‘ದಿಲ್ಲಿ ಚಲೋ’ ನಡುವೆಯೇ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ), ಕೇಂದ್ರ ಕಾರ್ಮಿಕ ಸಂಘಟನೆಗಳೊಂದಿಗೆ ಫೆಬ್ರವರಿ 16ರಂದು ‘ಗ್ರಾಮೀಣ ಭಾರತ ಬಂದ್’ ಗೆ ಕರೆ ನೀಡಿದೆ.
ಫೆ.16ರಂದು ಬೆಳಗ್ಗೆ 6ರಿಂದ ಸಂಜೆ 4ಗಂಟೆಯವರೆಗೆ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಬಂದ್ ಆಚರಿಸಲು ರೈತ ಸಂಘಟನೆಗಳು ನಿರ್ಧರಿಸಿದ್ದು, ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ ದೇಶದ ಪ್ರಮುಖ ರಸ್ತೆಗಳಲ್ಲಿ ರೈತರು ವ್ಯಾಪಕ ಪ್ರತಿಭಟನೆ ನಡೆಸಲಿದ್ದಾರೆ. ಪಂಜಾಬ್ನಲ್ಲಿ ಪ್ರತಿಭಟನೆಯ ಸಮಯದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಪ್ರಮುಖ ಭಾಗಗಳನ್ನು ನಾಲ್ಕು ಗಂಟೆಗಳ ಕಾಲ ಮುಚ್ಚಲು ನಿರ್ಧರಿಸಲಾಗಿದೆ.
ಶನಿವಾರ ಲುಧಿಯಾನದಲ್ಲಿ ಕರೆದಿದ್ದ ರೈತರ ಸಭೆಯಲ್ಲಿ, ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಲಖೋವಲ್ನ ಪ್ರಧಾನ ಕಾರ್ಯದರ್ಶಿ ಹರಿಂದರ್ ಸಿಂಗ್ ಲಖೋವಾಲ್ ಅವರು ಗ್ರಾಮೀಣ ಭಾರತ್ ಬಂದ್ಗೆ ಸಂಬಂಧಿಸಿದ ಕಾರ್ಯತಂತ್ರವನ್ನು ಅನಾವರಣಗೊಳಿಸಿದ್ದಾರೆ.
ಎಸ್ಕೆಎಂ ರಾಷ್ಟ್ರೀಯ ಸಮನ್ವಯ ಸಮಿತಿ (ಎನ್ಸಿಸಿ) ಸದಸ್ಯ ಡಾ ದರ್ಶನ್ ಪಾಲ್ ಅವರು ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡುತ್ತಾ, “ಡಿಸೆಂಬರ್ನಲ್ಲಿಯೇ ಗ್ರಾಮೀಣ ಭಾರತ್ ಬಂದ್ ಯೋಜನೆ ರೂಪಿಸಲಾಗಿತ್ತು. ಬಂದ್ ದಿನ ಕೃಷಿ ಚಟುವಟಿಕೆಗಳು, ನರೇಗಾ ಕೆಲಸ ಸೇರಿದಂತೆ ಗ್ರಾಮೀಣ ಭಾಗದ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಲಾಗುವುದು. ಯಾವುದೇ ರೈತರು, ಕೃಷಿ ಕಾರ್ಮಿಕರು ಅಥವಾ ಗ್ರಾಮೀಣ ಕಾರ್ಮಿಕರು ಕೆಲಸ ಮಾಡುವುದಿಲ್ಲ. ಆಂಬ್ಯುಲೆನ್ಸ್ಗಳು, ಮರಣ, ಮದುವೆ, ಮೆಡಿಕಲ್ ಶಾಪ್ಗಳು, ವಾರ್ತಾಪತ್ರಿಕೆ ಪೂರೈಕೆ, ಬೋರ್ಡ್ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳು ಮತ್ತು ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರ ತುರ್ತು ಸೇವೆಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದಿದ್ದಾರೆ.
