ರೈತ ಹೋರಾಟ ಆರಂಭವಾದಾಗಿನಿಂದ ರೈತರನ್ನು ಒಕ್ಕೂಟ ಸರ್ಕರ ದೂಷಿಸುತ್ತಲೇ ಇತ್ತು. ದಲ್ಲಾಳಿಗಳ ಹೋರಾಟ, ಖಲಿಸ್ತಾನಿಗಳ ಹೋರಾಟ, ಪಂಜಾಬ್ ರೈತರ ಹೋರಾಟ, ಸಿಖ್ಖರ ಹೋರಾಟ ಎಂದು ಚಳವಳಿಯನ್ನು ಹತ್ತಿಕ್ಕುವ ಕೆಲಸ ಮಾಡಿತ್ತು.
ಆದರೆ, ರೈತರು ಈ ಯಾವ ಷಡ್ಯಂತರಕ್ಕೂ ಹೆದರದೆ ಹೋರಾಟ ಮುಂದುವರೆಸಿದರು. ಇಂದು( ಶುಕ್ರವಾರ) ಅದಕ್ಕೆ ಪ್ರತಿಫಲ ಸಿಕ್ಕಿದ್ದು ರೈತ ಹೋರಾಟಕ್ಕೆ ಜಯ ಸಿಕ್ಕಿದೆ. ಮೂರು ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಸರ್ಕಾರ ಘೋಷಿಸಿದೆ. ಆದರೆ, ಈ ಹೋರಾಟಕ್ಕೆ ಬೆಂಬಲ ನೀಡಿ ಸರ್ಕಾರದ ಕೆಂಗಣ್ಣಿಗೆ ಗುರಿಯಾದವರರನ್ನು ಮರೆಯಬಾರದು. ಅವರಲ್ಲಿ ಆಯ್ದ ಕೆಲವರ ಪಟ್ಟಿ ಇಲ್ಲಿದೆ.
೧. ದಿಶಾ ರವಿ: ಬೆಂಗಳೂರಿನ ಇಪ್ಪತ್ತೊಂದು ವರ್ಷದ ಯುವ ಹೋರಾಟಗಾರ್ತಿ ದಿಶಾ ರವಿಯನ್ನು ದೇಶದ್ರೋಹ ಮುಂತಾದ ಗಂಭೀರ ಆರೋಪಗಳ ಮೇಲೆ ದೆಹಲಿ ಪೊಲೀಸರು ಬಂಧಿಸಿದ್ದರು. ರೈತ ಹೋರಾಟದ ಕುರಿತು ಹಾಗೂ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಬಳಸಿದ ಕೆಲವು ವಿಧಾನಗಳನ್ನು ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಒಂದು ಸಾರ್ವಜನಿಕ ಟೂಲ್ಕಿಟ್ ಜಾರಿಯಲ್ಲಿತ್ತು.
ಇದನ್ನು ದೇಶದ ವಿರುದ್ಧ ನಡೆಯುತ್ತಿರುವ ಅಂತಾರಾಷ್ಟ್ರೀಯ ಷಡ್ಯಂತ್ರವೆಂದು ಬಿಂಬಿಸಿ, ಆ ದಾಖಲೆಯನ್ನು ಸಂಪಾದಿಸಿದವರಲ್ಲೊಬ್ಬರಾದ ಕಾರಣಕ್ಕೆ ದಿಶಾ ಅವರನ್ನು ಬಂಧಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ವಿರುದ್ಧ ತೇಜೋವಧೆ ನಡೆಸಲಾಗಿತ್ತು.
೨. ಗ್ರೇಟಾ ಥನ್ಬರ್ಗ್:
ಸ್ವೀಡಿಷ್ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ತನ್ನ ಟ್ವೀಟ್ನಲ್ಲಿ, “ಭಾರತೀಯ ರೈತರ ಹೋರಾಟದ ಜೊತೆ ನಾವು ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ” ಎಂದು ಎಂದು ಸಿಎನ್ಎನ್ ವರದಿಯನ್ನು ಹಂಚಿಕೊಂಡು ಹೋರಾಟಕ್ಕೆ ಬೆಂಬಲ ನೀಡಿದ್ದರು.
