Homeಮುಖಪುಟರೈತರ ಹೋರಾಟವನ್ನು ಇಡೀ ದೇಶ ಇಂದು ಹೆಮ್ಮೆಯಿಂದ ಸ್ಮರಿಸುತ್ತಿದೆ: ಸಿದ್ದರಾಮಯ್ಯ

ರೈತರ ಹೋರಾಟವನ್ನು ಇಡೀ ದೇಶ ಇಂದು ಹೆಮ್ಮೆಯಿಂದ ಸ್ಮರಿಸುತ್ತಿದೆ: ಸಿದ್ದರಾಮಯ್ಯ

ನಮ್ಮ ರೈತರು ತಾವೂ ಗೆದ್ದು ಬಾಬಾ ಸಾಹೇಬರ ಸಂವಿಧಾನವನ್ನು ಮತ್ತು ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಹೋರಾಟದ ಮಾದರಿಯನ್ನೂ ಗೆಲ್ಲಿಸಿದ್ದಾರೆ ಮತ್ತು ಜೀವಂತಗೊಳಿಸಿದ್ದಾರೆ.

- Advertisement -
- Advertisement -

ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಜನದ್ರೋಹಿಯಾದ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವುದಾಗಿ ಹೇಳಿದ್ದಾರೆ. ಹಾಗಾಗಿ ರೈತರ ಹೋರಾಟವನ್ನು ಇಡೀ ದೇಶ ಇಂದು ಹೆಮ್ಮೆಯಿಂದ ಸ್ಮರಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ.

