Homeಅಂಕಣಗಳುಪದಚ್ಯುತಿಯ ಹೊಸ್ತಿಲಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಪದಚ್ಯುತಿಯ ಹೊಸ್ತಿಲಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್

- Advertisement -
- Advertisement -

ಧಾರ್ಮಿಕ ಕಟ್ಟರ್‌ವಾದಿಗಳ ಜಿಹಾದಿ ಸಂಘಟನೆಗಳು ಮತ್ತು ಸರ್ವಶಕ್ತ ಪಾಕಿಸ್ತಾನಿ ಸೇನೆ ಹಾಗೂ ಅಮೆರಿಕೆಯ ಪರೋಕ್ಷ ನಿಯಂತ್ರಣಕ್ಕೆ ತುತ್ತಾಗಿರುವ ಪಾಕಿಸ್ತಾನದಲ್ಲಿ ’ಜನರು ಆರಿಸಿದ’ ಸರ್ಕಾರಗಳು ನಿಜವಾಗಿಯೂ ಅಸಹಾಯಕ ಎಂಬ ಮಾತು ಮತ್ತೊಮ್ಮೆ ರುಜುವಾತಾಗಿದೆ.

ಜಗದ್ವಿಖ್ಯಾತ ಕ್ರಿಕೆಟ್ ಆಟಗಾರನಾಗಿ ನಿವೃತ್ತರಾದ ನಂತರ ರಾಜಕಾರಣಕ್ಕೆ ಕಾಲಿಟ್ಟು ನಾಲ್ಕು ವರ್ಷಗಳ ಹಿಂದೆ ಪಾಕಿಸ್ತಾನದ ಪ್ರಧಾನಿ ಗದ್ದುಗೆ ಏರಿದ್ದರು ಇಮ್ರಾನ್ ಖಾನ್. ತೀವ್ರ ಆರ್ಥಿಕ ಸಂಕಟಕ್ಕೆ ಸಿಕ್ಕಿ ತೊಳಲಾಡಿರುವ ಪಾಕಿಸ್ತಾನ ಆಂತರಿಕ ಕ್ಷೋಭೆಗಳಲ್ಲಿ ಮುಳುಗಿದೆ. ಪ್ರತಿಪಕ್ಷಗಳು ಇಮ್ರಾನ್ ಸರ್ಕಾರದ ವಿರುದ್ಧ ತೋಳೇರಿಸಿ ನಿಂತಿವೆ. ಯುಕ್ರೇನ್ ಸಮರಕ್ಕೆ ಅಮೆರಿಕೆ ಮತ್ತು ಐರೋಪ್ಯ ಕೂಟವನ್ನು ದೂಷಿಸಿ ದಾಳಿ ನಡೆಸಿರುವ ಖಾನ್ ನಡೆ ಅಮೆರಿಕೆ ಮತ್ತು ಪಾಕ್ ಸೇನೆಯನ್ನು ಸಿಟ್ಟಿಗೆಬ್ಬಿಸಿದೆ.

ಕೈಗೊಂಬೆ ಪ್ರಧಾನಿಗಳನ್ನು ಕುರ್ಚಿ ಮೇಲೆ ಕೂರಿಸಿ ತನ್ನ ಇಚ್ಛೆಗೆ ಅನುಗುಣವಾಗಿ ಕುಣಿಸುವ ಪಾಕಿಸ್ತಾನಿ ಸೇನೆಗೆ ಇದೀಗ ಇಮ್ರಾನ್ ಖಾನ್ ಬೇಕಿಲ್ಲ.

