Homeಅಂಕಣಗಳುಮನೆಗೆ ಬೆಂಕಿ ಬಿದ್ದಿದೆ ಸರ್, ಮಲಗಿದ್ದೀರಾ?

ಮನೆಗೆ ಬೆಂಕಿ ಬಿದ್ದಿದೆ ಸರ್, ಮಲಗಿದ್ದೀರಾ?

- Advertisement -
- Advertisement -

ಮೊನ್ನೆ ಹರಿದ್ವಾರದಲ್ಲಿ ಜರುಗಿದ ಸಾಧು ಸಂತರ ಧರ್ಮಸಂಸತ್ತು ದೇಶವಾಸಿ ಮುಸಲ್ಮಾನರನ್ನು ಕೊಂದು ಹಿಂದೂ ರಾಷ್ಟ್ರ ಸ್ಥಾಪಿಸಬೇಕೆಂಬುದಾಗಿ ಕರೆ ನೀಡಿದ್ದು ಮತ್ತು ಮಾಜಿ ಪ್ರಧಾನಿಗೆ ಸಂಸತ್ತಿನಲ್ಲೇ ಗೋಡ್ಸೆಯಂತೆ ಗುಂಡಿಕ್ಕಿ ಕೊಲ್ಲುವ ಮಾತುಗಳು ಅತ್ಯಂತ ಆಘಾತಕಾರಿ ವಿದ್ಯಮಾನ. ನರಮೇಧಕ್ಕೆ ನೀಡಿದ ನೇರ ಆಹ್ವಾನ. ಭವಿಷ್ಯದ ಭಯಾನಕ ಚಿತ್ರ. ವ್ಯಾಧಿ ಉಲ್ಬಣಿಸಿದ ಸಂಕೇತ.

ಸ್ವಚ್ಛಭಾರತದ ಆಂದೋಲನದ ಗೂಢಾರ್ಥ ಅಲ್ಪಸಂಖ್ಯಾತರು- ಆನಂತರ ದಲಿತ, ಆದಿವಾಸಿಗಳನ್ನು ಗುಡಿಸಿ ಹಾಕುವ ಆಂದೋಲನ ಎಂಬ ಗುಮಾನಿ ನೂರಕ್ಕೆ ನೂರು ನಿಜರೂಪ ಧರಿಸತೊಡಗಿದೆ.
ಹಿಂದೂ ರಾಷ್ಟ್ರ ನಿರ್ಮಿಸಲು ಹೋರಾಡಬೇಕು, ಸಾಯಬೇಕು ಅಗತ್ಯ ಬಿದ್ದರೆ ಕೊಲ್ಲಬೇಕು ಎಂಬುದಾಗಿ ನವದೆಹಲಿಯಲ್ಲಿ ನಡೆದ ಹಿಂದೂ ಯುವವಾಹಿನಿಯ ಸಮಾವೇಶ ಪಣ ತೊಟ್ಟಿತು.

ಮುಸಲರ ಹತ್ಯೆಗೆ ಕೇವಲ ಖಡ್ಗವನ್ನು ಬಳಸಿದರೆ ಸಾಲದು. ಅವರ ಬಳಿ ಅತ್ಯಾಧುನಿಕ ಹತಾರುಗಳಿವೆ. ಹೀಗಾಗಿ ತಾಂತ್ರಿಕವಾಗಿ ನಾವು ಮೇಲ್ದರ್ಜೆಗೇರಬೇಕಿದೆ ಎಂದು ಸರಸ್ವತಿಯವರು ಸಾರುವ ವಿಡಿಯೋ ವೈರಲ್ ಆಗಿದೆ. ’ಹೆಚ್ಚು ಹೆಚ್ಚು ಮಕ್ಕಳ ಹುಟ್ಟಿಸಿರಿ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಅತ್ಯುತ್ತಮ ಹತಾರುಗಳನ್ನು ಹೊಂದಿಸಿ ಇಟ್ಟುಕೊಳ್ಳಿರಿ’ ಎಂದು ಯತಿ ನರಸಿಂಘಾನಂದ ಸರಸ್ವತಿ ಎಂಬಾತ ಹೇಳುತ್ತಿದ್ದಾನೆ.

