ನಮ್ಮ ಕಾನೂನುಗಳು, ಕಾನೂನು ವ್ಯವಸ್ಥೆ, ಸಮಾಜ ಮತ್ತು ಮೌಲ್ಯಗಳು ಸಲಿಂಗ ವಿವಾಹಗಳನ್ನು ಒಪ್ಪಿಕೊಳ್ಳುವುದಿಲ್ಲ, ಹಾಗಾಗಿ ಅವುಗಳನ್ನು ಅನುಮತಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ದಿಲ್ಲಿ ಹೈಕೋಟ್ಗೆ ತಿಳಿಸಿದೆ.
ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ಎನ್.ಪಟೇಲ್ ನೇತೃತ್ವದ ಪೀಠದ ಮುಂದೆ, ಹಿಂದು ವಿವಾಹ ಕಾಯ್ದೆ ಮತ್ತು ವಿಶೇಷ ವಿವಾಹ ಕಾಯ್ದೆಗಳಡಿ ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಬೇಕು ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣಾ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಹೇಳಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ಎಲ್ಜಿಬಿಟಿಕ್ಯು ಸಮುದಾಯಕ್ಕೆ ವಿಶ್ವದಾದ್ಯಂತ ಬೆಂಬಲ ಹೆಚ್ಚಾಗುತ್ತಿದೆ: ಸಮೀಕ್ಷೆ
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕೋರಿಕೆಯನ್ನು ವಿರೋಧಿಸಿದ ತುಷಾರ್ ಮೆಹ್ತಾ, ಸಲಿಂಗಿಗಳ ನಡುವಿನ ಸಂಸ್ಕಾರಯುತವಲ್ಲದ ವಿವಾಹವನ್ನು ನಮ್ಮ ಕಾನೂನುಗಳು ಹಾಗೂ ನಮ್ಮ ಸಮಾಜ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಸಲಿಂಗ ವಿವಾಹಗಳಿಗೆ ಮಾನ್ಯತೆ ಅಥವಾ ನೋಂದಣಿಗೆ ಅನುಮತಿ ಕೋರಿರುವ ಅರ್ಜಿಯು ಎರಡು ಕಾರಣಗಳಿಂದ ಸ್ವೀಕಾರಾರ್ಹವಲ್ಲ. ಶಾಸನವನ್ನು ರೂಪಿಸುವಂತೆ ಅರ್ಜಿಯು ನ್ಯಾಯಾಲಯಕ್ಕೆ ಕೋರಿಕೊಂಡಿರುವುದು ಮೊದಲ ಕಾರಣವಾಗಿದ್ದರೆ, ಕೋರಿಕೆಯನ್ನು ಈಡೇರಿಸುವುದು ವಿವಿಧ ಕಾನೂನುಗಳಿಗೆ ವಿರುದ್ಧವಾಗುತ್ತದೆ ಎನ್ನುವುದು ಎರಡನೆಯ ಕಾರಣವಾಗಿದೆ ಎಂದು ತುಷಾರ್ ಮೆಹ್ತಾ ತಿಳಿಸಿದ್ದಾರೆ.
ಹಿಂದು ವಿವಾಹ ಕಾಯ್ದೆಯಡಿ ಗಂಡ ಮತ್ತು ಹೆಂಡತಿಯ ಪಾತ್ರವನ್ನು ನಿರೂಪಿಸಲಾಗಿದೆ. ಈ ವಿವಾಹದಲ್ಲಿ ಯಾರು ಗಂಡ, ಯಾರು ಹೆಂಡತಿ ಎನ್ನುವುದನ್ನು ನಿರ್ಧರಿಸುವುದು ಹೇಗೆ ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ: ಕಡಿಮೆ ಬುದ್ದಿಯುಳ್ಳವರು ಬಲಪಂಥೀಯ ಬೆಂಬಲಿಗರಾಗುತ್ತಾರೆ ಎನ್ನುತ್ತಿವೆ ಅಮೆರಿಕದ ಸಂಶೋಧನೆಗಳು..!
ಸಲಿಂಗ ವಿವಾಹ ಬಯಸುವವರು ವಿದ್ಯಾವಂತರಾಗಿದ್ದಾರೆ ಮತ್ತು ನೇರವಾಗಿ ನ್ಯಾಯಾಲಯವನ್ನು ಸಂಪರ್ಕಿಸಬಹುದು. ಹೀಗೀರುವಾಗ ನಾವೇಕೆ ಈ ಪಿಐಎಲ್ನ್ನು ವಿಚಾರಣೆಗೆ ಅಂಗೀಕರಿಸಬೇಕು ಎಂದು ಹೈಕೋರ್ಟ್ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು, ಅವರು ಸಮಾಜದ ಪ್ರತೀಕಾರಕ್ಕೆ ಹೆದರಿದ್ದು, ಹೀಗಾಗಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಉತ್ತರಿಸಿದರು.
ಸಲಿಂಗ ವಿವಾಹವನ್ನು ನೋಂದಣಿ ಮಾಡಿಕೊಳ್ಳಲು ಅನುಮತಿ ಸಿಗದ ವ್ಯಕ್ತಿಗಳ ವಿವರಗಳನ್ನು ತನಗೆ ಒದಗಿಸುವಂತೆ ಅವರಿಗೆ ಸೂಚಿಸಿದ ಹೈಕೋರ್ಟ್ ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಬದಲಾಗಬೇಕಿರುವುದು ದ್ಯುತಿಯ ನಿರ್ಧಾರವಲ್ಲ, ಸಮಾಜದ ಮನಸ್ಥಿತಿ