ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿಯ ಕೊಳದಲ್ಲಿ ಇರುವ ಕಾರಂಜಿ ಎನ್ನಲಾಗಿರುವ ರಚನೆಯನ್ನು ‘ಶಿವಲಿಂಗ’ ಎಂದು ಪ್ರತಿಪಾದಿಸಿ ಅದರ ಕಾರ್ಬನ್ ಡೇಟಿಂಗ್ ಮಾಡುವಂತೆ ಕೋರಿದ್ದ ಪ್ರಕರಣದ ತೀರ್ಪನ್ನು ವಾರಣಾಸಿ ನ್ಯಾಯಾಲಯವು ಶುಕ್ರವಾರ (ಇಂದು) ತೀರ್ಪನ್ನು ನೀಡಲಿದೆ.
ಕಾರ್ಬನ್ ಡೇಟಿಂಗ್ ಮತ್ತು ಶಿವಲಿಂಗದ ವೈಜ್ಞಾನಿಕ ತನಿಖೆಯ ಕುರಿತಾದ ವಾದಗಳು ಮಂಗಳವಾರದಂದು ಕೊನೆಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಪೂರ್ಣಗೊಂಡಿತ್ತು. ಇದರ ನಂತರ ನ್ಯಾಯಾಲಯವು ತನ್ನ ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವಾರಣಾಸಿ ಸ್ಥಳೀಯ ನ್ಯಾಯಾಲಯದ ಆದೇಶದ ಪ್ರಕಾರ ನಡೆದ ವೀಡಿಯೊಗ್ರಫಿ ಸಮೀಕ್ಷೆಯ ಸಮಯದಲ್ಲಿ ಜ್ಞಾನವಾಪಿ ಮಸೀದಿಯೊಳಗೆ ಕಂಡುಬಂದಿದೆ ಎಂದು ಹೇಳಲಾದ ‘ಶಿವಲಿಂಗ’ದ ಕಾರ್ಬನ್-ಡೇಟಿಂಗ್ ಅನ್ನು ಐವರು ಅರ್ಜಿದಾರರ ಪೈಕಿ ನಾಲ್ವರು ಕೋರಿದ್ದರು.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಎಂದು ಹಳೆಯ ಚಿತ್ರಗಳು ವೈರಲ್!
ಕಾರ್ಬನ್ ಡೇಟಿಂಗ್ ಎನ್ನುವುದು ವಸ್ತುವಿನ ವಯಸ್ಸನ್ನು ಅರ್ಥಮಾಡಿಕೊಳ್ಳಲು ಪುರಾತತ್ತ್ವ ಶಾಸ್ತ್ರದಲ್ಲಿ ಸಾಮಾನ್ಯವಾಗಿ ಬಳಸುವ ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಜ್ಞಾನವಾಪಿ ಮಸೀದಿ ಸಮಿತಿಯು ಕಾರ್ಬನ್ ಡೇಟಿಂಗ್ ಮನವಿಯನ್ನು ವಿರೋಧಿಸಿತ್ತು.
ಕಾರ್ಬನ್ ಡೇಟಿಂಗ್ಗೆ ಅರ್ಜಿಯನ್ನು ಅನುಮತಿಸಬಾರದು, ಯಾಕೆಂದರೆ ಅರ್ಜಿಯು ರಚನೆಯನ್ನು ರಕ್ಷಿಸುವ ಸುಪ್ರೀಂ ಕೋರ್ಟ್ನ ಆದೇಶಕ್ಕೆ ವಿರುದ್ಧವಾಗಿದೆ ಎಂದು ಮಸೀದಿ ಸಮಿತಿಯು ನ್ಯಾಯಾಲಯದಲ್ಲಿ ಹೇಳಿತ್ತು.
ಇದಕ್ಕೂ ಮೊದಲು ಸೆಪ್ಟೆಂಬರ್ 29 ರಂದು ಜ್ಞಾನವಾಪಿ ಮಸೀದಿ-ಶೃಂಗಾರ್ ಗೌರಿ ಪ್ರಕರಣದಲ್ಲಿ ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯವು ಆದೇಶವನ್ನು ಕಾಯ್ದಿರಿಸಿತ್ತು. ನ್ಯಾಯಾಲಯದ ಆದೇಶದಂತೆ ಮಸೀದಿ ಆವರಣದ ವೀಡಿಯೋಗ್ರಫಿ ಸಮೀಕ್ಷೆ ವೇಳೆ ಮಸೀದಿಯ ಕೊಳದ ಆವರಣದಲ್ಲಿ ‘ಶಿವಲಿಂಗ’ ಪತ್ತೆಯಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.
ಇದನ್ನೂ ಓದಿ: ಆರ್ಎಸ್ಎಸ್ ಮುಖ್ಯಸ್ಥರ ಮಾತನ್ನು ಪಾಲಿಸುತ್ತವೆಯೇ ಬಜರಂಗದಳ, ಬಿಜೆಪಿ, ಎಬಿವಿಪಿ, ವಿಎಚ್ಪಿ ಇತ್ಯಾದಿ?
ಆದರೆ, ಕಂಡುಬಂದ ರಚನೆಯು ‘ಕಾರಂಜಿ’ಯಾಗಿದೆ ಮಸೀದಿ ಸಮಿತಿ ಹೇಳಿದೆ. ಇದನ್ನು ವಿರೋಧಿಸಿ ಸೆಪ್ಟೆಂಬರ್ 22 ರಂದು ಅರ್ಜಿ ಸಲ್ಲಿಕೆಯಾಗಿದ್ದು, ವಿವಾದಿತ ರಚನೆಯನ್ನು ಕಾರ್ಬನ್ ಡೇಟಿಂಗ್ ಮಾಡುವಂತೆ ಕೋರಿದ್ದರು.