ಸಾಧು ಧರ್ಮದಾಸ್ ಮಹಾರಾಜ್ ಮಾತುಗಳು ಹೀಗಿವೆ: ’ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಮುಸಲ್ಮಾನರದು ಎಂದು ನಮ್ಮ ಅಂದಿನ ಪ್ರಧಾನಮಂತ್ರಿ (ಮನಮೋಹನ ಸಿಂಗ್) ಹೇಳಿದ್ದು ಕೇಳಿದೆ. ನಾನೊಬ್ಬ ಸಂಸದನಾಗಿದ್ದು ನನ್ನ ಬಳಿ ರಿವಾಲ್ವರ್ ಇದ್ದಿದ್ದರೆ ನಾಥುರಾಮ್ ಗೋಡ್ಸೆಯಾಗಿ ಮನಮೋಹನ್ ಸಿಂಗ್ ಎದೆಗೆ ಆರು ಕಾಡತೂಸುಗಳನ್ನು ಸಿಡಿಸುತ್ತಿದ್ದೆ’. (ಆದರೆ ಮನಮೋಹನ ಸಿಂಗ್ ಇಂತಹ ಹೇಳಿಕೆ ನೀಡಿರುವ ಯಾವುದೇ ದಾಖಲೆಗಳಿಲ್ಲ. 2006ರಲ್ಲಿ ಜರುಗಿದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಯನ್ನು ಉದ್ದೇಶಿಸಿ ಅವರು ಹೇಳಿದ್ದಿಷ್ಟೇ: ’ಅಭಿವೃದ್ಧಿಯ ಫಲಗಳನ್ನು ನ್ಯಾಯಯುತವಾಗಿ ಹಂಚಿಕೊಳ್ಳುವಂತೆ ಮುಸಲ್ಮಾನರಿಗೆ ಚೈತನ್ಯ ನೀಡುವ ನವೀನ ದಾರಿಗಳನ್ನು ಸರ್ಕಾರ ರೂಪಿಸಬೇಕಿದೆ’ ಎಂದು).

ಛತ್ತೀಸಗಢದಲ್ಲಿ ಜರುಗಿದ ಮತ್ತೊಂದು ಅಧರ್ಮಸಂಸತ್ತಿನ ವೇದಿಕೆಯಲ್ಲಿ ಗಾಂಧೀ ಹಂತಕ ನಾಥೂರಾಮ ಗೋಡ್ಸೆಗೆ ಕೈಯೆತ್ತಿ ಮುಗಿದು, ದೇಶದ ಸತ್ಯನಾಶ ಮಾಡಿದ ಹರಾಮಖೋರ ಎಂದು ಗಾಂಧೀಜಿಯನ್ನು ನಿಂದಿಸಲಾಯಿತು.

ಗಾಂಧೀಜಿಯ ಘೋರನಿಂದನೆ ಮಾಡಿದ ಕುರಿತು ತನಗೆ ಯಾವುದೇ ಪಶ್ಚಾತ್ತಾಪ ಇಲ್ಲವೆಂದು ಕಾಳೀಚರಣ ಮಹಾರಾಜ ಎಂಬ ತಥಾಕಥಿತ ಸಂತ ಸಾರಿದ್ದಾನೆ. ಕಾಂಗ್ರೆಸ್ ಆಡಳಿತವಿರುವ ಛತ್ತೀಸಗಢ ಸರ್ಕಾರ ಮತ್ತು ಶಿವಸೇನೆ-ಕಾಂಗ್ರೆಸ್-ಎನ್.ಸಿ.ಪಿ. ಸಮ್ಮಿಶ್ರ ಆಡಳಿತವಿರುವ ಮಹಾರಾಷ್ಟ್ರ ಸರ್ಕಾರ ಈ ಸಂತನ ವಿರುದ್ಧ ಕಾನೂನು ಕ್ರಮ ಜರುಗಿಸಿವೆ.

ಆದರೆ ಹರಿದ್ವಾರದಲ್ಲಿ ಕೋಮುವಾದಿ ವಿಷಕಾರಿದ ಕಾರ್ಕೋಟಕ ಸಂತರ ಕೂದಲೂ ಕೊಂಕಿಲ್ಲ. ಬಿಜೆಪಿ ಆಡಳಿತವಿರುವ ಉತ್ತರಾಖಂಡ ಸರ್ಕಾರವಾಗಲೀ, ಮೋದಿ ಸರ್ಕಾರವಾಗಲಿ, ಮುಸಲ್ಮಾನರ ನರಮೇಧದ ಕರೆ ಕುರಿತು ತುಟಿ ಬಿಚ್ಚಿಲ್ಲ.