ರೈತರ ದೀರ್ಘವಾದ ಹೋರಾಟಕ್ಕೆ ತಾತ್ಕಾಲಿಕ ಗೆಲವು ಲಭಿಸಿದೆ. ಇದು ತಾತ್ಕಾಲಿಕ ಗೆಲುವು ಯಾಕೆಂದರೆ ಕೇಂದ್ರ ಮತ್ತು ಹಲವು ರಾಜ್ಯಗಳಲ್ಲಿ ಚುನಾವಣೆಗಳ ಅಗ್ನಿ ಪರೀಕ್ಷೆ ಎದುರಾಗುತ್ತಿದೆ. ಹಿಟ್ಲರ್ ಶಾಹಿ ಆಡಳಿತ ಮಾಡಿದರೆ ಚುನಾವಣೆಗಳಲ್ಲಿ ನಾವು ಚಿಂದಿಯಾಗಿ ಹೋಗುತ್ತೇವೆ ಎಂದು ಮೋದಿ ಮತ್ತು ಅಮಿತ್ ಶಾ ಅವರಿಗೆ ಬಹುಶಃ ಇಂಟೆಲಿಜೆನ್ಸ್ ಮಾಹಿತಿ ದೊರೆತಿದೆ. ಹಾಗಾಗಿ ಚುನಾವಣೆಗಳು ಮುಗಿಯಲಿ ಆಮೇಲೆ ನೋಡೋಣ ಎಂದು ರೈತ ದ್ರೋಹಿ ಕಾಯ್ದೆಗಳನ್ನು ತಾತ್ಕಾಲಿಕವಾಗಿ ವಾಪಸ್ಸು ಪಡೆದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಿದ್ದರಾಮಯ್ಯನವರು, “ಇವರು ಆಡಳಿತ ನಡೆಸುವುದು ಅಂಬಾನಿ, ಅದಾನಿ ಮುಂತಾದವರ ಹಿತಾಸಕ್ತಿಗೆ ಮಾತ್ರ ಆಗಿರುವುದರಿಂದ ಅವರ ಹಿತಾಸಕ್ತಿಯನ್ನು ರಕ್ಷಿಸುವುದು ಮೋದಿ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ರೈತ ದ್ರೋಹಿಯಾದ ಕಾನೂನುಗಳನ್ನು ವಾಪಸ್ಸು ಪಡೆದರೆ ಅಂಬಾನಿ, ಅದಾನಿ, ಧಮಾನಿ ಮುಂತಾದವರು ತುಸು ಬೇಜಾರು ಮಾಡಿಕೊಳ್ಳುತ್ತಾರೆ. ಹಾಗಾಗಿ ತಾತ್ಕಾಲಿಕವಾಗಿ ಹಿಂತೆಗೆದಂತೆ ಮಾಡಿ ಮತ್ತೆ ಇದಕ್ಕಿಂತಲೂ ಘೋರವಾದ ಕಾಯ್ದೆಗಳನ್ನು ದೇಶದ ಮೇಲೆ ಹೇರುತ್ತಾರೆ. ಈ ಕುರಿತು ದೇಶವಾಸಿಗಳು, ಅದರಲ್ಲೂ ರೈತರು ವಿಶೇಷ ಎಚ್ಚರಿಕೆ ವಹಿಸಬೇಕು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನಮ್ಮ ಹೆಮ್ಮೆಯ ರೈತರು ತಾವೂ ಗೆದ್ದು ದೇಶವನ್ನೂ ತುಸು ಮಟ್ಟಿಗೆ ಗೆಲ್ಲಿಸಿದ್ದಾರೆ. ಈ ದೇಶದ್ರೋಹಿ ಕಾನೂನುಗಳನ್ನು ದೇಶದ ಜನರ ಮೇಲೆ ಹೇರಿದಾಗಿನಿಂದಲೂ ಈ ಕಾನೂನುಗಳು ರೈತರ ವಿರೋಧಿಗಳು ಮಾತ್ರವಲ್ಲ, ಇವು ನಗರ, ಪಟ್ಟಣಗಳ ಬಡವರು, ಮಧ್ಯಮ ವರ್ಗದವರನ್ನು ನಾಶ ಮಾಡುವ ಕಾನೂನುಗಳು. ದೇಶದ ಕೃಷಿ ಅಂಬಾನಿ, ಅದಾನಿಗಳ ಕೈಗೆ ಹೋದರೆ, ಅವರು ಮೊನೊಪಲಿ ಸಾಧಿಸಿ ದೇಶದ ಜನರನ್ನು, ಅವರ ಆರ್ಥಿಕತೆಯನ್ನು ನಾಶ ಮಾಡಿ ಬಿಡುತ್ತಾರೆಂದು ನಾನು ಹೇಳುತ್ತಾ ಬಂದಿದ್ದೆ. ಇದರ ಜೊತೆಗೆ ರೈತ ಹೋರಾಟವನ್ನು ಬೆಂಬಲಿಸಿ ಎಂದು ಮನವಿ ಮಾಡಿದ್ದೆ. ಅದಕ್ಕಾಗಿ ಹಲವು ಮನವಿ ಪತ್ರಗಳನ್ನು ಬರೆದು ರಾಜ್ಯದ ಜನರ ಮುಂದೆ ಇಟ್ಟಿದ್ದೆ. ಹಾಗೂ“ ಬಿಜೆಪಿ ಸರ್ಕಾರಗಳ ಐದು ಕಾಯ್ದೆಗಳು; ಅಸಂಖ್ಯಾತ ಸುಳ್ಳುಗಳು” ಎಂಬ ಕಿರು ಪುಸ್ತಕ ಬರೆದು ಜನರ ಮುಂದೆ ಇಟ್ಟಿದ್ದೆ ಎಂದು ತಿಳಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದ ನಂತರ ಅಹಿಂಸೆಯ ಮಾರ್ಗದಲ್ಲಿ ನಡೆದ ಬೃಹತ್ ಹೋರಾಟವನ್ನು ನಮ್ಮ ರೈತರು ಚಳಿ, ಮಳೆ, ಸುಡುವ ಬಿಸಿಲು, ಕೊಲೆಗಡುಕ ಕೊರೋನ ಎಲ್ಲವನ್ನು ನಿಗ್ರಹಿಸಿ ದೇಶದ ಜನರಿಗೆ ಹೋರಾಟ ಮತ್ತು ಗೆಲುವಿನ ಮಹತ್ವವೇನು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಹೋರಾಟದಲ್ಲಿ ಅಪಾರ ಸಾವು ನೋವುಗಳು ಸಂಭವಿಸಿವೆ. 700 ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಗುಂಡು ಹಾರಿಸಿ, ವಾಹನಗಳನ್ನು ನುಗ್ಗಿಸಿ ಕೊಲ್ಲಲಾಯಿತು. ಪೋಲೀಸ್ ಮುಂತಾದ ಶಕ್ತಿಗಳನ್ನು ಬಳಸಿ ದಮನಿಸಲು ಪ್ರಯತ್ನಿಸಲಾಯಿತು. ಆದರೂ ಕೂಡ ರೈತರು ಉಕ್ಕಿನಂತೆ ನಿಂತು ಸರ್ವಾಧಿಕಾರಿ ಪ್ರಭುತ್ವವನ್ನು ಸೋಲಿಸಿದ್ದಾರೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ರೈತರು ತಾವೂ ಗೆದ್ದು ಬಾಬಾ ಸಾಹೇಬರ ಸಂವಿಧಾನವನ್ನು ಮತ್ತು ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಹೋರಾಟದ ಮಾದರಿಯನ್ನೂ ಗೆಲ್ಲಿಸಿದ್ದಾರೆ ಮತ್ತು ಜೀವಂತಗೊಳಿಸಿದ್ದಾರೆ. ಇದರ ಮೂಲಕ ಸರ್ವಾಧಿಕಾರದ ಹಿಟ್ಲರ್ ಗಿರಿಯನ್ನು ಸೋಲಿಸಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಿದ್ದಾರೆ. ಈ ದೃಷ್ಟಿಯಿಂದಲೂ ರೈತರು ನಡೆಸಿದ ಹೋರಾಟ ಅವಿಸ್ಮರಣೀಯವಾಗಿದೆ ಎಂದು ಹೇಳಿದ್ದಾರೆ.