ನವಾಜ್ ಷರೀಫ್

ನವಾಜ್ ಷರೀಫ್ ಅವರ ಪಾಕಿಸ್ತಾನ ಮುಸ್ಲಿಮ್ ಲೀಗ್ (ಎನ್), ಆಸೀಫ್ ಅಲಿ ಝರ್ದಾರಿ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಹಾಗೂ ಮೌಲಾನಾ ಫಜ್ಲುರ್ ರೆಹಮಾನ್ ಅವರ ಜಮಾತ್ ಉಲೇಮಾ ಇಸ್ಲಾಮ್ (ಎಫ್) ಸೇರಿದಂತೆ ಪ್ರತಿಪಕ್ಷಗಳ ಒಕ್ಕೂಟವು ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದೆ. ಇಮ್ರಾನ್ ಅವರ ಸಮ್ಮಿಶ್ರ ಸರ್ಕಾರವನ್ನು ಬೆಂಬಲಿಸಿದ್ದ ಪಕ್ಷಗಳೂ ಹಿಂದೆ ಸರಿದಿವೆ. ತಮ್ಮದೇ ಪಕ್ಷ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ ಪಕ್ಷದ ಅನೇಕ ಸಂಸದರು ಕೂಡ ಇಮ್ರಾನ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಇದೇ 28ರಂದು ಅವರು ನ್ಯಾಷನಲ್ ಅಸೆಂಬ್ಲಿಯಲ್ಲಿ (ಲೋಕಸಭೆ) ಅವಿಶ್ವಾಸ ನಿರ್ಣಯ ಎದುರಿಸಲಿದ್ದಾರೆ. ಬಹುಮತ ರುಜುವಾತು ಮಾಡಲು 12ರಿಂದ 24 ಮಂದಿ ಸದಸ್ಯರ ಕೊರತೆಯನ್ನು ಇಮ್ರಾನ್ ಪಕ್ಷ ಎದುರಿಸಿದೆ. ಅವಿಶ್ವಾಸ ನಿರ್ಣಯವನ್ನು ಚರ್ಚೆಗೆ ತೆಗೆದುಕೊಳ್ಳುವ ಹಿಂದಿನ ದಿನ ನ್ಯಾಷನಲ್ ಅಸೆಂಬ್ಲಿಯ ಹೊರಗೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಬಲಾಬಲ ಪ್ರದರ್ಶನಕ್ಕೆ ತೋಳೇರಿಸಿವೆ. ಭಾರೀ ಹಿಂಸಾಚಾರ ಮತ್ತು ರಕ್ತಪಾತದ ಶಂಕೆಯಿದೆ.

ತಮ್ಮ ಸರ್ಕಾರ ಮತ್ತು ಪಾಕಿಸ್ತಾನಿ ಸೇನೆಯ ನಡುವೆ ಒಮ್ಮತವಿರುವ ಕಾರಣ ತಮ್ಮ ಸರ್ಕಾರ ಸುಸ್ಥಿರವಾಗಿದ್ದು ಅಭಿವೃದ್ಧಿಯ ಮೇಲೆ ಹೆಚ್ಚಿನ ಗಮನ ಹರಿಸುತ್ತಿದೆ ಎಂಬ ಮಾತನ್ನು ಇಮ್ರಾನ್ ಖಾನ್ ಮೊದಲ ಒಂದೆರಡು ವರ್ಷ ಆಡಿದ್ದುಂಟು. ಖಾನ್ ಅವರ ಚುನಾವಣೆಗೆ ಸೇನೆ ಮತ್ತು ಐಎಸ್‌ಐ ಬಹುವಾಗಿ ಶ್ರಮಿಸಿದ್ದುಂಟು. ಆಸೀಫ್ ಝರ್ದಾರಿ ಮತ್ತು ನವಾಜ್ ಷರೀಫ್ ಪಕ್ಷಗಳ ಗೆಲ್ಲುವ ಅಭ್ಯರ್ಥಿಗಳನೇಕರನ್ನು ಇಮ್ರಾನ್ ಪಕ್ಷಕ್ಕೆ ಸೆಳೆದದ್ದುಂಟು.

ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯ ಒಟ್ಟು 342 ಸೀಟುಗಳ ಪೈಕಿ ಇಮ್ರಾನ್ ಅವರ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ ಪಕ್ಷ ಗೆದ್ದದ್ದು 155 ಸೀಟುಗಳು. ಮಿತ್ರಪಕ್ಷಗಳ ಬೆಂಬಲದಿಂದ ಸರಳ ಬಹುಮತವನ್ನೂ (176) ಒಟ್ಟುಗೂಡಿಸಿಕೊಂಡಿತ್ತು. ಈ ಕಸರತ್ತಿನ ಹಿಂದೆ ಸೇನೆಯ ಬೆಂಬಲವಿತ್ತು. ಮಿಲಿಟರಿಯ ಹಿಡಿತದಿಂದ ಬಿಡಿಸಿಕೊಳ್ಳಬೇಕೆಂಬ ತಹತಹ ಇಮ್ರಾನ್ ಪಕ್ಷಕ್ಕೆ ಇರಲೇ ಇಲ್ಲ. ಆಡಳಿತ ಮತ್ತು ವಿದೇಶಾಂಗ ನೀತಿಯಲ್ಲಿ ಮಿಲಿಟರಿ ವಹಿಸಿದ್ದ ಸಕ್ರಿಯ ಪಾತ್ರ ಕುರಿತು ಪ್ರಧಾನಿಗೆ ಯಾವ ಕಿರಿಕಿರಿಯೂ ಇರಲಿಲ್ಲ.

ಇಮ್ರಾನ್ ಸರ್ಕಾರ ಎರಡೇ ವರ್ಷಗಳಲ್ಲಿ ಭ್ರಮನಿರಸನ ಮೂಡಿಸಿತು. ಸಾಲದ ಸುಳಿಗೆ ಸಿಕ್ಕಿರುವ ಪಾಕಿಸ್ತಾನ ಆಹಾರ ಮತ್ತು ಊರ್ಜೆಯ ಬಿಕ್ಕಟ್ಟು ಎದುರಿಸಿದೆ. ಪಾಕ್ ಸೇನೆಯ ಮುಂಚೂಣಿ ಅಧಿಕಾರಿಗಳ ವರ್ಗಾವಣೆಯಲ್ಲಿ ಮೂಗು ತೂರಿಸಿದ ಇಮ್ರಾನ್ ಸರ್ಕಾರವನ್ನು ಬೆಂಬಲಿಸುವ ಕುರಿತು ಸೇನೆಯಲ್ಲೇ ಭಿನ್ನಮತ ಮೂಡಿತು. ಇಮ್ರಾನ್ ಸರ್ಕಾರವನ್ನು ಹಣಿಯಲು ಇದೇ ಸರಿಯಾದ ಅವಕಾಶವೆಂದು ಪ್ರತಿಪಕ್ಷಗಳು ಒಟ್ಟಿಗೆ ಬಂದಿವೆ.

’ಹಮ್ ದೇಖೇಂಗೇ’ ಎಂಬುದು ಪಾಕಿಸ್ತಾನದ ಪ್ರಗತಿಪರ ಕವಿ ಫೈಜ್ ಅಹ್ಮದ್ ಫೈಜ್ ಅವರ ಕ್ರಾಂತಿಕಾರಕ ಕವಿತೆಯೊಂದರ ತಲೆಬರೆಹ. 80ರ ದಶಕದಲ್ಲಿ ಅಂದಿನ ಮಿಲಿಟರಿ ಸರ್ವಾಧಿಕಾರಿ ಜನರಲ್ ಝಿಯಾವುಲ್ ಹಖ್ ಆಡಳಿತದ ವಿರುದ್ಧ ಪ್ರತಿಭಟನೆಯ ಗೀತೆಯಾಗಿ ಪಾಕಿಸ್ತಾನದಲ್ಲಿ ಮಾರ್ದನಿಸಿತ್ತು. “..ರಾಜ್ಯಗಳಳಿಯಲಿ, ರಾಜ್ಯಗಳುಳಿಯಲಿ, ಹಾರಲಿ ಗದ್ದುಗೆ ಮುಕುಟಗಳು….” ಎಂಬ ನಮ್ಮ ಕ್ರಾಂತಿಕಾರಿ ಕವಿ ಕುವೆಂಪು ಅವರ ’ನೇಗಿಲಯೋಗಿ’ ಕವಿತೆಯ ಸಾಲನ್ನೇ ಹೋಲುವ ಪದಗಳು ಫೈಜ್ ಅವರ ಈ ಕವಿತೆಯಲ್ಲೂ ಇವೆ. “ಸಬ್ ತಾಜ್ ಉಛಾಲೇ ಜಾಯೇಂಗೇ…ಸಬ್ ತಖ್ತ್ ಗಿರಾಯೇ ಜಾಯೇಂಗೇ” (ತೂರಾಡಲಾದೀತು ಮುಕುಟಗಳನು ಗಾಳಿಗೆಸೆದು, ಕೆಡವಲಾದೀತು ಸಿಂಹಾಸನಗಳನ್ನು ಕುಟ್ಟಿ ನೆಲಕ್ಕೆ..) ಹೀಗೆ.

ಆಸೀಫ್ ಅಲಿ ಝರ್ದಾರಿ

ಪಾಕಿಸ್ತಾನದಲ್ಲಿ ಯಾರ ಗದ್ದುಗೆ ಮುಕುಟಗಳು ಹಾರಿದರೇನಂತೆ. ಅಲ್ಲಿನ ಸರ್ವಶಕ್ತ ಸೇನೆಯ ಗದ್ದುಗೆ ಮುಕುಟಗಳು ಸದಾ ಕಾಯಂ.

ಕಳೆದ ಎಪ್ಪತ್ತು ವರ್ಷಗಳಲ್ಲಿ ಹೆಚ್ಚೂಕಡಿಮೆ ಅರ್ಧದಷ್ಟು ಕಾಲ ಪಾಕಿಸ್ತಾನವನ್ನು ಸೇನೆಯೇ ಆಳಿದೆ. ಜನರೇ ಆಯ್ಕೆ ಮಾಡಿದ ಸರ್ಕಾರದಿಂದ ಜನರಿಂದ ಆಯ್ಕೆಯಾದ ಮತ್ತೊಂದು ಸರ್ಕಾರಕ್ಕೆ ಅಧಿಕಾರದ ಶಾಂತಿಯುತ ಹಸ್ತಾಂತರ ನಡೆದಿರುವುದು ಎರಡೇ ಬಾರಿ. ಚುನಾವಣೆಯ ಮೂಲಕ ಆರಿಸಿ ಬಂದ ಹಲವು ಸರ್ಕಾರಗಳನ್ನು ಕೆಡವಿ ಅಧಿಕಾರ ಕಬಳಿಸಿದೆ ಪಾಕ್ ಸೇನೆ.

ನೆರೆಹೊರೆಯನ್ನು ಆಯ್ದುಕೊಳ್ಳುವುದು ಅಸಾಧ್ಯ ಎಂಬ ಮಾತೊಂದಿದೆ. ಹಿಂಸೆ, ರಕ್ತಪಾತ, ಭಯೋತ್ಪಾದನೆಗಳಲ್ಲೇ ಬದುಕಿರುವ ನಮ್ಮ ನೆರೆಯ ದೇಶ ಪಾಕಿಸ್ತಾನ ಸುಖಸಮೃದ್ಧಿ ಶಾಂತಿಯಿಂದ ಬದುಕಿದಷ್ಟೂ ಭಾರತಕ್ಕೆ ನೆಮ್ಮದಿ. ಇಲ್ಲವಾದರೆ ಅಲ್ಲಿನ ಉತ್ಪಾತಗಳು ಇಲ್ಲಿ ಕಂಪನ ಹುಟ್ಟಿಸುವುದನ್ನು ಕಾಣುತ್ತಲೇ ಬಂದಿದ್ದೇವೆ. ಅಲ್ಲಾಹು, ಆರ್ಮಿ ಹಾಗೂ ಅಮೆರಿಕ ಆಳಿಕೊಂಡು ಬಂದಿರುವ ಪಾಕಿಸ್ತಾನ ನಿರಂತರ ರಾಜಕೀಯ ಅಸ್ಥಿರತೆಗೆ ಸದಾ ಜೋಲಿ ಹೊಡೆದ ದೇಶ. ಕಳೆದ ಆರೂವರೆ ದಶಕಗಳ ತನ್ನ ಇತಿಹಾಸದಲ್ಲಿ ಈ ದೇಶದ ಜನತಂತ್ರ ಎಂಬ ಸಸಿ ಗಿಡವಾಗಿ ಮರವಾಗಿ ಹೂವು ಕಾಯಿ ಕಟ್ಟಿ ಹಣ್ಣು ಮಾಗಲೇ ಇಲ್ಲ.

ಪಾಕಿಸ್ತಾನ ಹುಟ್ಟಿದ ಒಂದೇ ವರ್ಷದಲ್ಲಿ ಆ ದೇಶದ ಜನಕನೆಂದೇ ಹೆಸರಾದ ಮೊಹಮ್ಮದಾಲಿ ಜಿನ್ನಾ ನಿಧನರಾಗುತ್ತಾರೆ. ಮೊದಲ ಒಂಬತ್ತು ವರ್ಷಗಳ ಕಾಲ ಪಾಕಿಸ್ತಾನಕ್ಕೆ ಸಂವಿಧಾನವೇ ಇರಲಿಲ್ಲ. ಜಿನ್ನಾ ನಿಧನ ಅಧಿಕಾರ ಹಿಡಿಯುವ ಹಣಾಹಣಿಗೆ ದಾರಿ ಮಾಡುತ್ತದೆ. 1958ರ ಹೊತ್ತಿಗೆ ಮೊದಲ ಕ್ಷಿಪ್ರಕ್ರಾಂತಿ ನಡೆದು 1971ರ ತನಕ ಸೇನೆ ಅಧಿಕಾರ ಹಿಡಿಯುತ್ತದೆ. ತನ್ನ ಪಟ್ಟಭದ್ರ ಹಿತಾಸಕ್ತಿಗೆ ಅಡಚಣೆಗಳು ಒದಗಿದಾಗಲೆಲ್ಲ ಮಿಲಿಟರಿ ಜನರಿಂದ ಆಯ್ಕೆಯಾದ ಸರ್ಕಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತ ಬಂದಿದೆ. 1977ರಿಂದ 88 ಮತ್ತು 1999ರಿಂದ 2008ರ ತನಕ ಸೇನೆಯದೇ ನೇರ ಆಡಳಿತ. ಜನತಾಂತ್ರಿಕ ಆಡಳಿತವನ್ನು ಗಟ್ಟಿಗೊಳಿಸುತ್ತ ಬಂದಿದ್ದ ನವಾಜ್ ಷರೀಫ್ ಮಾಜಿ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ವಿರುದ್ಧ ದೇಶದ್ರೋಹದ ಆರೋಪ ಹೇರಲು ಮುಂದಾಗಿದ್ದರು. ಈ ಕಾರಣಕ್ಕಾಗಿಯೇ ಅವರನ್ನು ’ಪನಾಮಾ ಪೇಪರ್‍ಸ್ ಆರ್ಥಿಕ ಹಗರಣ’ದ ನೆವದಲ್ಲಿ ಉರುಳಿಸಿ ಸೆರೆಗೆ ತಳ್ಳಲಾಯಿತು. ವಿರೋಧಿ ದೇಶ ಭಾರತ ಕುರಿತು ಮೆದು ಧೋರಣೆ ತಳೆದು ಗೆಳೆತನಕ್ಕೆ ಹಾತೊರೆಯುತ್ತಿದ್ದಾರೆ ಎಂದು ಆರೋಪ ಹೊರಿಸಲಾಯಿತು. ಸೇನೆಯನ್ನು ಬೆಂಬಲಿಸುವ ಮತ್ತು ಸೇನೆಯ ಮಾತು ಕೇಳುವ ಜನಪ್ರಿಯ ನಾಯಕ ಇಮ್ರಾನ್ ಅವರನ್ನು ಮುಂದೆ ತರಲಾಯಿತು.

