ದೆಹಲಿಯ ಗೋಕುಲಪುರಿ ಪ್ರದೇಶದ ಗುಡಿಸಲುಗಳಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿ 1 ಗಂಟೆಯ ವೇಳೆಯಲ್ಲಿ ಘಟನೆ ಸಂಭವಿಸಿದೆ.
ದೆಹಲಿ ಪೊಲೀಸರ ಪ್ರಕಾರ, ಕನಿಷ್ಠ 60 ಗುಡಿಸಲುಗಳು ಸುಟ್ಟುಹೋಗಿವೆ, ಸಾವಿಗೀಡಾದ ಏಳು ಜನರಲ್ಲಿ 11 ವರ್ಷದ ಮಗು ಸೇರಿದೆ.
ದಿಲ್ಲಿ ಅಗ್ನಿಶಾಮಕ ನಿರ್ದೇಶಕ ಅತುಲ್ ಗಾರ್ಗ್ ಮಾತನಾಡಿ, “ವೇಗವಾಗಿ ಬೆಂಕಿ ಹರಡಿತ್ತು. ಅನೇಕರು ನಿದ್ರೆಯಲ್ಲಿದ್ದರಿಂದ ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಮೃತಪಟ್ಟಿದ್ದಾರೆ” ಎಂದು ತಿಳಿಸಿದ್ದಾರೆ.
ಈಶಾನ್ಯ ದೆಹಲಿ ಹೆಚ್ಚುವರಿ ಡಿಸಿಪಿಯವರು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, “ಬೆಳಿಗ್ಗೆ 1 ಗಂಟೆಗೆ ಗೋಕುಲಪುರಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಬೆಂಕಿಯ ಅವಘಡ ಸಂಭವಿಸಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ದಾವಿಸಿದವು. ಬೆಳಗಿನ ಜಾವ 4 ಗಂಟೆಗೆ ಬೆಂಕಿ ನಂದಿಸಲಾಗಿದೆ” ಎಂದು ತಿಳಿಸಿದರು.
“ಸುಟ್ಟ ದೇಹಗಳನ್ನು ಗುರುತಿಸಲಾಗುತ್ತಿಲ್ಲ. ಈ ಜನರು ನಿದ್ರೆಯಲ್ಲಿದ್ದು, ಬೆಂಕಿ ಅತ್ಯಂತ ವೇಗವಾಗಿ ಹರಡಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತೋರುತ್ತದೆ” ಎಂದು ಗಾರ್ಗ್ ಮಾಹಿತಿ ನೀಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಂತಾಪ ಸೂಚಿಸಿದ್ದು, ಶೀಘ್ರದಲ್ಲೇ ಘಟನಾ ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. “ಬೆಳಿಗ್ಗೆಯೇ ದುಃಖದ ಸುದ್ದಿ ಕೇಳಿದೆ. ನಾನು ಸ್ಥಳಕ್ಕೆ ತೆರಳಿ ಸಂತ್ರಸ್ತರನ್ನು ಖುದ್ದಾಗಿ ಭೇಟಿ ಮಾಡುತ್ತೇನೆ” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಬೆಂಕಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಇದನ್ನೂ ಓದಿರಿ: