ಕೆಪಿಸಿಸಿ ಅಧ್ಯಕ್ಷರೂ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ವಾಪಸ್ ಪಡೆದ ರಾಜ್ಯ ಸರ್ಕಾರದ ನಿಲುವನ್ನು ಪ್ರಶ್ನಿಸಿರುವ ಸಿಬಿಐ, ಹೈಕೋರ್ಟ್ ಮೊರೆ ಹೋಗಿದೆ. ಶೀಘ್ರದಲ್ಲೇ ಈ ಪ್ರಕರಣದ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ. ಕೆ. ಶಿವಕುಮಾರ್, ‘ಸಿಬಿಐ ಹಾಗೂ ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿ ನನಗೆ ಹಿಂಸೆ ನೀಡಲು ಬಯಸುತ್ತಿವೆ. ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು, ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಲು ಮುಂದಾಗಿದೆ. ರಾಜ್ಯ ಸರ್ಕಾರ ತನಿಖೆಯನ್ನು ವಾಪಸ್ ಪಡೆದ ಬಳಿಕವೂ ಸಿಬಿಐ ಅಧಿಕಾರಿಗಳು ನನ್ನ ಆಪ್ತರಿಗೆ ನೋಟಿಸ್ ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ನನ್ನ ವಿರುದ್ಧ ರಾಜಕೀಯ ಪ್ರೇರಿತವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಆದರೆ, ಬಿಜೆಪಿ ನಾಯಕರ ವಿರುದ್ದ ಮಾತ್ರ ಸಿಬಿಐ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಕಿಡಿಕಾರಿದ್ದಾರೆ.
‘ಎಲ್ಲದಕ್ಕೂ ಒಂದು ಮಿತಿ ಇರುತ್ತದೆ; ನನಗೆ ನೀಡುತ್ತಿರುವ ಹಿಂಸೆಗೂ ಒಂದು ಮಿತಿ ಇದೆ. ಇದರ ಹಿಂದೆ ಯಾರಿದ್ದಾರೆ ಅನ್ನೋದು ನನಗೆ ಗೊತ್ತಿದ್ದು, ಗಡಿಯಾರದ ಮುಳ್ಳು ತಿರುಗುತ್ತಲೇ ಇರುತ್ತದೆ. ಅವರು ಏನು ಮಾಡಲು ಹೊರಟಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ನಾನಂತೂ ಸಿದ್ದನಿದ್ದೇನೆ. ನನ್ನನ್ನು ಈ ಹಿಂದೆಯೂ ಬಂಧಿಸಿ ಜೈಲಿಗೆ ಅಟ್ಟಿದ್ದರು. ಆದರೆ, ರಾಜ್ಯದ ಜನ ನನಗೆ ಬೆಂಬಲಿಸಿದರು. ನಾನು ನ್ಯಾಯಕ್ಕಾಗಿ ಹೋರಾಟ ಮಾಡುತ್ತೇನೆ’ ಎಂದರು.
ಹಿಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಡಿಕೆಶಿ ವಿರುದ್ಧ ತನಿಖೆಗೆ ಸಿಬಿಐಗೆ ನೀಡಿತ್ತು. ಕಾಂಗ್ರೆಸ್ ಕಳೆದ ವರ್ಷ ಅಧಿಕಾರಕ್ಕೆ ಬಂದ ನಂತರ, ಸಚಿವ ಸಂಪುಟವು ಡಿಕೆಶಿ ವಿರುದ್ದ ಸಿಬಿಐ ನಡೆಸುತ್ತಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆ ವಿಚಾರವಾಗಿ ಮಹತ್ವದ ತೀರ್ಮಾನ ಕೈಗೊಂಡು, ಪ್ರಕರಣ ವಾಪಸ್ ಪಡೆದಿತ್ತು.
ಇದನ್ನೂ ಓದಿ; ಇಂದಿರಾ ಕ್ಯಾಂಟೀನ್ –ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯ ಬಳಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