ಕಳೆದ 6 ದಿನಗಳಿಂದ ನಡೆಯುತ್ತಿರುವ ರೈತರ ಪ್ರತಿಭಟನೆಗೆ ರಾಜಕೀಯ ಪಕ್ಷಗಳು ತಮ್ಮ ಬೆಂಬಲ ಸೂಚಿಸಿವೆ. ಕೇರಳದ ಪಿಣರಾಯಿ ವಿಜಯನ್ ನೇತೃತ್ವ ಸರ್ಕಾರವು ರೈತಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು, ರೈತರು ದೇಶದ ಜೀವನಾಡಿ, ನಾವೇಲ್ಲರೂ ಅವರೊಂದಿಗೆ ನಿಲ್ಲುವ ಸಮಯ ಇದು ಎಂದಿದ್ದಾರೆ.
ವಿವಾದಾತ್ಮಕ ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮಾತನ್ನು ಆಲಿಸಿ ಮತ್ತು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೇರಳ ಮುಖ್ಯಮಂತ್ರಿ, ರೈತರನ್ನು ದೇಶದ “ಜೀವನಾಡಿ” ಎಂದು ಬಣ್ಣಿಸಿದ್ದು, ಅವರೊಂದಿಗೆ ನಿಲ್ಲುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
It is time to stand with our farmers. We urge the Government of India to listen to the protesting farmers and resolve the issue in an amicable manner. The whole of our country needs to come together on this; because farmers are the lifeblood of this country.
— Pinarayi Vijayan (@vijayanpinarayi) December 1, 2020
ಇದನ್ನೂ ಓದಿ: ಕೊರೆವ ಚಳಿಯಲ್ಲಿ ದೇಶದ ಅನ್ನದಾತರು: ದೇವ್ ದೀಪಾವಳಿ ಸಂಭ್ರಮದಲ್ಲಿ ಪ್ರಧಾನಿ ಮೋದಿ!
“ನಮ್ಮ ರೈತರೊಂದಿಗೆ ನಿಲ್ಲುವ ಸಮಯ ಇದು. ಪ್ರತಿಭಟನೆ ನಡೆಸುತ್ತಿರುವ ರೈತರ ಮಾತುಗಳನ್ನು ಆಲಿಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ನಾವು ಭಾರತ ಸರ್ಕಾರವನ್ನು ಕೋರುತ್ತೇವೆ. ನಮ್ಮ ಇಡೀ ದೇಶವು ಈಗ ಒಗ್ಗೂಡಬೇಕಾಗಿದೆ. ಏಕೆಂದರೆ ರೈತರು ಈ ದೇಶದ ಜೀವನಾಡಿ” ಎಂದು ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.
ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ಕೂಡ, ರೈತರು ಎತ್ತಿರುವ ಸಮಸ್ಯೆಗಳು ಮಾನ್ಯ ಮಾಡುವಂತಹವುಗಳು ಮತ್ತು ಅವು ದೇಶದ ಗಮನ ಸೆಳೆಯಲು ಅರ್ಹವಾಗಿವೆ. ಹಾಗಾಗಿ ರೈತರೊಂದಿಗೆ ಮಾತುಕತೆ ನಡೆಸಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Our solidarity with the farmers who are in protest against the farm bill. We urge the Government of India to have a dialogue with the farmers and hear out their concerns in a democratic manner. The issues raised by them are valid and they deserve the attention of the country.
— Shailaja Teacher (@shailajateacher) December 1, 2020
“ಕೃಷಿ ಮಸೂದೆಯನ್ನು ವಿರೋಧಿಸುತ್ತಿರುವ ರೈತರಿಗೆ ನಮ್ಮ ಬೆಂಬಲವಿದೆ. ರೈತರೊಂದಿಗೆ ಮಾತುಕತೆ ನಡೆಸಿ ಅವರ ಕಳವಳಗಳನ್ನು ಪ್ರಜಾಪ್ರಭುತ್ವದ ರೀತಿಯಲ್ಲಿ ಆಲಿಸುವಂತೆ ನಾವು ಭಾರತ ಸರ್ಕಾರವನ್ನು ಕೋರುತ್ತೇವೆ. ರೈತರು ಎತ್ತಿರುವ ಸಮಸ್ಯೆಗಳು ಮಾನ್ಯವಾಗಿವೆ ಮತ್ತು ಅವು ದೇಶದ ಗಮನ ಸೆಳೆಯುವಲ್ಲಿ ಅರ್ಹವಾಗಿವೆ” ಎಂದು ಟ್ವೀಟ್ ಮಾಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇನ್ನು, ಕರ್ನಾಟಕದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. “ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳ ವಿರುದ್ಧ ರೈತ ಸಮುದಾಯ ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದ್ದು, ಸರ್ಕಾರ ಹೋರಾಟವನ್ನು ಹತ್ತಿಕ್ಕುವ ಬದಲಾಗಿ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು. ಈ ಹೋರಾಟದಲ್ಲಿ ಅನ್ನದಾತರ ಜೊತೆ ನಾವಿದ್ದೇವೆ” ಎಂದು ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ.