Homeಅಂಕಣಗಳುಪದಚ್ಯುತಿಯ ಹೊಸ್ತಿಲಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಪದಚ್ಯುತಿಯ ಹೊಸ್ತಿಲಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್

- Advertisement -
- Advertisement -

ಧಾರ್ಮಿಕ ಕಟ್ಟರ್‌ವಾದಿಗಳ ಜಿಹಾದಿ ಸಂಘಟನೆಗಳು ಮತ್ತು ಸರ್ವಶಕ್ತ ಪಾಕಿಸ್ತಾನಿ ಸೇನೆ ಹಾಗೂ ಅಮೆರಿಕೆಯ ಪರೋಕ್ಷ ನಿಯಂತ್ರಣಕ್ಕೆ ತುತ್ತಾಗಿರುವ ಪಾಕಿಸ್ತಾನದಲ್ಲಿ ’ಜನರು ಆರಿಸಿದ’ ಸರ್ಕಾರಗಳು ನಿಜವಾಗಿಯೂ ಅಸಹಾಯಕ ಎಂಬ ಮಾತು ಮತ್ತೊಮ್ಮೆ ರುಜುವಾತಾಗಿದೆ.

ಜಗದ್ವಿಖ್ಯಾತ ಕ್ರಿಕೆಟ್ ಆಟಗಾರನಾಗಿ ನಿವೃತ್ತರಾದ ನಂತರ ರಾಜಕಾರಣಕ್ಕೆ ಕಾಲಿಟ್ಟು ನಾಲ್ಕು ವರ್ಷಗಳ ಹಿಂದೆ ಪಾಕಿಸ್ತಾನದ ಪ್ರಧಾನಿ ಗದ್ದುಗೆ ಏರಿದ್ದರು ಇಮ್ರಾನ್ ಖಾನ್. ತೀವ್ರ ಆರ್ಥಿಕ ಸಂಕಟಕ್ಕೆ ಸಿಕ್ಕಿ ತೊಳಲಾಡಿರುವ ಪಾಕಿಸ್ತಾನ ಆಂತರಿಕ ಕ್ಷೋಭೆಗಳಲ್ಲಿ ಮುಳುಗಿದೆ. ಪ್ರತಿಪಕ್ಷಗಳು ಇಮ್ರಾನ್ ಸರ್ಕಾರದ ವಿರುದ್ಧ ತೋಳೇರಿಸಿ ನಿಂತಿವೆ. ಯುಕ್ರೇನ್ ಸಮರಕ್ಕೆ ಅಮೆರಿಕೆ ಮತ್ತು ಐರೋಪ್ಯ ಕೂಟವನ್ನು ದೂಷಿಸಿ ದಾಳಿ ನಡೆಸಿರುವ ಖಾನ್ ನಡೆ ಅಮೆರಿಕೆ ಮತ್ತು ಪಾಕ್ ಸೇನೆಯನ್ನು ಸಿಟ್ಟಿಗೆಬ್ಬಿಸಿದೆ.

ಕೈಗೊಂಬೆ ಪ್ರಧಾನಿಗಳನ್ನು ಕುರ್ಚಿ ಮೇಲೆ ಕೂರಿಸಿ ತನ್ನ ಇಚ್ಛೆಗೆ ಅನುಗುಣವಾಗಿ ಕುಣಿಸುವ ಪಾಕಿಸ್ತಾನಿ ಸೇನೆಗೆ ಇದೀಗ ಇಮ್ರಾನ್ ಖಾನ್ ಬೇಕಿಲ್ಲ.

