ರಾಮ ಜನ್ಮಭೂಮಿ ಉದ್ಘಾಟನೆ ವಿಚಾರವಾಗಿ ಮಾತನಾಡಿದ್ದ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ‘ಕರ್ನಾಟಕದಲ್ಲಿ ಗೋಧ್ರಾ ರೀತಿಯ ಘಟನೆ ಪುನರಾವರ್ತನೆಯಾಗಬಹುದು’ ಎಂದು ಹೇಳಿದ್ದರು. ಅವರ ಈ ಹೇಳಿಕೆಗಾಗಿ ಕಳೆದ ಶುಕ್ರವಾರ ಪೊಲೀಸರು ವಿಚಾರಣೆ ನಡೆಸಿದ್ದರು. ಈ ಬಗ್ಗೆ ಅಸಮಾಧಾನಗೊಂಡಿರುವ ಹಿರಿಯ ಕಾಂಗ್ರೆಸ್ಸಿಗ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಇದು ಕಾಂಗ್ರೆಸ್ ಸರ್ಕಾರವೋ ಅಥವಾ ಆರ್ಎಸ್ಎಸ್ ನೇತೃತ್ವದ ಸರ್ಕಾರವೋ ಗೊತ್ತಾಗುತ್ತಿಲ್ಲ’ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ‘ಇದು ಕಾಂಗ್ರೆಸ್ ಸರ್ಕಾರವೋ ಅಥವಾ ಆರ್ಎಸ್ಎಸ್ ನೇತೃತ್ವದ ಸರ್ಕಾರವೋ? ನಾನು ಯಾವ ಸರ್ಕಾರದ ಅಡಿಯಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ’ ಎಂದು ಹರಿಪ್ರಸಾದ್ ಹೇಳಿದರು.
‘ಈ ವಿಚಾರದಲ್ಲಿ ನನಗೆ ವಿಐಪಿ ಎಂಬ ವಿನಾಯಿತಿಗಳು ಬೇಡ; ಅಗತ್ಯವಿದ್ದರೆ ನನ್ನನ್ನು ಬಂಧಿಸಬಹುದು’ ಎಂದು ಹರಿಪ್ರಸಾದ್ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
‘ಅಗತ್ಯವಿದ್ದರೆ ನನ್ನ ಮೇಲೆ ಪಾಲಿಗ್ರಾಫ್ (ಸುಳ್ಳು ಪತ್ತೆ ಪರೀಕ್ಷೆ) ನಡೆಸುವಂತೆ ನಾನು ಪೊಲೀಸರನ್ನು ಕೇಳಿದ್ದೇನೆ. ಅವರು ನನ್ನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಲಿ. ನನ್ನ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಲಿ. ನನ್ನದೆ ಇಂಥ ದುಸ್ಥಿತಿಯಾದರೆ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರ ಗತಿಯೇನು’ ಎಂದು ಹರಿಪ್ರಸಾದ್ ಪ್ರಶ್ನಿಸಿದರು.
‘ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೆಸ್ಸೆಸ್ ಕಾರ್ಯಕರ್ತ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿಯನ್ನು ‘ಮಗನೇ’ಎಂದು ಸಂಬೋಧಿಸಿದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಗೋಧ್ರಾ ಮಾದರಿಯ ಅಭಿವೃದ್ಧಿ ಪುನರಾವರ್ತನೆಯಾಗುವ ಸಾಧ್ಯತೆಯಿದೆ ಎಂದ ಹರಿಪ್ರಸಾದ್, ಮುಂದಿನ ದಿನಗಳಲ್ಲಿ ಅಯೋಧ್ಯೆಗೆ ತೆರಳುವವರಿಗೆ ಭದ್ರತೆ ಒದಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಇದನ್ನೂ ಓದಿ; ಕೇಂದ್ರದ ಅಂಗಳಕ್ಕೆ ಒಳ ಮೀಸಲಾತಿ ಚೆಂಡು; 341(3)ನೇ ವಿಧಿ ತಿದ್ದುಪಡಿಗೆ ರಾಜ್ಯ ಸರ್ಕಾರ ಶಿಫಾರಸು