ಜ್ಞಾನವಾಪಿ ಮಸೀದಿಯ ನೆಲ ಮಾಳಿಗೆಯಲ್ಲಿ ಹಿಂದೂ ಅರ್ಜಿದಾರರಿಗೆ ಪೂಜೆಗೆ ಅವಕಾಶ ಮಾಡಿಕೊಟ್ಟ ವಾರಣಾಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ಕಡೆಯವರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದ್ದು, ಹಿಂದೂ ಪರರಿಗೆ ವ್ಯಾಸ್ ತೈಖಾನಾದಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಟ್ಟಿದೆ.
ವಾರಣಾಸಿ ನ್ಯಾಯಾಲಯವು ಜನವರಿ 31ರಂದು ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿರುವ ವಿಗ್ರಹಗಳ ಮುಂದೆ ಅರ್ಚಕರು ಪ್ರಾರ್ಥನೆ ಮಾಡಬಹುದು ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಅಲಹಬಾದ್ ಹೈಕೋರ್ಟ್ ಮೊರೆ ಹೋಗಿತ್ತು. ಈ ಕುರಿತು ಫೆ. 15ರಂದು ಹೈಕೋರ್ಟ್ ವಿಚಾರಣೆ ನಡೆದಿದ್ದು, ಇಂದು ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಪೀಠವು ತೀರ್ಪನ್ನು ನೀಡಿದೆ.
ಜ್ಞಾನವಾಪಿ ಮಸೀದಿಯ ನೆಲ ಮಾಳಿಗೆಯಲ್ಲಿ ಪೂಜೆ, ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದುದನ್ನು ಹೈಕೋರ್ಟ್ ಕೂಡ ಒಪ್ಪಿಕೊಂಡು ಜಿಲ್ಲಾ ನ್ಯಾಯಾಲಯದ ಆದೇಶವನ್ನು ಇಂದು ಎತ್ತಿ ಹಿಡಿಯಲಾಗಿದೆ. ನ್ಯಾಯಾಲಯವು ನಮ್ಮ ಪರವಾಗಿ ತೀರ್ಪು ನೀಡಿದೆ. ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ಆಕ್ಷೇಪಣೆಯನ್ನು ಹೈಕೋರ್ಟ್ ವಜಾಗೊಳಿಸಿದೆ ಎಂದು ವಕೀಲ ಸುಭಾಷ್ ನಂದನ್ ಚತುರ್ವೇದಿ ಹೇಳಿದ್ದಾರೆ.
ಇದು ಸ್ವಾಗತಾರ್ಹ ನಿರ್ಧಾರ, ಹಿಂದೂಗಳು ಪೂಜೆ ಮಾಡುವ ಹಕ್ಕನ್ನು ಹೈಕೋರ್ಟ್ ಉಳಿಸಿಕೊಂಡಿದೆ. ಹಿಂದೂಗಳು 1993ರವರೆಗೆ ವ್ಯಾಸ್ ತೆಹಖಾನಾದಲ್ಲಿ ಪೂಜೆ ಸಲ್ಲಿಸುತ್ತಿದ್ದರು, ಆದರೆ ಅದನ್ನು ಕಾನೂನುಬಾಹಿರವಾಗಿ ನಿಲ್ಲಿಸಲಾಯಿತು. ಮುಸ್ಲಿಂ ಕಡೆಯವರು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಬಹುದು ಎಂದು ತೀರ್ಪಿನ ಬಗ್ಗೆ ವಕೀಲ ಹರಿಶಂಕರ್ ಜೈನ್ ಹೇಳಿದ್ದಾರೆ.
ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯನ್ನು ಪ್ರತಿನಿಧಿಸಿದ ಹಿರಿಯ ವಕೀಲರಾದ ಎಸ್ಎಫ್ಎ ನಖ್ವಿ ಮತ್ತು ಪುನೀತ್ ಗುಪ್ತಾ ಅವರು ವಾದವನ್ನು ಮಂಡಿಸಿದ್ದು, ಪೂಜಿಸುವ ಹಕ್ಕನ್ನು ಕೋರಿ ಸಲ್ಲಿಸಲಾದ ಸಿವಿಲ್ ಮೊಕದ್ದಮೆಯಲ್ಲಿ ಮಧ್ಯಂತರ ಆದೇಶದ ಮೂಲಕ ಅಂತಿಮ ಪರಿಹಾರವನ್ನು ನೀಡುವುದು ಕಾನೂನು ಕಾರ್ಯವಿಧಾನದ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದರು. ಹಿಂದೂಗಳ ಪರವಾಗಿ ಸುಪ್ರೀಂಕೋರ್ಟ್ನ ಹಿರಿಯ ವಕೀಲರಾದ ಸಿಎಸ್ ವೈದ್ಯನಾಥನ್ ಮತ್ತು ವಿಷ್ಣು ಶಂಕರ್ ಜೈನ್ ವಾದ ಮಂಡಿಸಿದ್ದರು.
ಮಸೀದಿ ಸಂಕೀರ್ಣ ಕುರಿತಂತೆ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವರದಿ ಹೊರಬಿದ್ದ ನಂತರ ವಾರಣಾಸಿ ನ್ಯಾಯಾಲಯದ ತೀರ್ಪು ಪ್ರಕಟವಾಗಿತ್ತು. ಈ ಮಸೀದಿಯನ್ನು ಔರಂಗಜೇಬ್ ಆಡಳಿತದ ವೇಳೆ ಹಿಂದು ದೇವಳದ ಅವಶೇಷಗಳ ಮೇಲೆ ನಿರ್ಮಿಸಲಾಗಿತ್ತು ಎಂದು ವರದಿ ಹೇಳಿತ್ತು. ಆದರೆ ಅರ್ಜಿದಾರರ ವಾದವನ್ನು ಮಸೀದಿ ಸಮಿತಿ ಅಲ್ಲಗಳೆದಿತ್ತು ಹಾಗೂ ನೆಲಮಾಳಿಗೆಯಲ್ಲಿ ಯಾವುದೇ ಮೂರ್ತಿಗಳಿಲ್ಲ, ಆದ್ದರಿಂದ ಅಲ್ಲಿ 1993ರ ತನಕ ಯಾವುದೇ ಪೂಜೆ ಸಲ್ಲಿಸಲಾಗಿಲ್ಲ ಎಂದು ಹೇಳಿತ್ತು. ವಾರಣಾಸಿ ಕೋರ್ಟಿನ ತೀರ್ಪನ್ನು ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಸಮಿತಿ ಫೆಬ್ರವರಿ 2ರಂದು ಹೈಕೋರ್ಟ್ ಕದ ತಟ್ಟಿತ್ತು.
ಇದನ್ನು ಓದಿ: ದೇವಾಲಯಗಳ ಹಣ ಚರ್ಚ್, ಮಸೀದಿಗಳಿಗೆ ಹೋಗುತ್ತಿಲ್ಲ: ಬಿಜೆಪಿಯ ಸುಳ್ಳನ್ನು ಬಯಲು ಮಾಡಿದ ಅರ್ಚಕರ ಒಕ್ಕೂಟ