ಭಾರತದಲ್ಲಿ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಬೆಂಬಲಿಸುವ ಮಾರ್ಗಗಳನ್ನು ವಿವರಿಸುವ ಟೂಲ್ಕಿಟ್ ಅನ್ನು ಟ್ವೀಟ್ ಮಾಡಿದ್ದರು. ಇವರ ವಿರುದ್ದ “ಕ್ರಿಮಿನಲ್ ಪಿತೂರಿ ಮತ್ತು ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ” ಎಂದು ಆರೋಪಿಸಿ ದೆಹಲಿ ಪೊಲೀಸರು ದೂರು ದಾಖಲಿಸಿದ್ದರು. ಇಷ್ಟೇ ಅಲ್ಲದೆ ಅವರ ಹಳೆಯ ಫೋಟೋಗಳನ್ನು ಎಡಿಟ್ ಮಾಡಿ ವಿಕೃತಿ ಮೆರೆದಿದ್ದರು.
೩. ರಿಹಾನ್ನಾ:
ಅಂತರರಾಷ್ಟ್ರೀಯ ಪಾಪ್ ಗಾಯಕಿ ರಿಹಾನ್ನಾ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ರೈತರ ಹೋರಾಟಕ ಕುರಿತು ಸಿಎನ್ಎನ್ ಲೇಖನವನ್ನು ಟ್ವೀಟ್ ಮಾಡಿ, “ನಾವ್ಯಾಕೆ ಈ ವಿಷಯದ ಕುರಿತು ಚರ್ಚಿಸುತ್ತಿಲ್ಲ” ಎಂದು ಪ್ರಶ್ನಿಸಿದ್ದರು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ರೈತ ಹೋರಾಟಕ್ಕೆ ಬೆಂಬಲ ಬರಲು ಕಾರಣವಾಗಿತ್ತು.
ರಿಹಾನ್ನಾ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಪರ ವಿರೋಧ ಚರ್ಚೆಗೂ ಕಾರಣವಾಗಿತ್ತು. ಕೆಲವರು ಇದು ಭಾತರದ ಆಂತರಿಕ ವಿಷಯ ಎಂದು ಹೇಳಿದರೆ, ಇನ್ನೂ ಕೆಲವರು ಇದು ಅಂತರಾಷ್ಟ್ರೀಯ ವಿಷಯ ಎಂದು ಸಮರ್ಥನೆ ಮಾಡಿಕೊಂಡಿದ್ದರು. ಇನ್ನು ಕೆಲವರ ಆಕೆಯ ಕಾರ್ಯಕ್ರಮದ ವಿಡಿಯೋ, ಫೋಟೋಗಳನ್ನು ಟ್ವೀಟ್ ಮಾಡಿ ಟೀಕಿಸಿದ್ದರು.
ಇದನ್ನೂ ಓದಿ: ರೈತ ಹೋರಾಟಕ್ಕೆ ಗ್ರೇಥಾ ಥನ್ಬರ್ಗ್ ಮತ್ತು ಪಾಪ್ ಗಾಯಕಿ ರಿಹಾನ್ನಾ ಬೆಂಬಲ; ನೆಟ್ಟಿಗರ ಪ್ರತಿಕ್ರಿಯೆಯೇನು?