“ಧರ್ಮಗಳು ಬೇರೆಬೇರೆಯಾದರೂ ಎಲ್ಲ ಭಾರತೀಯರದು ಒಂದೇ ರಕ್ತ, ಒಂದೇ ಡಿ.ಎನ್.ಎ. ಹೀಗಾಗಿ ಮುಸಲ್ಮಾನರು ಭಯದ ಆವರ್ತದಲ್ಲಿ ಸಿಕ್ಕಿಹಾಕಿಕೊಳ್ಳಬಾರದು. ಪೂಜೆ ಪ್ರಾರ್ಥನೆಯ ಆಧಾರದ ಮೇಲೆ ಜನರ ನಡುವೆ ಭೇದಭಾವ ಎಣಿಸುವುದು ಸಲ್ಲದು. ಗುಂಪಾಗಿ ಬಡಿದು ಕೊಲ್ಲುವವರು ಹಿಂದುತ್ವದ ವಿರೋಧಿಗಳು. ಹಿಂದು-ಮುಸ್ಲಿಮ್ ಘರ್ಷಣೆಗಳಿಗೆ ಪರಿಹಾರ ಮಾತುಕತೆಯೇ ವಿನಾ ವೈಮನಸ್ಯ ಅಲ್ಲ” ಎಂಬ ಆರೆಸ್ಸೆಸ್ ಮುಖ್ಯಸ್ಥರ ಮಾತುಗಳಿಗೆ ಅರ್ಥವೇನು ಎಂದು ಜಗ್ಗಿಸಿ ಕೇಳಬೇಕಿದೆ.

ಮುಸಲ್ಮಾನರ ಸಂಹಾರಕ್ಕೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ನೀಡಿರುವ ಕರೆ ಹಿಂಸಾತ್ಮಕ ಮತ್ತು ಜನಾಂಗೀಯ ಹತ್ಯೆಗೆ ಆಹ್ವಾನ. ಉಳಿದೆಲ್ಲ ಧರ್ಮೀಯರಿಗೆ ಸಮಾನತೆಯನ್ನು ನಿರಾಕರಿಸಿ ಅಡಿಯಾಳುಗಳನ್ನಾಗಿಸುವ ಹಿಂದುರಾಷ್ಟ್ರದ ಪರಿಕಲ್ಪನೆ ಇದು. ನಮ್ಮ ಸಂವಿಧಾನದ ಸಹಬಾಳುವೆಯ ಆಶಯಕ್ಕೆ ಎಸೆದ ನೇರ ಸವಾಲು. ಕೋಮುವಾದಿ ಕಾರ್ಕೋಟಕ ವಿಷವನ್ನು ಕಾರುವ ಈ ಉನ್ಮಾದಕಾರಿ ಕೃತ್ಯಕ್ಕೆ ದೇಶವನ್ನು ಆಳುವವರು ಪ್ರತ್ಯಕ್ಷ ಪರೋಕ್ಷ ಕುಮ್ಮುಕ್ಕು ನೀಡತೊಡಗಿದ್ದಾರೆ. ರಕ್ಷಣೆಯನ್ನೂ ಒದಗಿಸುತ್ತಿದ್ದಾರೆ. ಹೀಗಾಗಿಯೇ ಈ ಶಕ್ತಿಗಳಿಗೆ ಕಾನೂನಿನ ಭಯವಿಲ್ಲ. ಏನು ಮಹಾ ಆದೀತು, ಹೆಚ್ಚೆಂದರೆ ಒಂದು ಎಫ್.ಐ.ಆರ್ ಎಂಬ ಉಡಾಫೆ ಮೂಡಿದೆ.

