ಶನಿವಾರ ಮಾದಕದ್ರವ್ಯ ರಹಿತ ದಿನ ಆಚರಿಸಲಾಗಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಾದಕದ್ರವ್ಯ ನಿಯಂತ್ರಂಣ ಮಂಡಳಿ (ಎನ್ಸಿಬಿ) ನೀಡಿದ ವರದಿ ಪ್ರಕಾರ, 2020ರಿಂದ ಮಾದಕ ದ್ರವ್ಯ ಸೇವನೆ, ಕಳ್ಳಸಾಗಣೆ ಅನೇಕ ಪಟ್ಟು ಹೆಚ್ಚಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು.
ಅರೆ, ಕೋವಿಡ್ ಸಂದರ್ಭಕ್ಕೂ ಇದಕ್ಕೂ ಲಿಂಕ್ ಇರಬಹುದಾ? ಎಲ್ಲ ಸ್ಥಗಿತವಾಗಿರುವಾಗ ಇದೆಲ್ಲ ಹೇಗೆ ಸಾಧ್ಯವಾಗಿತು? ಕಳೆದ ವರ್ಷ ಭಾರಿ ಸುದ್ದಿ ಮಾಡಿದ ಬಾಲಿವುಡ್ ಮತ್ತು ನಮ್ಮ ಕನ್ನಡ ಚಿತ್ರರಂಗದ ಕೆಲವರ ಡ್ರಗ್ಸ್ ಸುದ್ದಿಗಳು ಇದಕ್ಕೆ ಪೂರಕವಾಗಿವೆಯೇ? ಅದಕ್ಕೂ ಮುಖ್ಯವಾಗಿ ಈ ಎನ್ಸಿಬಿ, ಆಗೆಲ್ಲ ದೊಡ್ಡ ಹವಾ ಮಾಡಿ ಈಗೇಕೆ ತಣ್ಣಗಾಗಿದೆ?- ಈ ಎಲ್ಲ ಪ್ರಶ್ನೆಗಳಿಗೆ ಸುಲಭ ಉತ್ತರವಿಲ್ಲ ಅನಿಸುತ್ತದೆ.
ಅದಿರಲಿ, 2020-21ನೆ ಸಾಲಿನಲ್ಲಿ ಕರ್ನಾಟಕದಲ್ಲಿ 50 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡು ನಾಶ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಶನಿವಾರ ತಿಳಿಸಿದ್ದಾರೆ. ಪೊಲೀಸರಿಗೆ ಸಿಕ್ಕಿದ್ದು 50 ಕೋಟಿ ರೂ. ಮೌಲ್ಯದ ಡ್ರಗ್ಸ್ ಎಂದಾದರೆ, ಸಿಗದೇ ಇರುವುದು ಎಷ್ಟು ಪಟ್ಟು ಇರಬಹುದು?
ಶನಿವಾರ ಮಾದಕದ್ರವ್ಯ ರಹಿತ ದಿನದ ಅಂಗವಾಗಿ ಎಲ್ಲ ಜಿಲ್ಲೆಯ ಪೊಲೀಸರು ಎಸ್ಪಿ ನೇತೃತ್ವದಲ್ಲಿ, ಸೀಜ್ ಮಾಡಿದ ಮಾದಕ ದ್ರವ್ಯಗಳನ್ನು ಸುಟ್ಟು ಹಾಕಿದರು.
ಪುಟ್ಟ ಗದಗ ಜಿಲ್ಲೆಯಲ್ಲಿ 7.18 ಲಕ್ಷ ರೂ ಮೊತ್ತದ ಗಾಂಜಾವನ್ನು ಸುಟ್ಟು ನಾಶ ಪಡಿಸಿದರು. ಇದು ಒಂದು ವರ್ಷದ ಸಾಮಾಗ್ರಿ ಅಥವಾ ಜನೆವರಿಯಿಂದ ಸೀಜ್ ಮಾಡಿದ ಸಾಮಾಗ್ರಿ ಎಂಬುದು ಸ್ಪಷ್ಟವಿಲ್ಲ.
ಕಳೆದ ವರ್ಷ ಕನ್ನಡ ಚಿತ್ರರಂಗದ ಕೆಲವರು ಡ್ರಗ್ಸ್ ಜಾಲದಲ್ಲಿ ಸಿಕ್ಕಿ ಬಿದ್ದಾಗ, ಗೃಹ ಸಚಿವ ಬೊಮ್ಮಾಯಿ ಎಲ್ಲ ಎಸ್ಪಿಗಳಿಗೆ ಈ ಜಾಲ ಮೆಟ್ಟಿ ಹಾಕಲು ನಿರ್ದೇಶನ ನೀಡಿದರು.
