ಸಲಿಂಗ ದಂಪತಿಗೆ ರಕ್ಷಣೆ ನೀಡುವಂತೆ ಉತ್ತರಪ್ರದೇಶದ ಶಾಮ್ಲಿಯ ಪೊಲೀಸ್ ವರಿಷ್ಠಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿದೆ. ಶಾಮ್ಲಿಯ ಸುಲ್ತಾನಾ ಮಿರ್ಜಾ ಮತ್ತು ಕಿರಣ್ ರಾಣಿ ದಂಪತಿ ಸಮಾಜ ಮತ್ತು ಕುಟುಂಬದಿಂದ ಬೆದರಿಕೆ ಇದ್ದು, ಭದ್ರತೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಕೆ.ಗುಪ್ತಾ ಮತ್ತು ಪಂಕಜ್ ಭಾಟಿಯಾ ಅವರ ನ್ಯಾಯಪೀಠ, ಸಲಿಂಗ ದಂಪತಿಗರ ಭದ್ರತೆ ಒದಗಿಸುವಂತೆ ಆದೇಶ ನೀಡಿ, ಅರ್ಜಿದಾರರಿಗೆ ಯಾರೂ ಕಿರುಕುಳ ನೀಡದಂತೆ ನೋಡಿಕೊಳ್ಳಲು ಶಾಮ್ಲಿಯ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಅರ್ಜಿದಾರರು ತಾವು ಹಲವು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ. ಆದರೆ ಸಲಿಂಗಿಗಳಾಗಿರುವುದರಿಂದ ನಮ್ಮ ಕುಟುಂಬಗಳು ಮತ್ತು ಸಮಾಜದಿಂದ ಪ್ರತಿರೋಧವನ್ನು ಎದುರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇವರಿಂದ ಜೀವ ಭಯವಿದ್ದು, ರಕ್ಷಣೆ ನೀಡುವಂತೆ ಅರ್ಜಿಯಲ್ಲಿ ತಿಳಿಸಿದ್ದರು. ಜೊತೆಗೆ ನವತೇಜ್ ಸಿಂಗ್ ಜೋಹರ್ ಪ್ರಕರಣವನ್ನು ಉಲ್ಲೇಖಿಸಿದ್ದರು. ಈ ಪ್ರಕರಣದಲ್ಲಿ LGBT ಪರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.
ಇದನ್ನೂ ಓದಿ: ಸಲಿಂಗ ವಿವಾಹವನ್ನು ನಮ್ಮ ಕಾನೂನು ಮತ್ತು ಸಮಾಜ ಒಪ್ಪುವುದಿಲ್ಲ: ಕೇಂದ್ರ ಸರ್ಕಾರ
ನ್ಯಾಯಪೀಠವು “ಪ್ರಸ್ತುತ ಅರ್ಜಿಯು ಸಮಾಜದ ಸಂಪೂರ್ಣ ವಾಸ್ತವತೆಯನ್ನು ಎತ್ತಿ ತೋರಿಸುತ್ತದೆ, ಅರ್ಜಿದಾರರು ತಮ್ಮ ಲೈಂಗಿಕ ದೃಷ್ಟಿಕೋನದ ಕಾರಣದಿಂದಾಗಿ ಸಮಾಜದಲ್ಲಿ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಆದರೆ ಲೈಂಗಿಕ ದೃಷ್ಟಿಕೋನವು ಮಾನವನಿಗೆ ಸಹಜವಾಗಿದೆ” ಎಂದಿದೆ.
ವ್ಯಕ್ತಿಯ ಲೈಂಗಿಕ ದೃಷ್ಟಿಕೋನವನ್ನು ಆಧರಿಸಿದ ಯಾವುದೇ ತಾರತಮ್ಯ ಕೂಡ ಅಸಂವಿಧಾನಿಕವೆಂದು ನವತೇಜ್ ಸಿಂಗ್ ಜೋಹರ್ ಪ್ರಕರಣದಲ್ಲಿ ಪರಿಗಣಿಸಲಾಗಿದ್ದನ್ನು ನ್ಯಾಯಪೀಠ ಗಣನೆಗೆ ತೆಗೆದುಕೊಂಡಿತು.
ಜೊತೆಗೆ “ನ್ಯಾಯಾಲಯವು ಸಾಂವಿಧಾನಿಕ ನ್ಯಾಯಾಲಯವಾಗಿರುವುದರಿಂದ ಸಾಂವಿಧಾನಿಕ ನೈತಿಕತೆ ಮತ್ತು ಲೈಂಗಿಕ ದೃಷ್ಟಿಕೋನದಿಂದಾಗಿ ಮಾತ್ರ ಅಪಾಯದಲ್ಲಿರುವ ನಾಗರಿಕರ ಹಕ್ಕುಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಗಮನಿಸಲು ಬದ್ಧವಾಗಿದೆ” ಎಂದಿದೆ.