’ದೇಶ್ ಕೇ ಗದ್ದಾರೋಂ ಕೋ ಗೋಲಿ ಮಾರೋ ಸಾಲೋಂಕೋ’ ಎಂಬುದಾಗಿ ದೆಹಲಿಯ ಬಹಿರಂಗಸಭೆಯಲ್ಲಿ ಘೋಷಣೆ ಕೂಗಿಸಿದ ಕೇಂದ್ರ ರಾಜ್ಯ ಸಚಿವ ಅನುರಾಗ್ ಠಾಕೂರ್ ಎಂಬ ಕಿರಿಯ ಮಂತ್ರಿಯ ಮೇಲೆ ಕ್ರಮ ಜರುಗಲಿಲ್ಲ. ಬದಲಿಗೆ ಮೋದಿಯವರ ಮಂತ್ರಿಮಂಡಲದಲ್ಲಿ ಕ್ಯಾಬಿನೆಟ್ ದರ್ಜೆಗೆ ಬಡ್ತಿ ನೀಡಿ ಸಮ್ಮಾನಿಸಲಾಯಿತು.

ನೆರೆಹೊರೆಯ ಉತ್ತರಪ್ರದೇಶ, ಹಿಮಾಚಲಪ್ರದೇಶ ಹಾಗೂ ಪಂಜಾಬಿನ ಜೊತೆಗೆ ಉತ್ತರಾಖಂಡವೂ ಸದ್ಯದಲ್ಲೇ ವಿಧಾನಸಭಾ ಚುನಾವಣೆಗಳನ್ನು ಎದುರಿಸಿದೆ. ಮೂರೂ ರಾಜ್ಯಗಳಲ್ಲಿ ಕೋಮುವಾದಿ ಧ್ರುವೀಕರಣ ರಾಜಕಾರಣದ ವಿಷಸರ್ಪ ಭುಸುಗುಟ್ಟಿ ಫೂತ್ಕರಿಸಿದೆ. ಮುಸಲ್ಮಾನರ ನರಮೇಧಕ್ಕೆ ನೀಡಿದ ಕರೆಯು ಮುಸಲ್ಮಾನರಿಂದಲೂ ಇಂತಹುದೇ ವಿಪರೀತ ಪ್ರತಿಕ್ರಿಯೆಯನ್ನು ಪ್ರಜ್ಞಾಪೂರ್ವಕವಾಗಿ ಬಯಸಿದೆ.

2013ರಲ್ಲಿ ಯುಪಿ ಬಿಹಾರದ ಉದ್ದಗಲಕ್ಕೆ ಬೀಸಿದ ಕೋಮುವಾದಿ ವಿಷಗಾಳಿ 2014ರ ಚುನಾವಣೆಗಳನ್ನು ಭರ್ಜರಿಯಾಗಿ ಬಿಜೆಪಿಗೆ ಗೆಲ್ಲಿಸಿಕೊಟ್ಟಿತ್ತಲ್ಲ. ಈ ಭೂಕಂಪನದ ಕಂಪನಕೇಂದ್ರ ಪಶ್ಚಿಮೀ ಉತ್ತರಪ್ರದೇಶವೇ ಆಗಿತ್ತು. ಈ ಸೀಮೆಯ ರೈತಶಕ್ತಿ ಇದೀಗ ಆಳುವವರ ಮಗ್ಗುಲ ಮುಳ್ಳಾಗಿ ಅವರ ಚಿಂತೆಗೆ ಕಾರಣವಾಗಿದೆ. ಹರಿದ್ವಾರ ಉತ್ತರಾಖಂಡದ ಭೂಭಾಗವೆನ್ನುವುದು ಹೌದು. ಆದರೆ ಪಶ್ಚಿಮೀ ಉತ್ತರಪ್ರದೇಶವೇ ಅದರ ನೆರೆಹೊರೆ. ಹೀಗಾಗಿ ಮುಸ್ಲಿಮ್ ನರಮೇಧದ ಕರೆ ಪಶ್ಚಿಮೀ ಉತ್ತರಪ್ರದೇಶದಲ್ಲಿ ಧ್ರುವೀಕರಣ ಬಿತ್ತುವ ನಿಚ್ಚಳ ಪ್ರಯತ್ನ.