ಇಷ್ಟೆಲ್ಲ ಆದರೂ ಹೋರಾಟವಿನ್ನೂ ಮುಗಿದಿಲ್ಲ ಎಂದು ಜನರಿಗೆ ಗೊತ್ತಿದೆ. ಯಾಕೆಂದರೆ ಪ್ರಧಾನಿ ಮೋದಿಯವರು “ ಕಾಯ್ದೆಗಳು ಸರಿಯಾಗಿದ್ದವು, ಆದರೆ ಅವುಗಳನ್ನು ಅರ್ಥಮಾಡಿಸುವಲ್ಲಿ ಸೋತೆವು ಎಂದು ಹೇಳಿದ್ದಾರೆ”. ತಾವು ಕೆಟ್ಟ ಮತ್ತು ಜನದ್ರೋಹಿಯಾದ ಕಾಯ್ದೆಗಳನ್ನು ತಂದಿದ್ದೆವು ಎಂದು ಅವರಿಗೆ ಗೊತ್ತಿದ್ದರೂ ಈ ಮಾತುಗಳನ್ನು ಹೇಳಿದ್ದಾರೆ. ಹಾಗಾಗಿ ಕಾಯ್ದೆಗಳ ಹಿಂತೆಗೆತವೆಂಬುದು ತಾತ್ಕಾಲಿಕ ಎನ್ನಿಸುತ್ತಿದೆ. ಈಗ ನಾವು ಒತ್ತಾಯಿಸಬೇಕಿರುವುದು ಕೂಡಲೆ ಸ್ವಾಮಿನಾಥನ್ ಅವರ ವರದಿಯನ್ನು ಅಂಗೀಕರಿಸಿ ವೈಜ್ಞಾನಿಕ ಬೆಲೆಗಳನ್ನು ಜಾರಿಗೊಳಿಸಬೇಕು. ನಾನು ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿರುವ ವಿಚಾರವನ್ನು ಈಗಲೂ ಒತ್ತಾಯಿಸುತ್ತೇನೆ. ರೈತರು ಬೆಳೆವ ಪ್ರತಿ ಉತ್ಪನ್ನಕ್ಕೂ ವೈಜ್ಞಾನಿಕ ಬೆಲೆ ನಿಗಧಿಗೊಳಿಸಿ ಆ ಬೆಲೆಗಳನ್ನು ಕಾನೂನುಬದ್ಧಗೊಳಿಸಬೇಕು. ಸರ್ಕಾರ ನಿಗಧಿಗೊಳಿಸಿದ ಬೆಲೆಗಳಿಗಿಂತ ಕಡಿಮೆ ದರಕ್ಕೆ ಕೊಳ್ಳುವುದನ್ನು ನಿರ್ಬಂದಿಸಬೇಕು ಅವರು ಒತ್ತಾಯಿಸಿದ್ದಾರೆ.