೪. ಲಿಲ್ಲಿಸಿಂಗ್: ಲಿಲ್ಲಿ ಸಿಂಗ್ ಕೆನಡಾ ಮೂಲದ ಯೂಟ್ಯೂಬರ್, ಹಾಸ್ಯನಟಿಯಾಗಿದ್ದಾರೆ. ಅಂತರಾಷ್ಟ್ರೀಯ ಖ್ಯಾತಿ ಹೊಂದಿರುವ ಲಿಲ್ಲಿ ಸಿಂಗ್ ರೈತ ಹೋರಾಟಕ್ಕೆ ಬೆಂಬಲ ನೀಡಿದ್ದರು. 63 ನೇ ಗ್ರ್ಯಾಮಿ ಪ್ರಶಸ್ತಿ ವೇದಿಕೆಯನ್ನು ಅವರು ರೈತ ಆಂದೋಲನವನ್ನು ಬೆಂಬಲಿಸಲು ಬಳಸಿಕೊಂಡರು. ಅವರು ಗ್ರ್ಯಾಮಿ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸುವಾಗ “ನಾನು ರೈತರ ಜೊತೆ ನಿಲ್ಲುತ್ತೇನೆ” ಎಂದು ಬರೆದಿರುವ ಮಾಸ್ಕ್ ಅನ್ನು ಧರಿಸಿದ್ದರು.
೫. ಸ್ವರ ಭಾಸ್ಕರ್:
ಬಾಲಿವುಡ್ ನಟಿ ಸ್ವರ ಭಾಸ್ಕರ್ ರೈತ ಹೋರಾಟದ ಆರಂಭದಿಂದಲೂ ಬೆಂಬಲ ನೀಡಿದ್ದರು. ಬೆಂಬಲ ನೀಡುವುದರ ಜೊತೆಗೆ ಸ್ವತಃ ಪ್ರತಿಭಟನಾ ನಿರತ ಸಿಂಘು ಗಡಿಗೆ ಭೇಟಿ ನೀಡಿ ರೈತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
೬. ತಾಪ್ಸಿ ಪನ್ನು:
ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ದ ನಿರಂತರವಾಗಿ ಧ್ವನಿ ಎತ್ತುತ್ತಿದ್ದ ಖ್ಯಾತ ಬಾಲಿವುಡ್ ನಟಿ ತಾಪ್ಸಿ ಪನ್ನು ರೈತ ಹೋರಾಟಕ್ಕೂ ಬೆಂಬಲ ನೀಡಿದ್ದರು. ಗಾಯಕಿ ರಿಹಾನ್ನಾ ವಿರುದ್ಧದ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದ ನಟಿ, “ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಅಲ್ಲಾಡಿಸುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಒಂದು ಕಾರ್ಯಕ್ರಮ ನಿಮ್ಮ ಧಾರ್ಮಿಕ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿ. ಅದರ ಬದಲು ಉಳಿದವರಿಗೆ ಪ್ರೊಪಗಂಡಾ ಕಲಿಸುವ ಟೀಚರ್ ಆಗಬೇಡಿ” ಎಂದು ತೀಕ್ಷ್ಣ ಪ್ರತ್ಯುತ್ತರ ನೀಡಿದ್ದರು.
ಇದರಿಂದ ನಟಿ ತಾಪ್ಸಿ ಪನ್ನು ಅವರ ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.
೭. ಸೋನಾಕ್ಷಿ ಸಿನ್ಹಾ:
ರೈತ ಹೋರಾಟದ ಬಗ್ಗೆ ವಿದೇಶಿಗರು ಮಾತನಾಡುತ್ತಿದ್ದಾರೆ ಇದು ಪ್ರೊಪಗಾಂಡ ಎಂದೆಲ್ಲ ಹೇಳುತ್ತಿದ್ದ ಸೆಲಬ್ರಿಟಿಗಳ ಮುಖಕ್ಕೆ ರಾಚುವಂತೆ ಬಾಲಿವುಡ್ ಸೋನಾಕ್ಷಿ ಸಿನ್ಹಾ ಟ್ವೀಟ್ ಮಾಡಿದ್ದರು.