ಪಾಕಿಸ್ತಾನದ ಉದ್ದಗಲದ ’ನೆಚ್ಚಿನ ಪ್ರಧಾನಿ ಅಭ್ಯರ್ಥಿ’ಯಾಗಿ ಇಮ್ರಾನ್ 2018ರ ಚುನಾವಣೆಗಳಲ್ಲಿ ಹೊರಹೊಮ್ಮಿದ್ದರು. ಈ ಹಿಂದೆ 70ರ ದಶಕಗಳಲ್ಲಿ ಇಂತಹ ಬೆಂಬಲ ದೊರೆತದ್ದು ಝುಲ್ಫಿಕರ್ ಅಲಿ ಭುಟ್ಟೋ ಅವರಿಗೆ. ಪಾಕಿಸ್ತಾನದ ರಾಷ್ಟ್ರೀಯ ಶಾಸನಸಭೆ ಚುನಾವಣೆಗಳಲ್ಲಿ ಯಾರು ಗೆಲ್ಲಬೇಕು ಎಂಬುದು ಮತದಾನಕ್ಕೆ ಮೊದಲೇ ನಿರ್ಧಾರ ಆಗಿರುತ್ತದೆ. ಈ ನಿರ್ಧಾರವನ್ನು ಆಧರಿಸಿ ಫಲಿತಾಂಶಗಳು ಹೊರಬೀಳುತ್ತವೆ ಎಂಬುದು ಜನಜನಿತ ಭಾವನೆ. ಪಾಕಿಸ್ತಾನದ ಸೇನೆಯ ಆಶೀರ್ವಾದ ಇದ್ದವರೇ ಗೆಲ್ಲುತ್ತಾರೆ ಎಂಬುದೂ ನಿಶ್ಚಿತ. ಆದರೆ ಇಮ್ರಾನ್ ಗೆಲುವಿನ ಹಿಂದಿನ ಶಕ್ತಿ ಕೇವಲ ಪಾಕ್ ಸೇನೆ ಅಲ್ಲ, ವೈಯಕ್ತಿಕ ವರ್ಚಸ್ಸೂ ಕೆಲಸ ಮಾಡಿತ್ತು. ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷಕ್ಕೆ ಸೇರಿದ ಗೆದ್ದೇ ಗೆಲ್ಲುವ 61 ಮಂದಿ ಅಭ್ಯರ್ಥಿಗಳು ಇಮ್ರಾನ್ ಪಕ್ಷ ಸೇರಿದ್ದೂ, ಮಾಜಿ ಕ್ರಿಕೆಟಿಗನ ಯಶಸ್ಸಿಗೆ ದಾರಿ ಮಾಡಿತ್ತು. ಅದೇ ಹಳೆಯ ಪಕ್ಷಗಳನ್ನು ನೋಡಿ ಬೇಸತ್ತಿರುವ ಜನರಿಗೆ ಬದಲಾವಣೆ ಬೇಕಿತ್ತು.