ಮನೆಗಳನ್ನು ಮನಸುಗಳನ್ನು ಒಡೆಯುವ ಇಂತಹ ಅಪಾಯಕಾರಿ ಧ್ರುವೀಕರಣದ ರಾಜಕಾರಣದಿಂದ ಕೊಂಚ ಕಾಲ ಬಿಜೆಪಿ ಬಲಗೊಳ್ಳಬಹುದು. ಆದರೆ ದೇಶ ದುರ್ಬಲವಾಗುತ್ತದೆ. ಸಾಮರಸ್ಯದ ಸಾಮಾಜಿಕ ಹಂದರ ಚಿಂದಿಯಾಗುತ್ತದೆ. ದೇಶ ಮೊದಲು ಎಂದು ಸಾರುವವರು ಆಡಿದ ಮಾತನ್ನು ನಡೆಸಿಕೊಡಬೇಕು.

ರಾಜಕಾರಣದ ಹಿಂದೂಕರಣ ಮತ್ತು ಹಿಂದೂಕರಣದ ಸೈನ್ಯೀಕರಣ ಎಂಬುದೇ ಅತ್ಯುತ್ತಮ ಮತ್ತು ದೂರದರ್ಶಿತ್ವದ ಹಿಂದೂ ರಾಷ್ಟ್ರರಾಜಕಾರಣ ಎಂಬುದು ಸಾವರ್ಕರ್ ಪ್ರಣೀತ ಸಿದ್ಧಾಂತ. ದೇಶದಲ್ಲಿಂದು ಇದೇ ಸಿದ್ಧಾಂತವನ್ನು ಜಾರಿಗೆ ತರಲಾಗುತ್ತಿದೆ.

ಧರ್ಮದ ಹೆಸರಿನ ಧರ್ಮಾಂಧತೆ ಪ್ರತ್ಯೇಕವಾದಕ್ಕೆ ದಾರಿ ಮಾಡುತ್ತದೆ. ಪ್ರತ್ಯೇಕವಾದವು ಭಯೋತ್ಪಾದನೆಯನ್ನು ಹುಟ್ಟಿಹಾಕೀತು. ತಾಲೀಬಾನಿ, ಲಷ್ಕರ್ ಎ ತೊಯ್ಬಾ, ಐ.ಎಸ್.ಐ.ಎಸ್ ಮುಂತಾದ ಮತಾಂಧ ಮುಸ್ಲಿಮ್ ಸಂಘಟನೆಗಳೇ ಈ ಮಾತಿಗೆ ಉದಾಹರಣೆ.

ಅನುರಾಗ್ ಠಾಕೂರ್

ಕಡು ದ್ವೇಷವನ್ನು ಬಿತ್ತಿ ಕೋಮುಗಲಭೆಗಳಿಗೆ ಕಿಡಿ ಹೊತ್ತಿಸಿ ಚುನಾವಣೆ ಬೇಳೆ ಬೇಯಿಸಿಕೊಳ್ಳುವುದು ನಿಜ ಅರ್ಥದಲ್ಲಿ ದೇಶದ್ರೋಹದ ಕೃತ್ಯ. ಇದರ ವಿರುದ್ಧ ಗಣ್ಯ ವ್ಯಕ್ತಿಗಳು- ಪೌರಸಮಾಜ ಗಟ್ಟಿ ದನಿಯೆತ್ತಬೇಕಿದೆ.

ಹಿಂದಿಯ ಬಹುಮುಖ್ಯ ಕವಿಗಳಲ್ಲಿ ಒಬ್ಬರಾಗಿದ್ದ ಸರ್ವೇಶ್ವರ ದಯಾಳ ಸಕ್ಸೇನಾ ಅವರ ಈ ಕವಿತೆ ದಶಕಗಳ ಹಿಂದೆ ಬರೆದದ್ದು. ನನ್ನ ಅನುವಾದ ತೆಳುವೆನಿಸಿದರೆ ಕ್ಷಮಿಸಿ.

ದೇಶವೆಂಬುದು ಕಾಗದದ ಮೇಲೆ ಬಿಡಿಸಿದ ನಕ್ಷೆಯಲ್ಲ
ನಿಮ್ಮ ಮನೆಯ
ಒಂದು ಕೋಣೆಗೆ ಬೆಂಕಿ ಬಿದ್ದಿದೆಯಾದರೆ
ಮತ್ತೊಂದು ಕೋಣೆಯಲಿ
ಮಲಗಿ ನಿದ್ರಿಸಬಲ್ಲಿರಾ ನೀವು?