ನವಾಜ್ ಷರೀಫ್

ನವಾಜ್ ಷರೀಫ್ ಅವರ ಪಾಕಿಸ್ತಾನ ಮುಸ್ಲಿಮ್ ಲೀಗ್ (ಎನ್), ಆಸೀಫ್ ಅಲಿ ಝರ್ದಾರಿ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಹಾಗೂ ಮೌಲಾನಾ ಫಜ್ಲುರ್ ರೆಹಮಾನ್ ಅವರ ಜಮಾತ್ ಉಲೇಮಾ ಇಸ್ಲಾಮ್ (ಎಫ್) ಸೇರಿದಂತೆ ಪ್ರತಿಪಕ್ಷಗಳ ಒಕ್ಕೂಟವು ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದೆ. ಇಮ್ರಾನ್ ಅವರ ಸಮ್ಮಿಶ್ರ ಸರ್ಕಾರವನ್ನು ಬೆಂಬಲಿಸಿದ್ದ ಪಕ್ಷಗಳೂ ಹಿಂದೆ ಸರಿದಿವೆ. ತಮ್ಮದೇ ಪಕ್ಷ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ ಪಕ್ಷದ ಅನೇಕ ಸಂಸದರು ಕೂಡ ಇಮ್ರಾನ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಇದೇ 28ರಂದು ಅವರು ನ್ಯಾಷನಲ್ ಅಸೆಂಬ್ಲಿಯಲ್ಲಿ (ಲೋಕಸಭೆ) ಅವಿಶ್ವಾಸ ನಿರ್ಣಯ ಎದುರಿಸಲಿದ್ದಾರೆ. ಬಹುಮತ ರುಜುವಾತು ಮಾಡಲು 12ರಿಂದ 24 ಮಂದಿ ಸದಸ್ಯರ ಕೊರತೆಯನ್ನು ಇಮ್ರಾನ್ ಪಕ್ಷ ಎದುರಿಸಿದೆ. ಅವಿಶ್ವಾಸ ನಿರ್ಣಯವನ್ನು ಚರ್ಚೆಗೆ ತೆಗೆದುಕೊಳ್ಳುವ ಹಿಂದಿನ ದಿನ ನ್ಯಾಷನಲ್ ಅಸೆಂಬ್ಲಿಯ ಹೊರಗೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಬಲಾಬಲ ಪ್ರದರ್ಶನಕ್ಕೆ ತೋಳೇರಿಸಿವೆ. ಭಾರೀ ಹಿಂಸಾಚಾರ ಮತ್ತು ರಕ್ತಪಾತದ ಶಂಕೆಯಿದೆ.

ತಮ್ಮ ಸರ್ಕಾರ ಮತ್ತು ಪಾಕಿಸ್ತಾನಿ ಸೇನೆಯ ನಡುವೆ ಒಮ್ಮತವಿರುವ ಕಾರಣ ತಮ್ಮ ಸರ್ಕಾರ ಸುಸ್ಥಿರವಾಗಿದ್ದು ಅಭಿವೃದ್ಧಿಯ ಮೇಲೆ ಹೆಚ್ಚಿನ ಗಮನ ಹರಿಸುತ್ತಿದೆ ಎಂಬ ಮಾತನ್ನು ಇಮ್ರಾನ್ ಖಾನ್ ಮೊದಲ ಒಂದೆರಡು ವರ್ಷ ಆಡಿದ್ದುಂಟು. ಖಾನ್ ಅವರ ಚುನಾವಣೆಗೆ ಸೇನೆ ಮತ್ತು ಐಎಸ್‌ಐ ಬಹುವಾಗಿ ಶ್ರಮಿಸಿದ್ದುಂಟು. ಆಸೀಫ್ ಝರ್ದಾರಿ ಮತ್ತು ನವಾಜ್ ಷರೀಫ್ ಪಕ್ಷಗಳ ಗೆಲ್ಲುವ ಅಭ್ಯರ್ಥಿಗಳನೇಕರನ್ನು ಇಮ್ರಾನ್ ಪಕ್ಷಕ್ಕೆ ಸೆಳೆದದ್ದುಂಟು.

ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯ ಒಟ್ಟು 342 ಸೀಟುಗಳ ಪೈಕಿ ಇಮ್ರಾನ್ ಅವರ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ ಪಕ್ಷ ಗೆದ್ದದ್ದು 155 ಸೀಟುಗಳು. ಮಿತ್ರಪಕ್ಷಗಳ ಬೆಂಬಲದಿಂದ ಸರಳ ಬಹುಮತವನ್ನೂ (176) ಒಟ್ಟುಗೂಡಿಸಿಕೊಂಡಿತ್ತು. ಈ ಕಸರತ್ತಿನ ಹಿಂದೆ ಸೇನೆಯ ಬೆಂಬಲವಿತ್ತು. ಮಿಲಿಟರಿಯ ಹಿಡಿತದಿಂದ ಬಿಡಿಸಿಕೊಳ್ಳಬೇಕೆಂಬ ತಹತಹ ಇಮ್ರಾನ್ ಪಕ್ಷಕ್ಕೆ ಇರಲೇ ಇಲ್ಲ. ಆಡಳಿತ ಮತ್ತು ವಿದೇಶಾಂಗ ನೀತಿಯಲ್ಲಿ ಮಿಲಿಟರಿ ವಹಿಸಿದ್ದ ಸಕ್ರಿಯ ಪಾತ್ರ ಕುರಿತು ಪ್ರಧಾನಿಗೆ ಯಾವ ಕಿರಿಕಿರಿಯೂ ಇರಲಿಲ್ಲ.

ಇಮ್ರಾನ್ ಸರ್ಕಾರ ಎರಡೇ ವರ್ಷಗಳಲ್ಲಿ ಭ್ರಮನಿರಸನ ಮೂಡಿಸಿತು. ಸಾಲದ ಸುಳಿಗೆ ಸಿಕ್ಕಿರುವ ಪಾಕಿಸ್ತಾನ ಆಹಾರ ಮತ್ತು ಊರ್ಜೆಯ ಬಿಕ್ಕಟ್ಟು ಎದುರಿಸಿದೆ. ಪಾಕ್ ಸೇನೆಯ ಮುಂಚೂಣಿ ಅಧಿಕಾರಿಗಳ ವರ್ಗಾವಣೆಯಲ್ಲಿ ಮೂಗು ತೂರಿಸಿದ ಇಮ್ರಾನ್ ಸರ್ಕಾರವನ್ನು ಬೆಂಬಲಿಸುವ ಕುರಿತು ಸೇನೆಯಲ್ಲೇ ಭಿನ್ನಮತ ಮೂಡಿತು. ಇಮ್ರಾನ್ ಸರ್ಕಾರವನ್ನು ಹಣಿಯಲು ಇದೇ ಸರಿಯಾದ ಅವಕಾಶವೆಂದು ಪ್ರತಿಪಕ್ಷಗಳು ಒಟ್ಟಿಗೆ ಬಂದಿವೆ.

’ಹಮ್ ದೇಖೇಂಗೇ’ ಎಂಬುದು ಪಾಕಿಸ್ತಾನದ ಪ್ರಗತಿಪರ ಕವಿ ಫೈಜ್ ಅಹ್ಮದ್ ಫೈಜ್ ಅವರ ಕ್ರಾಂತಿಕಾರಕ ಕವಿತೆಯೊಂದರ ತಲೆಬರೆಹ. 80ರ ದಶಕದಲ್ಲಿ ಅಂದಿನ ಮಿಲಿಟರಿ ಸರ್ವಾಧಿಕಾರಿ ಜನರಲ್ ಝಿಯಾವುಲ್ ಹಖ್ ಆಡಳಿತದ ವಿರುದ್ಧ ಪ್ರತಿಭಟನೆಯ ಗೀತೆಯಾಗಿ ಪಾಕಿಸ್ತಾನದಲ್ಲಿ ಮಾರ್ದನಿಸಿತ್ತು. “..ರಾಜ್ಯಗಳಳಿಯಲಿ, ರಾಜ್ಯಗಳುಳಿಯಲಿ, ಹಾರಲಿ ಗದ್ದುಗೆ ಮುಕುಟಗಳು….” ಎಂಬ ನಮ್ಮ ಕ್ರಾಂತಿಕಾರಿ ಕವಿ ಕುವೆಂಪು ಅವರ ’ನೇಗಿಲಯೋಗಿ’ ಕವಿತೆಯ ಸಾಲನ್ನೇ ಹೋಲುವ ಪದಗಳು ಫೈಜ್ ಅವರ ಈ ಕವಿತೆಯಲ್ಲೂ ಇವೆ. “ಸಬ್ ತಾಜ್ ಉಛಾಲೇ ಜಾಯೇಂಗೇ…ಸಬ್ ತಖ್ತ್ ಗಿರಾಯೇ ಜಾಯೇಂಗೇ” (ತೂರಾಡಲಾದೀತು ಮುಕುಟಗಳನು ಗಾಳಿಗೆಸೆದು, ಕೆಡವಲಾದೀತು ಸಿಂಹಾಸನಗಳನ್ನು ಕುಟ್ಟಿ ನೆಲಕ್ಕೆ..) ಹೀಗೆ.