ಸೇನಾ ಜನರಲ್‌ಗಳು ಮನಸ್ಸು ಮಾಡದಿದ್ದರೆ ಇಮ್ರಾನ್ ಪ್ರಧಾನಿ ಹುದ್ದೆಯ ಸನಿಹ ಸರಿಯುವುದು ಕೂಡ ಶಕ್ಯವಿರಲಿಲ್ಲ. ಹೀಗಾಗಿ ಸೇನೆಯ ಇಷಾರೆಯನ್ನು ಮೀರಿ ಇಮ್ರಾನ್ ಮುಂದಿನ ಹೆಜ್ಜೆ ಇಡುವುದು ಅಸಾಧ್ಯವಿತ್ತು. ಭಾರತದೊಂದಿಗೆ ಗೆಳೆತನ-ಹಗೆತನ ಮತ್ತು ಕಾಶ್ಮೀರ ಕುರಿತ ನೀತಿ ನಿರ್ಧಾರಗಳು ಅವರ ಕೈಯಲ್ಲಿ ಇರುವುದಿಲ್ಲ. ಪಾಕ್ ಪ್ರಧಾನಿಗಳು ಏನನ್ನಾದರೂ ಹೇಳಲಿ, ನಡೆಯುವುದು ತನ್ನ ಮಾತೇ ಎಂಬ ಸಂದೇಶವನ್ನು ಅಲ್ಲಿನ ಮಿಲಿಟರಿ ಮುಖ್ಯಸ್ಥರು ತಾವು ಸಾಕಿಕೊಂಡಿರುವ ಜಿಹಾದಿಗಳು ಇಲ್ಲವೇ ಸೇನೆಯ ಬಂದೂಕಿನ ನಳಿಕೆಯ ಮೂಲಕ ಭಾರತಕ್ಕೆ ಸಾರಿ ಹೇಳಿದ್ದಾರೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಹಠಾತ್ತನೆ ಬಡಿದೆಬ್ಬಿಸಿದ ಕಾರ್ಗಿಲ್ ಯುದ್ಧ ಮತ್ತು ಸಂಸತ್ ಭವನದ ಮೇಲೆ ನಡೆದ ದಾಳಿ ಹಾಗೂ ಯುಪಿಎ ಅವಧಿಯಲ್ಲಿ ಮುಂಬಯಿ ಮೇಲೆ ಜಿಹಾದಿ ಭಯೋತ್ಪಾದಕರ ಲಗ್ಗೆಯ ಪ್ರಕರಣಗಳು ಈ ಮಾತಿಗೆ ಉದಾಹರಣೆಗಳು. ಈ ಎಲ್ಲ ಪ್ರಕರಣಗಳ ಸೂತ್ರಧಾರ ಪಾಕಿಸ್ತಾನದ ಸೇನೆಯೇ ವಿನಾ ಅಲ್ಲಿನ ಚುನಾಯಿತ ಸರ್ಕಾರಗಳು ಅಲ್ಲ. ಚುನಾಯಿತ ಸರ್ಕಾರಗಳಿಗೆ ಈ ದಾಳಿಗಳ ಪೂರ್ವ ಮಾಹಿತಿ ಕೂಡ ಇರಲಿಲ್ಲ.

ಪರ್ವೇಜ್ ಮುಷರಫ್

ಭಾರತಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ವಿದೇಶಾಂಗ ವ್ಯವಹಾರ ನೀತಿ ನಿರ್ಧಾರಗಳು ಕಳೆದ ಏಳು ದಶಕಗಳ ಅವಧಿಯಲ್ಲಿ ಅಲ್ಲಿನ ಸೇನೆಯ ಬಿಗಿಮುಷ್ಠಿಯಲ್ಲೇ ಉಳಿದಿವೆ. ಈ ಸ್ಥಿತಿಯಲ್ಲಿ ಯಾವುದೇ ದೊಡ್ಡ ಬದಲಾವಣೆ ಅಸಾಧ್ಯ.

ಪಕ್ಷಾಂತರ ಮಾಡುವ ಸಂಸದರನ್ನು ಅನರ್ಹಗೊಳಿಸುವ ಅವಕಾಶವಿರುವ ಪಾಕಿಸ್ತಾನೀ ಸಂವಿಧಾನದ 63-ಎ ಅನುಚ್ಛೇದವನ್ನು ವ್ಯಾಖ್ಯಾನಿಸುವಂತೆ ಸರ್ಕಾರ ಪಾಕಿಸ್ತಾನಿ ಸುಪ್ರೀಮ್ ಕೋರ್ಟಿಗೆ ಮನವಿ ಮಾಡಿದೆ. ನ್ಯಾಯಮೂರ್ತಿಗಳ ಪಂಚ ಸದಸ್ಯರ ಪೀಠವೊಂದು ಈ ಅಹವಾಲಿನ ವಿಚಾರಣೆಯನ್ನು ಮಾರ್ಚ್ 24ರಂದು ಮುಂದುವರೆಸಲಿದೆ.

ಸುಪ್ರೀಮ್ ಕೋರ್ಟ್ ತಮ್ಮ ನೆರವಿಗೆ ಬರುವುದೆಂಬ ನಿರೀಕ್ಷೆಯನ್ನು ಇಮ್ರಾನ್ ಇಟ್ಟುಕೊಂಡಿದ್ದಾರೆ. ಆದರೆ ಸದನದಲ್ಲಿ ಬಲಾಬಲ ಪರೀಕ್ಷೆಗೆ ಮುನ್ನವೇ ಕೋರ್ಟ್ ತೀರ್ಪು ಹೊರಬರುವ ಸಾಧ್ಯತೆ ವಿರಳ.


ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ; ಕರ್ನಾಟಕದ ಕಾಂಗ್ರೆಸ್‌ಗೆ ದೊಡ್ಡ ಎಚ್ಚರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಹಿಳೆಯನ್ನು ಗರ್ಭಧಾರಣೆ ಪೂರ್ಣಗೊಳಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ’: ಅಪ್ರಾಪ್ತೆಗೆ 30 ವಾರಗಳ ಗರ್ಭಧಾರಣೆ ಅಂತ್ಯಗೊಳಿಸಲು ಸುಪ್ರೀಂ ಅನುಮತಿ

ನವದೆಹಲಿ: 17 ವರ್ಷದ ಬಾಲಕಿಯ 30 ವಾರಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸುವಂತೆ ನಿರ್ದೇಶಿಸಿದ ಸುಪ್ರೀಂ ಕೋರ್ಟ್, ನ್ಯಾಯಾಲಯಗಳು ಮಹಿಳೆಯನ್ನು, ಅಪ್ರಾಪ್ತ ವಯಸ್ಕಳನ್ನು ಹೊರತುಪಡಿಸಿ, ಗರ್ಭಧಾರಣೆಯನ್ನು ಮುಂದುವರಿಸಲು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಶುಕ್ರವಾರ ಹೇಳಿದೆ. ನ್ಯಾಯಮೂರ್ತಿಗಳಾದ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಶಿಯಾ ಧಾರ್ಮಿಕ ಕೇಂದ್ರದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಕನಿಷ್ಠ 30 ಸಾವು, 160 ಕ್ಕೂ ಹೆಚ್ಚು ಜನರಿಗೆ ಗಾಯ

ಇಸ್ಲಾಮಾಬಾದ್: ಶುಕ್ರವಾರ ಇಸ್ಲಾಮಾಬಾದ್‌ನ ಶಿಯಾ ಧಾರ್ಮಿಕ ಕೇಂದ್ರದಲ್ಲಿ ಪ್ರಾರ್ಥನೆ ವೇಳೆ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿ, 160 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.  ಪಾಕಿಸ್ತಾನ ರಾಜಧಾನಿಯ ಶೆಹಜಾದ್ ಟೌನ್ ಪ್ರದೇಶದ...

ನಾಳೆ ದೊರೈರಾಜ್‌ ಅವರ ‘ನಮ್ಮ ಹಟ್ಟಿ’ ಆತ್ಮಕಥೆ ಬಿಡುಗಡೆ

ದಲಿತ ಚಳವಳಿಯ ಹಿರಿಯ ಮುಖಂಡರಾದ ತುಮಕೂರಿನ ಕೆ.ದೊರೈರಾಜ್‌ ಅವರ 'ನಮ್ಮಹಟ್ಟಿ' ಆತ್ಮಕಥೆ ಶನಿವಾರ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಬಿಡುಗಡೆಯಾಗಲಿದೆ. ಸರ್ಕಾರಿ ಅಧಿಕಾರಿಯಾಗಿದ್ದ ದೊರೈರಾಜ್‌ ಅವರು, ತಮ್ಮ ವಿದ್ಯಾರ್ಥಿ ಜೀವನದಿಂದಲೇ ದಲಿತ ಚಳವಳಿಯಲ್ಲಿ ಗುರುತಿಸಿಕೊಂಡವರು....

‘ತಿರುಪತಿ ಲಡ್ಡುಗಳಲ್ಲಿ ರಾಸಾಯನಿಕಗಳಿಂದ ಮಾಡಿದ ತುಪ್ಪ ಬಳಸಲಾಗುತ್ತಿತ್ತು’: ವೈಎಸ್ಆರ್ಸಿಪಿ ಸರ್ಕಾರದ ವಿರುದ್ಧ ಆಂಧ್ರ ಸಿಎಂ ಆರೋಪ

ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುಗಳನ್ನು ತುಪ್ಪ ಬಳಸಿ ತಯಾರಿಸಲಾಗುತ್ತಿತ್ತು, ಅದರಲ್ಲಿ ಬಾತ್ ರೂಂ(ಸ್ನಾನಗೃಹಗಳನ್ನು) ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳನ್ನು ಬೆರೆಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಶುಕ್ರವಾರ ಆರೋಪಿಸಿದ್ದಾರೆ. ಕರ್ನೂಲು...

