಸ್ತಕಭಂಡಾರಗಳಿಂದ ಪುಸ್ತಕಗಳನ್ನು ಖರೀದಿಸುತ್ತಾರೆ. ಅಲ್ಲಯೇ ನಡೆಯುವ ಚರ್ಚೆಗಳಲ್ಲಿ ಭಾಗವಹಿಸುತ್ತಾರೆ. ತಮ್ಮ ಮಕ್ಕಳ ಜನ್ಮ ದಿನವನ್ನೂ ಆಚರಿಸಲು ಇಲ್ಲಿಗೆ ಬರುವವರ ಸಂಖ್ಯೆ ಅಧಿಕವಾಗಿದೆ. ಚಳವಳಿಯಲ್ಲಿ ಮತ್ತಷ್ಟು ಹುಮ್ಮಸ್ಸು ತುಂಬುವ ಗೀತೆಗಳನ್ನು, ಕವಿತೆಗಳನ್ನು ವಾಚಿಸುತ್ತಾರೆ. ಇಂತಹ ಒಂದು ಐತಿಹಾಸಿಕ, ವಿಭಿನ್ನ ಪ್ರತಿಭಟನೆ ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿ ಉಳಿದುಕೊಳ್ಳುತ್ತದೆ ಎಂಬ ಮಾತುಗಳು ಇಲ್ಲಿಗೆ ಭೇಟಿ ನೀಡುವವರು ಹೇಳುತ್ತಾರೆ.

ರೈತ ಹೋರಾಟದಲ್ಲಿ ಇನ್ನೂ ಹೆಚ್ಚು ಗಮನ ಸೆಳೆಯುವುದು ರಾಜಕೀಯ ನಾಯಕರಿಗೆ ನೀಡಿರುವ ಸ್ಥಾನಮಾನ. ಇಲ್ಲಿರುವ ವೇದಿಕೆಗಳನ್ನು ರಾಜಕೀಯ ಪಕ್ಷದ ಮುಖಂಡರು ಹತ್ತುವಂತಿಲ್ಲ. ಅಲ್ಲಿಯೇ ನಿಂತು ಮಾಧ್ಯಮಗಳಿಗೆ ಉತ್ತರ ಹೇಳುವಂತಿಲ್ಲ. ಮುಖ್ಯವಾಗಿ ತಮ್ಮ ಪಕ್ಷದ ಧ್ವಜ ತರುವಂತಿಲ್ಲ. ಹೋರಾಟಕ್ಕೆ ಬೆಂಬಲ ನೀಡುವವರು ಇಲ್ಲಿ ಬಂದು ಅವರ ಜೊತೆ ಕೂರಬಹುದು. ರಾಜಕೀಯ ಪಕ್ಷಗಳನ್ನು ತಮ್ಮ ಆಂದೋಲನದಿಂದ ದೂರವಿರಿಸಿರುವುದು ಈ ಹೋರಟದ ಮತ್ತೊಂದು ವಿಶೇಷ. ಯಾವುದೇ ಪ್ರತಿರೋಧಕ್ಕೆ ಯಾವ ರಾಜಕೀಯ ಮುಖಂಡನ ಅಗತ್ಯ ಇಲ್ಲ ಎಂಬುದನ್ನು ರೈತರು ಸಾಬೀತುಮಾಡಿದ್ದಾರಲ್ಲದೇ, ಜನರಿಂದಲೇ ನಿಜವಾದ ಪ್ರಜಾತಂತ್ರ ಎಂಬ ತತ್ವವನ್ನು ಎತ್ತಿಹಿಡಿದಿದ್ದಾರೆ.