“ನಮ್ಮ ದೇಶದ ಕಾರ್ಯಚಟುವಟಿಕೆಗಳನ್ನು ಹೊರಗಿನ ಶಕ್ತಿಗಳು ನಿಯಂತ್ರಿಸಲು ಪ್ರಯತ್ನಿಸುತ್ತಿವೆ ಎಂದು ನಿಮ್ಮನ್ನು ನಂಬಿಸಲು ಸುದ್ದಿ ಮಾಧ್ಯಮಗಳು ಪ್ರಯತ್ನಿಸುತ್ತಿವೆ. ಆದರೆ ನೀವು ನೆನಪಿಡಿ ಟೀಕಿಸಿದವರ್ಯಾರೂ ಅನ್ಯಗ್ರಹ ಜೀವಿಗಳಲ್ಲ. ಮತ್ತೊಬ್ಬರ ಹಕ್ಕುಗಳಿಗಾಗಿ ಧ್ವನಿ ಎತ್ತಿರುವ ಸಹಜೀವಿ ಮನುಷ್ಯರು ಅವರು. ಇವೆರಡು ಭಿನ್ನ ಚರ್ಚೆಗಳು. ನೀತಿ, ಕಾಯ್ದೆ, ಕಾನೂನು ಮತ್ತು ಅವುಗಳ ಪರಿಣಾಮದ ಮೇಲೆ ನಿಮಗೆ ಭಿನ್ನ ಅಭಿಪ್ರಾಯಗಳು ಇರಬಹುದು. ಆದರೆ ಆ ಭಿನ್ನಾಭಿಪ್ರಾಯವನ್ನು “ಅನ್ಯ” ವಾದಕ್ಕೆ ಬಳಸಿಕೊಳ್ಳಲು ಅವಕಾಶ ಕೊಡಬೇಡಿ. ಟೀಕೆ ಇರುವುದು ಮಾನವ ಹಕ್ಕುಗಳ ಮತ್ತು ಸ್ವಾತಂತ್ರ್ಯದ ಹರಣದ ಬಗ್ಗೆ..” ಎಂದು ಹೇಳಿದ್ದರು.
೮. ದಿಲ್ಜಿತ್ ದೋಸಾಂಜ್:
ಬಾಲಿವುಡ್, ಪಂಜಾಬಿ ನಟ, ಗಾಯಕ ದಿಲ್ಜಿತ್ ದೋಸಾಂಜ್ ರೈತ ಪ್ರತಿಭಟನೆ ಆರಂಭದಿಂದಲು ರೈತರ ಪರವಾಗಿ ನಿಂತಿದ್ದಾರೆ. ರೈತರ ಬಗೆಗಿನ ಎಲ್ಲಾ ಆರೋಪಗಳಿಗೂ ಉತ್ತರ ನೀಡುತ್ತಿದ್ದಾರೆ. ನಟಿ ಕಂಗನಾ ರಣಾವತ್ ವಿರುದ್ಧ ದನಿ ಎತ್ತಿದವರಲ್ಲಿ ಪ್ರಮುಖರು.
ರೈತರಿಗೆ ಪಿಜ್ಜಾ ವಿರಣೆ ಬಗ್ಗೆ ಟೀಕೆಗಳು ವ್ಯಕ್ತವಾದಾಗ ತಮ್ಮ ಟ್ವಿಟರ್ ಖಾತೆಯಲ್ಲಿ ಒಂದು ಚಿತ್ರವನ್ನು ಟ್ವೀಟ್ ಮಾಡಿ, “ರೈತರು ವಿಷ ಸೇವಿಸುವುದರ ಬಗ್ಗೆ ಯಾರಿಗೂ ಎಂದಿಗೂ ಕಾಳಜಿಯಿಲ್ಲ. ಆದರೆ, ರೈತರು ಪಿಜ್ಜಾ ತಿನ್ನುವುದು ಸುದ್ದಿಯಾಗಿದೆ.” ಎಂದು ವ್ಯಂಗ್ಯ ಮಾಡಿದ್ದರು. ಜೊತೆಗೆ ಚಳಿಗಾಲದ ಹೊದಿಕೆಗಳಿಗಾಗಿ ರೈತರಿಗೆ 1 ಕೋಟಿ ರೂಪಾಯಿ ದಾನ ಮಾಡಿದ್ದರು.