ಆಸೀಫ್ ಅಲಿ ಝರ್ದಾರಿ

ಪಾಕಿಸ್ತಾನದಲ್ಲಿ ಯಾರ ಗದ್ದುಗೆ ಮುಕುಟಗಳು ಹಾರಿದರೇನಂತೆ. ಅಲ್ಲಿನ ಸರ್ವಶಕ್ತ ಸೇನೆಯ ಗದ್ದುಗೆ ಮುಕುಟಗಳು ಸದಾ ಕಾಯಂ.

ಕಳೆದ ಎಪ್ಪತ್ತು ವರ್ಷಗಳಲ್ಲಿ ಹೆಚ್ಚೂಕಡಿಮೆ ಅರ್ಧದಷ್ಟು ಕಾಲ ಪಾಕಿಸ್ತಾನವನ್ನು ಸೇನೆಯೇ ಆಳಿದೆ. ಜನರೇ ಆಯ್ಕೆ ಮಾಡಿದ ಸರ್ಕಾರದಿಂದ ಜನರಿಂದ ಆಯ್ಕೆಯಾದ ಮತ್ತೊಂದು ಸರ್ಕಾರಕ್ಕೆ ಅಧಿಕಾರದ ಶಾಂತಿಯುತ ಹಸ್ತಾಂತರ ನಡೆದಿರುವುದು ಎರಡೇ ಬಾರಿ. ಚುನಾವಣೆಯ ಮೂಲಕ ಆರಿಸಿ ಬಂದ ಹಲವು ಸರ್ಕಾರಗಳನ್ನು ಕೆಡವಿ ಅಧಿಕಾರ ಕಬಳಿಸಿದೆ ಪಾಕ್ ಸೇನೆ.

ನೆರೆಹೊರೆಯನ್ನು ಆಯ್ದುಕೊಳ್ಳುವುದು ಅಸಾಧ್ಯ ಎಂಬ ಮಾತೊಂದಿದೆ. ಹಿಂಸೆ, ರಕ್ತಪಾತ, ಭಯೋತ್ಪಾದನೆಗಳಲ್ಲೇ ಬದುಕಿರುವ ನಮ್ಮ ನೆರೆಯ ದೇಶ ಪಾಕಿಸ್ತಾನ ಸುಖಸಮೃದ್ಧಿ ಶಾಂತಿಯಿಂದ ಬದುಕಿದಷ್ಟೂ ಭಾರತಕ್ಕೆ ನೆಮ್ಮದಿ. ಇಲ್ಲವಾದರೆ ಅಲ್ಲಿನ ಉತ್ಪಾತಗಳು ಇಲ್ಲಿ ಕಂಪನ ಹುಟ್ಟಿಸುವುದನ್ನು ಕಾಣುತ್ತಲೇ ಬಂದಿದ್ದೇವೆ. ಅಲ್ಲಾಹು, ಆರ್ಮಿ ಹಾಗೂ ಅಮೆರಿಕ ಆಳಿಕೊಂಡು ಬಂದಿರುವ ಪಾಕಿಸ್ತಾನ ನಿರಂತರ ರಾಜಕೀಯ ಅಸ್ಥಿರತೆಗೆ ಸದಾ ಜೋಲಿ ಹೊಡೆದ ದೇಶ. ಕಳೆದ ಆರೂವರೆ ದಶಕಗಳ ತನ್ನ ಇತಿಹಾಸದಲ್ಲಿ ಈ ದೇಶದ ಜನತಂತ್ರ ಎಂಬ ಸಸಿ ಗಿಡವಾಗಿ ಮರವಾಗಿ ಹೂವು ಕಾಯಿ ಕಟ್ಟಿ ಹಣ್ಣು ಮಾಗಲೇ ಇಲ್ಲ.