ದೆಹಲಿ ಚಲೋ ಶುರುವಾಗಿ 60 ದಿನಗಳು ಆಗಿರಬಹುದು. ಆದರೆ ದೆಹಲಿ ಚಲೋ ಶುರುವಾಗಿ, ಇಂದು ಬೃಹತ್ ಮಟ್ಟದ ರೈತ ಹೋರಾಟಕ್ಕೆ ಕಾರಣವಾಗಿರುವ ಪಂಜಾಬ್‌ನಲ್ಲಿ ಈ ಆಂದೋಲನ ಪ್ರಾರಂಭವಾಗಿ ಐದು ತಿಂಗಳು ಸರಿದಿವೆ. ಇಂದಿಗೂ ಅಲ್ಲಿ ರೈಲ್ ರೋಖೋ ಚಳವಳಿ ನಡೆಯುತ್ತಲೆ ಇದೆ. ರೈತರೇ ಹೇಳುವಂತೆ ನಮ್ಮ ಹೋರಾಟ ಯಾವ ಪಕ್ಷದ ವಿರುದ್ಧವೂ ಅಲ್ಲ. ಕಾಯ್ದೆಗಳನ್ನು ಜಾರಿ ಮಾಡಿರುವ ಸರ್ಕಾರದ ವಿರುದ್ಧ. ಅಲ್ಲಿ ಯಾವ ಪಕ್ಷವಿದ್ದರೂ ನಾವು ಇದೇ ರೀತಿಯ ಪ್ರತಿಭಟನೆ ನಡೆಸುತ್ತಿದ್ದೆವು ಎನ್ನುತ್ತಾರೆ.

ಪ್ರತಿಭಟನೆಯೊಂದು ಇಷ್ಟೊಂದು ವಿಭಿನ್ನವಾಗಿ, ವಿಚಾರ ಕ್ರಾಂತಿಗೆ ಆಹ್ವಾನವಾಗಿಯೂ ನಡೆಸಬಹುದು ಎಂಬುದನ್ನು ದೇಶದ ರೈತರು ತೋರಿಸಿಕೊಟ್ಟಿದ್ದಾರೆ. ಈಗಾಗಲೇ ಲೋಹ್ರಿ ಹಬ್ಬವನ್ನು ಕಿಸಾನ್ ಲೋಹ್ರಿ ಎಂದು ರೈತರು ಆಚರಿಸಿದ್ದಾರೆ. ಆ ಹಬ್ಬಕ್ಕೆ ಹಾಕುವ ಸಾಂಪ್ರದಾಯಿಕ ಬೆಂಕಿ ಕೊಂಡದಲ್ಲಿ ಈ ರೈತವಿರೋಧಿ ಕಾಯ್ದೆಗಳ ಪ್ರತಿಗಳನ್ನು ಸಾಂಕೇತಿಕವಾಗಿ ಸುಟ್ಟಿದ್ದಾರೆ. ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವವನ್ನು ಕಿಸಾನ್ ಗಣರಾಜ್ಯೋತ್ಸವವನ್ನಾಗಿಸಿ, ಶಾಂತಿಯುತ ಬೃಹತ್ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲು ಮುಂದಾಗಿದ್ದಾರೆ. ಅಂದು ದೆಹಲಿಯ ಗಡಿಗಳಲ್ಲಿರುವ ಟ್ರ್ಯಾಕ್ಟರ್‌ಗಳ ಜೊತೆಗೆ ಪಂಜಾಬ್, ರಾಜಸ್ಥಾನ, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಿಂದಲೂ ಟ್ರ್ಯಾಕ್ಟರ್‌ಗಳು ದೆಹಲಿಗೆ ಬಂದುಸೇರಲಿವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಈ ಬಾರಿಯ ಗಣರಾಜ್ಯೋತ್ಸವದಂದು ಕಿಸಾನ್ ಗಣರಾಜ್ಯೋತ್ಸವ ನಡೆಯುವುದು ನಿಶ್ಚಿತ ಎನ್ನುವ ವಿಶ್ವಾಸ ಈ ದೇಶದ ರೈತರದ್ದು.


ಇದನ್ನೂ ಓದಿ: ಕಲೆಯಲ್ಲಿ ಅನುರಣನಗೊಂಡ ರೈತ ಪ್ರತಿಭಟನೆ – ಅಪ್ರತಿಮ ಹೋರಾಟಕ್ಕೆ ಸೃಜನಶೀಲತೆಯ ಸ್ಪರ್ಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...