ಆಗ ಏನಾಯಿತು? ದಿನವೂ ಗಾಂಜಾ ಮಾರುತ್ತಿದ್ದವನ ಬಂಧನ ಎಂಬ ಸುದ್ದಿಗಳು ಹರಿದಾಡಿದವು. ಒಬ್ಬ ವ್ಯಕ್ತಿಯಿಂದ 70 ಗ್ರಾಂ ಗಾಂಜಾ ವಶ ಮಾಡಿಕೊಂಡು, ಆತನಿಂದ 1,147 ರೂ. ವಶಪಡಿಸಿಕೊಳ್ಳಲಾಗಿದೆ’ ಎಂಬ ಎಫ್ಐಆರ್ಗಳು ಬಿಡುಗಡೆ ಆಗುತ್ತಿದ್ದವು.
ಆದರೆ ಇದರ ಮೂಲಗಳು ಪೊಲೀಸರಿಗೆ ಗೊತ್ತೇ ಇಲ್ಲವೇ? ಗುಡಿ ಹತ್ತಿರ ನಿಂತು ಮಾರಲು ಆತನೇನು ಮೂರ್ಖನೇ? ಯಾವುದೋ ಮನೆ ಅಥವಾ ಅಂಗಡಿಯಲ್ಲಿ ಕುಳಿತೇ ಮಾರಿರುತ್ತಾನೆ ಅಲ್ಲವೇ? ಆತನ ಗಿರಾಕಿಗಳು ಕೂಡ ದಾರಿ ಮಧ್ಯೆ ಗುಡಿ ಪಕ್ಕ ಗಾಂಜಾ ಖರೀದಿಸುತ್ತಾರೆಯೇ? ಈ ಪ್ರಶ್ನೆಗಳು ಆಗ ಜನರನ್ನು ಕಾಡಿಸುತ್ತಿದ್ದವು.
ಯಾವಾಗ ಜಾರಕಿಹೊಳಿ ಕೇಸು ಮುನ್ನೆಲೆಗೆ ಬಂದಿತೋ ಆಗ ಡ್ರಗ್ಸ್ ವಿಷಯ ಹಿನ್ನಲೆಗೆ ಸರಿಯಿತು. ಹಾಗೆಯೇ ಬಿಹಾರ ಚುನಾವಣೆ ಮುಗಿದ ನಂತರ ಬಾಲಿವುಡ್ ನಟ ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿದ್ದ ಡ್ರಗ್ಸ್ ತನಿಖೆಯೂ ಹಿನ್ನೆಲೆಗೆ ಸರಿಯಿತು.
ಆ ನಂತರ ‘ಗುಡಿ ಹತ್ತಿರವೋ ಅಥವಾ ರಸ್ತೆಯಲ್ಲೋ ನಿಂತು’ ಗಾಂಜಾ ಮಾರುವವರ ಎಫ್ಐಆರ್ಗಳು ಕಾಣದಾದವು!
ದೇಶದ ಸ್ಥಿತಿ ಏನು?
ಈ ವರ್ಷ ಇನ್ನೂ ಆರು ತಿಂಗಳುಗಳು ಬಾಕಿ ಇರುವಾಗ, ಎನ್ಸಿಬಿ ಈಗಾಗಲೇ 4.82 ಟನ್ ಗಾಂಜಾ, 5.25 ಕೆಜಿ ಅಫೀಮು, 48.8 ಕೆಜಿ ಚರಸ್ಗಳನ್ನು ವಶಪಡಿಸಿಕೊಂಡಿದೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲೂ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ 2020ರಿಂದ ಅನೇಕ ಪಟ್ಟು ಹೆಚ್ಚಾಗಿದೆ ಮತ್ತು ಇದು ವಿವಿಧ ಮಾದಕವಸ್ತು ನಿಯಂತ್ರಣ ಜಾರಿ ಸಂಸ್ಥೆಗಳ ಚಟುವಟಿಕೆಗಳಿಂದ ಸ್ಪಷ್ಟವಾಗಿದೆ ಎನ್ನಲಾಗಿದೆ.
ಈ ವರ್ಷದ ದಿನಾಚರಣೆಯ ಸಂದರ್ಭದಲ್ಲಿ ‘ಮಾದಕವಸ್ತುಗಳ ಬಗ್ಗೆ ಸತ್ಯಗಳನ್ನು ಹಂಚಿಕೊಳ್ಳಿ, ಜೀವಗಳನ್ನು ಉಳಿಸಿ’ ಎಂದು ವಿಶ್ವಸಂಸ್ಥೆಯು ತಿಳಿಸಿದೆ.
ಆದರೆ, ಪೊಲೀಸರು ಮತ್ತು ಮಾದಕದ್ರವ್ಯಗಳ ತಡೆಗೆ ಸಂಬಂಧಪಟ್ಟ ಇಲಾಖೆಗಳು ಸತ್ಯವನ್ನು ಹಂಚಿಕೊಳ್ಳುತ್ತವಾ? ಜನರಿಗೆ ನಂಬಿಕೆಯಿಲ್ಲ!
- ಪಿ.ಕೆ ಮಲ್ಲನಗೌಡರ್
ಇದನ್ನೂ ಓದಿ: ಹರಿದ ಜೀನ್ಸ್ ಧರಿಸುವುದು ಮಾದಕ ವಸ್ತು ಸೇವನೆಗೂ ಕಾರಣವಾಗುತ್ತದೆ- ಉತ್ತರಾಖಂಡ ಸಿಎಂ