ಪಾಕಿಸ್ತಾನ ಹುಟ್ಟಿದ ಒಂದೇ ವರ್ಷದಲ್ಲಿ ಆ ದೇಶದ ಜನಕನೆಂದೇ ಹೆಸರಾದ ಮೊಹಮ್ಮದಾಲಿ ಜಿನ್ನಾ ನಿಧನರಾಗುತ್ತಾರೆ. ಮೊದಲ ಒಂಬತ್ತು ವರ್ಷಗಳ ಕಾಲ ಪಾಕಿಸ್ತಾನಕ್ಕೆ ಸಂವಿಧಾನವೇ ಇರಲಿಲ್ಲ. ಜಿನ್ನಾ ನಿಧನ ಅಧಿಕಾರ ಹಿಡಿಯುವ ಹಣಾಹಣಿಗೆ ದಾರಿ ಮಾಡುತ್ತದೆ. 1958ರ ಹೊತ್ತಿಗೆ ಮೊದಲ ಕ್ಷಿಪ್ರಕ್ರಾಂತಿ ನಡೆದು 1971ರ ತನಕ ಸೇನೆ ಅಧಿಕಾರ ಹಿಡಿಯುತ್ತದೆ. ತನ್ನ ಪಟ್ಟಭದ್ರ ಹಿತಾಸಕ್ತಿಗೆ ಅಡಚಣೆಗಳು ಒದಗಿದಾಗಲೆಲ್ಲ ಮಿಲಿಟರಿ ಜನರಿಂದ ಆಯ್ಕೆಯಾದ ಸರ್ಕಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತ ಬಂದಿದೆ. 1977ರಿಂದ 88 ಮತ್ತು 1999ರಿಂದ 2008ರ ತನಕ ಸೇನೆಯದೇ ನೇರ ಆಡಳಿತ. ಜನತಾಂತ್ರಿಕ ಆಡಳಿತವನ್ನು ಗಟ್ಟಿಗೊಳಿಸುತ್ತ ಬಂದಿದ್ದ ನವಾಜ್ ಷರೀಫ್ ಮಾಜಿ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ವಿರುದ್ಧ ದೇಶದ್ರೋಹದ ಆರೋಪ ಹೇರಲು ಮುಂದಾಗಿದ್ದರು. ಈ ಕಾರಣಕ್ಕಾಗಿಯೇ ಅವರನ್ನು ’ಪನಾಮಾ ಪೇಪರ್‍ಸ್ ಆರ್ಥಿಕ ಹಗರಣ’ದ ನೆವದಲ್ಲಿ ಉರುಳಿಸಿ ಸೆರೆಗೆ ತಳ್ಳಲಾಯಿತು. ವಿರೋಧಿ ದೇಶ ಭಾರತ ಕುರಿತು ಮೆದು ಧೋರಣೆ ತಳೆದು ಗೆಳೆತನಕ್ಕೆ ಹಾತೊರೆಯುತ್ತಿದ್ದಾರೆ ಎಂದು ಆರೋಪ ಹೊರಿಸಲಾಯಿತು. ಸೇನೆಯನ್ನು ಬೆಂಬಲಿಸುವ ಮತ್ತು ಸೇನೆಯ ಮಾತು ಕೇಳುವ ಜನಪ್ರಿಯ ನಾಯಕ ಇಮ್ರಾನ್ ಅವರನ್ನು ಮುಂದೆ ತರಲಾಯಿತು.

