ಕೇಂದ್ರ ಸಚಿವ ಹಾಗೂ ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಸಲ್ಲಿಸಿರುವ ಅಫಿಡವಿಟ್ ವಿವರಗಳಲ್ಲಿ ಏನಾದರು ಹೊಂದಾಣಿಕೆಯಾಗದಿರುವ ಅಂಶಗಳಿವೆಯೇ? ಎಂದು ಪರಿಶೀಲಿಸುವಂತೆ ಕೇಂದ್ರೀಯ ನೇರ ತೆರಿಗೆ ಮಂಡಳಿಗೆ (ಸಿಬಿಡಿಟಿ) ಚುನಾವಣಾ ಆಯೋಗ ಮಂಗಳವಾರ ಸೂಚಿಸಿದೆ ಎಂದು ವರದಿಯಾಗಿದೆ.
ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧ ಕಣದಲ್ಲಿರುವ ರಾಜೀವ್ ಚಂದ್ರಶೇಖರ್ ಅವರು ಸಲ್ಲಿಸಿರುವ ಅಫಿಡವಿಟ್ನಲ್ಲಿ ಅಂಶಗಳು ಮತ್ತು ಘೋಷಿತ ಆಸ್ತಿಯ ನಡುವೆ ಹೊಂದಾಣಿಕೆಯಾಗುತ್ತಿಲ್ಲ ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಕಾರ್ಯವಿಧಾನದ ಪ್ರಕಾರ, ಚಂದ್ರಶೇಖರ್ ಅವರು ಸಲ್ಲಿಸಿರುವ ಅಫಿಡವಿಟ್ ವಿವರಗಳಲ್ಲಿ ಏನಾದರು ಹೊಂದಾಣಿಕೆಯಾಗದ ಅಂಶಗಳಿವೆಯೇ? ಎಂದು ಪರಿಶೀಲಿಸಲು ಸಿಬಿಡಿಟಿಗೆ ಚುನಾವಣಾ ಆಯೋಗ ನಿರ್ದೇಶಿಸಿದೆ ಎಂದು ತಿಳಿದು ಬಂದಿದೆ.
ಅಫಿಡವಿಟ್ನಲ್ಲಿ ಯಾವುದಾದರು ಹೊಂದಾಣಿಕೆಯಾಗದಿರುವುದು ಅಥವಾ ತಪ್ಪು ಮಾಹಿತಿ ಕಂಡು ಬಂದರೆ 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 125 ಎ ಅಡಿಯಲ್ಲಿ ರಾಜೀವ್ ಚಂದ್ರಶೇಖರ್ ವಿರುದ್ದ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಕಾನೂನಿನ ಪ್ರಕಾರ, ನಾಮನಿರ್ದೇಶನ ಪತ್ರಗಳಲ್ಲಿ ಅಥವಾ ಅಫಿಡವಿಟ್ನಲ್ಲಿ ಯಾವುದೇ ಮಾಹಿತಿಯನ್ನು ಮರೆಮಾಚಿರುವುದು ಸಾಭೀತಾದರೆ, ಆರು ತಿಂಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಅಥವಾ ದಂಡ. ಇಲ್ಲಾ ಎರಡನ್ನೂ ವಿಧಿಸಬಹುದು.
ಇದನ್ನೂ ಓದಿ : ಮಾಜಿ ಕೇಂದ್ರ ಸಚಿವ ಬಿರೇಂದರ್ ಸಿಂಗ್ ಕಾಂಗ್ರೆಸ್ ಸೇರ್ಪಡೆ