ತರಕಾರಿ ಮತ್ತು ಇತರ ಬೆಳೆಗಳ ವ್ಯಾಪಾರ ಮತ್ತು ಸಂಗ್ರಹಣೆಯನ್ನು ಸ್ಥಗಿತಗೊಳಿಸಲಾಗುವುದು. ಗ್ರಾಮೀಣ ಪ್ರದೇಶದ ಅಂಗಡಿಗಳು, ಧಾನ್ಯ ಮಾರುಕಟ್ಟೆಗಳು, ತರಕಾರಿ ಮಾರುಕಟ್ಟೆಗಳು, ಸರ್ಕಾರಿ ಮತ್ತು ಸರ್ಕಾರೇತರ ಕಚೇರಿಗಳು, ಗ್ರಾಮೀಣ ಕೈಗಾರಿಕೆ ಮತ್ತು ಸೇವಾ ವಲಯದ ಸಂಸ್ಥೆಗಳು ಮತ್ತು ಖಾಸಗಿ ವಲಯದ ಉದ್ಯಮಗಳನ್ನು ಮುಚ್ಚುವಂತೆ ಒತ್ತಾಯಿಸಲಾಗಿದೆ. ಹೆಚ್ಚುವರಿಯಾಗಿ, ಮುಷ್ಕರದ ಅವಧಿಯಲ್ಲಿ ಹಳ್ಳಿಗಳ ಅಕ್ಕಪಕ್ಕದ ಪಟ್ಟಣಗಳಲ್ಲಿನ ಅಂಗಡಿಗಳು ಮತ್ತು ವ್ಯಾಪಾರಗಳು ಮುಚ್ಚಲಾಗುವುದು ಎಂದು ತಿಳಿಸಿದ್ದಾರೆ.
ರೈತರ ಬೇಡಿಕೆಗಳೇನು?
ಇಂದು (ಫೆ.13) ದಿಲ್ಲಿ ಚಲೋಗೆ ಕರೆಕೊಟ್ಟ ರೈತ ಸಂಘಗಳ ಬೇಡಿಕೆಗಳಾದ ಎಂಎಸ್ಪಿ ಜಾರಿ ಸೇರಿದಂತೆ ಅದೇ ರೀತಿಯ ಬೇಡಿಕೆಗಳನ್ನು ಮುಂಡಿಟ್ಟುಕೊಂಡು ಗ್ರಾಮೀಣ ಭಾರತ ಬಂದ್ಗೆ ಕರೆ ಕೊಡಲಾಗಿದೆ. ಇದಲ್ಲದೆ, ತಿಂಗಳಿಗೆ ₹26,000 ಕನಿಷ್ಠ ವೇತನ, ನಾಲ್ಕು ಕಾರ್ಮಿಕ ಸಂಹಿತೆಗಳ ರದ್ದತಿ, ಮೂಲಭೂತ ಹಕ್ಕಾಗಿ ಖಾತರಿಪಡಿಸಿದ ಉದ್ಯೋಗ, ಸಾರ್ವಜನಿಕ ವಲಯದ ಉದ್ಯಮಗಳ (ಪಿಎಸ್ಯು) ಖಾಸಗೀಕರಣಕ್ಕೆ ವಿರೋಧ ಮತ್ತು ಉದ್ಯೋಗಿಗಳ ಸಂದರ್ಭೋಚಿತಗೊಳಿಸುವಿಕೆ ಮತ್ತು ಸ್ಥಿರ-ಅವಧಿಯ ಉದ್ಯೋಗವನ್ನು ರದ್ದುಗೊಳಿಸುವುದು ಇತ್ಯಾದಿ ಬೇಡಿಕೆಗಳನ್ನು ರೈತ ಸಂಘಟನೆಗಳು ಹೊಂದಿವೆ.
ಹೆಚ್ಚುವರಿಯಾಗಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (MGNREGS)ಬಲಪಡಿಸುವುದು, ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವುದು, ಔಪಚಾರಿಕ ಮತ್ತು ಅನೌಪಚಾರಿಕ ವಲಯಗಳಲ್ಲಿ ಎಲ್ಲರಿಗೂ ಪಿಂಚಣಿ ಮತ್ತು ಸಾಮಾಜಿಕ ಭದ್ರತೆಯನ್ನು ನೀಡುವುದು ಇತ್ಯಾದಿ ಬೇಡಿಕೆಗಳನ್ನು ರೈತರು ಸರ್ಕಾದ ಮುಂದಿಟ್ಟಿದ್ದಾರೆ.
ಇದನ್ನೂ ಓದಿ : ದಿಲ್ಲಿ ಚಲೋ: ಶಂಭು ಗಡಿಯಲ್ಲಿ ರೈತರ ಮೇಲೆ ಪೊಲೀಸ್ ದೌರ್ಜನ್ಯ