ನಿಮ್ಮ ಮನೆಯ ಒಂದು ಕೋಣೆಯಲಿ
ಹೆಣ ಬಿದ್ದು ಕೊಳೆಯುತ್ತಿದ್ದರೆ
ಇನ್ನೊಂದು ಕೋಣೆಯಲಿ ಪ್ರಾರ್ಥಿಸಬಲ್ಲಿರಾ
ನೀವು?

ಹೌದು ಎಂಬುದೇ ನಿಮ್ಮ ಉತ್ತರವಾಗಿದ್ದರೆ
ನಿಮ್ಮೊಡನೆ ಮಾತಾಡುವುದು
ಏನೂ ಉಳಿದಿಲ್ಲ ನನಗೆ.

ದೇಶವೆಂಬುದು ಬರಿದೇ ಕಾಗದದ ಮೇಲೆ
ಬರೆದ ನಕ್ಷೆಯಲ್ಲ
ಒಂದು ಹಿಸ್ಸೆ ಹರಿದುಹೋದರೆ
ಬಾಕಿ ಹಿಸ್ಸೆಯು ಬಾಧಿತವಾಗದೆ ಉಳಿದು
ಹೋಗುವುದಿಲ್ಲ ಮತ್ತು
ನದಿಗಳು ಪರ್ವತ ಶಹರು ಹಳ್ಳಿ
ತಮ್ಮ ತಮ್ಮ ಜಾಗೆಗಳಲ್ಲಿ ಹಾಗೇ
ಇಡಿಯಾಗಿ ಕಂಡು ಉದಾಸೀನ
ಉಳಿಯುವುದಿಲ್ಲ.

ಮಾನವ ಜೀವಕಿಂತ ಮಿಗಿಲೆನಿಸಿದ್ದು
ಇನ್ನೇನೂ ಇಲ್ಲ ಈ ಇಳೆಯೊಳಗೆ
ಈಶ್ವರ
ಜ್ಞಾನ
ಚುನಾವಣೆ
ಯಾವುದೂ ಅಲ್ಲ

ಕಾಗದದ ಮೇಲೆ ಗೀಚಿದ ಯಾವುದೇ ಅನುಲೇಖವ
ಹರಿದು ಒಗೆಯಲುಬಹುದು
ಮತ್ತು ನೆಲದಾಳದ ಏಳು ಪದರಗಳಡಿಯಲಿ
ಹುಗಿಯಲೂಬಹುದು ಅದನು.

ಕಣ್ಣಿಲ್ಲದ ಕಪೋತವದು
ಕಳೇಬರಗಳ ಮೇಲೆ ಕಾಲೂರಿ
ನಿಂತ ವಿವೇಕ
ಕೊಲೆಗಡುಕರ ದಂಧೆಯದು

ನೆನಪಿನಲಿಡಯ್ಯಾ
ಒಂದು ಕಂದನ ಹತ್ಯೆ
ಒಬ್ಬ ಮಹಿಳೆಯ ಮರಣ
ಕಾಡತೂಸುಗಳು ಚಿಂದಿಹೊಡೆದ
ಮನುಷ್ಯನೊಬ್ಬನ ಮೃತದೇಹ
ಸಂಪೂರ್ಣ ರಾಷ್ಟ್ರದ ಪತನವೇ
ವಿನಾ ಕೇವಲ
ಯಾವುದೊಂದು ಆಡಳಿತ ಮಾತ್ರದ್ದಲ್ಲ

