ದ್ವೇಷದ ಭಾಷಣ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರು ಯಾವ ಪಕ್ಷಕ್ಕೆ ಸೇರಿದವರಾಗಿದ್ದರೂ ಸಮಾನವಾಗಿ ಶಿಕ್ಷೆಗೆ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ದ್ವೇಷ ಭಾಷಣವನ್ನು ತಡೆಯಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಮಹತ್ವದ ಸೂಚನೆಯನ್ನು ನೀಡಿದೆ.
ಕೇರಳದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಡೆಸಿದ ರ್ಯಾಲಿ, ನೂಹ್ ನಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆಗೆ ಸಂಬಂಧಿಸಿದ ದ್ವೇಷ ಭಾಷಣದ ಬಗ್ಗೆ ಸುಪ್ರೀಂ ಕೋರ್ಟ್ ಗಮನಕ್ಕೆ ತಂದಾಗ, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ವಿಎನ್ ಭಟ್ಟಿ ಅವರ ಪೀಠವು ಈ ಹೇಳಿಕೆ ನೀಡಿದೆ.
ಯಾವುದೇ ರೀತಿಯ ದ್ವೇಷದ ಭಾಷಣದಲ್ಲಿ ಕಾನೂನಿನ ಪ್ರಕಾರ ವ್ಯವಹರಿಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನುಹ್ ಘಟನೆಯ ನಂತರ ಮುಸ್ಲಿಮರ ಬಹಿಷ್ಕಾರಕ್ಕೆ ಹಲವು ಗುಂಪುಗಳು ಮಾಡಿದ ಕರೆಗಳ ವಿರುದ್ಧದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಆ. 25ಕ್ಕೆ ಪ್ರಕರಣವನ್ನು ಮುಂದೂಡಿದೆ.
ಮುಸ್ಲಿಮರಿಗೆ ಬಹಿಷ್ಕಾರ ಹಾಕುವಂತೆ ಕರೆ ಮತ್ತು ಗುರುಗ್ರಾಮ್ನಲ್ಲಿ ಮಸೀದಿಗಳನ್ನು ಮುಚ್ಚುವುದು ಸೇರಿದಂತೆ ಹಲವು ಪ್ರಚೋದನಾಕಾರಿ ಭಾಷಣಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಲಾಗಿತ್ತು.
ಅರ್ಜಿಯ ಪ್ರಕಾರ, ನುಹ್ ಹಿಂಸಾಚಾರದ ನಂತರ, ವಿವಿಧ ರಾಜ್ಯಗಳಲ್ಲಿ 27 ಕ್ಕೂ ಹೆಚ್ಚು ರ್ಯಾಲಿಗಳನ್ನು ಆಯೋಜಿಸಲಾಗಿದೆ. ಮತ್ತು ಅಲ್ಲಿ ಮುಸ್ಲಿಮರ ಹತ್ಯೆ ಮತ್ತು ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡುವ ದ್ವೇಷದ ಭಾಷಣಗಳನ್ನು ಬಹಿರಂಗವಾಗಿ ಮಾಡಲಾಗಿದ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಹಲವಾರು ಅರ್ಜಿಗಳನ್ನು ಮತ್ತು ವೀಡಿಯೊಗಳನ್ನು ಕೋರ್ಟ್ ಮುಂದಿಡಲಾಗಿದೆ . ಎರಡು ದಿನಗಳ ಬಳಿಕ ಯಾವುದೇ ಮುಸ್ಲಿಂ ವ್ಯಕ್ತಿಯನ್ನು ಬಾಡಿಗೆಗೆ ಇರಿಸಿಕೊಂಡರೆ ಅಥವಾ ಮುಸ್ಲಿಂ ವ್ಯಕ್ತಿಗಳನ್ನು ಕೆಲಸಕ್ಕೆ ಇಟ್ಟುಕೊಂಡರೆ ಅಂತಹವರ ವ್ಯವಹಾರಗಳನ್ನು ಬಹಿಷ್ಕರಿಸಲಾಗುವುದು ಎಂದು ಹೇಳುವ ಪ್ರಚೋದನಾಕಾರಿ ವಿಡಿಯೋಗಳನ್ನು ಸುಪ್ರೀಂಗೆ ಸಲ್ಲಿಸಲಾಗಿದೆ.
ಇದನ್ನು ಓದಿ: NEP ಜಾರಿ ಹಿಂದೆ, ಹಿಂದಿ ಹೇರಿಕೆ ಉದ್ದೇಶವಿದೆ, ಕನ್ನಡ ಭಾಷೆಗೆ ಧಕ್ಕೆಯಾಗುತ್ತದೆ: ಸಚಿವ ಮಧು ಬಂಗಾರಪ್ಪ