ಜಲಂಧರ್‌ನ ಗುರುದ್ವಾರದ ಹೊರಗೆ ಎಎಪಿ ನಾಯಕ ಲಕ್ಕಿ ಒಬೆರಾಯ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಪಂಜಾಬ್‌ನ ಜಲಂಧರ್‌ನಲ್ಲಿ ಶುಕ್ರವಾರ ಹಾಡಹಗಲೇ ಎಎಪಿ ನಾಯಕ ಲಕ್ಕಿ ಒಬೆರಾಯ್ ಅವರನ್ನು ಮಾಡೆಲ್ ಟೌನ್ ಪ್ರದೇಶದ ಗುರುದ್ವಾರದ ಬಳಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಮಾಡಿದ್ದಾರೆ.  ಈ ಘಟನೆ ಬೆಳಿಗ್ಗೆ ನಡೆದಿದ್ದು, ಗುಂಡೇಟಿನಿಂದ ಗಾಯಗೊಂಡಿದ್ದ ಅವರನ್ನು...

ದೆಹಲಿ: ಜಲ ಮಂಡಳಿ ತೋಡಿದ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು; ತನಿಖೆಗೆ ಆದೇಶಿಸಿದ ಸರ್ಕಾರ 

ಪಶ್ಚಿಮ ದೆಹಲಿಯ ಜನಕಪುರಿ ಪ್ರದೇಶದಲ್ಲಿ ದೆಹಲಿ ಜಲ ಮಂಡಳಿ (ಡಿಜೆಬಿ) ನಿರ್ಮಾಣ ಕಾರ್ಯಕ್ಕಾಗಿ ಅಗೆದ ಹೊಂಡಕ್ಕೆ ಬೈಕ್ ಬಿದ್ದು ಸವಾರನೊಬ್ಬ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ದೆಹಲಿ...

2025ರ ಬಿಹಾರ ವಿಧಾನಸಭಾ ಚುನಾವಣೆ ಪ್ರಶ್ನಿಸಿ ಜನ ಸುರಾಜ್ ಪಕ್ಷದಿಂದ ಅರ್ಜಿ: ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್ 

2025 ರ ಬಿಹಾರ ವಿಧಾನಸಭಾ ಚುನಾವಣೆಯ ನಡವಳಿಕೆ ಮತ್ತು ಫಲಿತಾಂಶವನ್ನು ಪ್ರಶ್ನಿಸಿ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ರಾಜಕೀಯ...

ಗುಜರಾತ್‌| ನರ್ಸಿಂಗ್ ಓದುತ್ತಿದ್ದ ದಲಿತ ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ; ಪ್ರಿನ್ಸಿಪಲ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲು

ಗುಜರಾತ್‌ನ ಖೇಡಾ ಜಿಲ್ಲೆಯ ನರ್ಸಿಂಗ್ ಕಾಲೇಜಿನ 19 ವರ್ಷದ ದಲಿತ ವಿದ್ಯಾರ್ಥಿಯೊಬ್ಬ, "ಪುರಾವೆಗಳಿಲ್ಲದೆ ಮೇಡಂ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ" ಎಂದು ಚಿತ್ರಹಿಂಸೆ ಉಲ್ಲೇಖಿಸುವ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾದ...

1.50 ಕೋಟಿ ರೂ. ಐಟಿ ದಂಡ ಪ್ರಶ್ನಿಸಿ ಟಿವಿಕೆ ಮುಖ್ಯಸ್ಥ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್ 

ಚೆನ್ನೈ: 2015–16ರ ಮೌಲ್ಯಮಾಪನ ವರ್ಷದಲ್ಲಿ ಆದಾಯ ಬಹಿರಂಗಪಡಿಸದಿದ್ದಕ್ಕಾಗಿ 1.50 ಕೋಟಿ ರೂ. ದಂಡ ವಿಧಿಸಿದ ಆದಾಯ ತೆರಿಗೆ ಇಲಾಖೆಯ ಆದೇಶವನ್ನು ಪ್ರಶ್ನಿಸಿ ನಟ-ರಾಜಕಾರಣಿ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಆದಾಯ...

ಮೇಘಾಲಯ ಗಣಿ ಸ್ಫೋಟ: ಸಾವನ್ನಪ್ಪಿದ ಮೂವರು ಅಸ್ಸಾಂ ಮೂಲದ ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ಗುವಾಹಟಿ: ಮೇಘಾಲಯದ ಪಕ್ಕದ ಕಲ್ಲಿದ್ದಲು ಗಣಿ ಸ್ಫೋಟದಲ್ಲಿ ಸಾವನ್ನಪ್ಪಿದ ಅಸ್ಸಾಂ ರಾಜ್ಯದ ಮೂವರು ಕಾರ್ಮಿಕರ ಕುಟುಂಬಗಳಿಗೆ  ಸರ್ಕಾರ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ.  ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ, ಸಂತ್ರಸ್ತರು...