ಪಾಕಿಸ್ತಾನದ ಉದ್ದಗಲದ ’ನೆಚ್ಚಿನ ಪ್ರಧಾನಿ ಅಭ್ಯರ್ಥಿ’ಯಾಗಿ ಇಮ್ರಾನ್ 2018ರ ಚುನಾವಣೆಗಳಲ್ಲಿ ಹೊರಹೊಮ್ಮಿದ್ದರು. ಈ ಹಿಂದೆ 70ರ ದಶಕಗಳಲ್ಲಿ ಇಂತಹ ಬೆಂಬಲ ದೊರೆತದ್ದು ಝುಲ್ಫಿಕರ್ ಅಲಿ ಭುಟ್ಟೋ ಅವರಿಗೆ. ಪಾಕಿಸ್ತಾನದ ರಾಷ್ಟ್ರೀಯ ಶಾಸನಸಭೆ ಚುನಾವಣೆಗಳಲ್ಲಿ ಯಾರು ಗೆಲ್ಲಬೇಕು ಎಂಬುದು ಮತದಾನಕ್ಕೆ ಮೊದಲೇ ನಿರ್ಧಾರ ಆಗಿರುತ್ತದೆ. ಈ ನಿರ್ಧಾರವನ್ನು ಆಧರಿಸಿ ಫಲಿತಾಂಶಗಳು ಹೊರಬೀಳುತ್ತವೆ ಎಂಬುದು ಜನಜನಿತ ಭಾವನೆ. ಪಾಕಿಸ್ತಾನದ ಸೇನೆಯ ಆಶೀರ್ವಾದ ಇದ್ದವರೇ ಗೆಲ್ಲುತ್ತಾರೆ ಎಂಬುದೂ ನಿಶ್ಚಿತ. ಆದರೆ ಇಮ್ರಾನ್ ಗೆಲುವಿನ ಹಿಂದಿನ ಶಕ್ತಿ ಕೇವಲ ಪಾಕ್ ಸೇನೆ ಅಲ್ಲ, ವೈಯಕ್ತಿಕ ವರ್ಚಸ್ಸೂ ಕೆಲಸ ಮಾಡಿತ್ತು. ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷಕ್ಕೆ ಸೇರಿದ ಗೆದ್ದೇ ಗೆಲ್ಲುವ 61 ಮಂದಿ ಅಭ್ಯರ್ಥಿಗಳು ಇಮ್ರಾನ್ ಪಕ್ಷ ಸೇರಿದ್ದೂ, ಮಾಜಿ ಕ್ರಿಕೆಟಿಗನ ಯಶಸ್ಸಿಗೆ ದಾರಿ ಮಾಡಿತ್ತು. ಅದೇ ಹಳೆಯ ಪಕ್ಷಗಳನ್ನು ನೋಡಿ ಬೇಸತ್ತಿರುವ ಜನರಿಗೆ ಬದಲಾವಣೆ ಬೇಕಿತ್ತು.

ಸೇನಾ ಜನರಲ್‌ಗಳು ಮನಸ್ಸು ಮಾಡದಿದ್ದರೆ ಇಮ್ರಾನ್ ಪ್ರಧಾನಿ ಹುದ್ದೆಯ ಸನಿಹ ಸರಿಯುವುದು ಕೂಡ ಶಕ್ಯವಿರಲಿಲ್ಲ. ಹೀಗಾಗಿ ಸೇನೆಯ ಇಷಾರೆಯನ್ನು ಮೀರಿ ಇಮ್ರಾನ್ ಮುಂದಿನ ಹೆಜ್ಜೆ ಇಡುವುದು ಅಸಾಧ್ಯವಿತ್ತು. ಭಾರತದೊಂದಿಗೆ ಗೆಳೆತನ-ಹಗೆತನ ಮತ್ತು ಕಾಶ್ಮೀರ ಕುರಿತ ನೀತಿ ನಿರ್ಧಾರಗಳು ಅವರ ಕೈಯಲ್ಲಿ ಇರುವುದಿಲ್ಲ. ಪಾಕ್ ಪ್ರಧಾನಿಗಳು ಏನನ್ನಾದರೂ ಹೇಳಲಿ, ನಡೆಯುವುದು ತನ್ನ ಮಾತೇ ಎಂಬ ಸಂದೇಶವನ್ನು ಅಲ್ಲಿನ ಮಿಲಿಟರಿ ಮುಖ್ಯಸ್ಥರು ತಾವು ಸಾಕಿಕೊಂಡಿರುವ ಜಿಹಾದಿಗಳು ಇಲ್ಲವೇ ಸೇನೆಯ ಬಂದೂಕಿನ ನಳಿಕೆಯ ಮೂಲಕ ಭಾರತಕ್ಕೆ ಸಾರಿ ಹೇಳಿದ್ದಾರೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಹಠಾತ್ತನೆ ಬಡಿದೆಬ್ಬಿಸಿದ ಕಾರ್ಗಿಲ್ ಯುದ್ಧ ಮತ್ತು ಸಂಸತ್ ಭವನದ ಮೇಲೆ ನಡೆದ ದಾಳಿ ಹಾಗೂ ಯುಪಿಎ ಅವಧಿಯಲ್ಲಿ ಮುಂಬಯಿ ಮೇಲೆ ಜಿಹಾದಿ ಭಯೋತ್ಪಾದಕರ ಲಗ್ಗೆಯ ಪ್ರಕರಣಗಳು ಈ ಮಾತಿಗೆ ಉದಾಹರಣೆಗಳು. ಈ ಎಲ್ಲ ಪ್ರಕರಣಗಳ ಸೂತ್ರಧಾರ ಪಾಕಿಸ್ತಾನದ ಸೇನೆಯೇ ವಿನಾ ಅಲ್ಲಿನ ಚುನಾಯಿತ ಸರ್ಕಾರಗಳು ಅಲ್ಲ. ಚುನಾಯಿತ ಸರ್ಕಾರಗಳಿಗೆ ಈ ದಾಳಿಗಳ ಪೂರ್ವ ಮಾಹಿತಿ ಕೂಡ ಇರಲಿಲ್ಲ.

