ಮಾಧ್ಯಮ ಸಂಸ್ಥೆಗಳ ವರದಿಗಳು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ‘ನಕಲಿ ಸುದ್ದಿ’ಗಳ ಮೇಲೆ ನಿಗಾ ಇಡಲು ರಾಜ್ಯದಲ್ಲಿ ‘ಫ್ಯಾಕ್ಟ್ ಚೆಕ್’ ಘಟಕ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರದ ಈ ನಿಧಾರದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ) ಈ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ನಮ್ಮದು ಉತ್ತರಪ್ರದೇಶ ಸರ್ಕಾರವಲ್ಲ. ನಮ್ಮ ಸರ್ಕಾರ ಕಾನೂನಿಗೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ. ಸರ್ಕಾರದ ನಿರ್ಣಯ ಕುರಿತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ)ಗೆ ಪತ್ರ ಬರೆಯುತ್ತೇನೆ” ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರಿಯಾಂಕ್ ಖರ್ಗೆ ಟ್ವೀಟ್ ಕೂಡ ಮಾಡಿದ್ದು, ”ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಒಪ್ಪಿಕೊಂಡಂತೆ, ಆನ್ಲೈನ್ ಕ್ಷೇತ್ರವು ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ಸವಾಲನ್ನು ಎದುರಿಸುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಕ್ರಮಗಳ ಅನುಷ್ಠಾನದ ಅಗತ್ಯವಿದೆ” ಎಂದಿದ್ದಾರೆ.
”ನಮ್ಮ ಸತ್ಯ-ಪರಿಶೀಲನಾ ಘಟಕವು ಪಕ್ಷಪಾತ ರಹಿತವಾದ ಅರಾಜಕೀಯ ನಿಲುವನ್ನು ಎತ್ತಿಹಿಡಿಯುತ್ತದೆ ಮತ್ತು ಸಾರ್ವಜನಿಕರಿಗೆ ಬಳಸುವ ವಿಧಾನಗಳನ್ನು ಪಾರದರ್ಶಕವಾಗಿ ವಿವರಿಸುತ್ತದೆ ಎಂದು ಗೌರವಾನ್ವಿತ ಸಂಸ್ಥೆಗೆ ನಾನು ಭರವಸೆ ನೀಡಲು ಬಯಸುತ್ತೇನೆ” ಎಂದು ಹೇಳಿದ್ದಾರೆ.
As acknowledged by the Editors Guild of India, the online realm faces a challenge of misinformation and fake news, necessitating the implementation of measures to address this issue.
I wish to reassure the esteemed organization that our fact-check unit will uphold an apolitical… https://t.co/PYbGE8VkRy
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 29, 2023
”ಇದಲ್ಲದೆ, ನಾವು ಸ್ವತಂತ್ರ ಸಂಸ್ಥೆಗಳನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದ್ದೇವೆ, ಅದು ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿಯ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತದೆ” ಎಂದು ಹೇಳಿದ್ದಾರೆ.
”ಕರ್ನಾಟಕ ಸರ್ಕಾರ ಬಸವಣ್ಣ ಮತ್ತು ಬಾಬಾಸಾಹೇಬರ ವಿಚಾರಧಾರೆಗಳಿಗೆ ಬದ್ಧವಾಗಿದೆ. ಖಚಿತವಾಗಿರಿ, ನಾವು ನೈಸರ್ಗಿಕ ನ್ಯಾಯದ ತತ್ವಗಳನ್ನು ಶ್ರದ್ಧೆಯಿಂದ ಅನುಸರಿಸುತ್ತೇವೆ. ಈ ಘಟಕದ ಸ್ಥಾಪನೆಯು ಯಾವುದೇ ರೀತಿಯಲ್ಲೂ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನವಲ್ಲ” ಎಂದು ದ್ಪಷ್ಟಪಡಿಸಿದ್ದಾರೆ.
ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದ್ದೇನು?
‘ಫ್ಯಾಕ್ಟ್ ಚೆಕ್’ ಘಟಕ ಸ್ಥಾಪನೆ ವಿಚಾರವಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ), ”ಆನ್ಲೈನ್ನಲ್ಲಿ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ಸಮಸ್ಯೆ ಇರುವುದು ನಿಜ. ಆದರೆ ಅಂತಹ ವಿಷಯವನ್ನು ಗುರುತಿಸುವ ಹಾಗೂ ತೆಗೆದುಹಾಕುವ ಪ್ರಯತ್ನಗಳನ್ನು ಸರ್ಕಾರದ ವ್ಯಾಪ್ತಿಯಲ್ಲಿಲ್ಲದ ಸ್ವತಂತ್ರ ಸಂಸ್ಥೆಗಳು ಮುನ್ನಡೆಸಬೇಕು. ಇಲ್ಲದಿದ್ದರೆ ಅದು ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕುವ ಸಾಧನಗಳಾಗುತ್ತವೆ. ಯಾವುದೇ ಮೇಲ್ವಿಚಾರಣಾ ಚೌಕಟ್ಟು ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಸೇರಿದಂತೆ ನೈಸರ್ಗಿಕ ನ್ಯಾಯದ ತತ್ವಗಳನ್ನು ಅನುಸರಿಸಬೇಕು, ಇದು ಪತ್ರಿಕಾ ಸ್ವಾತಂತ್ರ್ಯವನ್ನು ಹಾಳು ಮಾಡಬಾರದು ಎಂದು ಹೇಳಿತ್ತು. ಅಲ್ಲದೆ, ಉದ್ದೇಶಿತ ಸತ್ಯ-ಪರಿಶೀಲನಾ ಘಟಕದ ವ್ಯಾಪ್ತಿ ಹಾಗೂ ಅಧಿಕಾರಗಳು ಮತ್ತು ಅದು ಕಾರ್ಯನಿರ್ವಹಿಸುವ ಆಡಳಿತ ಕಾರ್ಯವಿಧಾನವನ್ನು ಸ್ಪಷ್ಟವಾಗಿ ತಿಳಿಸಬೇಕು” ಎಂದು ಹೇಳಿತ್ತು.