ಇಂತಹ ನೆತ್ತರು ಹರಿದು
ಇಳೆಗಿಳಿದು ತೋಯಿಸಿ ಹಿಂಗುವುದಿಲ್ಲ
ಬದಲಿಗೆ

ಆಗಸದಲಿ ಪಟಪಟಿಸುವ ಪತಾಕೆಗಳ

ಮೆತ್ತಲಿದೆ ಕಪ್ಪಾಗಿ
ಫೌಜು ಬೂಟುಗಳ ನಿಶಾನೆ ಬಿದ್ದ ನೆಲ

ಮತ್ತು ಅದರ ಮೇಲೆ ಹೆಣಗಳು ಉರುಳುತಿರುವ
ಆ ಅದೇ ನೆಲ
ಬೆಂಕಿಯಾಗಿ ನಿಮ್ಮ ನೆತ್ತರ ಸೇರಿ ಬೆರೆತು ಓಡದಿದ್ದರೆ
ಇಕೋ ತಿಳಿದುಕೊಳ್ಳಿರಿ
ನೀವು ಬಂಜರು ಬಿದ್ದಿರುವಿರಿ
ಉಸಿರಾಡುವ ಅಧಿಕಾರವೂ ಇಲ್ಲ ನಿಮಗೆ ಇಲ್ಲಿ
ಸತ್ತೇ ಹೋಗಿದೆ ನಿಮ್ಮ ಪಾಲಿನ ಇಹದ ವ್ಯಾಪಾರ

ಕಟ್ಟಕಡೇ ಮಾತು
ಅಗದೀ ನೇರ ನಿಚ್ಚಳ
ಎಂದೆಂದಿಗೂ ಕ್ಷಮಿಸಿದಿರಿ
ಯಾವನೇ ಹಂತಕನನ್ನು
ಆಗಿರವಲ್ಲನ್ಯಾಕೆ ಅವನು
ನಿಮ್ಮ ಜಿಗರೀ ದೋಸ್ತ
ದುರಂಧರ ಧರ್ಮದ ಗುತ್ತಿಗೆದಾರ,
ಲೋಕತಂತ್ರದ
ಸ್ವನಾಮಧನ್ಯ ಪಹರೆದಾರ


ಇದನ್ನೂ ಓದಿ: ಕೋಮುವಾದಿ ಕೊಪ್ಪರಿಗೆಗೆ ರಿಝ್ವಿ ಮತಾಂತರದ ಬೆಂಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Dr. ಆನಂದ್ ರಂಗನಾಥನ್ ಎಂಬ ಲೇಖಕ, ವಿಜ್ಞಾನಿ ಈ ಕಾಲಿಚರಣ್ ಎಂಬಾತನ ಹೇಳಿಕೆಯನ್ನು ಸಮರ್ಥಿಸುತ್ತಾ Dr. B R ಅಂಬೇಡ್ಕರ್ ಅವರು ಮರಾಠಿ ಪತ್ರಿಕೆಯೊಂದರ ದೀಪಾವಳಿ ವಿಶೇಷಾಂಕಕ್ಕೆ ಬರೆದ ಲೇಖನವನ್ನು ಉಲ್ಲೇಖಸಿ, ಅಂಬೇಡ್ಕರ್ ರವರು ಗಾಂಧೀಜಿಯವರನ್ನು ಅವಹೇಳನಕಾರಿ ಆಗಿ ಟೀಕಿಸಿರುವ ಸಾಲುಗಳನ್ನು tag ಮಾಡಿ “ಗಾಂಧಿ ಭಕ್ತರಿಗೆ ” ಸವಾಲೆಸಿದಿರುತ್ತಾರೆ.

LEAVE A REPLY

Please enter your comment!
Please enter your name here

- Advertisment -

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...

ಮಹಿಳಾ ಮೀಸಲಾತಿ ಮಸೂದೆ; ತ್ವರಿತ ಅನುಷ್ಠಾನಕ್ಕೆ ವಿಪಕ್ಷಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಶಾಸನವನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಅಭಿಪ್ರಾಯಗಳನ್ನು...

ಕೋಲ್ಕತ್ತಾ : ಕಾಳಿಘಾಟ್ ಬಳಿಕ ದಕ್ಷಿಣೇಶ್ವರದಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಗೋ ಬ್ಯಾಕ್ ಘೋಷಣೆ’

ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ 'ಗೋ ಬ್ಯಾಕ್ ಘೋಷಣೆಗಳು' ಕೇಳಿ ಬಂದಿವೆ. ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ...

ಉತ್ತರ ಪ್ರದೇಶ| ಹೋಳಿ ಹಬ್ಬದ ಶುಭ ಕೋರಿದ ದಲಿತ ಯುವಕನನ್ನು ಕೊಂದ ಪ್ರಬಲಜಾತಿ ಕುಟುಂಬ

ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ, ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ 22 ವರ್ಷದ ದಲಿತ ವ್ಯಕ್ತಿಯನ್ನು ಬ್ರಾಹ್ಮಣ ಕುಟುಂಬದ ಸದಸ್ಯರು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 4...