ಪರ್ವೇಜ್ ಮುಷರಫ್

ಭಾರತಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ವಿದೇಶಾಂಗ ವ್ಯವಹಾರ ನೀತಿ ನಿರ್ಧಾರಗಳು ಕಳೆದ ಏಳು ದಶಕಗಳ ಅವಧಿಯಲ್ಲಿ ಅಲ್ಲಿನ ಸೇನೆಯ ಬಿಗಿಮುಷ್ಠಿಯಲ್ಲೇ ಉಳಿದಿವೆ. ಈ ಸ್ಥಿತಿಯಲ್ಲಿ ಯಾವುದೇ ದೊಡ್ಡ ಬದಲಾವಣೆ ಅಸಾಧ್ಯ.

ಪಕ್ಷಾಂತರ ಮಾಡುವ ಸಂಸದರನ್ನು ಅನರ್ಹಗೊಳಿಸುವ ಅವಕಾಶವಿರುವ ಪಾಕಿಸ್ತಾನೀ ಸಂವಿಧಾನದ 63-ಎ ಅನುಚ್ಛೇದವನ್ನು ವ್ಯಾಖ್ಯಾನಿಸುವಂತೆ ಸರ್ಕಾರ ಪಾಕಿಸ್ತಾನಿ ಸುಪ್ರೀಮ್ ಕೋರ್ಟಿಗೆ ಮನವಿ ಮಾಡಿದೆ. ನ್ಯಾಯಮೂರ್ತಿಗಳ ಪಂಚ ಸದಸ್ಯರ ಪೀಠವೊಂದು ಈ ಅಹವಾಲಿನ ವಿಚಾರಣೆಯನ್ನು ಮಾರ್ಚ್ 24ರಂದು ಮುಂದುವರೆಸಲಿದೆ.

ಸುಪ್ರೀಮ್ ಕೋರ್ಟ್ ತಮ್ಮ ನೆರವಿಗೆ ಬರುವುದೆಂಬ ನಿರೀಕ್ಷೆಯನ್ನು ಇಮ್ರಾನ್ ಇಟ್ಟುಕೊಂಡಿದ್ದಾರೆ. ಆದರೆ ಸದನದಲ್ಲಿ ಬಲಾಬಲ ಪರೀಕ್ಷೆಗೆ ಮುನ್ನವೇ ಕೋರ್ಟ್ ತೀರ್ಪು ಹೊರಬರುವ ಸಾಧ್ಯತೆ ವಿರಳ.


ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ; ಕರ್ನಾಟಕದ ಕಾಂಗ್ರೆಸ್‌ಗೆ ದೊಡ್ಡ ಎಚ್ಚರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...