ವೈಜ್ಞಾನಿಕ ದರವು ಕೊಳ್ಳುವ ಗ್ರಾಹಕರಿಗೂ ಅನ್ವಯಿಸಬೇಕು. ಅದಾನಿ, ಅಂಬಾನಿ, ದಮಾನಿ ಮುಂತಾದ ಬೃಹತ್ ಕಾರ್ಪೊರೇಟ್ ಮಧ್ಯವರ್ತಿಗಳನ್ನು ಮುಲಾಜಿಲ್ಲದೆ ನಿರ್ಬಂಧಿಸಬೇಕು. ಇವರೆಲ್ಲ ರೈತನಿಂದ 10 ರೂಪಾಯಿಗೆ ಕೊಂಡು ಗ್ರಾಹಕರಿಗೆ 100 ರೂಪಾಯಿಗೆ ಮಾರುವ ಜನ. ಇಂಥ ದರ ಪದ್ಧತಿಯನ್ನು ಕಾನೂನಾತ್ಮಕವಾಗಿ ನಿಷೇಧಿಸಬೇಕು. ರೈತರು ಮತ್ತು ಗ್ರಾಹಕರನ್ನು ಒಂದೆ ವೇದಿಕೆಗೆ ತರುವ ವ್ಯವಸ್ಥೆಗಳನ್ನು ರೂಪಿಸಬೇಕು. ಹೋಬಳಿ, ದೊಡ್ಡ ಗ್ರಾಮ ಪಂಚಾಯತ್ ಕೇಂದ್ರಗಳಲ್ಲೂ ಎಪಿಎಂಸಿ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ರೈತರು ಬಳಸುವ ಬೀಜ, ಗೊಬ್ಬರ, ಔಷಧ ಮುಂತಾದವುಗಳ ವ್ಯಸ್ಥೆಯನ್ನು ಬಹುರಾಷ್ಟ್ರೀಯ ಕಂಪೆನಿಗಳ ಕಪಿ ಮುಷ್ಟಿಯಿಂದ ಬಿಡಿಸಿ ಆರೋಗ್ಯಕರವಾದ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೂಡಲೆ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ನಿಯಂತ್ರಿಸಿ ಕೇಂದ್ರ ಸರ್ಕಾರ ಅಡಿಷನಲ್ ಎಕ್ಸೈಜ್ ಡ್ಯೂಟಿಯ ಮೂಲಕ ಲೂಟಿ ಮಾಡುತ್ತಿರುವುದನ್ನು ಈ ಕೂಡಲೆ ನಿಲ್ಲಿಸಬೇಕು. ತೆರಿಗೆ ರಹಿತವಾಗಿ ಸರಬರಾಜು ಮಾಡಬೇಕು. ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಖಾಸಗೀಕರಿಸಲು ಹೊರಟಿರುವ ವಿದ್ಯುತ್, ಇಂಧನ, ಕಲ್ಲಿದ್ದಲು ಮುಂತಾದ ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡುವ ಯಾವುದೇ ರಂಗವನ್ನು ಖಾಸಗೀಕರಣಗೊಳಿಸುವುದನ್ನು ನಿಲ್ಲಿಸಬೇಕು.

ಮೋದಿಯವರು ಕೇವಲ ಬಾಯಿ ಮಾತಿನಲ್ಲಿ ಹೇಳದೆ, ಕೂಡಲೆ ಆದೇಶಗಳನ್ನು ಹೊರಡಿಸಿ ವಾಪಸ್ಸು ಪಡೆಯಬೇಕು. ಹುತಾತ್ಮ ರೈತರ ಕುಟುಂಬಗಳಿಗೆ ದೇಶ ಕಾಯುವ ಯೋಧರು ಹುತಾತ್ಮರಾದಾಗ ನೀಡುವ ಎಲ್ಲ ಸವಲತ್ತುಗಳನ್ನು ನೀಡಬೇಕು. ಮುಖ್ಯವಾಗಿ ಯೋಧರಿಗೆ ನೀಡಿದಷ್ಟೆ ಪರಿಹಾರ ನೀಡಬೇಕು. ಹುತಾತ್ಮರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಅವರ ಮಕ್ಕಳ ಶಿಕ್ಷಣವನ್ನು ಸರ್ಕಾರವೆ ನೋಡಿಕೊಳ್ಳಬೇಕು. ವೃದ್ಧ ತಂದೆ ತಾಯಿಗಳಿದ್ದರೆ ಅವರನ್ನು ಸರ್ಕಾರವೆ ಪೋಷಿಸಬೇಕು. ರೈತರನ್ನು, ಪ್ರತಿಭಟನಾಕಾರರನ್ನು, ವಿರೋಧ ಪಕ್ಷಗಳನ್ನು ಆಂದೋಲನ ಜೀವಿಗಳೆಂದು, ದೇಶದ್ರೋಹಿಗಳೆಂದು ಅಣಕಿಸಿದ ಬಿಜೆಪಿ ಸರ್ಕಾರಗಳು, ಬಿಜೆಪಿಯ ಮುಖಂಡರುಗಳು ದೇಶದ ಮುಂದೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರವು ಜಾರಿಗೆ ತಂದಿರುವ ರೈತದ್ರೋಹಿಯಾದ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗಳನ್ನು ರದ್ದು ಮಾಡಬೇಕು. ಜಾನುವಾರು ಹತ್ಯಾ ಪ್ರತಿಬಂಧಕ ಕಾಯ್ದೆಗಳನ್ನು ಕೂಡಲೆ ಹಿಂಪಡೆಯಬೇಕೆದು ಆಗ್ರಹಿಸುತ್ತೇನೆ ಎಂದು  ಸಿದ್ದರಾಮಯ್ಯ ತಿಳಿಸಿದ್ದಾರೆ.


ಇದನ್ನೂ ಓದಿ: ಬರೆದಿಟ್ಟುಕೊಳ್ಳಿ, ಒತ್ತಾಯದಿಂದ ಈ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆಯುತ್ತದೆ: ರಾಹುಲ್ ಗಾಂಧಿ ವಿಡಿಯೋ ವೈರಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...