ಇತ್ತ ಸಚಿನ್ ತೆಂಡುಲ್ಕರ್, ವಿರಾಟ್ ಕೋಹ್ಲಿ, ಅಜಿಂಕ ರಹಾನೆ, ಅನಿಲ್ ಕುಂಬ್ಳೆ, ಲತಾ ಮಂಗೇಶ್ಕರ್, ಅಕ್ಷಯ್ ಕುಮಾರ್, ಸೈನಾ ನೆಹ್ವಾಲ್, ಯುವರಾಜ್ ಸಿಂಗ್, ಸುರೇಶ್ ರೈನಾ, ಸುನಿಲ್ ಶೆಟ್ಟಿ, ಅಜಯ್ ದೇವಗನ್, ಕರಣ್ ಜೋಹಾರ್, ಏಕ್ತಾ ಕಪೂರ್ ಸೇರಿದಂತೆ ಹಲವಾರು ಜನಪ್ರಿಯ ವ್ಯಕ್ತಿಗಳು ವಿದೇಶಿಯರು ಭಾರತದ ಆಂತರಿಕ ವಿಷಯದಲ್ಲಿ ಮಾತನಾಡಬಾರದು ಎಂದು ಹೇಳಿ ಸರ್ಕಾರದ ಪರವಾಗಿ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ರೈತರು ವಿಷ ಸೇವಿಸಿದಾಗ ಕಾಳಜಿ ವಹಿಸದವರು ಪಿಜ್ಜಾ ತಿನ್ನುವಾಗ ಟೀಕೆ ಮಾಡುತ್ತಾರೆ – ದಿಲ್ಜಿತ್ ದೋಸಾಂಜ್
ಆಡಳಿತಾರೂಡರ ಮರ್ಜಿಗೆ ಒಳಗಾಗದೆ, ರೈತರ ಹೋರಾಟವನ್ನು ಬೆಂಬಲಿಸಿದ ಇವರೆಲ್ಲರೂ ಧನ್ಯವಾದಗಳು.
ಇವರ ಎಲ್ಲಾರ ಗುರುಗಳು ಭಯೋತ್ಪಾದಕ ಸಂಘಟನೆಯ ಅಂತಾರಾಷ್ಟ್ರೀಯ ಮುಖಂಡರು ಅನ್ನೋದು ಈಗ ಸಾಬೀತು ತಾವೇ ತಮ್ಮ ವರದಿ ಮೂಲಕ ತಿಳಿಸಿ ,ಬೆತ್ತಲು ಮಾಡಿದ್ದು ಒಳಿತೇ ಆಗಿದೆ .ಇದರಲ್ಲಿ ಬಹುಪಾಲು ವಿದೇಶಿ ಮೂಲದವರೇ ಇರೋದು ಸಾಬೀತು ತಾವೇ ಮಾಡಿದ್ದೀರಿ ,ಇವರಿಗೆ ಗುಲಾಮಗಿರಿ ಬೇಕೆ ವಿನಹ ದೇಶದ ಭದ್ರತೆ ,ಬೆಳವಣಿಗೆಯ ಅಗತ್ಯತೆ ಇಲ್ಲಾ,ಮುಂದಿನ ದಿನಗಳಲ್ಲಿ ನಿಮ್ಮಗಳ ಮತ್ತಷ್ಟು ಬಂಡವಾಳ ಹೊರಬರೋದು ಕಂಡಿತ ಆಗ ನಿಮಗೆ ಆಪ್ಘನ್,ಪಾಕ್ ,ಚೀನಾ ಗಳೇ ಗಟ್ಟಿ ,ಭಾರತದಲ್ಲಿ ದೇಶ ದ್ರೋಹಿಗಳಿಗೆ ಸ್ಥಳ ಇರಲ್ಲಾ .