‘ಸಸ್ಯಹಾರಿಗಳಿಗೆ ಮಾತ್ರ’ ಎಂದು ಬರೆದಿರುವ ಪೋಸ್ಟರ್ಗಳು ಐಐಟಿ ಬಾಂಬೆ ಕಾಲೇಜಿನ ಹಾಸ್ಟಲ್ ಮೆಸ್ ಗೋಡೆಯಲ್ಲಿ ಪತ್ತೆಯಾಗಿದ್ದು, ವಿವಾದಕ್ಕೆ ಕಾರಣವಾಗಿದೆ.
ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿ ಮುಂಬೈ ವಿದ್ಯಾರ್ಥಿಗಳು ಆಹಾರದ ವಿಚಾರದಲ್ಲಿ ತಾರತಮ್ಯ ಎಸಗುವಂತಹ ಪೋಸ್ಟರ್ ಅಂಟಿಸಿರುವುದರ ವಿರುದ್ಧ ಧ್ವನಿ ಎತ್ತಿದ್ದಾರೆ. 12ನೇ ಹಾಸ್ಟೇಲ್ನ ಕ್ಯಾಂಟೀನ್ ಗೋಡೆಯ ಆ ಜಾಗದಲ್ಲಿ ಸಸ್ಯಹಾರಿಗಳು ಮಾತ್ರ ಆಹಾರ ಸೇವಿಸಬೇಕೆಂಬ ಮನಸ್ಥಿತಿಯ ವಿರುದ್ಧ ಕಿಡಿಕಾರಿದ್ದಾರೆ.
“ಪೋಸ್ಟರ್ ನಲ್ಲಿ ಸಸ್ಯಹಾರಿಗಳಿಗೆ ಮಾತ್ರ ಇಲ್ಲಿ ಕುಳಿತುಕೊಳ್ಳಲು ಅವಕಾಶ” ಎಂದು ಬರೆಯಲಾಗಿದೆ. ಕಳೆದ ವಾರ ಈ ಪೋಸ್ಟರ್ ಹಾಕಲಾಗಿದೆ ಎನ್ನಲಾಗಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ (APPSC) ಸಂಘಟನೆಯ ಮುಖಂಡರು ಘಟನೆಯನ್ನು ಖಂಡಿಸಿದ್ದು, ಆ ಪೋಸ್ಟರ್ಗಳನ್ನು ಹರಿದು ಹಾಕಿದ್ದಾರೆ. ಹಲವಾರು ವಿದ್ಯಾರ್ಥಿಗಳು ಪ್ರತಿಭಟನೆ ದಾಖಲಿಸಿದ್ದಾರೆ.
ಹಾಸ್ಟೆಲ್ ನಲ್ಲಿ ಪತ್ತೆಯಾದ ಪೋಸ್ಟರ್ ಬಗ್ಗೆ ಪ್ರತಿಕ್ರಿಯಿಸಿದ ಕಾಲೇಜಿನ ಆಡಳಿತ ಮಂಡಳಿಯು, “ಪೋಸ್ಟರ್ ಯಾರು ಅಂಟಿಸಿದ್ದಾರೆ ಎಂಬ ಬಗ್ಗೆ ತಿಳಿದಿಲ್ಲ. ನಮ್ಮಲ್ಲಿ ಆಹಾರ ಸೇವನೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತ್ಯೇಕವಾದ ಆಸನಗಳನ್ನು ಮೀಸಲಾಗಿಡಲಾಗಿಲ್ಲ. ಯಾರು ಎಲ್ಲಿ ಬೇಕಾದರೂ ಆಹಾರ ಸೇವಿಸಬಹುದು” ಎಂದು ಪ್ರತಿಕ್ರಿಯಿಸಿದೆ.
ಈ ಕುರಿತು ಹಾಸ್ಟೆಲ್ ನ ಜನರಲ್ ಸೆಕ್ರೆಟರಿ ಎಲ್ಲಾ ವಿದ್ಯಾರ್ಥಿಗಳು ಇ-ಮೇಲ್ ಪತ್ರ ಬರೆದಿದ್ದು, “ಹಾಸ್ಟೆಲ್ ನಲ್ಲಿ ಪ್ರತೇಕವಾದ (ಜೈನ್ ಫುಡ್) ಆಹಾರ ಹಂಚಿಕೆಯ ಕ್ಯಾಬಿನ್ ಇದೆ. ಆದರೆ ಇಂತದ್ದೇ ಪ್ರದೇಶದಲ್ಲಿ ಇದೇ ರೀತಿಯ ಆಹಾರ ಸೇವನೆ ಮಾಡಬೇಕು, ಅಥವಾ ಮಾಡಬಾರದು ಎಂದು ನಿಯಮ ಇಲ್ಲ. ಆದರೆ ನಿಯಮವನ್ನು ಮೀರಿ ಕೆಲವರು ಜೈನ್ ಫುಡ್ ವಿಭಾಗದಲ್ಲಿ ಮಾಂಸಾಹಾರಿಗಳು ಊಟ ಮಾಡಬಾರದು ಎಂದು ನಿಬಂಧನೆ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇಂತಹ ವರ್ತನೆ ಸ್ವೀಕಾರಾರ್ಹವಲ್ಲ ಮತ್ತು ಯಾವುದೇ ವಿದ್ಯಾರ್ಥಿಯನ್ನು ಮೆಸ್ ನ ಯಾವುದೇ ಭಾಗದಿಂದ ಎದ್ದೇಳಿಸುವ ಅಧಿಕಾರ ಇಲ್ಲ. ಸಮುದಾಯಗಳ ಆಧಾರದಲ್ಲಿ ಊಟದ ಸ್ಥಳ ನಿಗಧಿ ಮಾಡಲು ಸಾಧ್ಯವಿಲ್ಲ. ಇಂತಹ ಘಟನೆ ಮರುಕಳಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ: ಸಂಘಪರಿವಾರದ ಮೂವರು ಕಾರ್ಯಕರ್ತರ ಬಂಧನ